The biography of Prophet Muhammad – Month 5

Admin October 18, 2022 No Comments

The biography of Prophet Muhammad – Month 5

Mahabba Campaign Part-121/365

ಪ್ರವಾದಿಯವರಿಗೆ ﷺ ಕುಡಿಯಲು ಪಾನೀಯಗಳನ್ನು ನೀಡಲಾಯಿತು. ಅವುಗಳಲ್ಲಿ ವಿಶೇಷವಾದ ಬೇರೆ ಬೇರೆ ಪಾತ್ರೆಗಳಲ್ಲಿ, ಮದ್ಯ, ಹಾಲು, ಜೇನುತುಪ್ಪ ಇದ್ದವು. ಅದರಲ್ಲಿ ಪ್ರವಾದಿಯವರು ﷺ ಹಾಲನ್ನು ಆಯ್ಕೆ ಮಾಡಿ ಕುಡಿದರು. ತಕ್ಷಣವೇ ಪ್ರವಾದಿಯವರಲ್ಲಿ ﷺ ಜಿಬ್’ರೀಲರು, ನೀವು ನಿರ್ಮಲತೆಯನ್ನು (ಫಿತ್’ರನ್ನು) ಆಯ್ಕೆ ಮಾಡಿರುವಿರಿ. ಹಾಗಾಗಿ ನಿಮ್ಮ ಸಮುದಾಯವೂ ಕೂಡ ನಿರ್ಮಲತೆಯ ಮೇಲಾಗಿದೆ ನಿಂತಿರುವುದು ಎಂದು ಹೇಳಿದರು.

ಅಲ್ಲಿಂದಲೂ ಯಾತ್ರೆ ಮುಂದುವರಿದು, “ಸಿದ್’ರತುಲ್ ಮುಂತಹ” ಎಂಬ ಮರದ ಬಳಿ ತಲುಪಿದವು. ಆಕಾಶ ಲೋಕದ ಕೆಲವು ಪ್ರತ್ಯೇಕವಾದ ನಿರ್ಮಾಣಗಳ ಗಡಿಯಾಗಿತ್ತು ಅದು. ಸಿದ್’ರ ಮರದ ಬುಡದಲ್ಲಿ ಕಾರಂಜಿಗಳು ಹೊರಬರುತಿದ್ದವು. ಶುದ್ಧವಾದ ನೀರು ಹಾಗೂ ಶುದ್ಧವಾದ ಜೇನುತುಪ್ಪದಿಂದ ಕುಡಿದ ನದಿಗಳು ಹರಿಯುತ್ತಿತ್ತು, ಅದನ್ನು ಕುಡಿದವರಿಗೆ ಅನುಗ್ರಹಗಳು ಲಭಿಸುತ್ತಿತ್ತು. ಸಿದ್’ರ ಮರವು ವಿಶಾಲವಾದ ನೆರಳುಗಳಿಂದ ಕೂಡಿತ್ತು. ಎಪ್ಪತ್ತು ವರ್ಷಗಳ ಕಾಲ ಸತತವಾಗಿ ಚಲಿಸಿದರೂ ಅಲ್ಲಿನ ತಣ್ಣನೆ ಅನುಭವ ಮುಗಿಯುತ್ತಿರಲಿಲ್ಲ, ಅವುಗಳಿಗೆ ಬಹಳ ಅಗಲವಾದ ಎಲೆಗಳಿದ್ದವು. ಅದು ನೋಡಲು ಬಹಳ ಸುಂದರವಾಗಿ ವರ್ಣನಾತೀತವಾಗಿತ್ತು. ಚಿನ್ನದ ಹಕ್ಕಿಗಳು ಅವುಗಳ ಕೊಂಬೆಗಳಲ್ಲಿ ನಿಂತಿದ್ದವು. ಹೀಗೆ ಬಹಳಷ್ಟು ವಿಶೇಷತೆಯಿಂದ ಕೂಡಿತ್ತು.
ಇಬ್’ನು ಮಸ್’ವೂದ್’ರು ◌ؓ ಹೇಳುವುದು ಕಾಣಬಹುದು. ಪ್ರವಾದಿಯವರು ﷺ ಅಲ್ಲಿ ಜಿಬ್’ರೀಲರಿಗಿದ್ದ (ಅ) ಆರ್’ನೂರು ರೆಕ್ಕೆಗಳನ್ನು ನೋಡಿದ್ದರು. ಒಂದೊಂದು ರೆಕ್ಕೆಯೂ ಕೂಡ, ಆಕಾಶವನ್ನು ಸುತ್ತುವರಿವಷ್ಟು ವಿಶಾಲವಾಗಿತ್ತು. ಆ ರೆಕ್ಕೆಗಳಲ್ಲಿ ಅಮೂಲ್ಯವಾದ ರತ್ನಗಳು ಹರಡಿಕೊಂಡಿತ್ತು.

ನಂತರ ಅಲ್ಲಿಂದಲೂ ಮುಂದೆ ಹೋಗಿ, ಸ್ವರ್ಗದ ಒಳಗೆ ಹೋದರು. ಕಂಡು ಕೇಳದ, ಅಷ್ಟೇ ಅಲ್ಲ ಊಹಿಸಲು ಕೂಡ ಸಾಧ್ಯವಾಗದಷ್ಟು ಅನುಗ್ರಹಗಳಿಂದ ತುಂಬಿತ್ತು. ಅವುಗಳ ಬಾಗಿಲಲ್ಲಿ, ದಾನಕ್ಕೆ ಹತ್ತು ಪಟ್ಟು ಅಧಿಕ ಪ್ರತಿಫಲ, ಸಾಲಕ್ಕೆ ಹದಿನೆಂಟು ಪಟ್ಟು ಅಧಿಕ ಪ್ರತಿಫಲ ಎಂದು ಬರೆದು ಇಡಲಾಗಿತ್ತು. ಅದನ್ನು ಕಂಡ ಪ್ರವಾದಿಯವರು ﷺ ಯಾಕಾಗಿ ಸಾಲಕ್ಕೆ ಹದಿನೆಂಟು ಪಟ್ಟು ಅಧಿಕ ಪ್ರತಿಫಲ ಎಂದು ಬರೆದದ್ದು ಎಂದು ಕೇಳಿದಾಗ, ಜಿಬ್’ರೀಲರು ಕೆಲವೊಮ್ಮೆ ಇದ್ದವನು ಕೂಡ ದಾನ ಕೇಳಬಹುದು, ಆದರೆ ಸಾಲ ಕೇಳುವುದು ಇಲ್ಲದವನು ಮಾತ್ರ ಎಂದು ಹೇಳಿದರು.
ಹೀಗಿರುವಾಗ ಅಲ್ಲೊಬ್ಬರು ಸೇವಕಿ ಮುಂದೆ ಬಂದರು, ಆಗ ಪ್ರವಾದಿಯವರು ﷺ ನೀನು ಯಾರ ಗೆಳೆತಿ ಎಂದು ಕೇಳಿದಾಗ, ನಾನು ಝೈದ್ ಬಿನ್ ಹಾರಿಸರ ಗೆಳೆತಿ ಆಗಿರುವೆನು ಎಂದು ಹೇಳಿದರು.

ಕೆಂಪು ಬಣ್ಣದ ಹವಳಗಳಿಂದ ಕೂಡಿದ ನಕ್ಷತ್ರಗಳಿದ್ದವು, ಪ್ರವಾದಿಯವರು ﷺ ಜಿಬ್’ರೀಲರಲ್ಲಿ (ಅ) ಅವರು ನನ್ನಲ್ಲಿ ಸ್ವರ್ಗದ ಬಗ್ಗೆ ಕೇಳುತ್ತಿದ್ದರು ಎಂದು ಕೇಳಿದಾಗ, ಸ್ವರ್ಗದ ಮಣ್ಣು ಕಸ್ತೂರಿಯಿಂದ ಕೂಡಿದ್ದಾಗಿದೆ ಎಂದು ಹೇಳಿದರು. ಅಷ್ಟರಲ್ಲೇ ಅಲ್ಲೊಂದು ಪಿಸುಮಾತು ಕೇಳಲು ಸಾಧ್ಯವಾಯಿತು, ಅದಕ್ಕೆ ಪ್ರವಾದಿಯವರು ﷺ ಸ್ವರ್ಗದಿಂದ ಯಾರದ್ದೋ ಧ್ವನಿ ಕೇಳುತ್ತಿದೆ ಎಂದು ಕೇಳಿದಾಗ, ಜಿಬ್’ರೀಲರು (ಅ) ಅದು ಬಿಲಾಲರ ◌ؓ ಶಬ್ದವಾಗಿದೆ ಎಂದು ಹೇಳಿದರು.
ಅಲ್ಲಿಂದ ಮುಂದೆ ಹೊರಟು, ಸ್ವರ್ಗದ ಬಹಳಷ್ಟು ಅನುಗ್ರಹಗಳನ್ನು ವೀಕ್ಷಿಸ ತೊಡಗಿದರು. ಹೊಳೆಗಳನ್ನು, ತೊರೆಗಳನ್ನು, ಕಣಿವೆಗಳನ್ನು, ಹಾಗೂ ಮುಂತಾದ ವಿಸ್ಮಯಗಳನ್ನು ನೋಡುತ್ತಾ ಕೊನೆಗೆ ಕೌಸರ್ ಪಾನೀಯವನ್ನು ನೋಡಿ ಕಣ್ತುಂಬಿಕೊಂಡರು.
ಅಲ್ಲಿಂದ ಸ್ವಲ್ಪ ಮುಂದೆ ಹೋದಾಗ, ಅಲ್ಲಿ ಅಲ್ಲಾಹನ ಕೋಪದ ಮನೆ ಅಂದರೆ ಶಿಕ್ಷೆಯ ಸ್ಥಳವನ್ನು ನೋಡಲು ಸಾಧ್ಯವಾಯಿತು. ಅದಕ್ಕೆ ಕಲ್ಲು ಹಾಗೂ ಕಬ್ಬಿಣವನ್ನು ಎಸೆದರೆ ಅವುಗಳನ್ನು ಅದು ಸುಟ್ಟು ಹಾಕುವಷ್ಟು ಭೀಕರವಾಗಿ ಉರಿಯುವ ನರಕಾಗ್ನಿಯಾಗಿತ್ತು ಅದು. ನರಕದ ವಿಭಿನ್ನವಾದ ರೀತಿಯ ಶಿಕ್ಷೆಗಳನ್ನು ನೋಡಿದ ನಂತರ ಪ್ರವಾದಿಯವರು ﷺ, ನರಕದ ದ್ವಾರಪಾಲಕರಾದ ಮಲಕನ್ನು ಭೇಟಿಯಾಗಿ, ಸಲಾಂ ಹೇಳಿದರು. ನಂತರ ನರಕದ ಬಾಗಿಲನ್ನು ಮುಚ್ಚಲಾಯಿತು.

ಕೇವಲ ಒಂದು ರಾತ್ರಿಯ ಕೆಲವೇ ಕೆಲವು ಸಮಯದಲ್ಲಿ ಕಂಡ ದೃಶಗಳು ಮಾತ್ರವಾಗಿತ್ತು ಇದು. ಎಂದು ಕೆಲವೊಂದು ಉಲ್ಲೇಖಗಳಲ್ಲಿ ಉದ್ಧರಿಸಿದ್ದು ಕಾಣಬಹುದು. ಆಧ್ಯಾತ್ಮಿಕ ಆಯಾಮಗಳೊಂದಿಗೆ ಮಾತ್ರ ಓದಬಹುದಾದ ಕೆಲವೊಂದು ವಿಶೇಷ ವಿಷಯಗಳ ಬಗ್ಗೆ ನಾವು ಇನ್ನಷ್ಟು ತಿಳಿಯೋಣ.
ಒಂದು ಉಲ್ಲೇಖದ ಪ್ರಕಾರ ಜಿಬ್’ರೀಲರು (ಅ) ಪ್ರವಾದಿಯವರಲ್ಲಿ ﷺ, ಓ ಪ್ರವಾದಿಯವರೇ ﷺ ಅಲ್ಲಾಹನು ಅವನ ಮಹತ್ವವನ್ನು ಉನ್ನತಿಗೊಳಿಸುವನು ಎಂದು ಹೇಳಿದಾಗ, ಪ್ರವಾದಿಯವರು ﷺ ಅದು ಹೇಗೆ.? ಎಂದು ಕೇಳಿದರು. “ಸುಬ್ಬುಹುನ್ ಖುದ್ದೂಸುಲ್ ರಬ್ಬುಲ್ ಮಲಾಯಿಕತಿ ವರ್’ರ್ರೂಹ್” ನನ್ನ ಕೋಪವನ್ನು ನನ್ನ ಕರುಣೆಯೂ ಜಯಿಸುತ್ತದೆ ಎಂದು ಹೇಳುತ್ತಾ, ಜಿಬ್’ರೀಲರು (ಅ) ಸ್ವಲ್ಪ ಹಿಂದಕ್ಕೆ ಸರಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-122/365

ನಂತರ ಪ್ರವಾದಿಯವರನ್ನು ﷺ ಕರೆದುಕೊಂಡು ಅಲ್ಲಾಹನ ವಿಶೇಷವಾದ ಕಾರ್ಯವಿಧಾನವಾದ ಖಲಮ್’ನ ಚಲನೆಗಳನ್ನು ಕೇಳುವ ಬಳಿ ಹೋದರು. ಅಲ್ಲಿ ಅರ್ಶ್’ನ ಪ್ರಭೆಯಲ್ಲಿ ಒಬ್ಬರು ಅಡಗಿ ಕುಳಿತಿದ್ದದ್ದು ಕಾಣಲು ಸಾಧ್ಯವಾಯಿತು. ಪ್ರವಾದಿಯವರು ﷺ ಅದು ಯಾರು.? ಪ್ರವಾದಿಯೋ ಎಂದು ಕೇಳಿದಾಗ, ಜಿಬ್’ರೀಲ್ ಅಲ್ಲ ಅಂದರು. ಹಾಗಾದರೆ ಮಲಕ್ ಆಗಿದ್ದರಾ.? ಎಂದು ಕೇಳಿದಾಗ ಅಲ್ಲ ಅಂದರು. ಹಾಗಾದರೆ ಇನ್ಯಾರು ಎಂದು ಕೇಳಿದಾಗ.? ಜಿಬ್’ರೀಲರು (ಅ) ಅವರು, ನಿರಂತರವಾಗಿ ಝಿಕ್’ರ್ ಹೇಳಲು ಮಾತ್ರ ನಾಲಗೆಯನ್ನು ಚಲಾಯಿಸಿ, ಹೃದಯವನ್ನು ಅಲ್ಲಾಹನಿಗಾಗಿ ಮಸ್’ಜಿದಿನ ಕಡೆಗೆ ಮಾತ್ರ ವಾಲಿಕೆ ಗೊಳಿಸಿದ್ದ ವ್ಯಕ್ತಿಯಾಗಿರುವರು ಅವರು, ಎಂದು ಹೇಳಿದರು.

ಅಲ್ಲಿಂದ ಪ್ರವಾದಿಯವರು ﷺ ಮಾತ್ರ, ಮುಂದೆ ಹೋಗಿ ಅಲ್ಲಾಹನನ್ನು ನೇರವಾಗಿ ಕಾಣಲು ಹೋದರು. ಅಲ್ಲಾಹನನ್ನು ಕಂಡ ತಕ್ಷಣವೇ ಪ್ರವಾದಿಯವರು ﷺ ಸಾಷ್ಟಾಂಗ ಮಾಡಿ, ಅಲ್ಲಾಹನಲ್ಲಿ ಮಾತಾಡಲು ಆರಂಭಿಸಿದರು. ಅಲ್ಲಾಹನನ್ನು ಸಂತುಷ್ಠ ಗೊಳಿಸುತ್ತಾ ಬಹಳ ವಿನಮ್ರವಾಗಿ, ಪ್ರವಾದಿಯವರು ﷺ ಮಾತುಗಳನ್ನು ಆಡುತ್ತಿದ್ದರೆ, ಪ್ರವಾದಿಯವರನ್ನು ﷺ ಸಂತುಷ್ಠ ಗೊಳಿಸಿ ಅಲ್ಲಾಹನು ಕೂಡ ಮಾತುಗಳನ್ನು ಆರಂಭಿಸಿದನು. ನಂತರ ನಿಮಗೆ ಏನು ಬೇಕು ಕೇಳಿರಿ ಎಂದು ಕೇಳಿದಾಗ, ಪ್ರವಾದಿಯವರು ﷺ, ನೀನು ಪ್ರವಾದಿ ಇಬ್ರಾಹಿಮರನ್ನು (ಅ) ಖಲೀಲ್ (ಆತ್ಮಾಮಿತ್ರ) ಮಾಡಿದೆ ಅಲ್ಲವೇ.! ಅವರಿಗೆ ವಿಶೇಷವಾದ ಅಧಿಕಾರ ನೀಡಿದೆ ಅಲ್ಲವೇ.! ಪ್ರವಾದಿ ಮೂಸರನ್ನು (ಅ) ಕಲೀಮ್ ಮಾಡಿದೆ (ಅವರ ಜೊತೆಯಲ್ಲಿ ನಡೆಸಿದ ವಿಶೇಷ ಮಾತುಕತೆ ) ಅಲ್ಲವೇ! ಪ್ರವಾದಿ ದಾವೂದ್’ರಿಗೆ (ಅ) ವಿಶಿಷ್ಟವಾದ ಅಧಿಕಾರವನ್ನೂ, ಮನುಷ್ಯ, ಭೂತ ವರ್ಗಗಳನ್ನೂ, ಗಾಳಿಯನ್ನು ಹಾಗೂ ಇತರ ವಸ್ತುಗಳನ್ನು ಅವರ ಅಧೀನಕ್ಕೆ ಗೊಳಿಸಿದೆ ಅಲ್ಲವೇ.! ಪ್ರವಾದಿ ಈಸರಿಗೆ (ಅ) ತೌರಾತ್, ಇನ್’ಜೀಲ್ ಗ್ರಂಥಗಳನ್ನು, ರೋಗ ನಿವಾರಣೆಯ ಹಾಗೂ ಇತರ ಸಾಮರ್ಥ್ಯಗಳನ್ನು ನೀಡಿದೆ ಅಲ್ಲವೇ.! ಅಷ್ಟೇ ಅಲ್ಲ ಮರಣ ಹೊಂದಿದವರಿಗೆ ಪುನರ್ಜೀವ ನೀಡುವ ಅನುಮತಿಯನ್ನು, ಅವರ ತಾಯಿಗೂ ಕೂಡ ಪಿಶಾಚಿಗಳಿಂದ ವಿಶೇಷವಾದ ರಕ್ಷಣೆ ನೀಡಿದೆ ಅಲ್ಲವೇ.! ಎಂದು ಹೇಳಿದಾಗ.

ಜಗದೊಡೆಯನಾದ ಅಲ್ಲಾಹನು, ತಮ್ಮನ್ನು ನಾನು ಹಬೀಬ್ ﷺ ಅಥವಾ ಅತ್ಯುತ್ತಮ ಗೆಳೆಯನಾಗಿ ಆಯ್ಕೆ ಮಾಡಿರುತ್ತೇನೆ, ಇಡೀ ಮನುಷ್ಯ ವರ್ಗಕ್ಕೆ ಸುವಾರ್ತೆ ತಿಳಿಸುವನಾಗಿಯೂ, ಎಚ್ಚರಿಕೆ ನೀಡುವವನಾಗಿಯೂ ಮಾಡಿರುತ್ತೇನೆ, ಹೃದಯವನ್ನು ಇನ್ನಷ್ಟು ವಿಶಾಲತೆಗೊಳಿಸಿ, ಸ್ಕಲನಗಳಿಂದ ಸುರಕ್ಷಿತಗೊಳಿಸಿ, ಸುಮಧುರವಾದ ಶಬ್ದಗಳನ್ನು ನೀಡಿರುತ್ತೇನೆ, ನಿಮ್ಮ ಸಮುದಾಯವನ್ನು ಅತ್ಯುತ್ತಮ ಸಮೂಹವಾಗಿಯೂ, ನೀತಿವಂತರಾದ ಅತ್ಯಂತ ಮಹತ್ವವಿರುವ, ಉನ್ನತ ಸಮುದಾಯವನ್ನಾಗಿಯೂ ಮಾಡಿರುತ್ತೇನೆ. ನಿಮ್ಮ ಸಮೂಹದ ಜನತೆಯ ಖುತುಬ ಸ್ವೀಕರಿಸಬೇಕಾದರೆ.? ತಮ್ಮನ್ನು ನನ್ನ ದಾಸನಾಗಿಯೂ, ದೂತನಾಗಿಯೂ ಸಾಕ್ಷಿ ವಹಿಸಬೇಕು. ತಮ್ಮ ಜನತೆಯಲ್ಲಿ, ಅವರ ಹೃದಯವನ್ನೇ ವೇದ ಗ್ರಂಥವನ್ನಾಗಿ ಪರಿವರ್ತನೆ ಮಾಡಿದವರು ಇರುತ್ತಾರೆ. (ಪವಿತ್ರ ಕುರ್’ಆನ್ ಕಂಠ ಪಾಠ ಮಾಡಿದವರು) ತಮ್ಮನ್ನು ನಾವು, ಮೊದಲ ಸೃಷ್ಟಿಯೂ, ಕೊನೆಯ ಪ್ರವಾದಿಯನ್ನಾಗಿಯೂ ನಿಯೋಗಿಸಿದ್ದೇವೆ. ಈ ಮೊದಲು ಯಾವುದೇ ಪ್ರವಾದಿಯರಿಗೂ ನೀಡಿರದ ಏಳು ಅತ್ಯುತ್ತಮ ಸೂಕ್ತಗಳನ್ನು (ಫಾತಿಹ) ನಿಮಗೆ ನಾವು ನೀಡಿರುತ್ತೇವೆ. ಅರ್ಶ್’ನ ತಳಭಾಗದಲ್ಲಿರುವ ನಿಧಿಯಾದ ಅಲ್ ಬಖರ ಅಧ್ಯಾಯದ ಕೊನೆಯ ಸೂಕ್ತಗಳನ್ನು, ಕೌಸರ್ ಪುಣ್ಯ ಜಾಲದ ಜೊತೆಯಲ್ಲಿ ಇನ್ನೂ ಅನೇಕ ಅನುಗ್ರಹಗಳನ್ನು ನಿಮಗೆ ನಾವು ನೀಡುತ್ತಿದ್ದೇವೆ. ಇಸ್ಲಾಮ್, ಹಿಜ್’ರ, ಜಿಹಾದ್, ರಮದಾನ್ ವ್ರತ, ದಾನ, ಬೋಧನೆ, ಮುಂತಾದ ಎಂಟು ವೈಶಿಷ್ಟ್ಯತೆಯನ್ನು ನಿಮಗೆ ನಾವು ನೀಡಿರುತ್ತೇವೆ. ಆಕಾಶ, ಭೂಮಿಗಳನ್ನು ಸೃಷ್ಟಿಸುವ ಸಂದರ್ಭದಲ್ಲೇ ನಿಮಗೂ, ನಿಮ್ಮ ಜನತೆಗೂ ಐವತ್ತು ಹೊತ್ತಿನ ನಮಾಝನ್ನು ಕೂಡ ಕಡ್ಡಾಯ ಗೊಳಿಸಿರುತ್ತೇವೆ, ಹಾಗಾಗಿ ನೀವೂ ಹಾಗೂ ನಿಮ್ಮ ಜನತೆ ಅದನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಹೇಳಿದನು.

ಅಲ್ಲಾಹನ ಜೊತೆಗಿನ ಮಾತುಕತೆಯ ನಂತರ ಪ್ರವಾದಿಯವರ ﷺ ಸುತ್ತುಮುತ್ತಲಿನಲ್ಲಿದ್ದ ಮೊಡವು ಹೊಳಪಿನಿಂದ ಕಂಗೊಳಿಸುತ್ತಿತ್ತು. ಪ್ರವಾದಿಯವರು ﷺ ಅಲ್ಲಿಂದ ಹೊರಟು ಜಿಬ್’ರೀಲರ (ಅ) ಬಳಿ ಬಂದು, ಹಿಂತಿರುಗಿದರು. ಪ್ರವಾದಿ ಇಬ್ರಾಹಿಮರ (ಅ) ಬಳಿ ತಲುಪಿದಾಗ, ಅವರು ವಿಶೇಷವಾಗಿ ಅಷ್ಟೊಂದು ಪ್ರತಿಕ್ರಿಯೆ ನೀಡಲಿಲ್ಲ. ಅಲ್ಲಿಂದ ಪ್ರವಾದಿ ಮೂಸರ (ಅ) ಬಳಿ ತಲುಪಿದಾಗ, ಅವರು ಪ್ರವಾದಿಯವರಲ್ಲಿ ﷺ, ಏನಾಯಿತು.? ಏನೇನು ನಿಮ್ಮ ಸಮೂಹಕ್ಕೆ ಕಡ್ಡಾಯ ಗೊಳಿಸಿದರು.? ಎಂದು ಕೇಳಿದಾಗ, ಪ್ರವಾದಿಯವರು ﷺ ನನಗೂ, ನನ್ನ ಸಮುದಾಯಕ್ಕೂ ಐವತ್ತು ಹೊತ್ತಿನ ನಮಾಝ್ ಕಡ್ಡಾಯ ಗೊಳಿಸಿದನು ಎಂದು ಹೇಳಿದರು. ಅದಕ್ಕೆ ಪ್ರವಾದಿ ಮೂಸ’ರವರು (ಅ), ಪ್ರವಾದಿಯವರಲ್ಲಿ ﷺ ನೀವು ಅಲ್ಲಾಹನಲ್ಲಿ ಅದಕ್ಕಿಂತ ಕಮ್ಮಿ ಗೊಳಿಸಲು ಹೇಳಬೇಕು, ಕಾರಣ ತಮ್ಮ ಸಮೂಹಕ್ಕೆ ಐವತ್ತು ಹೊತ್ತಿನ ನಮಾಝನ್ನು ದಿನನಿತ್ಯ ರೂಢಿಯಾಗಿಸಲು ಕಷ್ಟವಾಗಬಹುದು, ನಾನು ಈ ಮೊದಲೇ ಒಂದು ಬಲಿಷ್ಠ ಸಮುದಾಯದ ಪರಿಚಯ ಇರುವ ವ್ಯಕ್ತಿಯಾಗಿರುತ್ತೇನೆ, ಇಸ್ರಾಯಿಲರನ್ನು ಇದಕ್ಕಿಂತಲೂ ಸುಲಭವಾದ ಕಾರ್ಯಗಳನ್ನು ಕೊಟ್ಟು ಪರೀಕ್ಷಿಸಿದ್ದೇವೆ. ಆದರೆ ಅವರು ಅದರಲ್ಲಿ ಸೋತು ಬಿಟ್ಟರು, ಅವರಿಗಿಂತಲೂ ಶಾರೀರಿಕವಾಗಿ, ಶಕ್ತಿ ಕಮ್ಮಿಯಿರುವ ಜನರಾಗಿರುತ್ತಾರೆ, ನಿಮ್ಮ ಸಮುದಾಯ. ಹಾಗಾಗಿ ಅವರಿಗೆ ಖಂಡಿತ ಇದು ಕಷ್ಟವಾಗಲಿದೆ ಎಂದು ಹೇಳಿದರು. ಅದನ್ನು ಕೇಳಿ ಪ್ರವಾದಿಯವರು ﷺ ಜಿಬ್’ರೀಲರೊಂದಿಗೆ (ಅ) ತಮ್ಮ ಅಭಿಪ್ರಾಯ ತಿಳಿಸಿ, ಅಲ್ಲಿಂದ ಪುನಃ ಹಿಂದಕ್ಕೆ ಯಾತ್ರೆ ತಿರುಗಿಸಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-123/365

ಪುನಃ ಸಿದ್’ರ ಮರದ ಬಳಿ ಬಂದು ತಲುಪಿದಾಗ, ಪುನಃ ಮೋಡ ಆವೃತವಾಯಿತು. ಪ್ರವಾದಿಯವರು ﷺ ಅಲ್ಲಾಹನಿಗೆ ಸಾಷ್ಟಾಂಗ ಮಾಡಿ, ಅಲ್ಲಾಹನು ಕಡ್ಡಾಯಗೊಳಿಸಿದ ಆರಾಧನಾ ಕರ್ಮಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬೇಕೆಂದು ಹೇಳುತ್ತಾ, ಅತೀ ದುರ್ಬಲರಾದ ಸಮುದಾಯದವರಾಗಿದ್ದಾರೆ, ನನ್ನ ಸಮುದಾಯ ಎಂದು ವಿನಂತಿಸಿದಾಗ, ಐವತ್ತು ಹೊತ್ತಿನ ನಮಾಝ್’ನ್ನು ಸ್ವಲ್ಪ ಕಮ್ಮಿ ಮಾಡಲಾಯಿತು. ಮತ್ತೊಮ್ಮೆ ಮೊಡವು ತನ್ನ ಪೂರ್ವ ಸ್ಥಾನಕ್ಕೆ ಮರಳಿತು. ಅಲ್ಲಿಂದ ಪ್ರವಾದಿಯವರು ﷺ, ಮೂಸ ಪ್ರವಾದಿಯವರ (ಅ) ಬಳಿ ಬಂದು, ನಡೆದ ಎಲ್ಲಾ ವಿಷಯಗಳನ್ನು ವಿವರಿಸಿ ಕೊಟ್ಟರು. ಅದನ್ನು ಕೇಳಿ ಅಷ್ಟೂ ಕೂಡ ನಿಮ್ಮ ಸಮೂಹಕ್ಕೆ ನಿರ್ವಹಿಸಲು ಸಾಧ್ಯವಿಲ್ಲ, ಇನ್ನೂ ಕೂಡ ಕಮ್ಮಿ ಮಾಡಲು ವಿನಂತಿ ಮಾಡಿರಿ ಎಂದು ಹೇಳಿ ಪುನಃ ಮೂಸ ಪ್ರವಾದಿಯವರು (ಅ) ಹಿಂದಕ್ಕೆ ಕಳುಹಿಸಿದರು. ಇದೆ ರೀತಿ ಮೂಸ ಪ್ರವಾದಿಯವರ (ಅ) ಮಾತನ್ನು ಕೇಳಿ ಒಂಬತ್ತು ಬಾರಿ ಹಿಂದಕ್ಕೆ ತೆರಳಿ, ಅಲ್ಲಾಹನಲ್ಲಿ ವಿನಂತಿ ಮಾಡಿದಾಗ, ಅಲ್ಲಾಹನ ಕೊನೆಗೆ ನಲ್ವತೈದು ಹೊತ್ತಿನ ನಮಾಝನ್ನು ಕಡಿಮೆಗೊಳಿಸಿ ಐದು ಹೊತ್ತಿನ ನಮಾಝನ್ನು ನೀಡಿದನು. ನಂತರ ಅಲ್ಲಾಹನು ಪ್ರವಾದಿಯವರಲ್ಲಿ ﷺ, ಈ ಐದು ಹೊತ್ತಿನ ನಮಾಝನ್ನು ಪ್ರತಿದಿನ ದಿನ ರಾತ್ರಿಗಳಲ್ಲಾಗಿ ನಿರ್ವಹಿಸಬೇಕು. ಈ ಐದು ಹೊತ್ತು ನಮಾಝಿಗೆ, ಹತ್ತು ಪಟ್ಟು ಅಧಿಕ ಪ್ರತಿಫಲ ಲಭಿಸಲಿದೆ. ಆಗ ಸಂಖ್ಯೆಯಲ್ಲಿ ಕಮ್ಮಿಯಾದರೂ, ಪ್ರತಿಫಲದಲ್ಲಿ ಐವತ್ತು ಹೊತ್ತು ನಮಾಝಿನ ಅದೇ ಸ್ಥಾನದಲ್ಲಿ ಬಂದು ತಲುಪುತ್ತದೆ. ಇನ್ನೂ ಇದರಲ್ಲಿ ಯಾವುದೇ ಕಮ್ಮಿ ಇಲ್ಲ, ಒಬ್ಬರು ಒಂದು ಒಳಿತು ಮಾಡಿದರೆ ಅವನಿಗೆ ಹತ್ತು ಪಟ್ಟು ಅಧಿಕ ಪ್ರತಿಫಲ ಸಿಗಲಿದೆ. ಇನ್ನು ಕೆಲವೊಂದು ಕಾರಣಗಳಿಂದ ಅವನಿಗೆ ಆ ಒಳಿತನ್ನು ಮಾಡಲು ಆಗದಿದ್ದರೂ, ಒಳಿತು ಮಾಡಲು ಉದ್ದೇಶಿಸಿದ ಕಾರಣಕ್ಕೆ ಅವನಿಗೆ ಒಂದು ಪ್ರತಿಫಲ ಲಭಿಸಲಿದೆ. ಆದರೆ ಕೆಡುಕು ಮಾಡಲು ಉದ್ದೇಶಿಸಿ, ಅದನ್ನು ಮಾಡಿದರೆ ಅದಕ್ಕೆ ಒಂದು ಕೆಡುಕು ಮಾತ್ರವೇ ಸಿಗುವುದು, ಆದರೆ ಕೆಡಲು ಮಾಡಲು ಉದ್ದೇಶಿಸಿ ಅದನ್ನು ಮಾಡದೆ ಇದ್ದರೆ ಅದಕ್ಕೆ ಯಾವುದೇ ಶಿಕ್ಷೆಯೂ ಇಲ್ಲ ಎಂದು ಹೇಳಿದನು.

ಅಲ್ಲಿಂದ ಮರಳಿ ಮೂಸ ಪ್ರವಾದಿಯವರ (ಅ) ಬಳಿ ಬಂದು, ಅಲ್ಲಿ ನಡೆದ ಎಲ್ಲಾ ವಿಷಯಗಳನ್ನು ವಿವರಿಸಿದರು. ಆಗಲೂ ಅವರು ಇನ್ನೂ ಕೂಡ ಸ್ವಲ್ಪ ಕಮ್ಮಿ ಮಾಡಲು ವಿನಂತಿ ಮಾಡಿರಿ, ಇಷ್ಟೂ ಕೂಡ ನಿಮ್ಮ ಸಮೂಹಕ್ಕೆ ಸಾಧ್ಯವಾಗಬೇಕೆಂದಿಲ್ಲ ಎಂದು ಹೇಳಿದಾಗ, ಪ್ರವಾದಿಯವರು ﷺ ನಾನು ಬಹಳಷ್ಟು ಬಾರಿ ವಿನಂತಿ ಮಾಡಿದೆನು, ಇನ್ನು ಹೋಗಲು ನನಗೆ ನಾಚಿಕೆ ಆಗುತ್ತದೆ. ಹಾಗಾಗಿ ನಾನು ಇದನ್ನು ತೃಪ್ತಿಪಟ್ಟು ಅಂಗೀಕರಿಸುತ್ತೇನೆ ಎಂದು ಹೇಳಿದರು. ತಕ್ಷಣವೇ, ನಾನು ನನ್ನ ದಾಸರ ಮೇಲೆ ಕಡ್ಡಾಯಗೊಳಿಸಿದ ಆರಾಧನೆಗಳನ್ನು ಮಾಡಲು ತೀರ್ಮಾನಿಸಿದೆನು. ಅದರಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದೆನು ಎಂದು ಅಶರೀರವಾಣಿ ಕೇಳಲು ಸಾಧ್ಯವಾಯಿತು. ಅದನ್ನು ಕೇಳಿ ಮೂಸ ಪ್ರವಾದಿಯವರು (ಅ) ಸರಿ ಆಗಿದ್ದರೆ, ಅಲ್ಲಾಹನ ಹೆಸರನ್ನು ಸ್ಮರಿಸಿ ಇಳಿದು ಹೋಗಿರಿ ಎಂದು ಹೇಳಿದರು. ಹಿಂತಿರುಗಿ ಬರುವ ದಾರಿಯಲ್ಲಿ, ಮಲಕ್’ಗಳ ಒಂದು ಗುಂಪು ಪ್ರವಾದಿಯರಲ್ಲಿ ﷺ, ನೀವು ನಿಮ್ಮ ಸಮುದಾಯದ ಜನರಲ್ಲಿ ಹಿಜಾಮ ಚಿಕಿತ್ಸೆ ವಿಧಾನವನ್ನು ಮಾಡಲು ತಿಳಿಸಿರಿ ಎಂದು ಹೇಳಿದರು.

ಆಕಾಶ ಲೋಕದಿಂದ ಇಳಿದು ಬರುವ ಸಂದರ್ಭದಲ್ಲಿ ಜಿಬ್’ರೀಲರು (ಅ) ಪ್ರವಾದಿಯವರಲ್ಲಿ ﷺ, ನಾವು ಆಕಾಶ ಲೋಕದಲ್ಲಿ ಭೇಟಿಯಾದ ಎಲ್ಲರೂ ನಮ್ಮ ಜೊತೆ ನಗುತ್ತಿದ್ದರು. ಆದರೆ ನರಕದ ಕಾವಲುಗಾರನಾದ ಮಲಕ್ ಮಾಲಿಕ್’ರು (ಅ) ಮಾತ್ರ, ನಮ್ಮ ಜೊತೆ ಮಾತಾಡಿದ್ದರೂ ನಗಲಿಲ್ಲ, ಅವರು ಇವತ್ತಿನವರೆಗೂ ಯಾರಲ್ಲಿಯೂ ನಗಲೇ ಇಲ್ಲ ಹಾಗಾಗಿ ಅವರು ನಿಮ್ಮ ಜೊತೆಯಲ್ಲೂ ನಗಲಿಲ್ಲ ಎಂದು ಹೇಳಿದರು.
ಹಿಂತಿರುಗಿ ಬರುತ್ತಿದ್ದ ದಾರಿಯಲ್ಲಿ ಅವರು ಪಿಶಾಚಿಗಳು ನೆಲೆಸಿರುವ ಸ್ಥಳ, ಹಾಗೂ ಜನರನ್ನು ಒಳಿತಿನ ದಾರಿಯಿಂದ ದೂರವಿಡುವ ಪ್ರವಚನದ ಪ್ರಪಂಚಗಳನ್ನು ನೋಡಿದರು.

ನಂತರ ಅವರ ಯಾತ್ರೆ ಮುಂದುವರೆದು, ಬೈತುಲ್ ಮುಖದ್ದಸಿಗೆ ಬಂದು ತಲುಪಿದರು. ಅಲ್ಲಿಂದ ಪುನಃ ಜಿಬ್’ರೀಲರ (ಅ) ಜೊತೆಯಲ್ಲಿ ಮಕ್ಕಾ ನಗರಕ್ಕೆ ವಾಪಸು ಹೊರಟರು. ದಾರಿಯಲ್ಲಿ, ಖುರೈಷಿಗಳ ವ್ಯಾಪಾರ ಸಂಘವನ್ನು ಕಾಣಲು ಸಾಧ್ಯವಾಯಿತು. ಅವರ ಜೊತೆಯಲ್ಲಿದ್ದ ಒಂಟೆಯ ಬೆನ್ನ ಮೇಲೆ ಕಪ್ಪು ಬಣ್ಣದ ಹಾಗೂ ಬಿಳಿ ಬಣ್ಣ ಗೋಣಿ ಚೀಲಗಳಿದ್ದವು. ಪ್ರವಾದಿಯವರ ﷺ ಸಂಚಾರ ಅವರ ಸಮಾನಕ್ಕೆ ತಲುಪಿದಾಗ, ಒಂಟೆಗಳನ್ನು ಅವರನ್ನು ನೋಡಿ ಗಾಬರಿಗೊಂಡವು. ಗುಂಪಿನಿಂದ ತಪ್ಪಿಸಿಕೊಂಡ ಒಂಟೆಯನ್ನು ಒಬ್ಬರು ಪುನಃ ಹಿಡಿದು ತರುತ್ತಿರುವಾಗ, ಪ್ರವಾದಿಯವರನ್ನು ﷺ ಅವರನ್ನು ನೋಡಿ ಸಲಾಂ ಹೇಳಿದರು. ಅದನ್ನು ಕೇಳಿ ಕೆಲವರು, ಇದು ಮುಹಮ್ಮದ್’ರ ﷺ ಧ್ವನಿ ಅಲ್ಲವೇ.? ಎಂದು ಹೇಳುತ್ತಿದ್ದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-124/365

ಬೆಳಕು ಹರಿಯುದಕ್ಕೂ ಮುನ್ನವೇ ಪ್ರವಾದಿಯವರು ﷺ ತಿರುಗಿ ತಮ್ಮ ಮನೆಗೆ ಬಂದು ತಲುಪಿದರು. ಈ ವಿಷಯವನ್ನು ಸತ್ಯ ನಿಷೇಧಿಗಳು ಯಾವುದೇ ಕಾರಣಕ್ಕೂ ನಂಬುವುದಿಲ್ಲ ಎಂದು ಪ್ರವಾದಿಯವರಿಗೆ ﷺ ಚಿಂತೆಯಾಗ ತೊಡಗಿತು. ಅಷ್ಟರಲ್ಲೇ ಅಬೂಜಹಲ್ ಅದೇ ದಾರಿಯಲ್ಲಿ ನಡೆದು ಬಂದು, ಪ್ರವಾದಿಯವರನ್ನು ﷺ ಅಣಕಿಸುವ ರೀತಿಸುವ ಇವತ್ತು ಏನಾದರೂ ವಿಶೇಷವಿದೆಯ.? ಎಂದು ಕೇಳಿದಾಗ, ಪ್ರವಾದಿಯವರು ﷺ ಇದೆ ಎಂದು ಹೇಳಿದರು. ಅದಕ್ಕೆ ಅಬೂಜಹಲ್ ಅದು ಏನೆಂದು ಕೇಳಿದಾಗ, ನಿನ್ನೆ ರಾತ್ರಿ ನಾನು ನಿಶಾಯಾತ್ರೆ ನಡೆಸಿದ್ದೆ ಎಂದು ಪ್ರವಾದಿಯವರು ﷺ ಹೇಳಿದರು. ಅದಕ್ಕೆ ಅವರು ಎಲ್ಲಿಗೆ.? ಎಂದು ಕೇಳಿದಾಗ, ಬೈತುಲ್ ಮುಖದ್ದಸಿಗೆ. ಹೌದಾ, ಹಾಗಿದ್ದರೆ ಇಷ್ಟು ಬೇಗ ವಾಪಸ್ಸು ಬಂದ್ರ.? ಕೇಳಿದಾಗ, ಹೌದು ಎಂದು ಹೇಳಿದರು. ಆದರೆ ಅಬೂಜಹಲ್ ಮಾತ್ರ ಅದನ್ನು ವಿಶ್ವಾಸವಿರಿಸಲಿಲ್ಲ. ಆದರೂ ಮಾತು ಮುಂದುವರೆಸಿ, ಈ ವಿಷಯವನ್ನು ಇತರರಿಗೆ ತಿಳಿಸುವ ಯೋಜನೆ ಇದೆಯೇ.? ಎಂದು ಕೇಳಿದಾಗ, ಪ್ರವಾದಿಯವರು ﷺ ಖಂಡಿತವಾಗಿಯೂ ಜನರಲ್ಲಿ ತಿಳಿಸಲಿದ್ದೇನೆ ಎಂದು ಹೇಳಿದರು. ಅದಕ್ಕೆ ತಕ್ಷಣವೇ ಅಬೂಜಹಲ್ ಇತರರನ್ನು, ಓ ಕಅಬ್ ಬಿನ್ ಲುಅಯ್ಯಿನ ಮಕ್ಕಳೇ ಇಲ್ಲಿ ಬನ್ನಿರಿ, ಎಂದು ಕೂಗಿ ಕರೆದರು. ಅವರೆಲ್ಲರೂ ಜೊತೆ ಕೂಡಿದಾಗ, ಪ್ರವಾದಿಯವರಲ್ಲಿ ﷺ ಈಗಷ್ಟೇ ನನಲ್ಲಿ ಹೇಳಿದ ವಿಷಯವನ್ನು ಇವರಲ್ಲೂ ತಿಳಿಸಿ ಎಂದು ಹೇಳಿದರು. ಪ್ರವಾದಿಯವರು ﷺ ಅದೇ ರೀತಿ ಜನರಲ್ಲಿಯೂ, ನಿನ್ನೆ ರಾತ್ರಿ ನಾನು ರಾತ್ರಿ ಸಂಚಾರ ನಡೆಸಿದ್ದೆ ಎಂದು ಹೇಳಿದಾಗ, ಅದಕ್ಕೆ ಅವರೆಲ್ಲರೂ ಎಲ್ಲಿಗೆ ಅಂದಾಗ, ಬೈತುಲ್ ಮುಖದ್ದಸಿಗೆ ಎಂದು ಹೇಳಿದರು. ಹಾಗಿದ್ದರೆ ಬೆಳಕು ಹರಿಯುದಕ್ಕೂ ಮುಂಚೆಯೇ ನೀವು ತಿರುಗಿ ಬಂದ್ರಾ.? ಎಂದು ಅವರು ಕೇಳಿದಾಗ, ಹೌದು ಎಂದು ಉತ್ತರಿಸಿದರು. ಅದನ್ನು ಕೇಳಿದ ತಕ್ಷಣವೇ, ಕೆಲವರಿಗೆ ಆಶ್ಚರ್ಯವಾದರೂ, ಕೆಲವರು ತಮಾಷೆ ಮಾಡಲು ಆರಂಭಿಸಿದರು. ಆದರೂ ಪ್ರವಾದಿಯವರು ﷺ ಮಾತ್ರ ಈ ವಿಷಯವನ್ನು ತಿಳಿಸುವಾಗ ತುಂಬಾ ಆತ್ಮವಿಶ್ವಾಸದಿಂದ ಇದ್ದರು. ಮುತ್ವ್’ಇಮು ಬಿನು ಅದಿಯ್ಯ್ ಎಂಬ ವ್ಯಕ್ತಿ ಮುಂದೆ ಬಂದು, ಮುಹಮ್ಮದ್’ರೇ ﷺ ನೀವು ಇವತ್ತಿನವರೆಗೆ ಹೇಳಿದ ವಿಷಯಗಳಲ್ಲಿ ಕೆಲವೊಂದನ್ನು ಆದ್ರೂ ನಂಬಹುದಿತ್ತು ಆದರೆ ಇದು, ಯಾವುದೇ ಕಾರಣಕ್ಕೂ ನಂಬಲು ಸಾಧ್ಯವಿಲ್ಲ, ಲಾತ ಉಝ್ಝರ ಮೇಲಾಣೆ ನಾನಂತೂ ಖಂಡಿತ ಇದನ್ನು ನಂಬುವುದಿಲ್ಲ, ವಿರೋಧಿಸುತ್ತೇನೆ ಎಂದು ಹೇಳಿದರು. ನಂತರ ಮಾತು ಮುಂದುವರೆಸಿ, ನಾವು ಬಹಳ ಸಾಹಸಪಟ್ಟು ಎಷ್ಟೇ ವೇಗವಾಗಿ ಪ್ರಯಾಣ ನಡೆಸಿದರೂ, ಕನಿಷ್ಠ ಅಂದ್ರು ಕುದುರೆಯ ಮೇಲೆ ಹೋಗುವುದಾದರೆ.? ಒಂದು ತಿಂಗಳು ಆದ್ರೂ ಬೇಕೇ ಬೇಕು, ಆ ದೂರವನ್ನು ರಾತ್ರಿಯ ಕೆಲವೇ ಕೆಲವು ಸಮಯದಲ್ಲಿ ಹೋಗಿ ವಾಪಸ್ಸು ಬಂದಿರಿ ಎಂದು ಹೇಳುವಾಗ, ನಾವು ಹೇಗೆ ತಾನೇ ವಿಶ್ವಾಸವಿರಿಸವುದು ಎಂದು ಕೇಳಿದರು.

ತಕ್ಷಣವೇ ಅಬೂಬಕ್ಕರ್’ರವರು ◌ؓ ಬಂದು ಮುತ್ವ್’ಇಮಿನಲ್ಲಿ, ನೀವು ನಿಮ್ಮ ಸಹೋದರನ ಮಗನಿಗೆ ಹೀಗೆ ಹೇಳುವುದು ಸರಿಯಲ್ಲ, ಮುಹಮ್ಮದ್ ﷺ ಪ್ರವಾದಿಯವರು ಹೇಳಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ, ಅವರು ಸತ್ಯವಂತರೂ, ನೀತಿವಂತರೂ ಆಗಿರುವರು. ಹಾಗಾಗಿ ಈಗ ಹೇಳಿದ ವಿಷಯವನ್ನು ಖಂಡಿತ ನಾನು ಅಂಗೀಕರಿಸುತ್ತೇನೆ ಎಂದು ಹೇಳಿದರು. ಅದಕ್ಕೆ ಅಲ್ಲಿ ಸೇರಿದ್ದ ಜನರೆಲ್ಲರೂ ಪ್ರವಾದಿಯವರಲ್ಲಿ ﷺ, ಸರಿ ಹಾಗಿದ್ದರೆ ಬೈತುಲ್ ಮುಖದ್ದಸಿನ ಕುರಿತು ನಮಗೆ ತಿಳಿಸಿರಿ, ಅದರ ವಾಸ್ತುಶಿಲ್ಪ, ಬಾಗಿಲಿನ ವಿನ್ಯಾಸ, ಹಾಗೂ ಇತರ ವಿಶೇಷತೆಯ ಬಗ್ಗೆ ತಿಳಿಸಿರಿ ಎಂದು ಕೇಳಿದರು. ಯಾಕೆಂದರೆ ಅವರಿಗೆ ತಿಳಿದಿತ್ತು ಪ್ರವಾದಿಯವರು ﷺ ಈ ಹಿಂದೆ ಯಾವತ್ತೂ ಬೈತುಲ್ ಮುಖದ್ದಸಿಗೆ ಹೋಗಿರಲಿಲ್ಲ ಎಂದು, ಆದರೆ ಮಕ್ಕಾ ನಿವಾಸಿಗಳಲ್ಲಿ ಬಹಳಷ್ಟು ಜನರು ಈ ಹಿಂದೆ ಬೈತುಲ್ ಮುಖದ್ದಸಿಗೆ ಹೋದವರು ಇದ್ದರು. ಅವರ ಮಾತನ್ನು ಕೇಳಿ ಪ್ರವಾದಿಯವರು ﷺ ವಿವರಿಸಲು ಆರಂಭಿಸಿದರು, ಅದರ ಬಾಗಿಲಿನ ವಿನ್ಯಾಸ ಹೇಗಿತ್ತು ಎಂದು, ಅದು ಯಾವ ಭಾಗದಲ್ಲಿದೆ, ಹತ್ತಿರದ ಪರ್ವತದಿಂದ ಎಷ್ಟು ದೂರವಿದೆ, ಹೀಗೆ ಒಂದೊಂದೇ ವಿಶೇಷತೆಗಳನ್ನು ವಿವರಿಸಲು ಆರಂಭಿಸಿದರು. ಪ್ರವಾದಿಯವರು ﷺ ಒಂದೊಂದೇ ವಿಶೇಷತೆಗಳನ್ನು ಹೇಳುತ್ತಿರುವಾಗಲೂ, ಅಬೂಬಕ್ಕರ್ ◌ؓ ಸದಖ್’ತ.. ಸದಖ್’ತ.. ಸತ್ಯ ಹೇಳುತ್ತಿರುವಿರಿ.. ಸತ್ಯ ಹೇಳುತ್ತಿರುವಿರಿ.. ನೀವು ಅಲ್ಲಾಹನ ದೂತನಾಗಿರುವಿರಿ, ನಾನು ಅದಕ್ಕೆ ಸಾಕ್ಷಿ ನಿಲ್ಲುತ್ತೇನೆ ಎಂದು ಹೇಳುತ್ತಿದ್ದರು. ಪ್ರವಾದಿಯವರ ﷺ ವಿವರಣೆಯನ್ನು ಕೇಳಿದ ಜನರು ಏನೇ ಆದರೂ ನೀವು ಹೇಳಿದ್ದು ಸರಿ ಎಂದು ಒಟ್ಟಾಗಿ ಹೇಳಿದರು.

ಇಷ್ಟೆಲ್ಲಾ ವಿವರಣೆ ನೀಡಿದರೂ, ಜನರು ಅಬೂಬಕ್ಕರ್’ರಲ್ಲಿ ◌ؓ, ಮುಹಮ್ಮದ್’ರು ﷺ ಒಂದು ರಾತ್ರಿಯಲ್ಲಿ ಬೈತುಲ್ ಮುಖದ್ದಸಿಗೆ ಹೋಗಿ ಬಂದರು, ಎಂದು ಹೇಳಿದ್ದನ್ನು ನೀವು ಸತ್ಯ ಎಂದು ಒಪ್ಪಿಕೊಳ್ಳುತ್ತೀರೆ.? ಎಂದು ಕೇಳಿದಾಗ, ಅಬೂಬಕ್ಕರ್ ◌ؓ ನನಗೆ ಅದರಲ್ಲಿ ಯಾವುದೇ ಸಂಶಯವಿಲ್ಲ. ಅದಕ್ಕಿಂತಲೂ ಶ್ರೇಷ್ಠವಾದ ವಿಷಯವಲ್ಲವೇ.? ಆಕಾಶ ಲೋಕದಿಂದ ಅಲ್ಲಾಹನ ಸಂದೇಶ ಲಭಿಸುತ್ತದೆ ಎನ್ನುವುದು. ಅದನ್ನೇ ಒಪ್ಪಿಕೊಂಡಿರುವಾಗ, ಇದನ್ನು ಒಪ್ಪಿಕೊಳ್ಳಲು ಯಾವ ಸಮಸ್ಯೆ.? ಎಂದು ಮಹಾನರು ಸ್ಪಷ್ಟವಾದ ಪ್ರತಿಕ್ರಿಯೆ ನೀಡಿದರು. ಈ ಸದೃಢ ವಿಶ್ವಾಸದ ಕಾರಣದಿಂದಾಗಿತ್ತು, ಮಹಾನರಿಗೆ ಸಿದ್ದೀಕ್ ◌ؓ ಎನ್ನುವ ಹೆಸರು ಲಭಿಸಿದ್ದು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-125/365

ಪ್ರವಾದಿಯವರನ್ನು ﷺ ಪುನಃ ಖುರೈಷಿಗಳನ್ನು ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ಸಿರಿಯಾದಿಂದ ಮಕ್ಕಾ ನಗರಕ್ಕೆ ವಾಪಸ್ ಬರುತ್ತಿದ್ದ, ವ್ಯಾಪಾರ ಸಂಘವನ್ನು ನೀವು ಎಲ್ಲಿಯಾದರೂ ನೋಡಿದ್ದೀರಾ.? ಅವರು ಯಾವಾಗ ಇಲ್ಲಿಗೆ ತಲುಪಬಹುದು.? ಎಂದು ಕೇಳಿದಾಗ, ಪ್ರವಾದಿಯವರು ﷺ ನಾನು ಅವರ ಜೊತೆಯಲ್ಲಿದ್ದ ಒಬ್ಬರ ಒಂಟೆಯನ್ನು ರೌಹಾ ಎಂಬ ಸ್ಥಳದಲ್ಲಿ ನೋಡಿದ್ದೆ, ನಂತರ ಅವರ ಶಿಬಿರಕ್ಕೆ ಹೋಗಿದ್ದಾಗ ಅಲ್ಲಿ ಅವರು ಇರಲಿಲ್ಲ. ಅವರು, ಅವರ ಗುಂಪಿನಿಂದ ತಪ್ಪಿಸಿದ್ದ ಒಂಟೆಯನ್ನು ಹುಡುಕಿ ಹೋಗಿದ್ದರು. ನಾನು ಅಲ್ಲೇ ಇದ್ದ, ಅವರ ನೀರಿನ ಪಾತ್ರೆಯಿಂದ ನೀರನ್ನು ಕೂಡ ಕುಡಿದ್ದೆನು, ಅಷ್ಟೊತ್ತಿಗೆ ಒಬ್ಬ ವ್ಯಕ್ತಿಯು ತನ್ನ ಒಂಟೆಯ ಮೇಲೆ, ಕಪ್ಪು ಹಾಗೂ ಬಿಳಿ ಬಣ್ಣದ ಗೋಣಿ ಚೀಲಗಳನ್ನು ಹೊತ್ತು ಬರುತಿದ್ದದ್ದು ಕಾಣಲು ಸಾಧ್ಯವಾಯಿತು. ಅವರು ನಿನ್ನೆ ರಾತ್ರಿ, ತನ್ಈಮಿಗೆ ತಲುಪಿದ್ದರು. (ಮಕ್ಕಾದಿಂದ ಕೇವಲ ಏಳು ಕಿ.ಮೀ ದೂರದಲ್ಲಿರುವ ಹರಮಿನ ಗಡಿ ಪ್ರದೇಶವಾಗಿದೆ ತನ್ಈಮ್.) ಇವತ್ತು ಸನ್ನಿಯ್ಯತ್’ಗೆ ತಲುಪಿರಬಹುದು. (ಮಕ್ಕಾ ನಿವಾಸಿಗಳು ವ್ಯಾಪಾರಕ್ಕೆ ತೆರಳುವ ಸ್ಥಳವಾಗಿದೆ ಸನ್ನಿಯತ್) ಹಾಗಿದ್ದರೆ ಮಕ್ಕಾ ನಗರಕ್ಕೆ ಯಾವಾಗ ತಲುಪಬಹುದು.? ಎಂದು ಖುರೈಷಿಗಳು ಕೇಳಿದಾಗ, ಪ್ರವಾದಿಯವರು ﷺ ಬಹುಶಃ ಬುಧವಾರ ತಲುಪಬಹುದು ಎಂದು ಹೇಳಿದರು. ಅವರೆಲ್ಲರೂ ಬುಧವಾರದ ವರೆಗೆ ಕಾಯುತ್ತಾ ಕುಳಿತರು. ಸಂಜೆಯಾದರೂ ಅವರಿನ್ನೂ ಬಂದಿರಲಿಲ್ಲ, ಹಾಗಾಗಿ ಅವರು ಪ್ರವಾದಿಯವರ ﷺ ಬಳಿ ಹೋದರು. ಅವರನ್ನು, ಇನ್ನೂ ಸ್ವಲ್ಪ ಹೊತ್ತು ಕಾಯಲು ಹೇಳಿದಾಗ ದೂರದಿಂದ ಅವರ ಗುಂಪು ಬರುವುದು ಕಾಣಲು ಸಾಧ್ಯವಾಯಿತು. ತಕ್ಷಣವೇ ಅವರೆಲ್ಲರೂ, ಅವರ ಬಳಿ ಓಡಿ ಹೋಗಿ, ಎಲ್ಲವನ್ನೂ ಕೇಳಿದಾಗ, ಹೌದು ಎಂದು ಹೇಳುತ್ತಾ ಎಲ್ಲದಕ್ಕೂ ಸ್ಪಷ್ಟನೆ ನೀಡಿದರು. ಆದರೂ ಅವರಿಗೆ ಸತ್ಯ ಅಂಗೀಕರಿಸುವ ಭಾಗ್ಯ ಸಿಗಲಿಲ್ಲ, ಅವರೆಲ್ಲರೂ ಇದೊಂದು ವಾಮಾಚಾರವಾಗಿದೆ ಎಂದು ಹೇಳಿ ವಿಷಯವನ್ನು ತಿರುಗಿಸಿದರು.

ಪ್ರವಾದಿಯವರ ﷺ ನಿಶಾಯಾತ್ರೆಯ ಹಾಗೂ ಆಕಾಶಯಾತ್ರೆಯ ಬಗ್ಗೆಯಾಗಿತ್ತು ನಾವು ಇಲ್ಲಿವರೆಗೆ ತಿಳಿದದ್ದು. ಆದರೆ ಈ ಘಟನೆಯ ಬಗ್ಗೆಯಿರುವ ಕೆಲವೊಂದು ಅಭಿಪ್ರಾಯಗಳನ್ನು ಕೂಡ ನಾವು ತಿಳಿಯಬೇಕಿದೆ. ಒಂದು, ನಿಜವಾಗಿಯೂ ಈ ಯಾತ್ರೆ ನಡೆದಿತ್ತೋ.? ಎಂದು. ಹೌದು ಇದೊಂದು ನಿಜವಾದ ನಿಶಾ ಯಾತ್ರೆಯಾಗಿತ್ತು ಅಲ್ಲದೆ ಆಧ್ಯಾತ್ಮಿಕ ಸಂಚಾರವೋ, ಅಥವಾ ಸ್ವಪ್ನ ದರ್ಶನವೋ, ಆಗಿರಲಿಲ್ಲ. “ಅಸ್’ರಾ ಬಿ ಅಬ್’ದಿಹಿ” ಅಲ್ಲಾಹನು ಅವನ ದಾಸನನ್ನು ರಾತ್ರಿ ಸಂಚಾರ ನಡೆಸಿದನು, ಎಂದಾಗಿದೆ. ಖುರ್’ಆನಿನಲ್ಲಿ ಉಲ್ಲೇಖಿಸಲಾಗಿರುವುದು. “ಅಬ್’ದ್” ಎಂಬ ಪದವನ್ನು ಕೇವಲ ಆತ್ಮಕ್ಕೆ ಮಾತ್ರ ಬಳಸುವ ಪದವಲ್ಲ, ಬದಲಾಗಿ ಆತ್ಮ ಹಾಗೂ ಶರೀರ ಎರಡು ಜೊತೆ ಸೇರಿದಾಗ ಮಾತ್ರ ಬಳಸುವ ಪದವಾಗಿದೆ. ಹಾಗಾಗಿ ಖುರ್’ಆನಿನ ಉಲ್ಲೇಖದಿಂದಲೇ ಈ ರಾತ್ರಿ ಸಂಚಾರ, ಕೇವಲ ಸ್ವಪ್ನ ದರ್ಶನವೋ.? ಆಧ್ಯಾತ್ಮಿಕ ದೃಶವೋ ಆಗಿರಲಿಲ್ಲ, ಬದಲಾಗಿ ವಾಸ್ತವದಲ್ಲಿ ನಡೆದ ಘಟನೆಯಾಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಅಷ್ಟೇ ಅಲ್ಲ ಮಕ್ಕಾ ನಿವಾಸಿಗಳು ಅದನ್ನು ವಿರೋಧಿಸಿದ್ದು ಕೂಡ ಅದೊಂದು ವಾಸ್ತವವಾಗಿ ನಡೆದ ರಾತ್ರಿ ಸಂಚಾರವಾಗಿತ್ತು ಎನ್ನುವ ಕಾರಣಕ್ಕೆ ಆಗಿತ್ತು. ನನಗೆ ಆಧ್ಯಾತ್ಮಿಕ ಶಕ್ತಿಯಿಂದ ಬೈತುಲ್ ಮುಖದ್ದಸ್ ಹಾಗೂ ಇತರ ದೃಶ್ಯಗಳನ್ನು ಕಂಡೆನು, ಅಥವಾ ಕನಸು ಕಂಡೆನು ಎಂದು ಹೇಳಿದರೆ, ಖುರೈಷಿಗಳು ಅದನ್ನು ವಿರೋಧಿಸುತ್ತಿರಲಿಲ್ಲ.

ಸಮ್ಮೋಹನ ನಿದ್ರೆಯ ಸಾಧ್ಯತೆಗಳ ಉದಾಹರಣೆ ನೀಡುತ್ತಾ ವೈಜ್ಞಾನಿಕವಾಗಿ ಇಸ್’ರಾಅ್ ಯಾತ್ರೆಯನ್ನು ಸಾಬಿತುಪಡಿಸಲು ಪ್ರಯತ್ನಿಸಿದವರೂ ಇದ್ದಾರೆ. ಆದರೆ ಅದು ಮಾನಸಿಕವಾಗಿ ನಡೆದ ಅನುಭವಗಳು ಆಗಬಹುದೇ ವಿನಃ ಯಾವುದೂ ಕೂಡ ಇಸ್’ರಾಅ್ ಯಾತ್ರೆಗೆ ಸಮಾನವಾಗಲು ಸಾಧ್ಯವಿಲ್ಲ. ಇನ್ನೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ತಿಂಗಳುಗಳ ಕಾಲ ನಡೆಸಬೇಕಾದ ಪ್ರಯಾಣವನ್ನು ಗಂಟೆಗಳಲ್ಲಿ ತಲುಪುವ ಹಾಗೆ ಮಾಡಿದರೂ ಅದು ಕೂಡ ಯಾವತ್ತೂ ಇಸ್’ರಾಅ್’ಗೆ ಸಮಾನವಾಗಲು ಸಾಧ್ಯವಿಲ್ಲ. ಆದರೆ ಇಲ್ಲಿ ಜಗದೊಡೆಯನ ಸೃಷ್ಟಿಸಿದ ತಂತ್ರಜ್ಞಾನಕ್ಕೆ ಇಷ್ಟೊಂದು ಸಾಮರ್ಥ್ಯ ಇರುವುದಾದರೆ.? ಅವನ ಪ್ರೀತಿಯ ದಾಸನಿಗೆ ಅದಕ್ಕಿಂತಲೂ ಅಧಿಕ ಸಾಮರ್ಥ್ಯವನ್ನು ನೀಡಬಹುದಲ್ಲವೇ.? ಎಂದು ಆಲೋಚಿಸುವಾಗ, ಇದೆಲ್ಲವೂ ವಾಸ್ತವವಾಗಿ ನಡೆಯಲು ಸಾಧ್ಯವಿದೆ ಎಂದು ಅರ್ಥಮಾಡಿಕೊಳ್ಳಬಹುದು.

ಪ್ರವಾದಿಯವರು ﷺ ಅವತ್ತಿನ ಮಕ್ಕಾ ನಿವಾಸಿಗಳಲ್ಲಿ, ತಮ್ಮ ನಿಶಾ ಯಾತ್ರೆಯ ಬಗ್ಗೆ ತಿಳಿಸಿದಾಗ ಮೊದಲು ಅವರು ವಿರೋಧಿಸಿದರು. ನಂತರ ಬಹಳಷ್ಟು ಪ್ರಶ್ನೆಗಳನ್ನು ಕೇಳಿದರು. ಆದರೆ ಪ್ರವಾದಿಯವರು ﷺ ಅವರ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ನೀಡಿದ್ದರು. ಆದರೆ ಅದು ಅವರಿಗೆ ಸತ್ಯ ಎಂದು ತಿಳಿದಿದ್ದರೂ, ಅಂಗೀಕರಿಸದೆ ಕ್ಷುಲ್ಲಕ ಕಾರಣಗಳನ್ನು ಕೊಟ್ಟು ಅದನ್ನು ತಳ್ಳಿಹಾಕಿದರು. ಈ ಘಟನೆಯ ಬಗ್ಗೆ ಇತರ ಗ್ರಂಥಗಳಲ್ಲಿಯೂ, ಇನ್ನೂ ಬಹಳಷ್ಟು ಉಲ್ಲೇಖಗಳು ಈಗಲೂ ಕಾಣಲು ಸಾಧ್ಯವಿದೆ. ಅದನ್ನು ಆಳವಾಗಿ ತಿಳಿದುಕೊಂಡು ಎಲ್ಲವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-126/365

ಎರಡು, ಪ್ರವಾದಿಯವರು ﷺ ಅಲ್ಲಾಹನನ್ನು ಭೇಟಿ ಮಾಡಿದರೋ, ಇಲ್ವೋ.? ಎಂಬುದಾಗಿದೆ. ವೈಜ್ಞಾನಿಕವಾದ ಅಭಿಪ್ರಾಯದ ಪ್ರಕಾರ ಪ್ರವಾದಿಯವರಿಗೆ ﷺ, ಅಲ್ಲಾಹನನ್ನು ಭೇಟಿಯಾಗಲು ಸಾಧ್ಯವಿದೆ ಎಂದು ತಿಳಿಯುತ್ತದೆ. ಆದರೆ ಗತಕಾಲದಲ್ಲಿ ಕಳೆದು ಹೋದ ಕೆಲವೊಂದು ನೂತನವಾದಿಗಳ (ಬಿದ್’ಅತ್) ಪ್ರಕಾರ, ಅಲ್ಲಾಹನನ್ನು ಪರಲೋಕದಲ್ಲಿಯೂ ಕೂಡ ಕಾಣಲು ಸಾಧ್ಯವಿಲ್ಲ ಎಂಬುದಾಗಿದೆ. ಆದರೆ ಅಲ್ಲಾಹನನ್ನು ಕಾಣಲು ಸಾಧ್ಯವಿದೆ ಎಂದು, ಇಪ್ಪತ್ತೊಂದು ಸ್ವಾಹಾಬಿಗಳು (ಪ್ರವಾದಿಯವರ ﷺ ಶಿಷ್ಯರು) ಸಮೇತವಾಗಿ, ಪವಿತ್ರ ಕುರ್’ಆನ್ ಕೂಡ, ಸ್ಪಷ್ಟವಾಗಿ ತಿಳಿಸುತ್ತದೆ.

ಇಸ್’ರಾಅ್’ನ ರಾತ್ರಿಯಲ್ಲಿ ಪ್ರವಾದಿಯವರು ﷺ ಅಲ್ಲಾಹನನ್ನು ಭೇಟಿಯಾಗಿದ್ದರು ಎಂಬ ವಿಷಯಗಳಲ್ಲಿ, ವೈಜ್ಞಾನಿಕವಾದ ಎರಡು ಅಭಿಪ್ರಾಯಗಳನ್ನು ಕಾಣಲು ಸಾಧ್ಯವಿದೆ. ಅದರಲ್ಲಿ ಒಂದು, ಆಯಿಷಾ ◌ؓ ಬೀವಿಯವರ ಪ್ರಕಾರ ಅಂದು ರಾತ್ರಿ, ಪ್ರವಾದಿಯವರು ﷺ ಅಲ್ಲಾಹನನ್ನು ಭೇಟಿಯಾಗಿರಲಿಲ್ಲ ಎಂಬುವುದಾಗಿದೆ. ಅಬೂಹುರೈರ ◌ؓ, ಇಬ್’ನು ಮಸ್’ವೂದ್’ರು ◌ؓ, ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದವರಾಗಿದ್ದರು. ಅಷ್ಟೇ ಅಲ್ಲ, ಹಾಫಿಲ್ ಉಸ್ಮಾನ್’ರು ◌ؓ ಸಈದುದ್ದಾರಿಮಿ ಎಂಬ ಗ್ರಂಥದಿಂದ ಉಲ್ಲೇಖಿಸಿದ ಈ ಅಭಿಪ್ರಾಯದಲ್ಲಿ ಇಜ್’ಮಅ್ ಕೂಡ ಇದೆ ಎಂದೂ ತಿಳಿಸಿದ್ದಾರೆ. ಆದರೆ ಹಸನ್ ಎಂಬುವವರು, ಅಲ್ಲಾಹನ ಮೇಲೆ ಆಣೆಹಾಕುತ್ತಾ, ಪ್ರವಾದಿಯವರು ﷺ ಇಸ್’ರಾಅ್’ನ ರಾತ್ರಿಯಲ್ಲಿ ಖಂಡಿತವಾಗಿಯೂ ಅಲ್ಲಾಹನನ್ನು ಭೇಟಿಯಾಗಿದ್ದಾರೆ ಎಂದು ಹೇಳುತ್ತಾರೆ. ಇಮಾಮ್ ಅಬ್ದುಲ್ ರಝ್ಝಾಕ್’ರು ◌ؓ ಕೂಡ ಈ ಅಭಿಪ್ರಾಯವನ್ನೇ ತಿಳಿಸುತ್ತಾರೆ. ಅಷ್ಟೇ ಅಲ್ಲ, ಉರ್’ವತ್ ಬಿನ್ ಝುಬೈರ್’ರಿಂದ ಇಮಾಮ್ ಇಬ್’ನು ಖುಸೈಮ ಉಲ್ಲೇಖಿಸಿದ್ದು ಕೂಡ ಇದೇ ಅಭಿಪ್ರಾಯವಾಗಿತ್ತು. ಅದೇ ರೀತಿ ಖುರ್’ಆನ್ ವ್ಯಾಖ್ಯಾನಕಾರರ ನಾಯಕರಾದ, ಅಬ್ದುಲ್ಲಾಹಿಬಿನು ಅಬ್ಬಾಸ್’ರವರ ◌ؓ ಶಿಷ್ಯರೆಲ್ಲರೂ ಇದೇ ಅಭಿಪ್ರಾಯವನ್ನಾಗಿತ್ತು ತಿಳಿಸಿದ್ದು. ಕಅಬುಲ್ ಅಹಬಾರ್, ಮಅಮರ್, ಝುಹ್’ರಿ ಮುಂತಾದವರು ಕೂಡ ಈ ಅಭಿಪ್ರಾಯವನ್ನು ಉಲ್ಲೇಖಿಸಿದ್ದಾರೆ. ಇಮಾಮ್ ಅಬುಲ್ ಹಸನ್ ಅಲ್ ಹಶ್’ಹರಿಯವರ ◌ؓ ಅಭಿಪ್ರಾಯವೂ ಕೂಡ ಮುಕ್ಕಾಲು ಭಾಗವು ಇದೇ ಅಭಿಪ್ರಾಯಕ್ಕೆ ಒತ್ತು ನೀಡುತ್ತದೆ.

ಇನ್ನೂ ಪ್ರವಾದಿಯವರು ﷺ ನೇರವಾಗಿ ಕಣ್ಣಿನಿಂದಲೇ ನೋಡಿದರೋ.? ಅಥವಾ ಹೃದಯದಿಂದ ನೋಡಿದರೋ.? ಎಂಬ ಅಭಿಪ್ರಾಯಗಳನ್ನು ಕೂಡ ಉಲ್ಲೇಖಿಸಲಾಗಿತ್ತು. ಈ ವಿಷಯದಲ್ಲಿ ಮುಕ್ಕಾಲು ಭಾಗ ಪಂಡಿತರೂ ಕೂಡ ತಿಳಿಸುವುದು, ಮಿಅ್’ರಾಜಿನ ರಾತ್ರಿಯಲ್ಲಿ ಪ್ರವಾದಿಯವರು ﷺ ಅವರ ನೇತ್ರಗಳ ಮೂಲಕವೇ ಆಗಿತ್ತು ಅಲ್ಲಾಹನನ್ನು ನೋಡಿದ್ದು ಎಂದು. ಇಮಾಮ್ ತ್ವಬ್’ರಾನಿಯವರು ◌ؓ ಉಲ್ಲೇಖಿಸಿದ ಹದೀಸಿನಲ್ಲಿ ಇಬ್’ನು ಅಬ್ಬಾಸ್’ರವರು ◌ؓ ತಿಳಿಸಿದ್ದು, ಒಮ್ಮೆ ಹೃದಯದ ಕಣ್ಣಿನಿಂದಲೂ, ಮತ್ತೊಮ್ಮೆ ಮುಖದ ಕಣ್ಣಿನಿಂದಲೂ ಆಗಿತ್ತು ಅಲ್ಲಾಹನನ್ನು ನೋಡಿದ್ದು ಎಂದಾಗಿತ್ತು.

ಈ ಅಭಿಪ್ರಾಯದ ಭಾಗವಾಗಿ, ಪ್ರವಾದಿಯವರು ﷺ ಅಲ್ಲಾಹನನ್ನು ನೋಡಿದ್ದರೋ.? ಇಲ್ಲವೋ.? ಎಂದು ಸ್ಪಷ್ಟವಾಗಿ ತಿಳಿಸದೆ, ಇದರ ಬಗ್ಗೆ ಬಂದ ಎಲ್ಲಾ ಉಲ್ಲೇಖಗಳನ್ನೂ ಚರ್ಚೆ ಮಾಡುತ್ತಾ ಹೋದ ಬಹಳಷ್ಟು ಪಂಡಿತರೂ ಇದ್ದಾರೆ. ಇನ್ನೂ ಪ್ರವಾದಿಯವರು ﷺ ಅಲ್ಲಾಹನನ್ನು ನೋಡಿದ್ದರೋ ಎಂದು ಕೇಳುವುದಾದರೆ.? ಹೌದು ನೋಡಿದ್ದರು. ಆ ವಿಷಯದಲ್ಲಿ ಅಲ್ಲಾಹನ ಪ್ರಕಾಶವನ್ನು ನೋಡಿದ್ದರು ಎಂದು, ಇಮಾಮ್ ಅಹ್ಮದ್ ◌ؓ ಹಾಗೂ ಇತರ ಪಂಡಿತರು ಉಲ್ಲೇಖಿಸಿದ ಹದೀಸಿನಲ್ಲಿ ಬೇರೆ ಬೇರೆ ರೀತಿಯಲ್ಲಿ ತಿಳಿಸಿದ್ದು ಕಾಣಬಹುದು. ಒಂದು ಗುಂಪು ಅಲ್ಲಾಹನನ್ನು ನೋಡಿಲ್ಲ ಅವನ ಪ್ರಕಾಶವನ್ನಾಗಿತ್ತು ನೋಡಿದ್ದು ಎಂದು ಹೇಳಿದರೂ, ಅದು ನೋಡಿದ್ದು ಅಲ್ಲಾಹನನ್ನೇ ಆಗಿತ್ತು, ಆದರೆ ನಮಗೆ ತಿಳಿಸಲು ಸುಲಭವಾಗಲಿ ಎಂದು, ಅಲ್ಲಾಹನ ಪ್ರಕಾಶವನ್ನಾಗಿತ್ತು (ನೂರ್) ನೋಡಿದ್ದ ಎಂಬ ಪದ ಪ್ರಯೋಗ ನಡೆಸಿದ್ದು ಎಂದು ಇನ್ನೊಂದು ಅಭಿಪ್ರಾಯವನ್ನು ತಿಳಿಸಿದವರೂ ಇದ್ದಾರೆ.

ಇಸ್ಲಾಮಿನ ವಿಶ್ವಾಸದ ಭಾಗವಾಗಿ ಹಲವಾರು ಗ್ರಂಥಗಳನ್ನು ರಚಿಸಿದ್ದ ಉಮರುಲ್ ಖಾಝಿಯವರು ◌ؓ, ಈ ಎಲ್ಲಾ ಚರ್ಚೆಗಳನ್ನು ಪರಿಗಣಿಸಿ, ಉಲ್ಲೇಖಿಸಿದ್ದು, “ವ ರಆವು ಐನನ್ ವ ಫುಆದನ್ (ಪ್ರವಾದಿಯವರು ﷺ ಅಲ್ಲಾಹನನ್ನು ಕಣ್ಣಿನಿಂದಲೂ, ಹೃದಯದಿಂದಲೂ ನೋಡಿದ್ದರು) ಎಂದಾಗಿತ್ತು.” ಅವರು ಕಣ್ಣಿಂದ ನೋಡಿದ್ದ ದೃಶ್ಯವನ್ನು ಹೃದಯ ವಿರೋಧಿಸಲಿಲ್ಲ ಎಂಬ ಅರ್ಥವು ಪವಿತ್ರ ಖುರ್’ಆನಿನ ಅನ್ನಜ್’ಮ್ ಅಧ್ಯಾಯದ ಹನ್ನೊಂದನೇ ಸೂಕ್ತದಲ್ಲಿ ಸೂಚಿಸುವುದು ಕಾಣಬಹುದು. ಇದೇ ಸೂಕ್ತವನ್ನು ಉಲ್ಲೇಖಿಸಿಯಾಗಿತ್ತು ಉಮರುಲ್ ಖಾಝಿಯವರು ◌ؓ ಈ ಅಭಿಪ್ರಾಯವನ್ಮು ತಿಳಿಸಿದ್ದು.

ಯಾವುದೇ ಉಲ್ಲೇಖಗಳನ್ನು ಪರೀಕ್ಷಿಸಿದರೂ, ಅಲ್ಲಾಹನನ್ನು ನೋಡಿದರು, ಎಂಬುದಕ್ಕೆ ದೈಹಿಕ ಸಂದರ್ಶನ ಮಾಡಿದರು ಎಂದು ಅರ್ಥವಲ್ಲ. ಅಲ್ಲಾಹನಿಗೆ ಸೃಷ್ಟಿಗಳಿಗಿರುವ ಹಾಗೆ ದೇಹ ರಚನೆಯೋ, ಇತರ ವಿಶೇಷತೆಗಳೋ ಇಲ್ಲ, ಅವನು ಹೇಗೆ, ಎಲ್ಲಿರುವನು ಎನ್ನುವ ಪ್ರಶ್ನೆಗಳಿಗೂ ಮೀರಿದವನಾಗಿದ್ದಾನೆ. ಸಮಯ, ಸ್ಥಳ ಎಲ್ಲವೂ ಅವನ ಸೃಷ್ಟಿಯಾಗಿದೆ, ಸಮಯ, ಸ್ಥಳಗಳೆಲ್ಲವೂ ಅವನು ಸೃಷ್ಟಿ ಮಾಡಿದಾಗ ಉಂಟಾದ ಸೃಷ್ಟಿಯಾಗಿದೆ ಅಷ್ಟೇ, ಅಲ್ಲಾಹನು ಆರಂಭವೇ ಇಲ್ಲದವನಾಗಿದ್ದಾನೆ.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-127/365

ಇಸ್’ರಾಅ್’ನ ರಹಸ್ಯವನ್ನು ಖುರೈಷಿಗಳಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಪ್ರವಾದಿಯವರ ﷺ ಜೊತೆಯಲ್ಲಿದ್ದ ಕೆಲವು ಜನರೂ ಕೂಡ ಈ ವಿಷಯವಾಗಿ ಗೊಂದಲಕ್ಕೆ ಸಿಲುಕಿದ್ದರು. ಈ ಸಂದರ್ಭವನ್ನು ಖುರೈಷಿಗಳು ಚೆನ್ನಾಗಿ ಬಳಸಿಕೊಂಡರು. ಹಾಗಾಗಿ ಸತ್ಯ ವಿಶ್ವಾಸವನ್ನು ಸ್ವೀಕರಿಸಬಹುದೆಂಬ ಭರವಸೆಯಿಂದ ಭೇಟಿಯಾಗಿದ್ದ, ಸಖೀಫ್, ಕಿನ್’ದ, ಕಲ್’ಬ್, ಆಮಿರ್, ಹನೀಫಾ, ಮುಂತಾದ ಜನಾಂಗದವರ ಪ್ರತಿಕ್ರಿಯೆಗಳು ನಿರಾಸೆ ದಾಯಕವಾಯಿತು. ಮಕ್ಕಾ ನಗರಕ್ಕೆ ತೀರ್ಥ ಯಾತ್ರೆಗಾಗಿ ಬರುತ್ತಿದ್ದ ಸುತ್ತಮುತ್ತಲಿನ ಪ್ರದೇಶದ ಜನರನ್ನು ಭೇಟಿಯಾಗುದಕ್ಕೂ ಕೂಡ ಖುರೈಷಿಗಳು ಅಡಚಣೆ ನಿರ್ಮಿಸಿದರು. ಪ್ರವಾದಿಯವರ ﷺ ಆದರ್ಶಕ್ಕೆ ಕೆಲವರು ಪ್ರಭಾವಿತರಾದರೂ, ಸಮೂಹದಲ್ಲಿ ಒಬ್ಬಂಟಿಯಾಗಬಹುದೆಂಬ ಕಾರಣಕ್ಕೆ ಸಾರ್ವಜನಿಕವಾಗಿ ಇಸ್ಲಾಮ್ ಸ್ವೀಕರಿಸಲು ಹಿಂದೇಟು ಹಾಕಿದರು.

ಹೀಗಿರುವಾಗ ಯಸ್’ರಿಬ್’ನ (ಈಗಿನ ಮದೀನ) ಗಣ್ಯ ವ್ಯಕ್ತಿಯಾಗಿದ್ದ, ಝುವೈದ್ ಬಿನ್ ಅಲ್ ಸ್ವಾಮಿತ್ ಮಕ್ಕಾ ನಗರಕ್ಕೆ ಬಂದಿದ್ದರು. ಸುಶೀಲೆನೂ, ಉತ್ತಮ ಸ್ವಭಾವದವನೂ, ಕವಿಯೂ ಆಗಿದ್ದ ಆತನನ್ನು ಜನರೆಲ್ಲರೂ ಅಲ್ ಕಾಮಿಲ್ (ಪರಿಪೂರ್ಣನು) ಎಂದಾಗಿತ್ತು ಕರೆಯುತ್ತಿದ್ದದ್ದು. ಹಜ್ಜ್ ಮಾಡಲೆಂದು ಮಕ್ಕ ನಗರಕ್ಕೆ ಬಂದ ಆತನನ್ನು, ಪ್ರವಾದಿಯವರು ﷺ ಭೇಟಿಯಾದರು. ಅವರಿಗೆ ತಮ್ಮ ಆದರ್ಶವನ್ನು ಪರಿಚಯಿಸಿ, ಇಸ್ಲಾಮಿಗೆ ಆಹ್ವಾನಿಸಿದರು. ಅದಕ್ಕೆ ಅವರು, ನನ್ನ ಬಳಿ ಇರುವುದು ಕೂಡ ನೀವು ಹೇಳಿದಕ್ಕೆ ಹೋಲಿಕೆ ಆಗುತ್ತದೆ ಎಂದು ಹೇಳಿದಾಗ, ಪ್ರವಾದಿಯವರು ﷺ ಅದು ಯಾವುದೆಂದು ಕೇಳಿದರು. ಅದಕ್ಕೆ ಅವರು, ಲುಖ್’ಮಾನ್’ರವರ ತತ್ವಜ್ಞಾನವಾಗಿದೆ. (ಹಿಕ್’ಮತ್ ಲುಖ್’ಮಾನ್) ಎಂದು ಹೇಳಿದಾಗ, ಪ್ರವಾದಿಯವರು ﷺ ಅದನ್ನು ತೋರಿಸಲು ಹೇಳಿದರು. ಅದನ್ನು ನೋಡಿದ ನಂತರ ಪ್ರವಾದಿಯವರು ﷺ, ಇದು ಒಳ್ಳೆಯದೇ ಆಗಿದೆ. ಆದರೆ ಇದಕ್ಕಿಂತಲೂ ಬಹಳ ಉತ್ತಮವಾದ ಆದರ್ಶವಾಗಿದೆ ನನ್ನ ಬಳಿ ಇರುವುದು. ಅದು ಒಳಿತಿನೆಡೆಗೆ ಆಹ್ವಾನಿಸುವ ಪವಿತ್ರ ಗ್ರಂಥವಾಗಿದೆ, ಅದನ್ನು ಅಲ್ಲಾಹನು ನನಗಾಗಿ ಅವತರಿಸಿ ಕೊಟ್ಟನು ಎಂದು ಹೇಳುತ್ತಾ, ಖುರ್’ಆನಿನ ಅಲ್ಪ ಭಾಗವನ್ನು ಓದಿ ಕೇಳಿಸಿದರು. ಅದನ್ನು ಬಹಳ ಗಮನವಿಟ್ಟು ಕೇಳಿದ ಝುವೈದ್, ಅದರ ಬಗ್ಗೆ ಆಲೋಚಿಸುತ್ತಾ ಇದು ತುಂಬಾ ಚೆನ್ನಾಗಿದೆ ಅಲ್ಲವೇ.? ನಂತರ ಅದರ ಬಗ್ಗೆ ಆಳವಾಗಿ ಆಲೋಚಿಸುತ್ತಾ, ಅಲ್ಲಿಂದ ಊರಿಗೆ ಮರಳಿ ಹೋದರು. ನಂತರ ಕಾಲದಲ್ಲಿ ಖಝ್’ರಜ್ ಜನಾಂಗವು ಆತನನ್ನು ಕೊಲೆಮಾಡಿತು. ಅಂದು ಅವರು ಸತ್ಯವಿಶ್ವಾಸಿಯಾಗಿದ್ದರು ಎಂದು, ಇತಿಹಾಸಕಾರರು ತಿಳಿಸುವುದು ಕಾಣಬಹುದು.

ಯಸ್’ರಿಬಿನ ಪ್ರಮುಖ ಎರಡು ಜನಾಂಗವಾದ “ಔಸ್ ಹಾಗೂ ಖಝ್’ರಜ್” ಜನಾಂಗವು ನಿರಂತರವಾಗಿ ಪರಸ್ಪರರ ವಿರುದ್ದ ಜಗಳವಾಡುತ್ತಲಿದ್ದವು. ಇವರಿಗೆ ಕುಮ್ಮಕ್ಕು ನೀಡುತ್ತಿದ್ದದ್ದು ಅಲ್ಲಿನ ಯಹೂದಿಗಳಾಗಿದ್ದರು. ಕೆಲವೊಮ್ಮೆ ಮಕ್ಕಾದ ಅರಬಿಗಳ ಸಹಾಯವನ್ನು ಆಗ್ರಹಿಸಿ ಮಕ್ಕಾ ನಗರಕ್ಕೆ ಬರುತ್ತಿದ್ದರು. ಅದೇ ರೀತಿ ಔಸ್ ಜನಾಂಗದ, ಅಬ್ದುಲ್ ಅಶ್’ಹಲ್ ವಂಶಸ್ಥರಾಗಿದ್ದ ಕೆಲವು ಯುವಕರು ಮಕ್ಕಾ ನಗರಕ್ಕೆ ಬಂದರು. ಆ ಗುಂಪಿನಲ್ಲಿ ಇಯಾಸ್ ಬಿನ್ ಮುಆದ್ ಕೂಡ ಜೊತೆಯಲ್ಲಿದ್ದರು. ಪ್ರವಾದಿಯವರು ﷺ ಅವರನ್ನು ಭೇಟಿಯಾಗಿ, ಇಸ್ಲಾಮಿನ ಆದರ್ಶವನ್ನು ತಿಳಿಸಿ, ಖುರ್’ಆನಿನ ಬಗ್ಗೆಯೂ ಕೂಡ ತಿಳಿಸಿ, ಅದನ್ನು ಅವರಿಗೆ ಓದಿ ಕೇಳಿಸಿದರು. ಅದೆಲ್ಲವನ್ನೂ ಗಮನವಿಟ್ಟು ಕೇಳುತ್ತಿದ್ದ ಇಯಾಸ್ ತಮ್ಮ ಗುಂಪಿನ ಜನರೊಂದಿಗೆ, ನಾವು ಆಗ್ರಹಿಸಿ ಬಂದ ವಿಷಯಕ್ಕಿಂತ ಎಷ್ಟೊಂದು ಉತ್ತಮವಾದ ವಿಷಯವಾಗಿದೆ ಕೇಳುತ್ತಿರುವುದು ಎಂದು ಹೇಳಿ, ಇಯಾಸ್ ತನ್ನ ಗುಂಪಿನ ಜನರನ್ನು ಉತ್ತೇಜಿಸಲು ಪ್ರಯತ್ನಿಸಿದರು. ಆದರೆ ಅವರ ಗುಂಪಿನ ನಾಯಕನಾಗಿದ್ದ, ಅಬುಲ್ ಹೈಸರ್ ಮಾತ್ರ ಇತರ ಗುಂಪಿನ ಜನರೊಂದಿಗೆ ಯುದ್ಧಕ್ಕೆ ಬೇಕಾದ ತಯಾರಿಗಳನ್ನು ನಡೆಸಿ ಯಸ್’ರಿಬಿಗೆ ಮರಳಿ ಹೋದರು.

ಔಸ್ ಹಾಗೂ ಖಝ್’ರಜ್ ಜನಾಂಗದ ನಡುವೆ ಪುನಃ ಜಗಳ ಆರಂಭವಾಯಿತು. ಅದು ಬುಆಸ್ ಯುದ್ಧಕ್ಕೆ ಎಡೆ ಮಾಡಿಕೊಟ್ಟಿತು. ಯುದ್ಧವು ಅತೀ ಭೀಕರವಾಗಿ ನಡೆಯುತ್ತಲಿತ್ತು. ಎರಡು ಗುಂಪಿನ ಜನರು ಕೂಡ, ಎದುರಾಳಿಯನ್ನು ನಿರ್ನಾಮ ಮಾಡಬೇಕೆಂಬ ಉದ್ದೇಶದಿಂದಲೇ ಹೊರಡುತಿದ್ದವು. ಹೀಗೆ ಮೊದಲ ಸುತ್ತಿನಲ್ಲಿ ಔಸ್ ಜನಾಂಗವು ಸೋತು, ನಜ್’ದ್’ನ ಕಡೆಗೆ ಓಡಿ ಹೋಗುವುದನ್ನು ಕಂಡು ಖಝ್’ರಜಿನ ಜನರು ಕುಣಿದು ಆಹ್ಲಾದಿಸಿದರು. ಆದರೆ ಇದೆಲ್ಲವೂ ಖಝ್’ರಜಿನ ಮೇಲೆ ಕೆಂಡ ಕಾರುವ ದ್ವೇಷವಿದ್ದ ಅಬೂ ಉಸೈದಿಗೆ ಸಹಿಸಲು ಸಾಧ್ಯವಾಗದೆ, ಅವರು ತನ್ನ ಕೈಯಲ್ಲಿದ್ದ ಈಟಿಯನ್ನು ಕಾಲಿನ ತೋಳಿಗೆ ಚುಚ್ಚಿ ಅಲ್ಲಿಯೇ ಅಚಲವಾಗಿ ನಿಂತು, ನಂತರ ನಾಶ.. ನಾಶ… ಸಾವು ನನ್ನ ಬೆನ್ನಟ್ಟಿದರೂ ನಾನು ಮಾತ್ರ ಇಲ್ಲಿಂದ ಮುಂದೆ ಹೋಗುವುದಿಲ್ಲ. ನೀವು ನನ್ನನ್ನು ಇಲ್ಲಿ ಸಾಯಲು ಬಿಟ್ಟು ಹೋಗುವುದಾದರೆ ಹೋಗಿ, ನೀವು ನನ್ನ ಶತ್ರುಗಳಿಗೆ ಬಿಟ್ಟು ಕೊಟ್ಟು ಓಡುವುದಾದರೇ ಹೋಗಿ ಎಂದು ಜೋರಾಗಿ ಕೂಗಿ ಹೇಳಿದಾಗ, ಓಡಿ ಹೋಗುತ್ತಿದ್ದ ಔಸ್ ಜನಾಂಗದ ಜನರು ತಿರುಗಿ ಬಂದು, ತಮ್ಮ ಸಂಪೂರ್ಣ ಶಕ್ತಿಯನ್ನು ಬಳಸಿ, ಉತ್ಸಾಹದಿಂದ ಹೋರಾಡಿ ಖಝ್’ರಾಜ್ ಜನಾಂಗವನ್ನು ಹೀನಾಯವಾಗಿ ಸೋಲಿಸಿದರು. ನಂತರ ಅವರ ಮನೆ, ಸಂಸ್ಥೆಗಳಿಗೆ ಬೆಂಕಿ ಕೊಡಲು ಆರಂಭಿಸಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-128/365

ಖರ್ಜೂರದ ತೋಟಗಳಿಗೂ ಕೂಡ ಬೆಂಕಿ ಕೊಟ್ಟರು. ಕೊನೆಗೆ ಅಶ್’ಹಲಿ ಜನಾಂಗದ ಸಅದ್ ಬಿನ್ ಮುಆದ್ ಆಗಿತ್ತು ಮಧ್ಯಸ್ಥಿಕೆ ವಹಿಸಿ ಬೆಂಕಿ ಕೊಡುವುದನ್ನು ನಿಲ್ಲಿಸಿದ್ದು. ಖಝ್’ರಜ್ ಜನಾಂಗವನ್ನು ಸಂಪೂರ್ಣವಾಗಿ ನಾಶಮಾಡುವ ಅಬೂ ಉಸೈದಿನ ತಂತ್ರವನ್ನು , ಅಬೂ ಖೈಸ್ ಬಿನ್ ಅಸ್’ಲತ್ ತಡೆದು, ವಂಚಕರಾದ ನರಿಗಳನ್ನು ಜೊತೆ ಸೇರಿಸಲು ಒಂದೇ ಆದರ್ಶದ ಜನರಾದ ನೀವುಗಳು ಯಾಕೆ ಪರಸ್ಪರ ಹೋರಾಟ ನಡೆಸಿ ನಾಶವಾಗುತ್ತೀರಿ.? ಎಂದು ಕೇಳಿದರು. ಆ ಸಂದರ್ಭದಲ್ಲಾಗಿತ್ತು ಯಹೂದಿಗಳ ನಡೆಸಿದ ಕುತಂತ್ರದ ಬಗ್ಗೆ ಅವರಿಗೆ ಮನವರಿಕೆ ಆದದ್ದು. ಒಂದೇ ಆದರ್ಶದ ಜನರ ನಡುವೆ ವಿಷ ಬೀಜ ಬಿತ್ತಿ, ಪರಸ್ಪರ ಕಾದಾಟ ನಡೆಸಿ ತಮ್ಮ ಬೇಳೆ ಬೇಯಿಸುವ ಕುತಂತ್ರದ ಬಗ್ಗೆ ಉಸೈದ್’ಗೆ ಈಗ ಅರ್ಥವಾದರೂ, ಅಷ್ಟೊತ್ತಿಗೆ ಬಹಳಷ್ಟು ಜೀವ ಹಾನಿ, ಹಾಗೂ ಇತರ ನಷ್ಟಗಳು ಉಂಟಾಗಿತ್ತು. ಯಹೂದಿಗಳು ಕುತಂತ್ರದಿಂದ ಪಡೆದುಕೊಂಡ ಅಧಿಕಾರಗಳ ಬಗ್ಗೆ ಉವೈಸ್ ಹಾಗೂ ಅವರ ಜೊತೆಗಾರರಿಗೆ ಈಗ ಒಂದೊಂದೇ ಮನವರಿಕೆಯಾಗ ತೊಡಗಿತು.
ಔಸ್ ಹಾಗೂ ಖಝ್’ರಜ್’ನ ಜನರಿಗೆ ಉಂಟಾದ ನಷ್ಟದ ಬಗ್ಗೆ ಚಿಂತಿಸುತ್ತಾ, ಬಹಳ ಬೇಸರ ಪಟ್ಟರು. ಅವರ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಒಬ್ಬರು ರಾಜನನ್ನು ನೇಮಕ ಮಾಡುವ ಯೋಜನೆ ಹಾಕಿ, ಖಝ್’ರಜ್ ಜನಾಂಗದ ಅಬ್ದುಲ್ಲಾಹ್ ಬಿನ್ ಮುಹಮ್ಮದ್ ಎಂಬವರನ್ನು ರಾಜನಾಗಿ ಆಯ್ಕೆ ಮಾಡಿದರೂ, ಆ ಯೋಜನೆ ಸಫಲವಾಗಲಿಲ್ಲ.

ಹೀಗಿರುವಾಗ, ಹಜ್ಜ್’ನ ಸಮಯ ಹತ್ತಿರವಾಯಿತು. ಖಝ್’ರಜ್ ಜನಾಂಗದ ಕೆಲವು ಜನರು, ಪ್ರವಾದಿಯವರನ್ನು ﷺ ಭೇಟಿಯಾಗಿ, ಔಸ್, ಖಝ್’ರಜ್ ಜನಾಂಗದ ನಡುವಿನ ಭಿನ್ನಾಭಿಪ್ರಾಯವನ್ನು ಯಹೂದಿಗಳು ಲಾಭ ಪಡೆಯುತ್ತಿರುವ ಎಲ್ಲಾ ವಿಷಯವನ್ನು ತಿಳಿಸಿದರು. ಯಸ್’ರಿಬಿನ ಯಹೂದಿಗಳು ಆಗಾಗ ತಿಳಿಸುತ್ತಿದ್ದ ಪ್ರವಾದಿಯವರು ﷺ ಇವರೇ ಎಂದು ಅರ್ಥ ಮಾಡಿಕೊಂಡ ಖಝ್’ರಜ್ ಜನಾಂಗದ ಜನರು, ಅವರೆಲ್ಲರೂ ಅರಬಿಗಳನ್ನು ಭೇಟಿಯಾಗಲು ಹೋದಾಗ, ಯಹೂದಿಗಳು, ಅಂತ್ಯ ಪ್ರವಾದಿಯವರು ﷺ ಬಂದರೆ ನಾವು ಅವರ ಜೊತೆ ಸೇರಿ ನಿಮ್ಮನ್ನು ಇಲ್ಲವಾಗಿಸುತ್ತೇವೆ ಎಂದು ಹೇಳುತ್ತಿದ್ದ ಮಾತು ಈಗ ಅವರಿಗೆ ನೆನಪಿಗೆ ಬಂದಿತು. ಆದರೆ ಈಗ ಪ್ರವಾದಿಯವರು ﷺ ಖಝ್’ರಜ್ ಜನಾಂಗವನ್ನು ಅವರ ಪಕ್ಷಕ್ಕೆ ಆಹ್ವಾನಿಸಿದನ್ನು ಕಂಡು ಆಶ್ಚರ್ಯಗೊಂಡರು. ಏನೇಯಾದರು ಯಹೂದಿಗಳಿಗಿಂತ ಮೊದಲೇ, ಇನ್ನೂ ನಾವೇ ಇವರನ್ನು ಹಿಂಬಾಲಿಸಬೇಕೆಂದು ಆಲೋಚಿಸಿ, ಇಸ್ಲಾಮ್ ಸ್ವೀಕರಿಸಿದರು. ನಂತರ ಅವರು ಪ್ರವಾದಿಯವರಲ್ಲಿ ﷺ, ಇಡೀ ಪ್ರಪಂಚದಲ್ಲೇ ಔಸ್, ಖಝ್’ರಜ್ ಜನಾಂಗದವರ ಹಾಗೆ ದ್ವೇಷದಿಂದ ಇರುವವರು ಬಹುಶಃ ಬೇರೆ ಯಾರೂ ಇರಲಿಕ್ಕಿಲ್ಲ. ಹಾಗಾಗಿ ನಮ್ಮ ನಡುವಿನ ದ್ವೇಷವನ್ನು ಇಲ್ಲವಾಗಿಸಿ ನಮ್ಮನ್ನು ಜೊತೆ ಸೇರಿಸಿದರೆ ನಂತರ ನಿಮ್ಮಷ್ಟು ಪ್ರಭಾವ ಶಾಲಿ ವ್ಯಕ್ತಿ ಬೇರೆ ಯಾರೂ ಇರಲಿಕ್ಕಿಲ್ಲ ಎಂದು ಹೇಳಿದರು. ಪ್ರವಾದಿಯವರ ﷺ ಮಾವನ ಸಂಬಂಧಿಕರಾದ, ಬನೂ ನಜ್ಜಾರ್ ಮನೆತನದ ಎರಡು ವ್ಯಕ್ತಿಗಳೂ ಕೂಡ ಖಝ್’ರಜ್’ಗಳ ಜೊತೆಯಲ್ಲಿ ಇದ್ದರು.

ಮಕ್ಕಾದಿಂದ ಹಿಂತಿರುಗಿ ಹೋದ, ಖಝ್’ರಜ್ ಜನಾಂಗದ ಜನರು, ಇಸ್ಲಾಮನ್ನು ಮದೀನದಲ್ಲಿ ಸಾರ್ವಜನಿಕವಾಗಿಯೇ ಪ್ರಚಾರ ಮಾಡಿದರು. ಅವರು ಭವಿಷ್ಯದ ಸಂತೋಷದ ದಿನಗಳ ಬಗ್ಗೆ ವಿವರಿಸಿ ಕೊಟ್ಟರು, ಔಸ್ ಜನಾಂಗದ ಜನರು ಇದನ್ನು ವಿರೋಧಿಸಲಿಲ್ಲ, ಹೀಗೆ ಮದೀನದ ಬೀದಿ ಬೀದಿಗಳಲ್ಲಿ ಪ್ರವಾದಿಯವರ ﷺ ಬಗ್ಗೆ ಚರ್ಚೆಗಳು ನಡೆಯಲು ಆರಂಭಿಸಿತು.
ಅಬೂ ಉಮಾಮ, ಅಸ್’ಅದ್ ಬಿನ್ ಸುರಾರಃ, ಔಫ್ ಬಿನ್ ಅಲ್ ಹಾರಿಸ್, ಇಬ್’ನು ಆಮಿರ್ ಬಿನ್ ಸುರೈಖ್, ಇಬ್’ನು ಆಮಿರ್ ಬಿನ್ ಹದೀದಃ, ಬನೂ ಹರಾಮ್ ಬಿನ್ ಕಅಬ್, ಬನೂ ಉಬೈದ್ ಬಿನ್ ಅದಿಯ್, ಮುಂತಾದ ಜನರ ಗುಂಪು, ಮಿನಾದ ಅಖಬಾದ ಬಳಿ ಈ ನಡೆಸಿದ ಮಾತುಕತೆಯನ್ನು ಒಂದನೇ ಅಖಬಃ ಒಪ್ಪಂದವಾಗಿ ಉಲ್ಲೇಖಿಸಿದ ಇತಿಹಾಸಕಾರರು ಬಹಳಷ್ಟು ಜನರಿದ್ದಾರೆ. ನಂತರ ನಡೆದ ಒಪ್ಪಂದಗಳನ್ನು ಒಂದನೇ ಒಪ್ಪಂದ, ಎರಡನೇ ಒಪ್ಪಂದ ಎಂದು ಹೇಳಿದವರೂ ಇದ್ದಾರೆ. ಮೊದಲನೇ ಅಭಿಪ್ರಾಯದ ಪ್ರಕಾರ ಎರಡು ಅಖಬಾ ಒಪ್ಪಂದ ಹಾಗೂ ಎರಡನೇ ಅಭಿಪ್ರಾಯದ ಪ್ರಕಾರ ಮೂರು ಅಖಬಾ ಒಪ್ಪಂದವಾಗಿತ್ತು ನಡೆದದ್ದು. ಜಂರ ಕಣಿವೆ ಇರುವ ಪ್ರದೇಶದವಾದ್ದರಿಂದ ಜಂರತುಲ್ ಅಖಬ ಎಂದು ಈ ಪ್ರದೇಶವನ್ನು ಕರೆಯಲಾಗುತ್ತದೆ. ಒಪ್ಪಂದ ನಡೆದ ಈ ಪ್ರದೇಶದಲ್ಲಿರುವ ಸಣ್ಣ ಮಸ್ಜಿದ್’ಗೆ ಮಸ್ಜಿದುಲ್ ಬೈಅಃ ಎಂದಾಗಿದೆ ಕರೆಯುವುದು.

ಮಕ್ಕಾದಲ್ಲಿ ಆರಂಭವಾದ ಇಸ್ಲಾಮಿನ ಪ್ರಭೋಧನೆಯು, ಅಲ್ಲಿ ಸಮಸ್ಯೆಗಳನ್ನು ಎದುರಿಸುವಾಗಲೂ, ಯಸ್’ರಿಬಿಗೆ ಬಹಳ ಸುಲಭವಾಗಿ ತಲುಪಿತು. ಯಸ್’ರಿಬಿನ ರಾಜಬೀದಿಗಳಲ್ಲಿ ಇಸ್ಲಾಂ ಯಾವ ರೀತಿ ಹರಡಿತು ಎಂದು ನಾವು ಮುಂದಿನ ಭಾಗದಲ್ಲಿ ತಿಳಿಯೋಣ.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-129/365

ಮುಂದಿನ ವರ್ಷ ಹಜ್ಜ್ ತಿಂಗಳು ಹತ್ತಿರವಾದಾಗ, ಯಸ್’ರಿಬಿನಿಂದ ಹನ್ನೆರಡು ಜನರು ಮಕ್ಕಾ ನಗರಕ್ಕೆ ಹೊರಟರು. ಅಖಬದಲ್ಲಿ ಪ್ರವಾದಿಯವರನ್ನು ﷺ ಭೇಟಿಯಾಗಿ ಒಪ್ಪಂದಗಳನ್ನು ಮಾಡಿಕೊಂಡರು. ಸಾಮಾನ್ಯವಾಗಿ ಮಹಿಳೆಯರಲ್ಲಿ ಒಪ್ಪಂದ ಮಾಡುವ ರೀತಿಯಲ್ಲಿ, ಮಹಿಳೆಯರಲ್ಲಿ ಒಪ್ಪಂದ ನಡೆದರೂ, ಪುರುಷರ ಒಪ್ಪಂದದಲ್ಲಿ ಮಾತ್ರ ಯುದ್ಧದ ನಿಯಮಗಳನ್ನು ಜೊತೆ ಸೇರಿಸಲಾಗಿತ್ತು. ಆದರೆ ಆ ಸಮಯದಲ್ಲಿ ಯುದ್ಧವನ್ನು ಜಾರಿಗೊಳಿಸರಿಳಿಲ್ಲ.

ಅಸ್’ಅದ್ ಬಿನ್ ಸುರಾರ, ದಕ್’ವಾನ್ ಬಿನ್ ಅಬ್ದು ಖೈಸ್, ಉಬಾದತ್ ಬಿನ್ ಸ್ವಾಮಿತ್, ಅಬ್ಬಾಸ್ ಬಿನ್ ಉಬಾದತ್ ಬಿನ್ ನಳ್’ಲಃ, ಖುತ್’ಬತ್ ಬಿನ್ ಆಮಿರ್ ಬಿನ್ ಹದೀದಃ, ಉಖ್’ಬತ್ ಬಿನ್ ಆಮಿರ್, ಔಫ್ ಬಿನ್ ಅಲ್ ಹಾರಿಸ್, ರಿಫಾಅಃ, ಉವೈಮಿಬಿನು ಸಾಇದಃ, ಮಾಲಿಕ್ ಬಿನ್ ಅತ್ತಹಿಯಾನ್, ಮುಅವ್ವಿದ್ ಬಿನ್ ಅಲ್’ಹಾರಿಸ್, ಯಝೀದ್ ಬಿನ್ ಸಅ್’ಲಬ ಎಂಬವರಾಗಿದ್ದರು ಪ್ರಸ್ತುತ ಗುಂಪಿನಲ್ಲಿ ಇದ್ದದ್ದು. ಒಪ್ಪಂದದ ಬಗ್ಗೆ ಇಬಾದತ್ ಬಿನ್ ಸಾಮಿತ್’ರವರು ◌ؓ ವಿವರಿಸುವುದು ಈ ರೀತಿಯಾಗಿದೆ. ಅಲ್ಲಾಹನಿಗೆ ಯಾರನ್ನೂ ಜೊತೆ ಸೇರಿಸಬಾರದು, ವ್ಯಭಿಚಾರವಾಗಲಿ, ಕಳ್ಳತನವಾಗಲಿ ನಡೆಸಬಾರದು. ಮಕ್ಕಳನ್ನು ಕೊಲ್ಲಬಾರದು, ಇನ್ನೊಬ್ಬರ ಮೇಲೆ ಅಪವಾದ ಹೊರಿಸಬಾರದು, ಮನಪೂರ್ವಕವಾಗಿ ತಪ್ಪುಗಳನ್ನು ಮಾಡಬಾರದು, ಒಳಿತು ಮಾಡುವುದರಲ್ಲಿ ಹಿಂದೇಟು ಹಾಕಬಾರದು, ಹೀಗೆ ಮುಂತಾದ ವಿಷಯಗಳಲ್ಲಿ ಒಪ್ಪಂದವು ನಡೆಯಿತು. ನಂತರ ಪ್ರವಾದಿಯವರು ﷺ ಅವರಲ್ಲಿ, ಇದೆಲ್ಲವನ್ನೂ ಸಂಪೂರ್ಣವಾಗಿ ಪಾಲಿಸುವುದಾದರೆ ನಿಮಗೆ ಅಲ್ಲಾಹನಿಂದ ಪ್ರತಿಫಲ ಸಿಗುತ್ತದೆ, ಅವನ ಸ್ವರ್ಗದಲ್ಲಿ ಅವಕಾಶ ಲಭಿಸುತ್ತದೆ. ಆದರೆ ಇದನ್ನು ಮಾಡದೆ ಇದ್ದರೆ ಖಂಡಿತ ಶಿಕ್ಷೆ ಸಿಗುತ್ತದೆ, ಕೆಲವೊಮ್ಮೆ ಕ್ಷಮೆ ಸಿಗಲು ಬಹುದು ಎಂದು ಹೇಳಿದರು.

ಒಪ್ಪಂದ ಮುಗಿಸಿ ಹಿಂತಿರುಗಿ ಹೋಗುವಾಗ, ಅವರಿಗೆ ಖುರ್’ಆನ್ ಹಾಗೂ ಇಸ್ಲಾಮಿನ ಬಗ್ಗೆ ಕಲಿಸಲು ಮಿಸ್’ಅಬ್ ಬಿನ್ ಉಮೈರ್’ರನ್ನು ◌ؓ ಕೂಡ ಜೊತೆಯಲ್ಲಿ ಕಳುಹಿಸಿದರು. ಖುರ್’ಆನ್ ಪಠಿಸುವ ವ್ಯಕ್ತಿ ಅಥವಾ ಕಲಿಸುವ ವ್ಯಕ್ತಿ ಎಂಬ ಅರ್ಥದಲ್ಲಿ ಖಾರಿಅ ಅಥವಾ ಮುಖ್’ರಿಯ ಎಂಬ ಹೆಸರಿನಲ್ಲಿ ಮಹಾನರು ಕರೆಯಲ್ಪಟ್ಟರು. ಮಿಸ್’ಅಬ್’ರಿಗೆ ◌ؓ
ಮದೀನದಲ್ಲಿ ಆಶ್ರಯ ನೀಡಿ ಎಲ್ಲಾ ಸವಲತ್ತುಗಳನ್ನು ನೀಡಿದ್ದು ಅಸ್’ಅದ್ ಬಿನ್ ಸುರಾರ ◌ؓ ಆಗಿತ್ತು.

ದಿನ ಕಳೆದಂತೆ ಅವರಿಬ್ಬರೂ ಆತ್ಮೀಯ ಗೆಳೆಯರಾದರು. ಒಟ್ಟಿಗೆ ಸೇರಿ ಇಸ್ಲಾಮಿನ ಪ್ರೊಭೋದನೆ ಜವಾಬ್ದಾರಿ ವಹಿಸಿಕೊಂಡರು. ದಿನ ಕಳೆದಂತೆ ಜನರಿಗೆ ಇಸ್ಲಾಮಿನ ಬಗ್ಗೆ ಅರಿತು, ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಯಿತು. ಹೀಗಿರುವಾಗ ಒಂದು ದಿನ, ಅಸ್’ಅದ್ ◌ؓ ಮಿಸ್’ಅಬ್’ರ ◌ؓ ಜೊತೆಯಲ್ಲಿ ಯಸ್’ರಿಬಿನ ಗಣ್ಯರಾದ, ಸಅದ್ ಬಿನ್ ಮುಆದ್ ಹಾಗೂ ಉಸೈದ್ ಬಿನ್ ಹುಳೈರ್’ರನ್ನು ಭೇಟಿಯಾಗಲು ಹೊರಟರು. ಅವರು ಹೋಗುವುದನ್ನು ಕಂಡು ಜೊತೆಯಲ್ಲಿ ಕೆಲವು ಮುಸ್ಲಿಮರು ಕೂಡ ಜೊತೆ ಸೇರಿದರು. ಸಅದ್ ಇಂರುಲ್ ಖೈಸ್’ನ ವಂಶಸ್ಥನಾಗಿದ್ದರು, ಅದೇ ರೀತಿ ಅಸ್’ಅದ್’ರವರ ◌ؓ ಮಾವನ ಮಗನೂ ಕೂಡ ಆಗಿದ್ದರು. ಸತ್ಯನಿಷೇಧಿಗಳ ನಾಯಕನೂ, ಯಸ್’ರಿಬಿನ ಗಣ್ಯ ವ್ಯಕ್ತಿಗಳೂ ಆಗಿದ್ದ ಈ ಇಬ್ಬರಲ್ಲಿ ಅಸ್’ಅದ್ ◌ؓ ಮಾತುಕತೆ ಆರಂಭಿಸಿದರು. ಅವರ ಮಾತುಗಳನ್ನು ಕೇಳಿ, ಸಅದ್ ಉಸೈದ್’ನಲ್ಲಿ ಈ ಇಬ್ಬರೂ ಹೊಸ ವಾದದೊಂದಿಗೆ ಬಡ ಜನರನ್ನು ವಂಚಿಸುತಿದ್ದಾರೆ. ಅಸ್’ಅದ್ ನನ್ನ ಸಂಬಂಧಿ ಆದ ಕಾರಣ ನನಗೆ ಅವರನ್ನು ತಡೆಯಲು ಸ್ವಲ್ಪ ಕಷ್ಟ ಆಗಬಹುದು, ನೀವು ಅವರಲ್ಲಿ ಇಲ್ಲಿಂದ ಹೋಗಲು ಹೇಳಿರಿ ಎಂದು ಹೇಳಿದಾಗ, ಉಸೈದ್ ತನ್ನ ಆಯುಧದೊಂದಿಗೆ ಎದ್ದು ನಿಂತು, ಮಾತಾಡಲು ಆರಂಭಿಸಿದರು. ತಕ್ಷಣವೇ ಅಸ್’ಅದ್ ◌ؓ ಮಿಸ್’ಅಬ್’ರಲ್ಲಿ, ಇವರು ಇಲ್ಲಿಯ ಜನರ ನಾಯಕ ಆಗಿರುತ್ತಾರೆ, ಇವರಿಗೆ ಎಲ್ಲಾ ವಿಷಯಗಳನ್ನು ತಿಳಿಸಿ ಅಲ್ಲಾಹನಲ್ಲಿ ವಿಶ್ವಾಸವಿರಿಸಲು ತಿಳಿಸಿರಿ ಎಂದು ಹೇಳಿದಾಗ, ಮಿಸ್’ಅಬ್ ಅವರು ಒಮ್ಮೆ ಕುಳಿತಿದ್ದರೆ ಏನಾದರೂ ಮಾತಾಡಬಹುದಿತ್ತು ಎಂದು ಹೇಳಿದರು. ಅಷ್ಟರಲ್ಲೇ ಉಸೈದ್, ನೀವಿಬ್ಬರೂ ಇಲ್ಲಿಯ ಬಡ ಜನರನ್ನು ನಿಮ್ಮ ಜಾಲದಲ್ಲಿ ಸಿಲುಕಿಸಿ ಮೋಸ ಮಾಡಲು ಬಂದದ್ದು ಅಲ್ವಾ.? ಅದಕ್ಕೆ ನಮ್ಮನ್ನು ಸಿಗಲಿಕ್ಕಿಲ್ಲ, ನಮ್ಮನ್ನು ಬಿಟ್ಟು ನಿಮ್ಮ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಹೇಳಿದರು. ಅದಕ್ಕೆ ಮಿಸ್’ಅಬ್ ◌ؓ ನೀವು ಒಮ್ಮೆ ನಾವು ಹೇಳುವುದನ್ನು ಕೇಳಿ, ಅದು ನಿಮಗೆ ಇಷ್ಟವಾದರೆ ಸರಿ ಅದನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಬೇಡ ಎಂದು ಹೇಳಿದಾಗ, ಉಸೈದ್ ಸರಿ ಎಂದು ಒಪ್ಪಿಕೊಂಡು ತನ್ನ ಕೈಯಲ್ಲಿದ್ದ ಈಟಿಯನ್ನು ಕೆಳಗೆ ಇಟ್ಟು, ಮಿಸ್’ಅಬ್’ರ ◌ؓ ಮಾತನ್ನು ಕೇಳಲು ಆರಂಭಿಸಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-130/365

ಮಿಸ್’ಅಬ್ ◌ؓ ಮಾತು ಮುಂದುವರಿಸಿ, ಇಸ್ಲಾಮಿನ ಆದರ್ಶಗಳ ಬಗ್ಗೆ ಪ್ರಾಥಮಿಕವಾಗಿ ತಿಳಿಸಿಕೊಟ್ಟು, ಖುರ್’ಆನಿನ ಕೆಲವು ಭಾಗವನ್ನು ಕೂಡ ಓದಿ ಕೇಳಿಸಿದರು. ಅದನ್ನು ಕೇಳುತ್ತಿದ್ದ ಉಸೈದ್’ರ ಮುಖಛಾಯೆ ಬದಲಾಗಿ, ಮನ ಪರಿವರ್ತನೆಯ ತಂಗಾಳಿ ಬೀಸಲು ಆರಂಭಿಸಿದವು. ನಂತರ ಉಸೈದ್ ಸಂತೋಷದಿಂದ ಆಹಾ ಎಷ್ಟೊಂದು ಸುಂದರವಾದ, ಸುಮಧುರ ವಚನಗಳು. ಈ ಆದರ್ಶಕ್ಕೆ ಸೇರಿ ಕೊಳ್ಳಲು ಏನು ಮಾಡಬೇಕು.? ಎಂದು ಕೇಳಿದಾಗ, ನೀವು ಶರೀರವನ್ನು ಶುಚಿಯಾಗಿಸಿ, ವಸ್ತ್ರವನ್ನು ಬದಲಾಯಿಸಿ, ಸ್ನಾನ ಮಾಡಿ ಬನ್ನಿ, ಆ ನಂತರ ಸತ್ಯವಚನವನ್ನು ಸಾರ್ವಜನಿಕವಾಗಿ ಘೋಷಣೆ ಮಾಡಿ, ನಂತರ ನಮಾಝ್ ಮಾಡಿರಿ ಎಂದು ಮಿಸ್’ಅಬ್ ◌ؓ ಹೇಳಿದರು. ಅದನ್ನು ಕೇಳಿ, ಉಸೈದ್ ಎದ್ದು ನಿಂತು, ಬಟ್ಟೆ ಬದಲಾಯಿಸಿ, ಸ್ನಾನ ಮಾಡಿ ಬಂದು, ಸತ್ಯವಚನವನ್ನು ಘೋಷಣೆ ಮಾಡಿ, ಎರಡು ರಕಾಅತ್ ನಮಾಝ್ ಮಾಡಿದರು. ನಂತರ ಮಾತು ಮುಂದುವರಿಸುತ್ತಾ, ನನ್ನ ಜೊತೆಯಲ್ಲಿ ಇನ್ನೊಬ್ಬರೂ ಕೂಡ ಇದ್ದಾರೆ, ಅವರೂ ಕೂಡ ನಿಮ್ಮನ್ನು ಒಪ್ಪಿಕೊಂಡರೆ, ಅವರ ಜೊತೆಯಲ್ಲಿರುವ ಒಂದು ದೊಡ್ಡ ಸಮೂಹವೇ ನಿಮ್ಮನ್ನು ಒಪ್ಪಿಕೊಳ್ಳುತ್ತದೆ. ಯಾಕೆಂದರೆ ಅವರು, ಆ ಜನರ ನಡುವೆ ಪ್ರಭಾವಶಾಲಿ ವ್ಯಕ್ತಿಯೂ, ಅವರ ನಾಯಕನೂ ಆಗಿರುತ್ತಾರೆ. ಅವರ ಹೆಸರು ಸಅದ್ ಬಿನ್ ಮುಆದ್ ಎಂದಾಗಿದೆ, ನಾನು ಅವರ ಬಳಿ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎಂದು, ಉಸೈದ್ ◌ؓ ತನ್ನ ಆಯುಧದ ಜೊತೆಯಲ್ಲಿ ಅವರ ಬಳಿಗೆ ಹೊರಟರು. ಸಅದಿನ ಬಳಿ ಬಂದ ಉಸೈದ್’ರನ್ನು ◌ؓ ನೋಡಿ, ಆಗಲೇ ಇಲ್ಲಿಂದ ಹೋಗುವಾಗ ಇರುವ ಮುಖ ಭಾವ ಅಲ್ಲವಲ್ಲ ಈಗ ನಿಮ್ಮಲ್ಲಿ ಇರುವುದು.? ಏನೋ ಒಂದು ಬದಲಾವಣೆ ಮುಖದಲ್ಲಿ ಎದ್ದು ಕಾಣುತ್ತಿದೆ. ಅದು ಏನೆಂದು ಕೇಳಿದಾಗ, ಉಸೈದ್ ನಾನು ಅವರಿಬ್ಬರನ್ನೂ ಭೇಟಿಯಾದೆನು. ನಾನು ಅವರನ್ನು ತಡೆಯಲು ಬಹಳಷ್ಟು ಪ್ರಯತ್ನ ಪಟ್ಟೆನು, ಆದರೆ ಇವರು ನಾವು ಅಂದುಕೊಂಡಷ್ಟು ಕೆಟ್ಟವರಲ್ಲ. ಇನ್ನೊಂದು ವಿಷಯ ಏನೆಂದರೆ, ಅಸ್’ಅದ್ ಬಿನ್ ಸುರಾರ ◌ؓ ನಿಮ್ಮ ಮಾವನ ಮಗ ಎಂದು ತಿಳಿದ ಕಾರಣ ಬನೂ ಹಾರಿಸ ಜನಾಂಗದ ಜನರು ಅವರನ್ನು ಕೊಲೆ ಮಾಡಲು ಬರುತ್ತಿರುವುದಾಗಿ ನನಗೆ ತಿಳಿಯಲು ಸಾಧ್ಯವಾಯಿತು ಎಂದು ಹೇಳಿದರು. ತಕ್ಷಣವೇ ಸಅದ್ ಅಲ್ಲಿಂದ ತನ್ನ ಆಯುಧದೊಂದಿಗೆ ಹೊರಟು, ಅವರಿಬ್ಬರ ಬಳಿ ಬಂದಾಗ, ಮಿಸ್’ಅಬ್ ◌ؓ ಹಾಗೂ ಅಸ್’ಅದ್ ◌ؓ ಬಹಳ ಸಮಾಧಾನದಿಂದ ಕುಳಿತಿದ್ದರು. ಅದನ್ನು ಕಂಡ ಸಅದಿಗೆ, ನನ್ನನ್ನು ಇಲ್ಲಿಗೆ ಕರೆಸಿಕೊಳ್ಳಲು, ಉಸೈದ್ ◌ؓ ಬನೂ ಹಾರಿಸ ವಿಷಯ ಹೇಳಿದ್ದು ಎಂದು ಆಗ ಅರ್ಥವಾಗಿತ್ತು.

ಸಅದ್, ಅಸ್’ಅದ್’ರ ◌ؓ ಬಳಿ ಬಂದು, ನೀವು ನನ್ನ ಸಂಬಂಧಿಯಾಗಿದ್ದರೂ, ನಾನು ನಿಮ್ಮ ಆಗಮನವನ್ನು ಕಡಾ ಖಂಡಿತವಾಗಿ ವಿರೋಧಿಸುತ್ತೇನೆ ಎಂದು ಹೇಳಿದರು. ಅದನ್ನು ಕೇಳಿ ಅಸ್’ಅದ್ ◌ؓ, ಮಿಸ್’ಅಬ್’ರಲ್ಲಿ ◌ؓ ಈ ಬಂದಿರುವ ವ್ಯಕ್ತಿ, ಜನರ ನಡುವೆ ಬಹಳಷ್ಟು ಪ್ರಭಾವ ಶಾಲಿ ವ್ಯಕ್ತಿ ಆಗಿರುತ್ತಾರೆ. ಇವರ ಒಂದು ಮಾತಿಗೆ ಜನರಲ್ಲಿ ಯಾವುದೇ ವಿರೋಧ ಇಲ್ಲದ ವ್ಯಕ್ತಿಯಾಗಿದ್ದಾರೆ ಇವರು ಎಂದು ಹೇಳಿದಾಗ, ಮಿಸ್’ಅಬ್ ◌ؓ ಸಅದ್’ರಲ್ಲಿ ನೀವು ಸ್ವಲ್ಪ ಕುಳಿತು, ನಾವು ಏನು ಹೇಳಿತ್ತೇವೆಯೋ.? ಅದನ್ನು ಒಮ್ಮೆ ಕೇಳಿ, ನಂತರ ನಿಮಗೆ ಒಪ್ಪಿಗೆ ಆದರೆ ಸರಿ, ಇಲ್ಲದಿದ್ದರೆ ನಾವು ಇಲ್ಲಿಂದ ಒಳ್ಳೆಯ ರೀತಿಯಲ್ಲಿ ಹಿಂತಿರುಗಿ ಹೋಗುತ್ತೇವೆ ಎಂದು ಹೇಳಿದಾಗ, ಆಯಿತು ಎಂದು ಸಅದ್ ಅವರ ಮಾತಿಗೆ ಒಪ್ಪಿಕೊಂಡು, ತನ್ನ ಕೈಯಲ್ಲಿದ್ದ ಈಟಿಯನ್ನು ಕೆಳಗೆ ಇಟ್ಟು, ಅವರ ಮಾತನ್ನು ಕೇಳಲು ಆರಂಭಿಸಿದರು. ಮಿಸ್’ಅಬ್ ◌ؓ ಒಳ್ಳೆಯ ರೀತಿಯಲ್ಲಿ ಇಸ್ಲಾಮಿನ ಬಗ್ಗೆ ತಿಳಿಸಿ, ಖುರ್’ಆನ್ ಸೂಕ್ತಗಳನ್ನು ಕೂಡ ಓದಿ ಕೇಳಿಸಿದರು.

ಅದನ್ನು ಕೇಳುತ್ತಿದ್ದ, ಸಅದ್’ರ ಮುಖದಲ್ಲಿ ಬದಲಾವಣೆ ಎದ್ದು ಕಾಣುತ್ತಿತ್ತು. ಮುಖದಲ್ಲಿ ಮಂದಹಾಸ ಬೀರುತ್ತಾ, ಅವರು ಈ ಆದರ್ಶಕ್ಕೆ ನಾವು ಬರುವುದು ಹೇಗೆ ಎಂದು ಕೇಳಿದಾಗ, ಉಸೈದ್’ರಿಗೆ ◌ؓ ಹೇಳಿದ ಹಾಗೆ ಇವರಿಗೂ ಕೂಡ, ಸ್ನಾನ ಮಾಡಿ, ಬಟ್ಟೆ ಬದಲಾಯಿಸಿ, ಸತ್ಯ ವಚನೆಯನ್ನು ಘೋಷಣೆ ಮಾಡಿ, ಎರಡು ರಕಾಅತ್ ನಮಾಝ್ ಮಾಡಲು ತಿಳಿಸಿದರು. ನಂತರ ಸಅದ್ ಅಲ್ಲಿಂದ ತನ್ನ ಆಯುಧ ತೆಗೆದುಕೊಂಡು ಅಲ್ಲಿಂದ ತನ್ನ ಜನಾಂಗದ ಬಳಿ ಹೊರಟು ಹೋದರು.

ಹಿಂತಿರುಗಿ ಬರುತ್ತಿದ್ದ ಸಅದನ್ನು ◌ؓ ಕಂಡು, ಅವರ ಜನಾಂಗದ ಜನರು, ಏನೋ ಒಂದು ಬದಲಾವಣೆ ಕಾಣುತ್ತಿದೆ ಅಲ್ವಾ.? ನೀವು ಹೋದಾಗ ಇದ್ದ ಮುಖ ಭಾವವಲ್ಲ, ಹಿಂತಿರುಗಿ ಬರುವಾಗ ಮುಖದಲ್ಲಿ ಕಾಣುತ್ತಿರುವುದು ಎಂದು ಕೇಳಿದಾಗ, ನನ್ನ ಹೃದಯಕ್ಕೆ ಸತ್ಯ ವಚನದ ಬೆಳಕು ಹರಿಯಿತು ಎಂದು ಹೇಳಿದರು. ನಂತರ ಓ ಬನುಲ್ ಅಶ್’ಹಲ್ ಸಮೂಹವೇ.! ನಿಮಗೆ ನನ್ನ ಬಗ್ಗೆ ಯಾವ ಅಭಿಪ್ರಾಯವಿದೆ.? ಎಂದು ಕೇಳಿದಾಗ, ಅವರು ಒಂದೇ ಧ್ವನಿಯಲ್ಲಿ, ನೀವು ನಮ್ಮ ನಾಯಕನೂ, ನಮ್ಮಲ್ಲಿಯೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಆಗಿರುತ್ತೀರಿ ಎಂದು ಹೇಳಿದರು. ಅದಕ್ಕೆ ತಕ್ಷಣವೇ ಸಅದ್ ◌ؓ, ನಿಮ್ಮಲಿ ಒಬ್ಬನೇ ಒಬ್ಬ ವ್ಯಕ್ತಿಯೂ ಕೂಡ ಇನ್ನುಮುಂದೆ ಅಲ್ಲಾಹನನ್ನು ವಿಶ್ವಾಸವಿರಿಸದೆ ನನ್ನಲ್ಲಿ ಮಾತಾಡುವುದು ನನಗೆ ಇಷ್ಟವಿಲ್ಲ ಎಂದು ಜೋರಾಗಿ ಕೂಗಿ ಹೇಳಿದರು. ಅದನ್ನು ಕೇಳಿ, ಅಂರ್ ಬಿನ್ ಸಾಬಿತ್’ರನ್ನು ಬಿಟ್ಟು ಬಾಕಿ ಇರುವ ಜನರೆಲ್ಲರೂ ಇಸ್ಲಾಮ್ ಸ್ವೀಕರಿಸಿದರು. ನಂತರದ ಕಾಲದಲ್ಲಿ ಉಹುದು ಯುದ್ಧದ ಸಂದರ್ಭದಲ್ಲಾಗಿತ್ತು ಅವರೂ ಕೂಡ ಇಸ್ಲಾಮ್ ಸ್ವೀಕರಿಸಿದ್ದು ಮುಸ್ಲಿಮರ ಸೈನ್ಯಕ್ಕೆ ಸೇರಿ, ಯುದ್ಧದಲ್ಲಿ ಭಾಗವಹಿಸಿ, ಅದೇ ಯುದ್ಧದಲ್ಲಿ ಸಾವನಪ್ಪಿ, ಶಹೀದ್ ಆದರು. ಜೀವನದಲ್ಲಿ ಒಂದೇ ಒಂದು ಸಾಷ್ಟಾಂಗ ಮಾಡಲು ಅವಕಾಶ ಸಿಗದಿದ್ದರೂ ಕೂಡ, ಅವರು ಖಂಡಿತ ಸ್ವರ್ಗಕ್ಕೆ ಪ್ರವೇಶ ಮಾಡುವರು ಎಂಬ ಸಂತೋಷದ ವಾರ್ತೆಯನ್ನು, ಪ್ರವಾದಿಯವರು ﷺ ಅಂದು ತಿಳಿಸಿದ್ದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-131/365

ಸಅದ್ ◌ؓ ಹಾಗೂ ಮಿಸ್’ಅಬ್ ◌ؓ ಅಸ್’ಅದ್ ಬಿನ್ ಸುರಾರ’ರ ಮನೆಗೆ ಹಿಂತಿರುಗಿ ಬಂದು, ಯಸ್’ರಿಬಿನ ಇಸ್ಲಾಮಿನ ಕಾರ್ಯಾಚರಣೆಗಳ ಬಗ್ಗೆ ಚರ್ಚೆ ನಡೆಸಿದರು. ಉತ್ಸಾಹದಿಂದ ಬೀದಿ ಬೀದಿಗಳಲ್ಲಿ ಸಂಚರಿಸಿ ಪ್ರತಿಯೊಬ್ಬರಿಗೂ ಇಸ್ಲಾಮಿನ ಕುರಿತು ತಿಳಿಸಿದರು. ದಾರು ಬನೀ ಉಮಯ್ಯ ಮನೆತನ ಬಿಟ್ಟು ಉಳಿದ ಅನ್ಸಾರಿಗಳ ಎಲ್ಲಾ ಮನೆತನಗಳು ಇಸ್ಲಾಮ್ ಸ್ವೀಕರಿಸಿದವು. ಇದರಿಂದ ಇಸ್ಲಾಮ್ ಇನ್ನಷ್ಟು ಬಲಿಷ್ಠವಾಯಿತು. ಅವರ ಜೊತೆಯಲ್ಲಿದ್ದ ಖೈಸ್ ಬಿನ್ ಅಝ್ಝತ್ ಎಂಬ ವ್ಯಕ್ತಿಯು ಪ್ರವಾದಿಯವರು ﷺ ಪಲಾಯನ ಮಾಡಿ ಮದೀನಕ್ಕೆ ತಲುಪಿದಾಗ ಆಗಿತ್ತು ಅವರು ಇಸ್ಲಾಮ್ ಸ್ವೀಕರಿಸಿದ್ದು. ಅವರನ್ನು ಸೈಫಿಯ್ಯ್ ಎಂದಾಗಿತ್ತು ಕರೆಯುತ್ತಿದ್ದದ್ದು.

ಯಸ್’ರೀಬಿನಲ್ಲಿ ನಡೆದ ಒಂದೊಂದು ವಿಷಯವೂ, ಮಕ್ಕಾ ಜನತೆಗೆ ತಿಳಿಯಲು ಆರಂಭಿಸಿತು. ಔಸ್ ಹಾಗೂ ಖಝ್’ರಜ್ ಜನಾಂಗದ ಜನರು ಬಹಳ ಆವೇಶದಿಂದ ಇಸ್ಲಾಮ್ ಸ್ವೀಕರಿಸಿದ ವಿಷಯ ತಿಳಿದಾಗ ಪ್ರವಾದಿಯವರಿಗೆ ﷺ ಬಹಳಷ್ಟು ಸಂತೋಷವಾಗಿತ್ತು. ಮಿಸ್’ಅಬ್’ರ ◌ؓ ಕಾರ್ಯಾಚರಣೆಯನ್ನು ಕಂಡು ಪ್ರವಾದಿಯವರಿಗಿದ್ದ ﷺ ಆವೇಶ ಅಧಿಕವಾಯಿತು. ಹತ್ತು ವರ್ಷಗಳಲ್ಲಿ, ಮಕ್ಕಾದ ಬೀದಿ ಬೀದಿಗಳಲ್ಲಿ ಸಂಚರಿಸಿದರೂ, ತೀರ್ಥ ಯಾತ್ರಿಕರನ್ನು ಭೇಟಿಯಾಗಿಯೂ ಸಿಗದ ಫಲಿತಾಂಶವಾಗಿತ್ತು, ಯಸ್’ರಿಬಿನಲ್ಲಿ ಕೆಲವೇ ಕೆಲವು ದಿನಗಳಲ್ಲಿ ಲಭಿಸಿದ್ದು. ಯಸ್’ರಿಬಿನ ವಿಶ್ವಾಸಿಗಳನ್ನು ಬೇರೆ ಕಡೆ ಕಳುಹಿಸಿ ಸಮಾಧಾನ ಪಡಿಸಲು, ಯಸ್’ರಿಬನ್ನು ಕೇಂದ್ರವಾಗಿಸಿ ಇಸ್ಲಾಮನ್ನು ಇನ್ನಷ್ಟು ಬಲಿಷ್ಠಗೊಳಿಸಬಹುದೆಂದು ಪ್ರವಾದಿಯವರಿಗೆ ﷺ ಆಗ ಅರ್ಥವಾಯಿತು. ಅಷ್ಟೇ ಅಲ್ಲ ಸದ್ಯಕ್ಕೆ ಮಕ್ಕಾದ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿತ್ತು, ದಿನದಿಂದ ದಿನಕ್ಕೆ ಸಮಸ್ಯೆಗಳು ಅಧಿಕವಾಗುತ್ತಲೇ ಇತ್ತು. ಆದರೂ ಪ್ರವಾದಿಯವರು ﷺ ಮಕ್ಕಾದ ಜನರಲ್ಲಿ ವಿರೋಧ ವ್ಯಕ್ತಪಡಿಸುವುದು ಆಗಲಿ, ಹೋರಾಟ ಮಾಡುವುದಾಗಲಿ ಮಾಡಿರಲಿಲ್ಲ. ಯಾವುದೇ ಕಾರಣಕ್ಕೂ ಮಕ್ಕಾದಲ್ಲಿ ಒಂದು ಹನಿ ರಕ್ತ ಕೂಡ ಮಕ್ಕಾದಲ್ಲಿ ಬೀಳಬಾರದು ಎಂದು ಪ್ರವಾದಿಯವರು ﷺ ಅಂದುಕೊಂಡಿದ್ದರು.

ಹೀಗಿರುವಾಗ ಕ್ರಿಶ್ತ ಶಕ ಆರ್’ನೂರ ಇಪ್ಪತ್ತೆರಡರಲ್ಲಿ ಯಸ್’ರಿಬಿನಿಂದ ಎಪ್ಪತ್ತೈದು ಜನರ ಗುಂಪೊಂದು ಮಕ್ಕಾ ನಗರಕ್ಕೆ ತೀರ್ಥ ಯಾತ್ರೆಗೆ ಬಂದವು. ಎಪ್ಪತ್’ಮೂರು ಪುರುಷರು ಹಾಗೂ ಇಬ್ಬರು ಮಹಿಳೆಯರಾಗಿತ್ತು ಅ ಗುಂಪಿನಲ್ಲಿ ಇದ್ದದ್ದು. ಎಪ್ಪತ್’ಮೂರು ಜನರಾಗಿತ್ತು ಬಂದದ್ದು ಎನ್ನುವ ಅಭಿಪ್ರಾಯವೂ ಇದೆ. ಅವರ ವಿವರಗಳು ಈ ರೀತಿಯಾಗಿವೆ.

ಔಸ್ ಜನಾಂಗದ ಹನ್ನೊಂದು ಜನರ ಹೆಸರು:
1. ಉಸೈದ್ ಬಿನ್ ಹುಳೈರ್ ◌ؓ
2. ಅಬುಲ್ ಹೈಸಂ ಅತಯ್ಯಿಹಾನ್ ◌ؓ
3. ಸಲಮತುಬಿನು ಸಲಾಮಃ ◌ؓ
4. ಳುಹೈರ್ ಬಿನ್ ರಾಫಿಅ ◌ؓ
5. ಅಬು ಬರ್’ದತ್ ಬಿನ್ ನಿಯಾರ್ ◌ؓ
6. ನುಹೈರ್ ಬಿನ್ ಹೈಸಂ ◌ؓ
7. ಸಅದ್ ಬಿನ್ ಖೈಸಮಃ ◌ؓ
8. ರಿಫಾಅತ್ ಬಿನ್ ಅಬ್ದುಲ್ ಮುನ್’ದಿರ್ ◌ؓ
9. ಅಬ್ದುಲ್ಲಾಹಿಬಿನು ಜುಬೈರ್ ◌ؓ
10. ಮಅನ್ ಬಿನ್ ಅದಿಯ್ಯ್ ◌ؓ
11. ಉವೈಮ್ ಬಿನ್ ಸಾಇದ ◌ؓ

(ಖಝ್’ರಜ್ ಜನಾಂಗದ 62 ಪುರುಷರು ಹಾಗೂ ಇಬ್ಬರು ಮಹಿಳೆಯರು)

12. ಅಬೂ ಅಯ್ಯುಬಿಲ್ ಅನ್ಸಾರಿ ◌ؓ
13. ಮುಆದ್ ಬಿನ್ ಅಲ್ ಹಾರಿಸ್ ◌ؓ
14. ಔಫ್ ಬಿನ್ ಅಲ್ ಹಾರಿಸ್ ◌ؓ
15. ಮುಅವ್ವಿದ್ ಬಿನ್ ಅಲ್ ಹಾರಿಸ್ ◌ؓ
16. ಉಮಾರತ್ ಬಿನ್ ಹಸಂ ◌ؓ
17. ಅಸ್’ಅದ್ ಬಿನ್ ಸುರಾರಃ ◌ؓ
18. ಸಹ್’ಲ್ ಬಿನ್ ಅತೀಕ್ ◌ؓ
19. ಔಸ್ ಬಿನ್ ಸಾಬಿತ್ ◌ؓ
20. ಝೈದ್ ಬಿನ್ ಸಾಹಿಲ್ ◌ؓ
21. ಖೈಸ್ ಬಿನ್ ಅಬೀ ಸಅಸಅ ◌ؓ
22. ಅಂರ್ ಬಿನ್ ಗಸ್’ಯ್ ◌ؓ
23. ಸಅದ್ ಬಿನ್ ರಬೀಅ್ ◌ؓ
24. ಖಾರಿಜತ್ ಬಿನ್ ಝೈದ್ ◌ؓ
25. ಅಬ್ದುಲ್ಲಾಹಿ ಬಿನ್ ರವಾಹಃ ◌ؓ
26. ಬಶೀರ್ ಬಿನ್ ಸಅದ್ ◌ؓ
27. ಅಬ್ದುಲ್ಲಾಹಿಬಿನು ಝೈದ್ ಬಿನ್ ಸಅಲಬಃ ◌ؓ
28. ಖಲ್ಲಾದ್ ಬಿನ್ ಝುವೈದ್ ◌ؓ
29. ಉಖ್’ಬತ್ ಬಿನ್ ಅಂರ್ ಅಲ್’ಬದರಿ ◌ؓ
30. ಝಿಯಾದ್ ಬಿನ್ ಲಬೀದ್ ◌ؓ
31. ಫರ್’ವತ್ ಬಿನ್ ಅಂರ್ ◌ؓ
32. ಖಾಲಿದ್ ಬಿನ್ ಖೈಸ್ ◌ؓ
33. ರಾಫಿಅ ಬಿನ್ ಮಾಲಿಕ್ ◌ؓ
34. ಝಕ್’ವಾನ್ ಬಿನ್ ಅಬ್ದುಖೈಸ್ ◌ؓ
35. ಉಬ್ಬಾದ್ ಬಿನ್ ಖೈಸ್ ಬಿನ್ ಆಮಿರ್ ◌ؓ
36. ಹಾರಿಸ್ ಬಿನ್ ಖೈಸ್ ಬಿನ್ ಆಮಿರ್ ◌ؓ
37. ಬರಾವುಬಿನ್ ಮಅರೂರ್ ◌ؓ
38. ಬಶೀರ್ ಬಿನ್ ಬರಾವುಬಿನ್ ಮಅರೂರ್ ◌ؓ
39. ಸಿನಾರ್ ಬಿನ್ ಸೈಫಿಯ್ಯ್ ◌ؓ
40. ತುಫೈಲ್ ಬಿನ್ ನುಅಮಾನ್
41. ಮಅಖಲ್ ಬಿನ್ ಅಲ್ ಮುನ್’ದಿರ್ ಬಿನ್ ಸರ್’ಹ್ ◌ؓ
42. ಯಝೀದ್ ಬಿನ್ ಅಲ್ ಮುನ್’ದಿರ್ ಬಿನ್ ಸರ್’ಹ್ ◌ؓ
43. ಮಸ್’ಊದ್ ಬಿನ್ ಝೈದ್ ಬಿನ್ ಸಬೀಅ ◌ؓ
44. ಳಹ್’ಹಾಕ್ ಬಿನ್ ಹಾರಿಸ ◌ؓ
45. ಯಝೀದ್ ಬಿನ್ ಖಸಾಂ ◌ؓ
46 .ಜಬ್ಬಾರ್ ಬಿನ್ ಸಖ್’ರ್ ◌ؓ
47. ತುಫೈಲ್ ಬಿನ್ ಮಾಲಿಕ್ ◌ؓ
48. ಕಅಬ್ ಬಿನ್ ಮಾಲಿಕ್ ◌ؓ
49. ಸಲೀಂ ಬಿನ್ ಆಮಿರ್ ಬಿನ್ ಹುದೈದ ◌ؓ
50. ಖುತ್’ಬತ್ ಬಿನ್ ಆಮಿರ್ ಬಿನ್ ಹುದೈದ ◌ؓ
51. ಯಝೀದ್ ಬಿನ್ ಆಮಿರ್ ಬಿನ್ ಹುದೈದ ◌ؓ
52. ಅಬುಲ್ ಯಸ್’ರ್ ಕಅಬ್ ಬಿನ್ ಅಂರ್ ◌ؓ
53. ಸೈಫ್ ಬಿನ್ ಸವಾದ್ ◌ؓ
54. ಸಅಲಬತ್ ಬಿನ್ ಗನ್’ಮ ◌ؓ
55. ಅಂರ್ ಬಿನ್ ಗನ್’ಮ ◌ؓ
56. ಅಬ್’ಸ್ ಬಿನ್ ಆಮಿರ್ ಬಿನ್ ಅದಿಯ್ಯ್ ◌ؓ
57. ಖಾಲಿದ್ ಬಿನ್ ಅಂರ್ ◌ؓ
58. ಅಬ್’ದುಲ್ಲಾ ಬಿನ್ ಉನೈಸ್ ◌ؓ
59. ಅಬ್ದುಲ್ಲಾಹಿಬಿನು ಅಂರ್ ಬಿನ್ ಹರಾಂ ◌ؓ
60. ಜಾಬಿರ್ ಬಿನ್ ಅಬ್ದುಲ್ಲಾಹಿಬಿನು ಅಂರ್ ಬಿನ್ ಹರಾಂ ◌ؓ
61. ಮುಆದ್ ಬಿನ್ ಜಬಲ್ ◌ؓ
62. ಸಾಬಿತ್ ಬಿನ್ ಅಲ್ ಜಸಅ ◌ؓ
63. ಉಮೈರ್ ಬಿನ್ ಅಲ್ ಹಾರಿಸ್ ◌ؓ
64. ಖದೀಜ್ ಬಿನ್ ಜಬಲ್ ◌ؓ
65. ಮುಆದ್ ಬಿನ್ ◌ؓ
66. ಉಬಾದತ್ ಬಿನ್ ಸ್ವಾಮಿತ್ ◌ؓ
67. ಅಲ್ ಅಬ್ಬಾಸ್ ಬಿನ್ ಉಬಾದಃ ◌ؓ
68. ಯಝೀದ್ ಬಿನ್ ಸಅಲಬ ◌ؓ
69. ಅಂರ್ ಬಿನ್ ಅಲ್ ಹಾರಿಸ್ ◌ؓ
70 ರಿಫಾಅತ್ ಬಿನ್ ಅಂರ್ ◌ؓ
71. ಉಖ್’ಬತ್ ಬಿನ್ ವಹಬ್ ◌ؓ
72. ಸಅದ್ ಬಿನ್ ಉಬಾದ ◌ؓ
73. ಮುನ್’ದಿರ್ ಬಿನ್ ಅಂರ್ ◌ؓ
74. ನಸೀಬತ್ ಬಿಂತ್ ಕಅಬ್ (ಉಮ್ಮು ಉಮಾರ್)
75. ಉಮ್ಮು ಮನೀಅ ಅಸ್’ಮಾಉ ಬಿಂತ್ ಅಂರ್

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-132/365

ಈ ಎಪ್ಪತೈದು ಜನರು ಅಖಬದಲ್ಲಿ ಪ್ರವಾದಿಯವರೊಂದಿಗೆ ﷺ ಒಪ್ಪಂದ ಮಾಡಿಕೊಂಡರು. ಅವರು ಪ್ರವಾದಿಯವರಲ್ಲಿ ﷺ ಯಾವ, ಯಾವ ವಿಷಯಗಳಲ್ಲಿ ನಾವು ಒಪ್ಪಂದ ಮಾಡಿಕೊಳ್ಳಬೇಕು ಎಂದು ಕೇಳಿದಾಗ, ಪ್ರವಾದಿಯವರು ﷺ ಸಂತೋಷದಲ್ಲೂ, ಸಂತಾಪದಲ್ಲೂ ಜೊತೆಯಲ್ಲಿದ್ದು ಸಹಕರಿಸಬೇಕು. ಆಯಾಸದ ಸಮಯದಲ್ಲೂ, ಸಮಸ್ಯೆಯ ಸಮಯದಲ್ಲೂ ಜೊತೆಯಲ್ಲಿ ಇದ್ದು ಎದುರಿಸಬೇಕು. ಒಳಿತುಗಳನ್ನು ಸೂಚಿಸಿ, ಕೆಡುಕುಗಳಿಂದ ರಕ್ಷಣೆ ಮಾಡಿಕೊಳ್ಳಬೇಕು. ಅಲ್ಲಾಹನ ಬಗ್ಗೆ ಯಾರೇ ಆಗಲಿ, ತಮಾಷೆ ಮಾಡಿದರೂ ಅದರ ಬಗ್ಗೆ ಗಮನ ಕೊಡದೆ ಇರಬೇಕು. ನಾನು ಯಸ್’ರಿಬಿಗೆ ಬಂದಾಗ, ನೀವು ನಿಮ್ಮ ಮನೆಯವರಿಗೆ ಸಂರಕ್ಷಣೆ ನೀಡುವ, ಹಾಗೆ ನನಗೂ ಕೂಡ ಸಂರಕ್ಷಣೆ ನೀಡಬೇಕು. ಈ ಎಲ್ಲಾ ಒಪ್ಪಂದಗಳನ್ನು ಚಾಚು ತಪ್ಪದೆ ಪಾಲಿಸಿದರೆ, ಖಂಡಿತ ನಿಮಗೆ ಸ್ವರ್ಗ ಸಿಗಲಿದೆ ಎಂದು ಹೇಳಿದರು.

ಯಸ್’ರಿನಿಂದ ಬಂದ ಜನರೆಲ್ಲರೂ ಈ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ ನಂತರ ಸಹಿ ಹಾಕಲು ಅಸ್’ಅದ್ ಬಿನ್ ಸುರಾರ ◌ؓ ಎದ್ದು ನಿಂತು ಹೋದರು. ಜಾಬಿರ್’ರವರು ◌ؓ ಹೇಳುವುದು ಕಾಣಬಹುದು, ನನ್ನನ್ನು ಬಿಟ್ಟರೆ ಈ ಗುಂಪಿನಲ್ಲಿ ಅತ್ಯಂತ ಕಿರಿಯ ವ್ಯಕ್ತಿ ಅಸ್’ಅದ್ ಆಗಿದ್ದರು ಎಂದು. ನಂತರ ಒಬ್ಬೊಬ್ಬರಾಗಿ ಬಂದು ಸಹಿ ಹಾಕಿದರು.
ಕ್ರಿಸ್ತ ಶಕ ಆರ್ನೂರ ಇಪ್ಪತ್ತೆರಡಲ್ಲಾಗಿತ್ತು ಈ ಒಪ್ಪಂದ ನಡೆದದ್ದು. ಹಜ್ಜ್ ಕಳೆದು ಎರಡನೇ ಮಧ್ಯ ರಾತ್ರಿ ಅಖಬದಲ್ಲಿ ಪುನಃ ಸೇರಿಕೊಳ್ಳಬೇಕೆಂದು ತೀರ್ಮಾನಿಸಿದ್ದರು. ಹಾಗಾಗಿ ಯಸ್’ರಿಬಿನಿಂದ ಬಂದ ವಿಶ್ವಾಸಿಗಳು, ತಮ್ಮ ಜೊತೆಯಲ್ಲಿರುವ ಅವಿಶ್ವಾಸಿಗಳಿಗೆ, ಈ ವಿಷಯದಲ್ಲಿ, ಸಣ್ಣ ಸುಳಿವು ಕೂಡ ಸಿಗದ ರೀತಿಯಲ್ಲಿ ಬಹಳಷ್ಟು ಗಮನ ವಹಿಸಿದ್ದರು. ಹೀಗೆ ಆ ಮಧ್ಯರಾತ್ರಿಯಲ್ಲಿ ತಮ್ಮ ಡೇರೆಯಿಂದ ಬಹಳ ಶ್ರದ್ಧೆಯಿಂದ, ಬೆಕ್ಕಿನ ಹೆಜ್ಜೆಯನ್ನು ಇಡುತ್ತಾ, ಮೆಲ್ಲನೆ ಒಬ್ಬೊಬ್ಬರಾಗಿ ಬರಲು ಆರಂಭಿಸಿದರು. ಅಖಬದಲ್ಲಿ, ಗುಡ್ಡದ ಮೇಲೆ ಕುಳಿತು ಪ್ರವಾದಿಯವರ ﷺ ಬರುವಿಕೆಗಾಗಿ ಕಾದು ಕುಳಿತರು. ಸ್ವಲ್ಪ ಸಮಯದ ನಂತರ ಪ್ರವಾದಿಯವರು ﷺ ಕೂಡ, ತಮ್ಮ ಚಿಕ್ಕಪ್ಪ ಅಬ್ಬಾಸ್ ಬಿನ್ ಅಬ್ದುಲ್ ಮುತ್ವಲಿಬ್’ರ ◌ؓ ಜೊತೆಯಲ್ಲಿ ಅಲ್ಲಿಗೆ ಬಂದು ಸೇರಿದರು. ಒಂದು ಮೈತ್ರಿ ರಚನೆಯ ಸೂಚನೆ ಸಿಕ್ಕಿದ ಕಾರಣವಾಗಿತ್ತು ಅಬ್ಬಾಸ್’ರವರು ◌ؓ ಕೂಡ ಜೊತೆಯಲ್ಲಿ ಬಂದದ್ದು. ಈ ಮೈತ್ರಿಯು ಯುದ್ಧಕ್ಕೆ ನಾಂದಿಯಾಗಬಹುದೇ ಎಂಬ ಚಿಂತೆಯೂ ಕೂಡ ಅವರನ್ನು ಕಾಡುತ್ತಿತ್ತು. ಬಹುಶಃ ಹಾಗೆ ಆದಲ್ಲಿ ಹಾಷಿಂ, ಮುತ್ವಲಿಬ್ ಮನೆತನಕ್ಕೆ, ವಿಶೇಷವಾಗಿ ಪ್ರವಾದಿಯವರಿಗೆ ﷺ ಉಂಟಾಗಬಹುದಾದ ಸಮಸ್ಯೆಯ ಬಗ್ಗೆ ಆಳವಾಗಿ ಚಿಂತಿಸುತ್ತಿದ್ದರು. ಹಾಗಾಗಿ ಅವರೇ ಖುದ್ದಾಗಿ ಎದ್ದು ನಿಂತು, ಓ ಖಝ್’ರಜ್ ವಾಸಿಗಳೇ, ಮುಹಮ್ಮದ್ ಪ್ರವಾದಿಯವರಿಗೆ ﷺ ಇರುವ ಸ್ಥಾನದ ಬಗ್ಗೆ ನಿಮಗೆ ಈಗಾಗಲೇ ಗೊತ್ತಿರಬಹುದು, ಅದೆಷ್ಟೇ ದೊಡ್ಡ ಸಮಸ್ಯೆ ಎದುರಾಗಿದ್ದರೂ, ಹಾಷಿಂ, ಮುತ್ವಲಿಬ್ ಮನೆತನ ಯಾವುದೇ ಕಾರಣಕ್ಕೂ ಅವರನ್ನು ಬಿಟ್ಟು ಕೊಡಲೇ ಇಲ್ಲ. ಈಗ ಅವರು ನಿಮ್ಮ ಜೊತೆಯಲ್ಲಿ ಇರಲು ಬಯಸುತ್ತಿದ್ದಾರೆ, ಹಾಗಾಗಿ ನೀವು ನಡೆಸಿದ ಒಪ್ಪಂದವನ್ನು ಸಂಪೂರ್ಣವಾಗಿ ಪಾಲಿಸುವುದಾದರೆ ಮಾತ್ರ, ಈ ವಿಷಯದಲ್ಲಿ ಮುಂದುವರಿಯುವುದು ಉತ್ತಮ. ಒಪ್ಪಂದ ಹೆಸರಿನಲ್ಲಿ, ಪ್ರವಾದಿಯವರನ್ನು ﷺ ಕರೆಸಿ ಶತ್ರುಗಳಿಗೆ ಅವರನ್ನು ಕೊಡುವ ಗೂಢಾಲೋಚನೆ ಏನಾದ್ರು ಇದ್ದಲ್ಲಿ ಈಗಲೇ ತಿಳಿಸಿ ಬಿಡಿ ಎಂದು ಹೇಳಿದರು.

ಅಬ್ಬಾಸ್’ರವರ ಮಾತುಗಳನ್ನು ಕೇಳಿದ ನಂತರ, ಯಸ್’ರಿಬಿನ ಜನತೆಯು, ಅಬ್ಬಾಸ್’ರವರಲ್ಲಿ ನಿಮ್ಮ ಎಲ್ಲಾ ಮಾತುಗಳನ್ನು ನಾವು ಗಮನವಿಟ್ಟು ಕೇಳಿದ್ದೇವೆ ಎಂದು ಹೇಳುತ್ತಾ, ನಂತರ ಪ್ರವಾದಿಯವರಲ್ಲಿ ﷺ, ನಿಮಗೂ, ನಿಮ್ಮ ಪ್ರಭುವಿಗೂ, ಇಷ್ಟವಿದ್ದದ್ದನ್ನು ಆರಿಸಿಕೊಳ್ಳಬಹುದು. ನಾವು ಎಲ್ಲದಕ್ಕೂ ತಯಾರು ಆಗಿದ್ದೇವೆ ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ಖುರ್’ಆನಿನ ಕೆಲವೊಂದು ಸೂಕ್ತಗಳನ್ನು ಅವರ ಮುಂದೆ ಪಠಿಸಿದರು. ಅದು ಯಸ್’ರಿಬಿನ ಜನತೆಗೆ ಧರ್ಮದ ಬಗ್ಗೆ, ಹಾಗೂ ಪ್ರವಾದಿಯವರ ﷺ ಬಗ್ಗೆ ಇರುವ ಪ್ರೀತಿಯನ್ನು ಇನ್ನೂ ಅಧಿಕಗೊಳಿಸುವ ಉದ್ದೇಶದಿಂದಾಗಿತ್ತು. ನಂತರ ಪ್ರವಾದಿಯವರು ﷺ ಮಾತು ಮುಂದುವರಿಸುತ್ತಾ, ನೀವು ನಿಮ್ಮ ಮಡದಿ ಮಕ್ಕಳನ್ನು ಸಂರಕ್ಷಣೆ ಮಾಡುವ ಹಾಗೆ ನನ್ನನ್ನು ಕೂಡ ಸಂರಕ್ಷಣೆ ಮಾಡುವಿರಿ ಎಂದು ಭಾವಿಸುತ್ತೇನೆ ಎಂದು ಹೇಳಿದಾಗ, ಅವರು ಎಲ್ಲರೂ ಒಟ್ಟಾಗಿ ಅದಕ್ಕೆ ಒಪ್ಪಿಕೊಂಡರು.

ಒಂದನೇ ಅಖಬ ಒಪ್ಪಂದದಲ್ಲಿ ಇಸ್ಲಾಮ್ ಸ್ವೀಕರಿಸಿದ್ದ, ಖಝ್’ರಜ್ ಜನಾಂಗದ ನಾಯಕನಾಗಿದ್ದ ಬರ್’ರಾಅ ಬಿನ್ ಮಅರೂರ್ ಎಂಬ ವ್ಯಕ್ತಿಯೂ, ಇಸ್ಲಾಮಿನ ಎಲ್ಲಾ ನಿಯಮಗಳನ್ನು ಪಾಲಿಸಿದರೂ, ಖಅಬ ಅಲ್ಲದೆ ಬೇರೆ ಖಿಬ್’ಲವನ್ನು ಅಂಗೀಕರಿಸಲು ಅವರು ತಯಾರು ಆಗಲಿಲ್ಲ. ಅವತ್ತು ಮುಸ್ಲಿಮರ ಖಿಬ್’ಲ ಬೈತುಲ್ ಮುಖದ್ದಸ್ (ಮಸ್ಜಿದುಲ್ ಅಖ್’ಸಾ) ಆಗಿತ್ತು.
ಬರ್’ರಾರ ಈ ನಿಲುವು, ವಿಶ್ವಾಸಿಗಳ ಮದ್ಯೆ ಭಿನ್ನಾಭಿಪ್ರಾಯಗಳನ್ನು ಉಂಟುಮಾಡಿದವು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-133/365

ಬರ್’ರಅರ ಈ ನಿಲುವಿನ ಬಗ್ಗೆ ಉಳಿದವರು ಕೂಡ ಪ್ರವಾದಿಯವರಲ್ಲಿ ﷺ ತಮ್ಮ ಗೊಂದಲವನ್ನು ತಿಳಿಸಿದರು. ಅದಕ್ಕೆ ಪ್ರವಾದಿಯವರು ﷺ ನೀವೆಲ್ಲರೂ ಈಗ ಬೈತುಲ್ ಮುಖದ್ದಸಿನ ಭಾಗಕ್ಕೆಯಾಗಿದೆ ತಿರುಗಿ ನಿಲ್ಲಬೇಕಾದದ್ದು ಅಥವಾ ಅದನ್ನು ಖಿಬ್’ಲವಾಗಿ ಕಾಣಬೇಕಾದದ್ದು ಎಂದು ಹೇಳಿದರು.
ನಂತರ ಬರ್’ರಅ ಕೂಡ ಪ್ರವಾದಿಯವರಲ್ಲಿ ﷺ ಒಪ್ಪಂದ ಮಾಡಲು ಮುಂದೆ ಬಂದು, ತನ್ನ ಕೈ ಚಾಚಿ, “ಅಲ್ಲಾಹನ ಪ್ರವಾದಿಯವರೇ ﷺ ನಾವು ನಿಮ್ಮಲ್ಲಿ ಒಪ್ಪಂದ ಮಾಡುತ್ತಿದ್ದೇವೆ, ನಾವು ಆಯುಧಗಳ ಜೊತೆಯಲ್ಲಿಯೇ, ಹೋರಾಟ ಮಾಡುತ್ತಲೇ ಜೀವಿಸಿ ಬಂದ ಜನರಾಗಿದ್ದೇವೆ. ನಮಗೆ ಇದು ಪರಂಪರ ಗತವಾಗಿ ಲಭಿಸಿದ ಕಲೆಯಾಗಿದೆ,” ಎಂದು ಹೇಳಿದರು. ಅಷ್ಟರಲ್ಲೇ ಅಬುಲ್ ಹೈಸಂ ಮುಂದೆ ಬಂದು, ನಾವು ಇವತ್ತಿನ ವರೆಗೆ ಯಹೂದಿಗಳಲ್ಲಿ ಮಾಡಿದ ಎಲ್ಲಾ ಒಪ್ಪಂದಗಳನ್ನು ಮುರಿದು ಹಾಕುತಿದ್ದೇವೆ. ಎಂದು ಹೇಳುತ್ತಾ, ನಂತರ ನಿಮಗಾಗಿ ನಾವುಗಳು ಇಷ್ಟೊಂದು ತ್ಯಾಗ ಮಾಡಿದ ನಂತರ, ಬಹುಶಃ ನಾಳೆ ದಿನ ನಿಮಗೆ ಉನ್ನತವಾದ ಸ್ಥಾನಮಾನ, ಗೆಲುವು ಸಿಕ್ಕಿದರೆ ನೀವು ನಮ್ಮೆಲ್ಲರನ್ನೂ ಬಿಟ್ಟು ನಿಮ್ಮ ಜನರ ಬಳಿ ವಾಪಸು ಹೋಗುತ್ತೀರೆ.? ಎಂದು ಕೇಳಿದರು.
ಅದಕ್ಕೆ ಪ್ರವಾದಿಯವರು ﷺ, ಮಂದಹಾಸ ಬೀರುತ್ತಾ, ಇಲ್ಲ ಖಂಡಿತ ಇಲ್ಲ, ನಿಮ್ಮ ಶತ್ರುಗಳು ನನಗೂ ಶತ್ರುಗಳೇ ಆಗಿದ್ದಾರೆ. ನಿಮ್ಮ ರಕ್ತವೂ ಕೂಡ ನನ್ನ ರಕ್ತವೇ ಆಗಿದೆ. ಅಷ್ಟೇ ಏಕೆ ನಾನು ನಿಮ್ಮವನು, ನೀವು ನನ್ನವರು ಆಗಿರುತ್ತೀರಿ ಎಂದು ಹೇಳಿದರು.

ಹೀಗೆ ಮಾತುಗಳು ಮುಂದುವರೆದು ಅತೀ ಉತ್ಸಾಹದಿಂದ ಖಝ್’ರಜ್’ಗಳು ಪ್ರತಿಜ್ಞೆಯನ್ನು ಮಾಡಲು ಮುಂದಾಗುವಾಗ, ಮತ್ತೊಂದು ಭಾಗದಿಂದ ಅಬ್ಬಾಸ್ ಬಿನ್ ಉಬಾದ ಎದ್ದು ನಿಂತು, ನೀವು ಯಾವ ರೀತಿಯ ಪ್ರತಿಜ್ಞೆಯನ್ನು ಮಾಡುತಿದ್ದೀರಾ.? ಎಂದು ನಿಮಗೆ ಗೊತ್ತಿದೆಯೇ.? ಕೆಲವೊಮ್ಮೆ ಅಗತ್ಯ ಬಿದ್ದರೆ, ಕೆಂಪು ಹಾಗೂ ಕಪ್ಪು ವರ್ಣದ ಜನರ ವಿರುದ್ಧ ಆಯುಧಗಳ ಬಲದಿಂದ ಹೊರಡಬೇಕಾಗುತ್ತದೆ. ಬಹುಶಃ ಈ ಹೋರಾಟದಲ್ಲಿ, ನಿಮ್ಮ ನಾಯಕರ ಸಾವು, ನೋವು ಕೂಡ ಆಗಬಹುದು, ನಿಮ್ಮ ಸಂಪತ್ತುಗಳ ನಷ್ಟವೂ ಕೂಡ ಆಗಬಹುದು. ಆಗ ನೀವು ಇವರನ್ನು ಕೈಬಿಡಬಾರದು. ಹಾಗೆ ಏನಾದರೂ ಇದ್ದರೆ, ಈಗಲೇ ಬಿಟ್ಟು ಬಿಡುವುದು ಒಳ್ಳೆಯದು. ಅಷ್ಟೇ ಅಲ್ಲ ನಿಮಗೆ ಈ ಪ್ರತಿಜ್ಞೆಯ ಮುಖ್ಯ ಉದ್ದೇಶ ಗೊತ್ತಿದ್ದೆಯೇ.? ಎಂದು ಕೇಳಿದಾಗ, ಅವರೆಲ್ಲರೂ ಒಂದೇ ಧ್ವನಿಯಲ್ಲಿ, ಅದೆಷ್ಟೋ ಜನರ ಸಾವು, ನೋವು ಆದರೂ, ನಮ್ಮ ನಾಯಕರು ಕೊಲ್ಲಲ್ಪಟ್ಟರೂ, ನಮ್ಮ ಸಂಪತ್ತು ನಷ್ಟ ಹೊಂದಿದರೂ ನಾವು ಮಾತ್ರ ಖಂಡಿತ ಈ ಮಹಾ ವ್ಯಕ್ತಿತ್ವವನ್ನು ಕಾಪಾಡುತ್ತೇವೆ. ಎಂದು ಹೇಳುತ್ತಾ, ಇದಕ್ಕೆ ಪ್ರತಿಫಲವಾಗಿ ನಮಗೆ ಏನು ಸಿಗಬಹುದು ಎಂದು ಪ್ರವಾದಿಯವರಲ್ಲಿ ﷺ ಕೇಳಿದಾಗ, ನಿಮಗೆ ಖಂಡಿತವಾಗಿಯೂ ಸ್ವರ್ಗ ಲಭಿಸಲಿದೆ ಎಂದು ಹೇಳಿದರು.

ನಂತರ ಯಾವುದೇ ವಿರೋಧವಿಲ್ಲದೆ ಎಲ್ಲರೂ ಅವರ ಕೈಗಳನ್ನು ಚಾಚಿ, ಪ್ರವಾದಿಯವರ ﷺ ಪವಿತ್ರ ಹಸ್ತವನ್ನು ಹಿಡಿದು ಪ್ರತಿಜ್ಞೆ ಮಾಡಿದರು. ಒಪ್ಪಂದ ಪೂರ್ತಿಗೊಳಿಸಿದ ಬಳಿಕ ಪ್ರವಾದಿಯವರು ﷺ, ನಿಮ್ಮಲ್ಲಿ ಹನ್ನೆರಡು ಜನರನ್ನು ಪ್ರತ್ಯೇಕವಾಗಿ ವಿಂಗಡಿಸಿಬೇಕು, ಅವರು ನಿಮ್ಮ ಎಲ್ಲಾ ವಿಷಯಗಳನ್ನು ನಿಯಂತ್ರಣ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಒಂದು ಸಭೆಯಲ್ಲಿ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡುವ ಹಾಗೆ, ಖಝ್’ರಜ್ ಜನಾಂಗದ ಒಂಬತ್ತು ಜನರನ್ನು, ಔಸ್ ಜನಾಂಗದ ಮೂರು ಜನರನ್ನು ಸೇರಿಸಿ, ಹನ್ನೆರಡು ಜನರ ಒಂದು ತಂಡವನ್ನು ಆಯ್ಕೆ ಮಾಡಲಾಯಿತು. ನಂತರ ಅವರಲ್ಲಿ ಪ್ರವಾದಿಯವರು ﷺ, ನಿಮ್ಮ ಜನತೆಯ ಪ್ರತಿಯೊಂದು ವಿಷಯಗಳ ಬಗ್ಗೆಯೂ ನೀವು ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು. ಮರ್’ಯಮ್’ರ ಮಗನಾದ ಈಸ ಪ್ರವಾದಿಯವರಿಗೆ (ಅ) ಪ್ರತ್ಯೇಕವಾದ “ಹವಾರಿಗಳು” ಎಂಬ ಹೆಸರಿನ ಶಿಷ್ಯರು ಇದ್ದ ಹಾಗೆ, ಅನ್ಸಾರಿಗಳಾದ ಈ ಅನುಯಾಯಿಗಳು ಕೂಡ “ನುಖಬಾಅ್” ಎಂಬ ಹೆಸರಿನಲ್ಲಿ ಪ್ರಸಿದ್ಧರಾದರು. ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಪಟ್ಟ ಈ ಹನ್ನೆರಡು ಜನರ ಹೆಸರು ಈ ರೀತಿಯಾಗಿದೆ.

ಔಸ್ ಜನಾಂಗದ ಜನರು:
1. ಉಸೈದ್ ಬಿನ್ ಹುಳೈರ್ ◌ؓ
2. ಅಬುಲ್ ಹೈಸಂ ಅತ್ತಯ್ಯಿಹಾನ್ ◌ؓ
3. ಸಅದ್ ಬಿನ್ ಖೈಸಮ ◌ؓ

ಖಝ್’ರಜ್ ಜನಾಂಗದ ಜನರು:
4. ಅಸ್ಅದ್ ಬಿನ್ ಸುರಾರಃ ◌ؓ
5. ರಾಫಿಅ ಬಿನ್ ಮಾಲಿಕ್ ◌ؓ
6. ಸಅದ್ ಬಿನ್ ಉಬಾದಃ ◌ؓ
7. ಮುನ್’ದಿರ್ ಬಿನ್ ಅಂರ್ ◌ؓ
8. ಬರಾಅ ಬಿನ್ ಮಅರೂರ್ ◌ؓ
9. ಸಅದ್ ಬಿನ್ ಬೀಅ್ ◌ؓ
10. ಅಬ್ದುಲ್ಲಾಹಿ ಬಿನ್ ರವಾಹಃ ◌ؓ
11. ಉಬಾದತ್ ಬಿನ್ ಸ್ವಾಮಿತ್ ◌ؓ
12. ಅಬ್ದುಲ್ಲಾಹಿ ಬಿನ್ ಅಂರ್ ◌ؓ

ಮುನ್’ದಿರ್ ಬಿನ್ ಅಂರ್’ರವರ ◌ؓ ಬದಲಾಗಿ ಮಾಲಿಕ್ ಬಿನ್ ಮಾಲಿಕ್’ರನ್ನೂ ◌ؓ, ಉಬಾದತ್ ಬಿನ್ ಸ್ವಾಮಿತ್’ರನ್ನೂ ◌ؓ, ಖಾರಿಜತ್ ಬಿನ್ ಝೈದ್’ರನ್ನು ಹೆಸರಿಸಿದ ಇತಿಹಾಸಕಾರರು ಇದ್ದಾರೆ.

ಮಧ್ಯ ರಾತ್ರಿಯ ಕಗ್ಗತ್ತಲಿನಲ್ಲಿ ನಡೆದ ಈ ಒಪ್ಪಂದದ ಬಗ್ಗೆ ಅಲ್ಲಿ ಸೇರಿದ್ದ ಜನರಿಗಲ್ಲದೆ ಯಾರಿಗೂ ತಿಳಿಯಲು ಸಾಧ್ಯವಿರಲಿಲ್ಲ. ಆದರೆ ಇದೆಲ್ಲವನ್ನೂ ಮರೆಯಲ್ಲಿ ನಿಂತು ನೋಡುತ್ತಿದ್ದ ಖುರೈಷಿ ಗುಪ್ತಚರ, ಪ್ರವಾದಿಯವರ ﷺ ಒಪ್ಪಂದ ಮುಗಿಯುತ್ತಿದ್ದಂತೆ, “ಓ ಖುರೈಷಿಗಳೇ ಮುಹಮ್ಮದ್ ಪ್ರವಾದಿಯವರು ﷺ ಹಾಗೂ ಅವರ ಅನುಯಾಯಿಗಳು ಯುದ್ಧ ಮಾಡಲು ಸಂಚು ಮಾಡುತ್ತಿದ್ದಾರೆ” ಎಂದು ಕೂಗಿ ಹೇಳಲು ಆರಂಭಿಸಿದನು. ಪ್ರವಾದಿಯವರು ﷺ ಮಾಡುತಿದ್ದ ಈ ರಹಸ್ಯ ಒಪ್ಪಂದಗಳ ಬಗ್ಗೆ ಖುರೈಷಿಗಳಿಗೆ ತಿಳಿದಿದೆ ಎಂದು, ಪ್ರವಾದಿಯವರಿಗೆ ﷺ ತಿಳಿದು, ಅವರು ಮಾಡುತ್ತಿರುವ ಚರ್ಚೆಯ ದಾರಿತಪ್ಪಿಸಲು ಮಾಡಿದ ತಂತ್ರವಾಗಿತ್ತು ಇದು. ಆದರೆ ಆ ಧ್ವನಿಯ ಕೂಗು ಕೇಳಿದ ಕೂಡಲೇ, ಔಸ್, ಖಝ್’ರಜ್ ಜನಾಂಗದ ಜನರು ಒಂದೇ ಧ್ವನಿಯಲ್ಲಿ, ಪ್ರವಾದಿಯವರಲ್ಲಿ ﷺ ನೀವು ಅನುಮತಿ ನೀಡುವುದಾದರೆ, ನಾಳೆಯೇ ಮಿನಾದ ಮೇಲೆ ನಾವೆಲ್ಲರೂ ಸೇರಿ ಆಕ್ರಮಣ ಮಾಡುತ್ತೇವೆ ಎಂದು ಹೇಳಿದಾಗ, ಪ್ರವಾದಿಯವರು ﷺ ಅದಕ್ಕೆ ನಮಗೆ ಅನುಮತಿ ಸಿಗಲಿಲ್ಲ, ಹಾಗಾಗಿ ನೀವೆಲ್ಲರೂ ಈಗ ಹೋಗಿ ವಿಶ್ರಾಂತಿ ಪಡೆಯಿರಿ ಎಂದು ಹೇಳಿ ಕಳುಹಿಸಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-134/365

ಅಖಬ ಒಪ್ಪಂದ ಮುಗಿದು, ಹನ್ನೆರಡು ಜನರ ನುಖಬಾಅ್’ಗಳನ್ನು ಆಯ್ಕೆ ಮಾಡಲಾಜಿತ್ತು. ಇದೆಲ್ಲವೂ ನಡೆದದ್ದು ಅಲ್ಲಾಹನ ವಿಶೇಷವಾದ ತೀರ್ಮಾನದ ಮೇರೆಗೆ ಆಗಿತ್ತು. ಇಮಾಮ್ ಮಾಲಿಕ್’ರವರು ◌ؓ ಒಂದು ಉಲ್ಲೇಖದಲ್ಲಿ ವಿವರಿಸುವುದು ಕಾಣಬಹುದು, ಪ್ರವಾದಿಯವರು ﷺ ಆಯ್ಕೆ ಮಾಡಿದ್ದ ವಿಶೇಷ ಪ್ರತಿನಿಧಿಗಳೆಲ್ಲವೂ ಜಿಬ್’ರೀಲ್’ರ (ಅ) ಸೂಚನೆಯ ಮೇರೆಗೆಗಾಗಿತ್ತು ಆಯ್ಕೆ ಮಾಡಿದ್ದು.

ಮರುದಿನ ಬೆಳಿಗ್ಗೆ ಖುರೈಷಿಗಳ ಗುಂಪಿನಿಂದ ಕೆಲವೊಂದು ಸುದ್ದಿ ಕೇಳಿ ಬರಲು ಆರಂಭಿಸಿತು. ಹಾಗಾಗಿ ಅವರು ಖಝ್’ರಜ್’ಗಳ ವಾಸ ಸ್ಥಳಕ್ಕೆ ಬಂದು, ತಮ್ಮ ಗೊಂದಲವನ್ನು ತಿಳಿಸಿ, ನಂತರ “ನಾವು ನಿಮ್ಮ ವಿರುದ್ಧ ಯಾವುದೇ ಘೋಷಣೆ ಮಾಡಿಲ್ಲ ಅಲ್ವಾ.?” ಹಾಗಿದ್ದರೆ ಯಾಕಾಗಿ ನೀವು ಮುಹಮ್ಮದ್’ರ ﷺ ಜೊತೆಯಲ್ಲಿ ಸೇರಿ ಸಭೆ ಸೇರಿದ್ದು ಎಂದು ಕೇಳಿದಾಗ, ಖಝ್’ರಜ್ ಜನಾಂಗದ ಬಹುದೈವ ವಿಶ್ವಾಸಿಗಳು, ಇಲ್ಲವಲ್ಲ, ನಾವು ಯಾರೊಂದಿಗೂ, ಯಾವುದೇ ಒಪ್ಪಂದವನ್ನೂ ಮಾಡಿಲ್ಲ ಎಂದು ಹೇಳಿದರು. ಅವರಿಗೆ ಮುಸ್ಲಿಮರ ವರ್ತನೆಗಳ ಬಗ್ಗೆ ಯಾವುದೇ ಸುಳಿವು ಕೂಡ ಇರಲಿಲ್ಲ. ಹಾಗಾಗಿ ಅವರು ಒಪ್ಪಂದದ ಬಗ್ಗೆ ಬಹಳ ಕೇವಲವಾಗಿ ಮಾತಾಡುತ್ತಿದ್ದರು. ಅದೆಲ್ಲವನ್ನೂ ನೋಡುತ್ತಿದ್ದ ಮುಸ್ಲಿಮರು, ಏನು ತಿಳಿಯದಂತೆ ಮೌನ ವಹಿಸಿದರು. ಖುರೈಷಿಗಳಿಗೆ ಬೇರೆ ದಾರಿಯಿಲ್ಲದೆ ಅವರ ಮಾತುಗಳನ್ನು ಕೇಳಬೇಕಾಗಿ ಬಂದಿತು. ಹಾಗಿದ್ದರೆ ಅವರಿಗೆ ಬಂದಿದ್ದ ಸೂಚನೆ ತಪ್ಪು ಕಲ್ಪನೆಯಾಗಿತ್ತೋ.? ಎಂದು, ಸದ್ಯಕ್ಕೆ ಗೊಂದಲದಿಂದಲೇ ಖುರೈಷಿಗಳು ಹಿಂತಿರುಗಿ ಹೋದರು. ಆದರೆ ಅದರ ಬಗ್ಗೆ ತನಿಖೆ ನಡೆದಾಗ, ಒಪ್ಪಂದ ಮಾಡಿರುವ ಬಗ್ಗೆ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು, ಆದರೆ ಅಷ್ಟೊತ್ತಿಗೆ ಖಝ್’ರಜ್’ಗಳು ಯಸ್’ರಿಬಿಗೆ ಹೊರಟಿದ್ದರು. ಖುರೈಷಿಗಳು ಅವರನ್ನು ಹಿಂಬಾಲಿಸಿ ಹೋದರೂ, ಸಅದ್ ಬಿನ್ ಉಬಾದರನ್ನು ◌ؓ ಮಾತ್ರ ಹಿಡಿಯಲು ಸಾಧ್ಯವಾಯಿತು. ಖುರೈಷಿಗಳು ಅವರನ್ನು ಹಿಡಿದು ತಂದು ಬಹಳಷ್ಟು ಚಿತ್ರಹಿಂಸೆ ನೀಡಿದರು. ಕೊನೆಗೆ ಜುಬೈಲ್ ಬಿನ್ ಮುತ್’ಇಮ್ ಹಾಗೂ ಹಾರಿಸ್ ಬಿನ್ ಉಮಯ್ಯ ಆಗಿತ್ತು ಜಾಮೀನು ಕೊಟ್ಟು ಅವರನ್ನು ರಕ್ಷಣೆ ಮಾಡಿದ್ದು. ಅದು ಅವರು ಶಾಮಿಗೆ ಹೋಗುತ್ತಿದ್ದ ಯಾತ್ರೆಯ ಗುಂಪು ಯಸ್’ರಿಬಿಗೆ ತಲುಪಿದಾಗ, ಸಅದ್ ಬಿನ್ ಉಬಾದ ಅವರಿಗೆ ಮಾಡಿದ್ದ ಸಹಾಯಕ್ಕೆ ಪ್ರತ್ಯುಪಕಾರವಾಗಿತ್ತು ಇವತ್ತು ಅವರು ತಿರುಗಿ ಸಹಾಯ ಮಾಡಿದ್ದು.

ಒಪ್ಪಂದದ ಬಗ್ಗೆ ಖುರೈಷಿಗಳ ನಡುವೆ, ಬಹಳಷ್ಟು ಆತಂಕ ಉಂಟಾಯಿತು. ಸುಮಾರು ಹದಿಮೂರು ವರ್ಷಗಳ ಕಾಲ ನಿರಂತರವಾಗಿ, ಹಿಂಸೆ ನೀಡಿದ್ದರೂ, ಬಹಿಷ್ಕಾರ ನೀಡಿದ್ದರೂ ಹಾಗೂ ಏನೇನೋ ತೊಂದರೆಗಳನ್ನು ನೀಡಿದರೂ, ಪ್ರವಾದಿಯವರನ್ನಾಗಲಿ ﷺ, ಮುಸ್ಲಿಮರನ್ನಾಗಲಿ, ಅವರ ಆದರ್ಶದಿಂದ ಒಂದು ಇಂಚು ಕೂಡ ಹಿಂತಿರುಗಿಸಲು ಸಾಧ್ಯವಾಗಿಲ್ಲ ಎಂಬೂದು ಅವರಿಗೆ ಅರ್ಥವಾಗಿತ್ತು. ಈಗ ಅವರ ಜೊತೆಯಲ್ಲಿ ಯಸ್’ರಿಬಿನ ಜನತೆಯೂ ಕೂಡ ಸೇರಿ, ಇನ್ನಷ್ಟು ಬಲಿಷ್ಠರಾಗಬಹುದೋ ಎನ್ನುವ ಭಯ ಅವರನ್ನು ಕಾಡುತ್ತಿತ್ತು. ಅದೇ ಏನೇ ಆಗಲಿ, ಅದನ್ನು ಹೇಗಾದರೂ ತಡೆಯಲೇ ಬೇಕು ಎಂದು ತೀರ್ಮಾನಿಸಿದರು.

ಸತ್ಯವಿಶ್ವಾಸಿಗಳಿಗೆ ಶಾಂತಿಯಿಂದ ಜೀವಿಸಲು ಸಾಧ್ಯವಾಗುವ ಊರು ಅದು ಯಸ್’ರಿಬ್ ಆಗಿದೆ ಎಂದು ಪ್ರವಾದಿಯವರಿಗೂ ﷺ, ಅವರ ಅನುಯಾಯಿಗಳಿಗೂ ಅರ್ಥವಾಗಿತ್ತು. ಹಾಗಾಗಿ ಸಣ್ಣ ಸಣ್ಣ ಗುಂಪುಗಳಾಗಿ ಯಸ್’ರಿಬಿಗೆ ಪಲಾಯನ ಮಾಡಲು ಆರಂಬಿಸಿದರು. ಮಕ್ಕಾದಿಂದ ಒಂಟಿಯಾಗಿಯೂ, ಗುಂಪು ಗುಂಪಾಗಿಯಾಗಿಯೂ ಯಾತ್ರೆಗಳು ಹೊರಡಲು ಆರಂಭಿಸಿದವು. ಇದನ್ನು ಗಮನಿಸಿದ್ದ ಮಕ್ಕಾ ನಿವಾಸಿಗಳು ತಡೆಯಲು ಬಹಳಷ್ಟು ಪ್ರಯತ್ನ ಮಾಡಿದ್ದರು. ಕೆಲವರನ್ನು ದಾರಿ ಮಧ್ಯೆ ಹಿಡಿದು, ವಾಪಸು ಕರೆತಂದು, ಪುನಃ ಹಿಂಸೆಗಳನ್ನು ನೀಡಲು ಆರಂಭಿಸಿದರು. ಕೆಲವನ್ನು ಗೃಹಬಂಧನದಲ್ಲಿ ಇರಿಸಿದರು. ಯಾಕೆಂದರೆ, ಒಂದು ವೇಳೆ ಈ ಜನರನ್ನು ಕೊಂದರೆ.? ಜನಾಂಗಗಳ ನಡುವೆ, ಆಂತರಿಕ ಯುದ್ಧ ನಡೆಯಬಹುದು ಎಂಬ ಭಯ ಅವರನ್ನು ಕಾಡುತ್ತಿತ್ತು.

ಮುಹಮ್ಮದ್ ಪ್ರವಾದಿಯವರು ﷺ ಕೂಡ ಪಲಾಯನ ಮಾಡಬಹುದೇ.? ಎಂದು ಅವರಿಗೆ ಖಚಿತಪಡಿಸಲು ಸಾಧ್ಯವಾಗಿಲ್ಲ, ಏಕೆಂದರೆ ಕಳೆದ ಬಾರಿ, ಅಬ್’ಸೀನಿಯಕ್ಕೆ ವಿಶ್ವಾಸಿಗಳು ಪಲಾಯನ ಮಾಡಿದ್ದ ಸಂದರ್ಭದಲ್ಲೂ, ಪ್ರವಾದಿಯವರು ﷺ ಮಾತ್ರ ಮಕ್ಕದಲ್ಲೇ ಉಳಿದಿದ್ದರು. ಇದರ ನಡುವೆ ಅಬೂಬಕ್ಕರ್’ರವರು ಕೂಡ ಪಲಾಯನ ಮಾಡಲು ಅನುಮತಿ ಕೇಳಿದಾಗ, “ನಿಮಗೆ ಉತ್ತಮ ಸಹಾಯತ್ರಿಕನ ಜೊತೆ ಸಿಗಲಿದೆ” ಎಂಬ ಮಾತು, ಕೆಲವೊಂದು ಆಲೋಚನೆಗಳಿಗೆ ದಾರಿ ಮಾಡಿ ಕೊಟ್ಟವು.

ಪ್ರವಾದಿಯವರು ﷺ ಕೂಡ ಯಸ್’ರಿಬಿಗೆ ಹೋದರೆ, ಮುಸ್ಲಿಮರ ಒಂದು ಗುಂಪು ಅಲ್ಲಿಯೂ ಕೂಡ ಉಂಟಾಗಬಹುದು, ಎಂಬ ಸಂಶಯ ಖುರೈಷಿಗಳಿಗೆ ಕಾಡಿತ್ತು. ಹಾಗಾಗಿ ಪ್ರವಾದಿಯವರ ﷺ ಒಂದೊಂದು ಚಲನವಲನಗಳನ್ನೂ ಗಮನಿಸುತ್ತಿದ್ದರು. ಮದೀನಾದಲ್ಲಿ ದಿನದಿಂದ ದಿನಕ್ಕೆ ವಿಶ್ವಾಸಿಗಳ ಸಂಖ್ಯೆ ಅಧಿಕವಾಗುತ್ತಿರುವಾಗ, ಮಕ್ಕಾದಿಂದ ಹೊರಟ ಜನರು ಕೂಡ ಸೇರಿದರೆ, ಅದೊಂದು ದೊಡ್ಡ ಶಕ್ತಿಯಾಗಿ ಬದಲಾಗಬಹುದು ಎಂಬ ಭಯ ಅವರನ್ನು ಕಾಡತೊಡಗಿತು. ಅವರ ಜೊತೆಯಲ್ಲಿ, ನಾಯಕರಾಗಿ ಮುಹಮ್ಮದ್’ರು ﷺ ಕೂಡ ಸೇರಿದರೆ.? ಏನಾಗಬಹುದು ಎಂಬ ಚೆರ್ಚೆಯೂ ಕೂಡ ಉದ್ಭವಿಸಿತ್ತು. ಶಾಮ್ ನಗರಕ್ಕೆ ಹೊರಡುವ ಯಾತ್ರೆಯ ಗುಂಪನ್ನು, ದಾರಿ ಮಧ್ಯೆ ತಡೆದು ಮುತ್ತಿಗೆ ಹಾಕಬಹುದೋ.? ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಮೂವತ್ತು ತಿಂಗಳು ಗುಡ್ಡಗಾಡಿನ ಪ್ರದೇಶದಲ್ಲಿ ವಾಸಿಸುವಾಗ, ಮುತ್ತಿಗೆ ಎದುರಿಸಿದವರು ಈಗ ಖಂಡಿತ ಮುತ್ತಿಗೆ ಹಾಕುವ ಯೋಜನೆ ಹಾಕದೆ ಇರಲಾರರು ಎಂಬ ಆತಂಕವೂ ಕೂಡ ಅವರನ್ನು ಕಾಡುತ್ತಿತ್ತು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-135/365

ಮಕ್ಕಾದಿಂದ ಪಲಾಯನ ಗೈದು ಮದೀನಕ್ಕೆ ಮೊದಲು ತಲುಪಿದ್ದು ಮಿಸ್’ಅಬ್ ಬಿನ್ ಉಮೈರ್ ಆಗಿದ್ದರು. ಆದರೆ ಮಹಾನರನ್ನು ಗುರುತಿಸಲ್ಪಡುವುದು ಮಾತ್ರ, ಇಸ್ಲಾಮನ್ನು ಪರಿಚಯಿಸಿ, ಖುರ್’ಆನ್ ಕಲಿಸಲು ನಿಯೋಗಿಸಲ್ಪಟ್ಟ ವ್ಯಕ್ತಿ ಎಂದು ಆಗಿದೆ. ಅಬೂಸಲಮತ್ ಬಿನ್ ಅಬ್ದುಲ್ ಅಸದಾ ಆಗಿದ್ದರು ನಂತರ ಪಲಾಯನ ಮಾಡಿದ ವ್ಯಕ್ತಿ. ಅಖಬ ಒಪ್ಪಂದದ ಒಂದು ವರ್ಷ ಮೊದಲಾಗಿತ್ತು ಇವರು ಮದೀನಕ್ಕೆ ಪಲಾಯನ ಮಾಡಿದ್ದು ಎಂದು, ಇಬ್’ನು ಇಸ್’ಹಾಖ್ ಹೇಳುವುದು ಕಾಣಬಹುದು. ಅವರ ಪತ್ನಿ ಹಿಂದ್’ರನ್ನು ◌ؓ ಜೊತೆಯಲ್ಲಿ ಪಲಾಯನ ಮಾಡಲು ಮಕ್ಕಾ ನಿವಾಸಿಗಳು ಬಿಡಲಿಲ್ಲ, ಒಂದು ವರ್ಷದ ನಂತರವಾಗಿತ್ತು, ಅವರು ಕೂಡ ಮದೀನಕ್ಕೆ ಪಲಾಯನ ಮಾಡಿದ್ದು. ಒಬ್ಬಂಟಿಯಾಗಿ ಹರಿಮಿನ ಗಡಿಭಾಗದಲ್ಲಿ ನಡೆದು ಹೋಗುತ್ತಿರುವ ಸಂದರ್ಭದಲ್ಲಿ ತನ್’ಈಮ್’ಗೆ ತಲುಪಿದಾಗ ಉಸ್ಮಾನ್ ಬಿನ್ ತ್ವಲ್’ಹಃ ಕೂಡ ಅವರ ಜೊತೆಯಲ್ಲಿ ಸೇರಿದರು. ಅಂದು ಅವರು ಬಹುದೈವ ವಿಶ್ವಾಸಿಯಾಗಿದ್ದರೂ ನಂತರದ ಕಾಲದಲ್ಲಿ ಅವರು ಇಸ್ಲಾಂ ಸ್ವೀಕರಿಸಿದ್ದರು.

ಈ ಯಾತ್ರೆಯ ಬಗ್ಗೆ ನಂತರದ ದಿನಗಳಲ್ಲಿ ಹಿಂದ್ ◌ؓ ಹೇಳುತ್ತಿದ್ದದ್ದು ಕಾಣಬಹುದು. ಉಸ್ಮಾನ್ ಬಿನ್ ತ್ವಲ್’ಹರಂತಹ ಒಳ್ಳೆಯ ಮನುಷ್ಯನನ್ನು ನಾನು ಬೇರೆ ಎಲ್ಲಿಯೂ ಕಂಡಿಲ್ಲ, ಒಬ್ಬಂಟಿಯಾಗಿ ನಡೆದು ಹೋಗುತ್ತಿದ್ದ ನನ್ನ ಜೊತೆ, ಒಬ್ಬ ಸಹಾಯತ್ರಿಕನಾಗಿ ಜೊತೆಗೆ ಸೇರಿದರು. ದಾರಿ ಮಧ್ಯೆ ಇಳಿಯುವ ಅಗತ್ಯ ಬಂದಾಗ, ಅಲ್ಲಿ ವಾಹನದ ಕಡಿವಾಣ ಎಳೆದು ನಿಲ್ಲಿಸಿ, ನಂತರ ಸ್ವಲ್ಪ ದೂರ ಹೋಗಿ ನಿಲ್ಲುವರು. ನಾನು ಇಳಿದು ಸ್ವಲ್ಪ ದೂರ ಹೋದ ನಂತರ ವಾಹನವನ್ನು ಕೊಂಡೋಗಿ ಯಾವುದಾದರೂ ಮರಕ್ಕೆ ಕಟ್ಟಿ ಹಾಕಿ ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಪುನಃ ಯಾತ್ರೆ ಮುಂದುವರಿಸುವಾಗ, ಕಟ್ಟಿ ಹಾಕಿದ ವಾಹನವನ್ನು ಬಿಡಿಸಿ ನನ್ನ ಬಳಿ ತಂದು, ವಾಹನವನ್ನು ಮಂಡಿಯೂರಿಸಿ ಅಲ್ಲಿಂದ ದೂರ ಸರಿದು ನಿಲ್ಲುವರು. ನಾನು ಹತ್ತಿ ಹೊರಡಲು ಸಿದ್ಧವಾದ ನಂತರ ಕಡಿವಾಣ ಹಿಡಿದು ವಾಹನವನ್ನು ನಿಯಂತ್ರಿಸಲು ಆರಂಭಿಸುವರು. ಹೀಗೆ ಮದೀನಕ್ಕೆ ತಲುಪುವ ವರೆಗೂ ಇದೇ ರೀತಿ ಸಹಾಯ ಮಾಡುತ್ತಿದ್ದರು. ಕೊನೆಗೆ ಮದೀನದ ಖುಬಾ ಎಂಬ ಸ್ಥಳಕ್ಕೆ ತಲುಪಿದಾಗ, ಅವರು ನನ್ನ ಪತಿಯನ್ನು ತೋರಿಸಿ, ಅವರು ಅಲ್ಲಿದ್ದಾರೆ ಎಂದು ಹೇಳಿ, ಮಕ್ಕಾ ನಗರಕ್ಕೆ ವಾಪಸು ಹೋದರು.

ಅವರ ನಂತರ ಮದೀನಕ್ಕೆ ಬಂದವರಲ್ಲಿ ಪ್ರಮುಖ ವ್ಯಕ್ತಿ ಅಬ್ದುಲ್ಲಾಹಿಬಿನು ಜಹ್’ಶ್ ◌ؓ ಹಾಗೂ ಅವರ ಕುಟುಂಬ ಆಗಿತ್ತು. ಅವರು ತಮ್ಮ ಮಡದಿ, ಮಕ್ಕಳೆಲ್ಲರ ಜೊತೆಯಲ್ಲಿ ಮದೀನಕ್ಕೆ ಪಲಾಯನ ಹೋಗುವಾಗ, ಅಬ್ದುಲ್ಲಾಹಿಯವರ ◌ؓ ಜೊತೆಯಲ್ಲಿ ಅವರ ಕಣ್ಣಿಗೆ ದೃಷ್ಟಿ ದೋಷವಿರುವ ಸಹೋದರನೂ ಕೂಡ ಜೊತೆಯಲ್ಲಿದ್ದರು. ದೃಷ್ಟಿಯಲ್ಲಿ ದೋಷವಿದ್ದರೂ ಮಕ್ಕಾದ ಬೀದಿ ಬೀದಿಗಳಲ್ಲಿ ಯಾರದೇ ಸಹಾಯವಿಲ್ಲದೆ ಅವರು ನಡೆದು ಹೋಗುವಷ್ಟು ಸಾಮರ್ಥ್ಯ ಹೊಂದಿದ್ದರು.

ಅಂದು ಖುರೈಷಿಗಳ ನಾಯಕನಾಗಿದ್ದ ಅಬೂಸೂಫಿಯಾನರ ಮಗಳು ಫಾರಿಅಃ ◌ؓ ಅಬ್ದುಲ್ಲಾಹ್’ರ ◌ؓ ಪತ್ನಿಯಾಗಿದ್ದರು. ತನ್ನ ಮಗಳು ಕುಟುಂಬದ ಸಮೇತ ಪಲಾಯನ ಮಾಡಿದ ನಂತರ ಅವರ ಮನೆಯನ್ನು ಅಬೂಸೂಫಿಯಾನ್ ತನ್ನ ವಶಕ್ಕೆ ಪಡೆದುಕೊಂಡರು. ಬನೂ ಆಮಿರ್’ರಿಂದ ಪಡೆದುಕೊಂಡರು ಎಂಬ ಅಭಿಪ್ರಾಯವೂ ಇದೆ. ಇದನ್ನರಿತ ಅಬ್ದುಲ್ಲಾಹಿಬಿನು ಜಹ್’ಶ್ ◌ؓ ಪ್ರವಾದಿಯವರಲ್ಲಿ ﷺ ದೂರು ನೀಡಿದಾಗ, ಪ್ರವಾದಿಯವರು ﷺ ಅವರನ್ನು ಸಮಾಧಾನ ಪಡಿಸುತ್ತಾ, ನಿಮಗೆ ಅದಕ್ಕೆ ಬದಲಾಗಿ ಸ್ವರ್ಗದಲ್ಲಿ ಅಲ್ಲಾಹನು ಸುಂದರವಾದ ಮನೆಯನ್ನು ನೀಡುವನು ಅದು ಸಾಕಲ್ಲವೇ.? ಎಂದು ಕೇಳಿದಾಗ, ಅವರು ಸಂತೋಷದಿಂದ ಹಿಂತಿರುಗಿ ಹೋದರು.

ನಂತರದ ಕಾಲದಲ್ಲಿ ಮಕ್ಕಾ ಫತ್’ಹ್ (ಮಕ್ಕಾ ವಿಜಯ) ಆದ ಸಂದರ್ಭದಲ್ಲಿ, ಅಬ್ದುಲ್ಲಾಹಿಯವರ ◌ؓ ಸಹೋದರ ಅಬೂ ಅಹ್’ಮದ್ ◌ؓ ಈ ಮನೆಯ ಬಗ್ಗೆ ಕೇಳಲು ಮುಂದಾದಾಗ, ಜೊತೆಯಲ್ಲಿರುವರು ಅವರನ್ನು ತಡೆದು ಅಂದು ಇಸ್ಲಾಮಿಗಾಗಿ ಎಲ್ಲವನ್ನೂ ತ್ಯಾಗ ಮಾಡಿ, ಇಂದು ಪುನಃ ಅದನ್ನು ಕೇಳುವುದು ಸರಿಯಲ್ಲ ಎಂದು ಹೇಳಿದಾಗ, ಅಬೂ ಅಹ್’ಮದ್ ◌ؓ ಅದನ್ನು ಕೇಳಿ ಸುಮ್ಮನಾದರು.

ಬಹಳ ರಹಸ್ಯವಾಗಿ ಆಗಿತ್ತು, ಸತ್ಯವಿಶ್ವಾಸಿಗಳು ಮಕ್ಕಾದಿಂದ ಮದೀನಕ್ಕೆ ಪಲಾಯನ ಮಾಡುತ್ತಿದ್ದದ್ದು. ಆದರೆ ಉಮರ್ ◌ؓ ಮಾತ್ರ ರಹಸ್ಯವಾಗಿ ಪಲಾಯನ ಮಾಡಲು ಇಷ್ಟಪಡಲಿಲ್ಲ.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-136/365

ಉಮರ್ ಕೂಡ ಹಿಜ್’ರ (ಪಲಾಯನ) ಹೋಗಲು ತೀರ್ಮಾನಿಸಿದರು. ಖಡ್ಗವನ್ನು ಹಿಡಿದು, ಬತ್ತಳಿಕೆಯಲ್ಲಿ ಬಾಣವನ್ನು ತುಂಬಿಸಿ, ಆಯುಧಗಳ ಜೊತೆಯಲ್ಲಿ ಕಅಬಾಲಯದ ಬಳಿ ಬಂದು, ಖುರೈಷಿ ನಾಯಕರ ಎದುರಲ್ಲೇ ಕಅಬಾಲಯವನ್ನು ಏಳು ಬಾರಿ ಪ್ರದಕ್ಷಿಣೆ (ತವಾಫ್) ಹಾಕಿದರು. ಅಲ್ಲಿಂದ ನೇರವಾಗಿ ಮಖಾಮ್ ಇಬ್ರಾಹಿಮಿನ ಬಳಿ ಬಂದು, ಅಲ್ಲಿ ಎರಡು ರಕಾಅತ್ ನಮಾಝ್ ಮಾಡಿದ ನಂತರ, ಅಲ್ಲೇ ನೆರೆದಿದ್ದ ಖುರೈಷಿ ಮುಂದೆ ನಿಂತು, ನಿಮಗಾಗಿದೆ ನಾಶ, ವಿನಾಶವನ್ನು ಆಗ್ರಹಿಸುವವರೇ ಈಗ ಬನ್ನಿ, ಮಡದಿ ಮಕ್ಕಳನ್ನು ಅನಾಥರನ್ನಾಗಿ ಮಾಡಲು ಆಸೆ ಪಡುವವರೆ, ಇಲ್ಲೇ ಪಕ್ಕದಲ್ಲಿರುವ ಕಣಿವೆ ಕೆಳಗೆ ಬಂದು ನನ್ನ ಜೊತೆಯಲ್ಲಿ ಹೋರಾಡಿ ಎಂದು ಕೂಗಿ ಹೇಳಿದರು. ಅವರ ಜೊತೆಯಲ್ಲಿದ್ದ ಅಲಿಯವರು ◌ؓ ಖುರೈಷಿಗಳಲ್ಲಿ, ಉಮರ್’ರವರ ◌ؓ ಸವಾಲನ್ನು ಎದುರಿಸುವ ಒಬ್ಬನೇ ಒಬ್ಬ ವ್ಯಕ್ತಿಯೂ ನಿಮ್ಮ ಗುಂಪಿನಲ್ಲಿ ಇಲ್ಲವೇ.? ಎಂದು ಅಣಕಿಸುವ ರೀತಿಯಲ್ಲಿ ಕೇಳಿದರು.

ಉಮರ್’ರವರು ◌ؓ ಹೇಳಿದ ಮಾತನ್ನು ಅವರ ಮಗ ಅಬ್ದುಲ್ಲಾಹ್’ರು ◌ؓ ಉಲ್ಲೇಖಿಸಿದ್ದು ಕಾಣಬಹುದು. ಉಮರ್ ◌ؓ, ನಾನೂ, ಅಯ್ಯಾಶ್ ಬಿನ್ ಅಬೀ ರಬೀಅ ಹಾಗೂ ಹಿಷಾಮು ಬಿನು ಆಸ್, ಮಕ್ಕಾದಿಂದ ಮದೀನಕ್ಕೆ ಪಲಾಯನ ಮಾಡಲು ತೀರ್ಮಾನಿಸಿದೆವು. ಸರಿಫ್ ಎಂಬ ಪ್ರದೇಶದ ಬಳಿ ಎಲ್ಲರೂ ತಲುಪಬೇಕು ಎಂದು ಹೇಳಿದ್ದೆವು. ಇಬ್ಬರು ತಲುಪಿದೆವು ಮೂರನೇ ವ್ಯಕ್ತಿ ಬಹಳ ಹೊತ್ತಾದರೂ ಬಂದಿರಲಿಲ್ಲ, ಬಹುಶಃ ಅವರನ್ನು ಮಕ್ಕಾ ನಿವಾಸಿಗಳು ಹಿಡಿದಿರಬಹುದು ಎಂದು ಅಂದುಕೊಂಡು ನಾವು ಅಲ್ಲಿಂದ ಹೊರಡಲು ಮುಂದಾದೆವು. ಹಾಗಾಗಿ ನಾವಲ್ಲಿಂದ ಯಾತ್ರೆ ಆರಂಭಿಸಿದೆವು. ನಮ್ಮ ಜೊತೆಯಲ್ಲಿ ಬರಬೇಕಿದ್ದ ಹಿಷಾಮನ್ನು ಮಕ್ಕಾ ನಿವಾಸಿಗಳು ಹಿಡಿದು ಬಂಧಿಸಿರುವುದು ನಂತರ ನಮಗೆ ತಿಳಿಯಿತು. ಹೀಗೆ ನಾವು ಮುಂದಕ್ಕೆ ಚಲಿಸಿ, ಮದೀನದ ಗಡಿ ಭಾಗಕ್ಕೆ ತಲುಪಿದೆವು. ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಅಬೂಜಹಲ್ ಹಾಗೂ ಹಾರಿಸ್ ಬಿನ್ ಹಿಷಾಮ್, (ಇವರು ನಂತರದ ದಿನಗಳಲ್ಲಿ ಇಸ್ಲಾಮ್ ಸ್ವೀಕರಿಸಿದ್ದರು) ನೇರವಾಗಿ ಅಯ್ಯಾಶಿನ ಬಳಿ ಬಂದು, ನಿಮ್ಮ ತಾಯಿ ಕೆಲವೊಂದು ಶಪಥ ತೆಗೆದಿದ್ದಾರೆ. ನೀವು ವಾಪಸ್ಸು ತಿರುಗಿ ಹೋದರೆ ಮಾತ್ರ ಅವರು ತಲೆ ಕೂದಲು ಕಟ್ಟುದಾಗಿಯೂ, ಮೇಲ್ಚಾವಣಿಯಿಂದ ಮನೆಯ ಒಳಗೆ ಹೋಗುದಾಗಿಯೂ ಹಠ ಹಿಡಿದು ಬಿಸಿಲಿನಲ್ಲಿ ನಿಂತಿದ್ದಾರೆ. ಹಾಗಾಗಿ ತಕ್ಷಣವೇ ನೀವು ಮರಳಿ ಹೋಗಬೇಕು ಎಂದು ಹೇಳಿದರು. ಸಂಬಂಧಿಕರು ಕೂಡ ಆಗಿದ್ದ ಅವರಿಬ್ಬರ ಮಾತನ್ನು ಕೇಳಿ, ಅಯ್ಯಾಶ್ ತಿರುಗಿ ಹೋಗಲು ಮುಂದಾದಾಗ, ಉಮರ್ ◌ؓ ಅವರನ್ನು ತಡೆಯುತ್ತಾ, ಇವರ ಷಡ್ಯಂತ್ರದ ಬಗ್ಗೆ ತಿಳಿಯಿರಿ, ಇವರ ಬಲೆಗೆ ಬೀಳಬೇಡಿ ಇವರು ನಿಮ್ಮನ್ನು ವಂಚಿಸಿ ಹಿಂಸೆ ನೀಡಲು ಕೊಂಡೊಗುತ್ತಿದ್ದಾರೆ. ತಾಯಿಯ ತಲೆ ಕೂದಲು ತುರಿಕೆ ಬರುವಾಗ ಅವರು ತನ್ನಷ್ಟಕ್ಕೆ ತಲೆ ಬಾಚುತ್ತಾರೆ, ಮರುಭೂಮಿಯ ಬಿಸಿಲಿನ ತಾಪ ಅಧಿಕವಾಗುವಾಗ ಅವರು ತನ್ನಷ್ಟಕ್ಕೆ ಮನೆಯೊಳಗೆ ಹೋಗಿ ಕುಳಿತುಕೊಳ್ಳುತ್ತಾರೆ. ನೀವು ಇವರ ಬಲೆಯಲ್ಲಿ ಬೀಳಬೇಡಿ ಎಂದು ಹೇಳಿದರೂ, ಅಯ್ಯಾಶ್ ಅವರಿಬ್ಬರ ಮಾತನ್ನು ಸಂಪೂರ್ಣವಾಗಿ ನಂಬಿದ್ದರು. ಅವರು ಉಮರ್’ರಲ್ಲಿ ನಾನೊಮ್ಮೆ ಹೋಗಿ, ತಾಯಿಯನ್ನು ಸಮಾಧಾನಿಸಿ, ನನ್ನ ಸಂಪತ್ತು ಎಲ್ಲವೂ ಮಕ್ಕದಲ್ಲೇ ಇದೆ, ಅದನ್ನು ತೆಗೆದುಕೊಂಡು ಬರುತ್ತೇನೆ ಎಂದು ಹೇಳಿದಾಗ, ಉಮರ್ ◌ؓ ನಿಮ್ಮ ಸೊತ್ತು ಅಲ್ಲೇ ಇರಲಿ, ನಾನೂ ಕೂಡ ಮಕ್ಕಾದಲ್ಲಿ ಶ್ರೀಮಂತನೇ, ನನ್ನ ಸಂಪತ್ತಿನಲ್ಲಿ ಅರ್ಧ ಭಾಗವನ್ನು ನಿಮಗೆ ನೀಡುತ್ತೇನೆ. ನೀವು ಮಾತ್ರ ಇವರ ಜೊತೆ ಹೋಗಬೇಡಿ, ಇವರು ನಿಮ್ಮನ್ನು ಖಂಡಿತ ಮೋಸ ಮಾಡುತ್ತಾರೆ ಎಂದು ಹೇಳಿದರು. ಆದರೆ ಅವರಿಬ್ಬರ ಮಾತಿಗೆ ಬಲಿಯಾಗಿ ಅಯ್ಯಾಶ್ ಹೋಗಲು ಮುಂದಾದಾಗ, ಸರಿ ನಿಮಗೆ ಹೋಗಲೇ ಬೇಕು ಎಂದಿದ್ದರೆ, ನನ್ನ ಶಕ್ತಿವಂತಳಾದ ಹೆಣ್ಣು ಒಂಟೆಯಲ್ಲಿ ಹೋಗಿರಿ. ದಾರಿಯಲ್ಲಿ ಏನಾದರೂ ಸಮಸ್ಯೆ ಬಂದರೆ, ತಪ್ಪಿಸಿಕೊಳ್ಳಲು ಸಹಾಯವಾಗಬಹುದು ಎಂದು ಹೇಳಿ ಉಮರ್ ◌ؓ ಅದನ್ನು ಕೊಟ್ಟರು. ದಾರಿ ಮಧ್ಯೆ ಅಬೂಜಹಲ್, ನಾವು ಬಂದಿದ್ದ ಒಂಟೆ ಬಹಳ ಆಯಾಸ ಗೊಂಡಿರುದರಿಂದ ನಮ್ಮನ್ನು ಕೂಡ ನಿಮ್ಮ ಒಂಟೆಯಲ್ಲಿ ಸೇರಿಸಿ ಎಂದು ವಿನಂತಿಸುವ ರೀತಿಯಲ್ಲಿ ತನ್ನ ಷಡ್ಯಂತ್ರ ರೂಪಿಸಿದರು. ಅಯ್ಯಾಶ್ ಅದನ್ನು ವಿಧಿಯಿಲ್ಲದೆ ಒಪ್ಪಿಕೊಳ್ಳಬೇಕಾಯಿತು. ಯಾತ್ರೆ ಸ್ವಲ್ಪ ದೂರ ಮುಂದಕ್ಕೆ ಹೋದಾಗ, ಅವರು ಆ ವಾಹನದ ನಿಯಂತ್ರಣವನ್ನು ತಮ್ಮ ವಶಕ್ಕೆ ಪಡೆದು, ಅಯ್ಯಾಶ್’ನನ್ನು ಬಂಧಿಯಾಗಿಸಿದರು. ಮಕ್ಕಾ ನಗರಕ್ಕೆ ತಲುಪಿದ ನಂತರ, ಅಬೂಜಹಲ್ ನಮ್ಮ ಗುಂಪಿನಿಂದ ಪಲಾಯನ ಮಾಡಿದ ಈ ಮೂರ್ಖನನ್ನು ನಾವು ಹಿಡಿದು ತಂದಿದ್ದೇವೆ, ನಿಮ್ಮ ಗುಂಪಿನಿಂದ ಹೋದವರನ್ನು ನೀವು ಹಿಡಿದು ತನ್ನಿರಿ ಎಂದು ಕೂಗಿ ಹೇಳಿದರು. ನಂತರ ಅಯ್ಯಾಶ್’ರನ್ನೂ ಕೂಡ ಹಿಷಾಮಿರನ್ನು ಕೂಡಿ ಹಾಕಿದ್ದ ಮೇಲ್ಚಾವಣಿಯಲ್ಲೇ ಕೂಡಿ ಹಾಕಿದರು.

ಈ ಘಟನೆಯನ್ನು ಉಲ್ಲೇಖಿಸಿಯಾಗಿತ್ತು, ಅಲ್ ಝುಮರ್ ಅಧ್ಯಾಯದ ಐವತ್’ಮೂರರಿಂದ ಐವತ್’ಐದರ ವರೆಗಿನ ಸೂಕ್ತವು ಅವತರಿಸಿದ್ದು. ಅದರ ಸಾರಾಂಶವು ಈ ರೀತಿಯಾಗಿದೆ, “ಪ್ರವಾದಿಯವರೇ ﷺ ನೀವು ಅವರಲ್ಲಿ ಹೇಳಿರಿ, ತಮ್ಮ ಮೇಲೆಯೇ ಹಿಂಸೆ ಮಾಡಿದ ದಾಸರೆ ನೀವು ಅಲ್ಲಾಹನ ಕರುಣೆಯ ಮೇಲೆ ನಿರಾಸೆ ಆಗಬೇಡಿರಿ, ಅಲ್ಲಾಹನು ಎಲ್ಲಾ ಪಾಪಗಳನ್ನು ಮನ್ನಿಸುವನು. ಅವನು ಕರುಣಾಮಯಿಯೂ, ಪಾಪ ವಿಮೋಚಕನೂ ಆಗಿರುವನು. ನೀವು ನಿಮ್ಮ ಪಭುವಿನ ಕಡೆಗೆ ತಿರುಗಿ ಬನ್ನಿರಿ, ನಿಮ್ಮ ಮೇಲೆ ಶಿಕ್ಷೆ ಎರಗುವ ಮುನ್ನ, ನಂತರ ನಿಮಗೆ ಯಾವುದೇ ಸಹಾಯ ಸಿಗಲಾರದು.”

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-137/365

ಉಮರ್’ರವರು ◌ؓ ಹೇಳುವುದು ಕಾಣಬಹುದು. ಖುರ್’ಆನಿನ ಈ ಸೂಕ್ತವು ಅವತರಿಸಿದಾಗ, ನಾನದನ್ನು ಒಂದು ಹಳಗೆಯಲ್ಲಿ ಬರೆದು, ಹಿಷಾಮ್ ಬಿನು ಆಸ್’ಗೆ ಕಳುಹಿಸಿದೆನು. ಹಿಷಾಮ್ ಆ ಪತ್ರವನ್ನು ದೂತ್’ವಾ ಎಂಬದಲ್ಲಿ ಸ್ಥಳದಲ್ಲಿ ಪಡೆದುಕೊಂಡು, ಓದಿದಾಗ ಅವರಿಗೆ ಅದು ತಕ್ಷಣ ಅರ್ಥವಾಗರಿಲಿಲ್ಲ. ನಂತರ ಅಲ್ಲಾಹನಲ್ಲಿ ಆ ಸೂಕ್ತದ ಸಾರಾಂಶವನ್ನು ಅರ್ಥ ಮಾಡಿಕೊಳ್ಳಲು ಪ್ರಾರ್ಥನೆ ಮಾಡಿ, ಪುನಃ ಗಮನವಿಟ್ಟು ಓದಿದಾಗ, ಅದರಲ್ಲಿ ಇರುವುದು ತನ್ನ ಬಗ್ಗೆಯೇ ಆಗಿದೆ ಇರುವುದು ಎಂದು ಹಿಷಾಮಿಗೆ ತಿಳಿಯಿತು. ಅವರು ತಕ್ಷಣವೇ ತನ್ನ ಒಂಟೆಯ ಮೇಲೆ ಹತ್ತಿ ಪ್ರವಾದಿಯವರ ﷺ ಬಳಿ ಬಂದರು.

ಇಬ್’ನು ಇಸ್’ಹಾಖ್’ರವರ ◌ؓ ಉಲ್ಲೇಖವಾಗಿತ್ತು ಇದು. ಆದರೆ ಇಮಾಮ್ ಇಬ್’ನು ಹಿಷಾಮ್’ರವರು ◌ؓ ಉಲ್ಲೇಖಿಸಿದ್ದು ಈ ರೀತಿಯಾಗಿದೆ. ಗಣ್ಯ ವ್ಯಕ್ತಿಗಳೆಂದು ಅರಿಯಲ್ಪಡುವ ಕೆಲವರು ಪ್ರವಾದಿಯವರ ﷺ ಜೊತೆಯಲ್ಲಿ ಮದೀನದಲ್ಲಿ ಇರುವಾಗ, ಅವರು ತಮ್ಮ ಅನುಯಾಯಿಗಳಲ್ಲಿ, ಅಯ್ಯಾಶ್ ◌ؓ ಹಾಗೂ ಹಿಷಾಮಿಗಾಗಿ ◌ؓ ನನಗೆ ಸಹಾಯ ಮಾಡುವವರು ಯಾರಿದ್ದೀರಿ.? ಎಂದು ಕೇಳಿದರು. ಅದಕ್ಕೆ ವಲೀದ್ ಬಿನ್ ವಲೀದ್ ಬಿನ್ ಅಲ್ ಮುಗೀರ ◌ؓ ಮುಂದೆ ಬಂದು ನಾನಿದ್ದೇನೆ ಎಂದು ಹೇಳಿದರು. ಅವರು ಅಯ್ಯಾಶ್ ◌ؓ ಹಾಗೂ ಹಿಷಾಮಿರನ್ನು ◌ؓ ರಕ್ಷಿಸಲು, ಮಕ್ಕಾ ನಗರಕ್ಕೆ ಹೊರಟು, ಅಲ್ಲಿಗೆ ಬಹಳ ರಹಸ್ಯವಾಗಿ ತಲುಪಿದಾಗ, ಅಲ್ಲಿ ಒಬ್ಬರು ಮಹಿಳೆ ಆಹಾರದ ತಟ್ಟೆಯನ್ನು ಹಿಡಿದು ಹೋಗುತ್ತಿದ್ದರು. ಅವರ ಬಳಿ ಹೋಗಿ, ನೀವೆಲ್ಲಿಗೆ ಈ ತಟ್ಟೆ ಹಿಡಿದು ಹೋಗುತ್ತಿದ್ದೀರಿ.? ಎಂದು ಕೇಳಿದಾಗ, ನಾನು ಬಂದಿಯಾಗಿರುವ ಅ ಎರಡು ವ್ಯಕ್ತಿಗಳಿಗೆ ಆಹಾರ ಕೊಡಲು ಹೋಗುತ್ತಿದ್ದೇನೆ ಎಂದು ಅ ಮಹಿಳೆಯರು ಹೇಳಿದರು. ಅದನ್ನು ಕೇಳಿದ ವಲೀದ್ ಅವರನ್ನು ಬಹಳ ರಹಸ್ಯವಾಗಿ ಹಿಂಬಾಲಿಸಿ, ಅವರಿಬ್ಬರನ್ನೂ ಬಂಧಿಸಿದ ಸ್ಥಳವನ್ನು ಗುರುತಿಸಿಕೊಂಡರು. ಅದೊಂದು ಮೇಲ್ಚಾವಣಿ ಇಲ್ಲದ ಮನೆಯಾಗಿತ್ತು. ರಾತ್ರಿದಾಗ ವಲೀದ್ ಅ ಮನೆಯ ಬಳಿ ಬಂದು, ಗೋಡೆ ದಾಟಿ ಮನೆಯೊಳಗೆ ಹೋಗಿ, ಅವರಿಗೆ ಕಟ್ಟಿದ್ದ ಹಗ್ಗವನ್ನು ಖಡ್ಗದಿಂದ ತುಂಡರಿಸಿ, ಅವರಿಬ್ಬರನ್ನೂ, ಕರೆದುಕೊಂಡು ಹೋಗಿ, ವಲೀದ್ ತನ್ನ ವಾಹನದ ಮೇಲೆ ಹತ್ತಿಸಿ ಅಲ್ಲಿಂದ ತಪ್ಪಿಸಿಕೊಂಡು ಬಂದರು. ಸ್ವಲ್ಪ ಸಮಯದ ಬಳಿಕ ಅವರ ಕಾಲಿನಿಂದ ರಕ್ತ ಬರುತಿದ್ದದ್ದು ಗಮನಕ್ಕೆ ಬಂದಿತು, ಅದನ್ನು ಕಂಡು ಅವರಿಬ್ಬರೂ “ಹಲ್ ಅನ್’ತಿ ಇಲ್ಲಾ ಇಸ್’ಬಾವುನ್ ದಮೀತೀ…” ಅಲ್ಲಾಹನಿಗಾಗಿ ಗಾಯವಾಗಿರುವ ಕೇವಲ ಒಂದು ಬೆರಳು ಮಾತ್ರ ನೀನು ಎಂದು ಹಾಡಿದರು. ಹೀಗೆ ಯಾತ್ರೆ ಮುಂದುವರಿದು, ಕೊನೆಗೆ ಅವರೆಲ್ಲರೂ ಮದೀನಕ್ಕೆ ಬಂದು ತಲುಪಿದರು. ಅವರು ನೇರವಾಗಿ ಪ್ರವಾದಿಯವರ ﷺ ಸನ್ನಿಧಿಗೆ ಬಂದು ಪ್ರವಾದಿಯವರನ್ನು ﷺ ಭೇಟಿಯಾದರು.

ಇದಾದ ಬಳಿಕವೂ ಮದೀನಕ್ಕೆ ಬರುತ್ತಿದ್ದ ಪಲಾಯನ ಮಾತ್ರ ಮುಂದುವರಿಯುತ್ತಲೇ ಇತ್ತು. ಖುರೈಷಿಗಳು ಬಹಳಷ್ಟು ಜನರನ್ನು, ಬಹಳಷ್ಟು ಕುತಂತ್ರಗಳ ಮೂಲಕ ತಡೆಯಲು ಪ್ರಯತ್ನಿಸುತ್ತಿದ್ದರು. ಹೀಗಿರುವಾಗ ಸುಹೈಬ್ ಅರ್’ರೂಮಿಯವರು ◌ؓ ಪಲಾಯನ ಮಾಡಲು ಮುಂದಾದರು. ಮಕ್ಕಾದ ಸತ್ಯ ನಿಷೇಧಿಗಳು ಅವರನ್ನು ತಡೆದು, ನೀನು ರೋಮಿನಿಂದ ಇಲ್ಲಿಗೆ ಬಂದಾಗ, ಏನು ಇಲ್ಲದ ಬಡ ವ್ಯಕ್ತಿಯಾಗಿದ್ದೆ, ಈಗ ನೀನು ಇಲ್ಲಿಗೆ ಬಂದು ಸಂಪಾಧಿಸಿದ ಎಲ್ಲಾ ಆಸ್ತಿಗಳ ಜೊತೆಯಲ್ಲಿ ಇಲ್ಲಿಂದ ಹೋಗಲು ನಾವು ಬಿಡುವುದಿಲ್ಲ ಎಂದು ಹೇಳಿದರು. ಅದಕ್ಕೆ ಅವರು ನಿಮಗೆ ಬೇಕಾದದ್ದು ನಮ್ಮ ಸಂಪತ್ತು ಅಲ್ಲವೇ.? ಅದನ್ನು ನಿಮಗೆ ಕೊಟ್ಟರೆ ನೀವು ನನ್ನನ್ನು ಬಿಟ್ಟು ಬಿಡುತ್ತೀರೆ.? ಎಂದು ಕೇಳಿದಾಗ, ಅವರು ಹೌದು ಎಂದು ಹೇಳಿದರು. ಅದಕ್ಕೆ ಸುಹೈಬ್ ◌ؓ, ಸರಿ ನನ್ನೆಲ್ಲಾ ಸಂಪತ್ತುಗಳನ್ನೂ ನಾನು ಮಕ್ಕಾದಲ್ಲೇ ಬಿಟ್ಟು ಹೋಗುತ್ತಿದ್ದೇನೆ ಎಂದು ಹೇಳಿ ಅಲ್ಲಿಂದ ಹೊರಟರು. ಈ ವಿಷಯವು ಪ್ರವಾದಿಯವರಿಗೆ ﷺ ತಿಳಿದಾಗ, ಅವರು ಸುಹೈಬ್’ರಲ್ಲಿ ನಿಮ್ಮ ಈ ತೀರ್ಮಾನವೂ, ಅತೀ ಒಳ್ಳೆಯ ತೀರ್ಮಾನವಾಗಿದೆ ಎಂದು ಹೇಳಿದರು.

ಮಕ್ಕಾದಲ್ಲಿ ಸಹನೆಯಿಂದ ಕಳೆದ ದಿನಗಳು. ಮಾನ, ಪ್ರಾಣ, ಆಸ್ತಿ ಎಲ್ಲವನ್ನೂ ತ್ಯಾಗ ಮಾಡಬೇಕಾಗಿ ಬಂದ ಬಹಳಷ್ಟು ವ್ಯಕ್ತಿಗಳು. ಮನುಷ್ಯನು ಆಸೆಯಿಂದ ಸಂಪಾಧಿಸುವ ಸಂಪತ್ತುಗಳನ್ನು ತ್ಯಾಗ ಮಾಡಲು ತೋರುಸಿದ ಆ ದೃಢ ನಿಶ್ಚಯ. ತಾಯಿ ನಾಡನ್ನು ಬಿಟ್ಟು ಹೋಗಲು ತೋರಿಸಿದ ಆ ದೃಢ ಸಂಕಲ್ಪ. ತನ್ನ ಸಂಗಾತಿಗಿಂತಲೂ, ಆತ್ಮೀಯರಿಗಿಂತಲೂ, ತಾತ್ಕಾಲಿಕ ಸಮಾಧಾನಕಿಂತಲೂ ಮಹತ್ವ ಇರುವುದು ಸತ್ಯ ವಿಶ್ವಾಸಕ್ಕಾಗಿದೆ ಎಂದು ತೋರಿಸಿ ಕೊಟ್ಟ ಆ ತ್ಯಾಗದ ದೃಶ್ಯಗಳು. ರಕ್ತ ಸಂಬಂಧ, ಕುಟುಂಬ ಸಂಬಂಧ, ಗೆಳೆತನ, ಅಷ್ಟೇ ಯಾಕೆ ಮನುಷ್ಯತ್ವವನ್ನೂ ಮರೆತು, ಕತ್ತಲೆಯ ಭೀಕರತೆಯನ್ನು ತಿಳಿಸಿ ಕೊಟ್ಟ ಶತ್ರುಗಳ ವರ್ತನೆಗಳು. ಯಾವುದೇ ಪರಿಸ್ಥಿತಿ ಬಂದರೂ, ನ್ಯಾಯ ಹಾಗೂ ಮೌಲ್ಯಗಳನ್ನು ರಕ್ಷಿಸಬೇಕು ಎಂದು ಹೇಳುತ್ತಿದ್ದ ಪ್ರವಾದಿಯವರ ﷺ ಉತ್ತಮ ಸ್ವಭಾವವನ್ನು ಪರಿಚಯಿಸಿ ಕೊಟ್ಟ ದಿವಸಗಳು. ಇವೆಲ್ಲವೂ ಹಿಜ್’ರದಿಂದ ಉಂಟಾದ ಪರಿಣಾಮಗಳಾಗಿತ್ತು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-138/365

ಪ್ರವಾದಿಯವರು ﷺ ಇನ್ನೊಂದು ಊರಿಗೆ ಹೋಗಿ ಅಲ್ಲಿ, ಜನರನ್ನು ತಮ್ಮೆಡೆಗೆ ಆಕರ್ಷಣೆ ಮಾಡುತ್ತಿರುವುದು ಖುರೈಷಿಗಳಿಗೆ ಸಹಿಸಲು ಸಾದ್ಯವಾಗುತ್ತಿರಲಿಲ್ಲ. ಮದೀನಾದಲ್ಲಿ ದಿನಗಳು ಕಳೆದಂತೆ, ವಿಶ್ವಾಸಿಗಳ ಸಂಖ್ಯೆಯೂ ಕೂಡ ಅಧಿಕವಾಗುತ್ತಲೇ ಇತ್ತು. ಇಸ್ಲಾಂ ಸೃಷ್ಟಿ ಮಾಡಿದ ಒಗ್ಗಟ್ಟು ಹಾಗೂ ಚಿಂತನೆಯೂ ಖುರೈಷಿಗಳನ್ನು ಇನ್ನಷ್ಟು ಚಿಂತಿಸುವಂತೆ ಮಾಡಿತ್ತು. ಜನಾಂಗದವರ ಮದ್ಯೆ ಇದ್ದ ವೈಮನಸ್ಸು, ಜಗಳೆಲ್ಲವೂ ಕೊನೆ ಗೊಂಡಿತ್ತು. ಅದರ ಜೊತೆಯಲ್ಲಿ ಕೆಲವೊಂದು ಕಾರಣಗಳನ್ನು ಕೊಟ್ಟು ಅವರೇ ಚಿಂತಿಸಲು ಆರಂಭಿಸಿದರು.

ಅದರ ಒಂದು ಉದಾಹರಣೆಯೂ ಈ ರೀತಿಯಾಗಿದೆ. ಅಂರ್’ಬಿನುಲ್ ಜಮುಹ್ ಮದೀನಾದ ಒಬ್ಬರು ಹೆಸರಾಂತ ಬಹುದೈವ ವಿಶ್ವಾಸಿಯಾಗಿದ್ದರು. ಅತೀ ಹಿರಿಯ ವಯಸ್ಸಿನ ವ್ಯಕ್ತಿಯಾಗಿದ್ದ ಇವರು, ತಾನು ಸ್ವಂತವಾಗಿ ಮೂರ್ತಿ ಇಟ್ಟು ಅವುಗಳನ್ನು ಆರಾಧಿಸುತಿದ್ದರು. ಮರದಿಂದ ನಿರ್ಮಿಸಲ್ಪಟ್ಟ “ಮನಾತ್” ಎಂಬ ಹೆಸರಿನ ವಿಗ್ರಹವಾಗಿತ್ತು, ಅದರಲ್ಲಿ ಬಹು ಮುಖ್ಯ ವಿಗ್ರಹ. ಮದೀನಾದ ಕೆಲವು, ಬನೂಸಲಮ ಜನಾಂಗದ ಯುವಕರು ಆ ವಿಗ್ರಹವನ್ನು ಕೊಂಡು ಹೋಗಿ ಕೆಸರು ಇರುವ ಸ್ಥಳಕ್ಕೆ ಹಾಕಿದರು. ಮರುದಿವಸ ಆರಾಧನೆಗೆಂದು ಬಂದಾಗ ಅಂರ್’ಗೆ ತಾನು ಪೂಜಿಸುತ್ತಿದ್ದ ವಿಗ್ರಹವು ಅಲ್ಲಿರಲಿಲ್ಲ. ಅವರು ಹುಡುಕುತ್ತಾ ಹೋದರು, ಕೊನೆಗೆ ಕೆಸರು ಇರುವ ಸ್ಥಳದಲ್ಲಿ ಅದು ಅವರಿಗೆ ಸಿಕ್ಕಿತು, ಅದನ್ನು ಚೆನ್ನಾಗಿ ತೊಳೆದು ಶುಚಿಯಾಗಿಸಿ ಪುನಃ ಅದೇ ಸ್ಥಾನದಲ್ಲಿ ತಂದು ಇಟ್ಟು, ಪೂಜಿಸಿದ ನಂತರ ಅವರು, ಈ ದುಷ್’ಕೃತ್ಯವನ್ನು ಮಾಡಿದವರು ಯಾರೇ ಆಗಲಿ ಅವರನ್ನು ಮಾತ್ರ ನಾನು ಸುಮ್ಮನೆ ಬಿಡುವುದಿಲ್ಲ, ಎಂದು ಹೇಳಿ ಹೋದರು. ಆದರೆ ಮರುದಿನ ಪುನಃ ಅದೇ ರೀತಿ ಪುನಾರವರ್ತನೆಯಾಗಿತ್ತು. ಆಗಲೂ ಅದೇ ರೀತಿ ಹುಡುಕಿ ತಂದು, ತೊಳೆದು ಶುಚಿಯಾಗಿಸಿ, ಪುನಃ ಪ್ರತಿಷ್ಠಾಪನೆ ಮಾಡಿ, ಒಂದು ಖಡ್ಗವನ್ನು ಅದರ ಕತ್ತಿನಲ್ಲಿ ನೇತು ಹಾಕುತ್ತಾ, ಇದನ್ನು ಯಾರೇ ಮಾಡಿದರೂ, ನನಗೆ ತಡೆಯಲು ಸಾಧ್ಯವಾಗುತ್ತಿಲ್ಲ. ನಿನಗೆ ಸ್ವಲ್ಪವಾದ್ರೂ ಶಕ್ತಿ ಇದ್ದರೆ ನೀನೆ ನಿನ್ನನ್ನು ರಕ್ಷಣೆ ಮಾಡು ಎಂದು ಹೇಳಿ ಅ ಖಡ್ಗವನ್ನು ಅಲ್ಲೇ ನೇತು ಹಾಕಿ ಹೋದರು. ಆದರೆ ಮರುದಿನ ಬಂದು ನೋಡಿದಾಗಲೂ ಕೂಡ ಆ ವಿಗ್ರಹ ಅಲ್ಲಿರಲಿಲ್ಲ, ಅದನ್ನು ಹುಡುಕುತ್ತಾ ಹೋದಾಗ, ಹಿಂದಿನ ದಿನದ ಹಾಗೆ ಅದೇ ರೀತಿ ಕೆಸರಿನಲ್ಲಿ ಬಿದ್ದಿತ್ತು. ಅದನ್ನು ಕಂಡು ಆ ವ್ಯಕ್ತಿಯೂ, ನಾನು ಯಾಕಾಗಿ ಈ ವಿಗ್ರಹಕ್ಕೆ ಆರಾಧನೆ ಮಾಡಬೇಕು.? ಸ್ವಂತವಾಗಿ ರಕ್ಷಣೆ ಮಾಡಲು ಸಾಧ್ಯವಾಗದ ಇದಕ್ಕೆ, ನನ್ನನ್ನು ಹೇಗೆ ರಕ್ಷಿಸಲು ಸಾಧ್ಯವಾಗುತ್ತದೆ.? ಹೀಗೆ ಅವರು ಆಳವಾಗಿ ಆಲೋಚನೆ ಮಾಡುತ್ತಾ, ಕೊನೆಗೆ ಅವರು ಇಸ್ಲಾಮ್ ಸ್ವೀಕರಿಸಿದರು. ನಂತರ ಅವರು “ವಲ್ಲಾಹಿ ಲೌ ಕುನ್’ತ ಇಲಾಹನ್ ಲನ್ ತಕುನ್…” ಎಂಬ ಕವಿತೆ ಹಾಡಿದರು.

“ಖಂಡಿತವಾಗಿಯೂ ನೀನೊಂದು ದೇವರೇ ಆಗಿರುತಿದ್ದರೆ.? ನೀನು ಈ ಶ್ವಾನದ ಬಳಿ ಬಂದು ಬಿದ್ದಿರುತ್ತಿರಲಿಲ್ಲ.
ಅಯ್ಯೋ ಕಷ್ಟವೇ ನಿನ್ನನ್ನು ಆರಾಧಿಸುತ್ತಿದ್ದ ಆ ಕಾಲ, ಇಂದು ತಿಳಿಯಿತು ಎನಗೆ, ನನಗೆ ಉಂಟಾದದ್ದು ಬಹು ಕಾಲದ ನಷ್ಟ ಎಂದು.
ಸರ್ವಶ್ರೇಷ್ಠನಾದ ಅಲ್ಲಾಹನೇ ನೀನಾಗಾಗಿದೆ ಸರ್ವಸ್ತುತಿ, ಎನಗೆ ಸನ್ಮಾರ್ಗದ ದಾರಿ ಕರುಣಿಸಿದ್ದಕ್ಕೆ.
ಕಗ್ಗತ್ತಲು ತುಂಬಿದ್ದ ಅಂಧಕರಾದಿಂದ ಸತ್ಯವಿಶ್ವಾಸವೆಂಬ ಬೆಳಕಿನೆಡೆಗೆ ನನ್ನನ್ನು ಕರೆ ತಂದ ಓ ನನ್ನ ಒಡೆಯ, ನಿನಗಾಗಿದೆ ಸರ್ವಸ್ತುತಿ.”

ಅಂರ್’ನ್ನು ಸತ್ಯ ವಿಶ್ವಾಸದ ಕಡೆಗೆ ಆಕರ್ಷಿಸಿದ ಘಟನೆಯೂ, ಇನ್ನೂ ಬಹಳಷ್ಟು ಜನರಿಗೆ ಸತ್ಯ ವಿಶ್ವಾಸದ ಬೆಳಕು ನೀಡುವಲ್ಲಿ ಯಶಸ್ವಿಯಾಯಿತು.

ಹೀಗಿರುವಾಗ ಖುರೈಷಿಗಳು “ದಾರುನ್ನದ್’ವಾ” ಎಂಬ ಸ್ಥಳದಲ್ಲಿ ಸಭೆ ಸೇರಿದರು. ಸಾಮಾನ್ಯವಾಗಿ ಖುರೈಷಿಗಳು ಖುಸಯ್ಯ್ ಬಿನ್ ಖಿಲಾಬ್’ನ ಮನೆಯಲ್ಲಾಗಿತ್ತು ಸಭೆ ಸೇರುತಿದ್ದದ್ದು. ಅದೇ ರೀತಿ ಈ ಬಾರಿ ಸೇರಿದ್ದ ಸಭೆಯಲ್ಲಿ ಮಕ್ಕಾದ ಬಹಳಷ್ಟು ಜನಾಂಗದ ಪ್ರತಿನಿಧಿಗಳಾಗಿತ್ತು ಜೊತೆ ಸೇರಿದ್ದು. ಬನೂ ಸೂಫ್ಯಾನ್ ಹಾಗೂ ಬನೂ ನೌಫಲ್ ಜನಾಂಗದಿಂದ ತ್ವುಐಮ್ ಹಾಗೂ ಜುಬೈಲ್ ಬಿನ್ ಮುತ್ವ್’ಇಮ್, ಬನೂ ಅಬ್ದುದಾರ್ ಜನಾಂಗದಿಂದ ನಳ್’ರ್ ಬಿನ್ ಹರ್’ಸ್, ಬನೂ ಅಸದ್ ಜನಾಂಗದಿಂದ ಅಬುಲ್ ಬಖ್’ತರಿ ಹಾಗೂ ಹಕೀಮ್ ಬಿನ್ ಹಿಸಾಂ, ಬನೂ ಮಖ್’ಸೂಮಿನಿಂದ ಅಬೂಜಹಲ್, ಬನೂ ಸಹಮ್ ಜನಾಂಗದಿಂದ ಹಜ್ಜಾಜಿನ ಮಗಳಾದ ನುಬೈಹ್ ಹಾಗೂ ಮುನಬ್ಬಹ್, ಬನೂ ಜುಮಹ್ ಜನಾಂಗದಿಂದ ಉಮಯ್ಯತ್ ಬಿನ್ ಖಲಫ್, ಹಾಗೂ ಇತರ ಚಿಕ್ಕ ಪುಟ್ಟ ಜನಾಂಗದ ಪ್ರತಿನಿಧಿಗಳು ಕೂಡ ಈ ಬಾರಿಯ ಸಭೆಯಲ್ಲಿ ಜೊತೆ ಸೇರಿದ್ದರು. ಸಭೆ ಆರಂಭವಾಯಿತು, ಮುಹಮ್ಮದ್ ಪ್ರವಾದಿಯವರಿಗೆ ﷺ ಏನು ಮಾಡುವುದು ಎಂಬುದಾಗಿತ್ತು, ಸಭೆಯ ಮುಖ್ಯ ಉದ್ದೇಶ.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-139/365

ಸಭೆಯಲ್ಲಿ ಬಹಳಷ್ಟು ಜನರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದರು. ಅಬುಲ್ ಬುಕ್ತಿರಿ ಎಂಬ ವ್ಯಕ್ತಿಯೂ, ಮುಹಮ್ಮದ್ ﷺ ಪ್ರವಾದಿಯವರನ್ನು ಸರಪಳಿಯಲ್ಲಿ ಬಂಧಿಸಿ, ಒಂದು ಕೋಣೆಯಲ್ಲಿ ಬಂಧಿಸೋಣ ಹಿಂದಿನ ಕಾಲದಲ್ಲಿ ಈ ರೀತಿಯ ತಂತ್ರವನ್ನು ರೂಪಿಸುತ್ತಿದ್ದರು, ಇದರಿಂದ ಅವರು ಜೀವ ಇಲ್ಲದ ಶರೀರದ ಹಾಗೆ ಅಲ್ಲೇ ಸತ್ತು ಹೋಗುತ್ತಾರೆ ಎಂದು ಅಭಿಪ್ರಾಯ ತಿಳಿಸಿದಾಗ, ನಜ್’ದ್’ನಿಂದ ಬಂದಿದ ಒಬ್ಬರು ವಯ್ಯಸ್ಸಾದ, ಉದ್ದವಾದ ಗಡ್ಡ ಹಾಗೂ ಕೂದಲು ಇರುವ ವ್ಯಕ್ತಿಯೊಬ್ಬರು, ಅದು ಬೇಡ ಯಾಕೆಂದರೆ ನೀವು ಆ ರೀತಿ ಬಂಧಿಸಿದರೆ, ಸ್ವಲ್ಪ ಸಮಯದ ನಂತರ ಅವರ ಅನುಯಾಯಿಗಳು ಬಂದು ಅವರನ್ನು ಹಿಂದಿನ ಬಾಗಿಲಿನಿಂದ ರಕ್ಷಿಸಬಹುದು. ಆಮೇಲೆ ಅವರು ನಿಮ್ಮ ವಿರುದ್ಧ ಬಹಳ ದೊಡ್ಡ ಪ್ರತಿರೋಧವೇ ಮಾಡಬಹುದು. ಹಾಗಾಗಿ ಇದಕ್ಕಿಂತ ಬೇರೆ ಅಭಿಪ್ರಾಯ ಇದ್ದರೆ ತಿಳಿಸಿ ಎಂದು ಹೇಳಿದರು.

ಅದಕ್ಕೆ ಅಬುಲ್ ಅಸ್’ವದ್ ಮುಂದೆ ಬಂದು, ಹಾಗಿದ್ದರೆ ನಾವು ಅವರನ್ನು ಇಲ್ಲಿಂದ ಓಡಿಸಿ ಬಿಡೋಣ. ಆಗ ಅವರ ಬಗ್ಗೆ ಏನಾಯಿತು, ಎಂದು ಅಲೋಚಿಸಬೇಕಾಗಿ ಬರುವುದಿಲ್ಲ ಏನು ಬೇಕಿದ್ದರೂ ಮಾಡಲಿ ಎಂದು ಹೇಳಿದಾಗ, ಪುನಃ ಆ ವಯಸ್ಸಾದ ವ್ಯಕ್ತಿ, ಇದೇನು ಹೇಳುತ್ತಿದ್ದೀರಿ.? ಖಂಡಿತ ಇದು ಒಳ್ಳೆಯ ಅಭಿಪ್ರಾಯ ಅಲ್ಲವೇ, ಅಲ್ಲ. ಆ ಮುಹಮ್ಮದ್’ರ ﷺ ಭಾಷಾ ಸಾಹಿತ್ಯ, ಸ್ವಭಾವ ಎಲ್ಲವೂ ನಿಮಗೆಯೇ ಗೊತ್ತಿದೆ ಅಲ್ಲವೇ.? ಅವರನ್ನು ಏನಾದರೂ ಇಲ್ಲಿಂದ ಕಳುಹಿಸಿದರೆ, ಬೇರೆ ಯಾವುದಾದರೂ ಅರಬ್ ಜನಾಂಗದ ಜನರನ್ನು ಸ್ವಾಧೀನಗೊಳಿಸಿ, ಅವರ ಜೊತೆಯಲ್ಲಿ ನಿಮ್ಮ ವಿರುದ್ಧ ಉಗ್ರ ಹೋರಾಟ ನಡೆಯುವ ಸಾಧ್ಯತೆ ಇದೆ. ಹಾಗಾದಲ್ಲಿ ನಿಮ್ಮಲ್ಲಿ ಇರುವ ಅಧಿಕಾರವೂ ಕೂಡ ನಷ್ಟ ಹೊಂದಿ ಹೋಗಬಹುದು. ಹಾಗಾಗಿ ಬೇರೆ ಏನಾದ್ರು ಅಭಿಪ್ರಾಯ ಇದ್ದರೆ ತಿಳಿಸಿ.

ಅದಕ್ಕೆ ತಕ್ಷಣವೇ ಅಬೂಜಹಲ್ ಎದ್ದು ನಿಂತು, ನನಗೆ ಒಂದು ಅಭಿಪ್ರಾಯವಿದೆ ಎಂದು ಹೇಳಿದಾಗ, ಅದನ್ನು ತಿಳಿಸಲು ಅವರೆಲ್ಲರೂ ಹೇಳಿದರು. ಅಬೂಜಹಲ್ ಮಾತು ಮುಂದುವರಿಸುತ್ತಾ, ಎಲ್ಲಾ ಜನಾಂಗದಿಂದ ಒಳ್ಳೆಯ ಶಕ್ತಿ, ಸಾಮರ್ಥ್ಯವಿರುವ ಒಬ್ಬೊಬ್ಬರನ್ನು ಜೊತೆ ಸೇರಿಸಿ, ಅವರೆಲ್ಲರಿಗೂ ಹರಿತವಿರುವ ಖಡ್ಗವನ್ನು ಕೊಟ್ಟು, ಒಂದೇ ಸಮಯದಲ್ಲಿ ಮುಹಮ್ಮದ್’ರನ್ನು ﷺ ಎದುರಿಸಿ, ಅವರ ಕತ್ತನ್ನು ಸೀಳಿ ಹಾಕೋಣ, ಅದರೊಂದಿಗೆ ಅವರ ಕಥೆಯೂ ಮುಗಿಯುತ್ತದೆ, ನಮ್ಮ ಸಮಸ್ಯೆಗೂ ಪರಿಹಾರ ಆಗುತ್ತದೆ. ಅವರನ್ನು ಸಾಮೂಹಿಕವಾಗಿ ಕೊಲೆಗೆ ಮಾಡಿದ ಕಾರಣ, ಅಬ್ದು ಮನಾಫಿನ ಮಕ್ಕಳು ಎಲ್ಲಾ ಜನಾಂಗದದವರ ಮೇಲೆ ಸೇಡು ತೀರಿಸಿಕೊಳ್ಳಲು ಹೋಗುವುದಿಲ್ಲ ಎಂದು ಹೇಳಿದರು. ಅದನ್ನು ಕೇಳಿ ಆ ವಯಸ್ಸಾದ ವ್ಯಕ್ತಿ ಇದು ಒಳ್ಳೆಯ ಅಭಿಪ್ರಾಯ, ನನಗೂ ಇದು ಒಪ್ಪಿಗೆ ಆಯಿತು ಎಂದು ಹಾಡಿ ಹೊಗಳಿದರು. ವಾಸ್ತವದಲ್ಲಿ ಈ ಮುದುಕ ಬೇರೆ ಯಾರು ಆಗಿರದೆ ಇಬ್’ಲೀಸ್ (ಪಿಶಾಚಿ) ಆಗಿದ್ದನು, ಅವನು ನಜ್’ದ್’ನ ವಯ್ಯಸ್ಸಾದ ವ್ಯಕ್ತಿಯ ರೂಪದಲ್ಲಿ ಅವರ ಸಭೆಯಲ್ಲಿ ಭಾಗವಹಿಸಲು ಬಂದಿದ್ದನು.

ಎಲ್ಲರೂ ಆ ಅಭಿಪ್ರಾಯವನ್ನು ಸಮ್ಮತಿಸಿ ಅಲ್ಲಿಂದ ಹೊರಟು ಹೋದರು. ಅಷ್ಟೊತ್ತಿಗೆ ಮಲಕ್ ಜಿಬ್’ರೀಲರು (ಅ) ಪ್ರವಾದಿಯವರನ್ನು ﷺ ಸಮೀಪಿಸಿ, ಎಲ್ಲಾ ವಿಷಯಗಳನ್ನು ತಿಳಿಸಿ, ಇಂದು ನೀವು ಸಾಮಾನ್ಯವಾಗಿ ನಿದ್ರೆ ಮಾಡುವ ಸ್ಥಳದಲ್ಲಿ ನಿದ್ರಿಸದೆ ಬೇರೆ ಸ್ಥಳದಲ್ಲಿ ನಿದ್ರೆ ಮಾಡಿರಿ ಎಂದು ಹೇಳಿ, ಕೊನೆಗೆ ಅಲ್ಲಾಹನು ಪ್ರವಾದಿಯವರ ﷺ ಪಲಾಯನಕ್ಕೆ ಅನುಮತಿ ನೀಡಿರುವ ಬಗ್ಗೆಯೂ ತಿಳಿಸಿದರು.

ಪ್ರವಾದಿಯವರು ﷺ ಸುಡುವ ಬಿಸಿಲನ್ನು ಲೆಕ್ಕಿಸದೆ, ಮನೆಯಿಂದ ಹೊರಟು ಬಂದರು. ಸಾಮಾನ್ಯವಾಗಿ ಆ ಸಮಯದಲ್ಲಿ ಯಾರೂ ಕೂಡ ಹೊರಗೆ ಇಳಿಯುತ್ತಿರಲಿಲ್ಲ. ಹೊದಿಕೆಯಿಂದ ತನ್ನ ಮುಖವನ್ನು ಅಡಗಿಸಿ, ಸಿದ್ದೀಕ್’ರವರ ◌ؓ ಮನೆ ಕಡೆ ಹೆಜ್ಜೆ ಹಾಕಿದರು. ಪ್ರವಾದಿಯವರು ﷺ ಬರುತ್ತಿರುವುದನ್ನು ಕಂಡು ಅಬೂಬಕ್ಕರ್ ಸಿದ್ದೀಕ್’ರವರ ಮನೆಯವರು, ಪ್ರವಾದಿಯವರು ﷺ ಇತ್ತ ಕಡೆಯೇ ಬರುತ್ತಿದ್ದಾರೆ ಅಲ್ವಾ.? ಎಂದು ಹೇಳಿದಾಗ, ಅಬೂಬಕ್ಕರ್ ◌ؓ ನನ್ನ ತಂದೆ, ತಾಯಿಯು ಅವರಿಗೆ ಸಮರ್ಪಣೆ ಎಂದು ಹೇಳುತ್ತಾ, ಈ ಸಮಯದಲ್ಲಿ ಇಲ್ಲಿಗೆ ಬರುತ್ತಿದ್ದಾರೆ.? ಅಂದರೆ ಏನೋ ಗಂಭೀರವಾದ ವಿಷಯವೇ ಇರಬೇಕು ಎಂದು ಹೇಳುತ್ತಿರುವಾಗಲೇ, ಪ್ರವಾದಿಯವರು ﷺ ಅವರ ಬಳಿ ಬಂದು, ಸಲಾಂ ಹೇಳಿದರು. ತಕ್ಷಣವೇ ಅಬೂಬಕ್ಕರ್ ◌ؓ ಕೂಡ ಪ್ರವಾದಿಯವರನ್ನು ﷺ ಗಟ್ಟಿಯಾಗಿ ತಬ್ಬಿಕೊಂಡು ಸಲಾಮಿಗೆ ಉತ್ತರ ಹೇಳಿದರು. ನಂತರ ಪ್ರವಾದಿಯವರು ﷺ, ಇಲ್ಲಿರುವ ಜನರನ್ನು ಸ್ವಲ್ಪ ದೂರ ಸರಿದು ನಿಲ್ಲಲು ಹೇಳುತ್ತೀರ ಎಂದು ಕೇಳಿದಾಗ, ಇಲ್ಲಿ ನನ್ನ ಎರಡು ಹೆಣ್ಣು ಮಕ್ಕಳಲ್ಲದೆ ಬೇರೆ ಯಾರೂ ಇಲ್ಲ. ಎಂದು ಹೇಳುತ್ತಾ, ಯಾಕಾಗಿ ನೀವು ಇಷ್ಟೊತ್ತಿಗೆ, ಇಲ್ಲಿಗೆ ಬಂದದ್ದು ಎಂದು ಕೇಳಿದಾಗ, ಅಲ್ಲಾಹನು ನನಗೆ ಪಲಾಯನ ಮಾಡಲು ಅನುಮತಿ ನೀಡಿರುತ್ತಾನೆ ಎಂದು ಪ್ರವಾದಿಯವರು ﷺ ಹೇಳಿದ್ದೆ ತಡ, ನಾನು ಕೂಡ ನಿಮ್ಮ ಜೊತೆಯಲ್ಲಿ ಬರಲೇ.? ಎಂದು ಅಬೂಬಕ್ಕರ್ ◌ؓ ಕೇಳಿದರು. ಅದಕ್ಕೆ ಪ್ರವಾದಿಯವರು ﷺ ಅನುಮತಿ ನೀಡಿದರು. ತಕ್ಷಣವೇ, ಸಂತೋಷದಿಂದ ಪ್ರವಾದಿಯವರನ್ನು ﷺ ತಬ್ಬಿಕೊಂಡು ಕಣ್ಣೀರು ಹಾಕಿದರು. ಇದನ್ನು ನೋಡುತ್ತಿದ್ದ ಮಗಳಾದ ಆಯಿಷಾ ಬೀವಿಯವರು, ಸಂತೋಷದಿಂದ ಈ ರೀತಿ ಅಳುತ್ತಿದ್ದದ್ದು ನಾನು ಇಷ್ಟರವರೆಗೆ ಯಾವತ್ತೂ ನೋಡಿರಲಿಲ್ಲ ಎಂದು ಹೇಳಿದರು. ನಂತರ ಅಬೂಬಕ್ಕರ್ ◌ؓ ನನ್ನ ಎರಡು ವಾಹನದಲ್ಲಿ, ಒಂದರಲ್ಲಿ ನಾವು ಹೊರಡೋಣ ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-140/365

ನಾಲ್ಕು ತಿಂಗಳಿಂದ ಪ್ರತ್ಯೇಕವಾಗಿ ಗಮನ ಹರಿಸಿ ನೋಡುಕೊಳ್ಳುತ್ತಿದ್ದ ವಾಹನಗಳಾಗಿತ್ತು ಅದು. ಸಮುರ್ ಮರದ ಎಲೆಯನ್ನು ಅವುಗಳಿಗೆ ಕೊಟ್ಟು, ಯಾತ್ರೆ ಹೊರಡಲು ಸಿದ್ಧಪಡಿಸುತಿದ್ದರು. ಪ್ರವಾದಿಯವರು ﷺ ಆ ವಾಹನವನ್ನು (ಒಂಟೆ) ಖರೀದಿಸುವುದಾಗಿ ಹೇಳಿದರೂ, ಅಬೂಬಕ್ಕರ್ ◌ؓ ಅದನ್ನು ದಾನವಾಗಿ ನೀಡಿದರು.

ಪಲಾಯನ ಮಾಡಲು ಸ್ಪಷ್ಟವಾದ ಯೋಜನೆಯೂ ಕೂಡ ಸಿದ್ಧಮಾಡಿದರು. ಯಾತ್ರೆ ಹೋಗುವ ಸ್ಥಳಕ್ಕೆ ವಾಹನವನ್ನು ತಲುಪಿಸಲು, ಅಬ್ದುಲ್ಲಾಹಿಬಿನ್ ಉಖೈತ್’ರಿಗೆ ಜವಾಬ್ದಾರಿ ವಹಿಸಲಾಯಿತು. ಖುರೈಷಿಗಳ ಚಲನವಲನಗಳನ್ನು ಗಮನಿಸಲು, ಮೇಕೆಯನ್ನು ಮೇಯಿಸುವ ಹಾಗೆ ನಟಿಸುತ್ತಾ ಇರಲು, ಅಬೂಬಕ್ಕರ್’ರವರ ◌ؓ ಸೇವಕರಾದ ಆಮಿರ್ ಬಿನ್ ಫುಹೈರರನ್ನು ಆಯ್ಕೆ ಮಾಡಲಾಯಿತು. ಪ್ರವಾದಿಯವರು ﷺ ಹಾಗೂ ಅಬೂಬಕ್ಕರ್’ರವರು ಮೊದಲು ತಲುಪಬೇಕಾಗಿದ್ದ ಸ್ಥಳದ ಬಗ್ಗೆ ಅಬ್ದುಲ್ಲಾಹ್’ರಿಗೆ ◌ؓ ತಿಳಿಸಿ, ಆಮಿರ್’ಗಿಂತ ಮೊದಲೇ ಅಲ್ಲಿಗೆ ತಲುಪಿ, ಎಲ್ಲವನ್ನು ಸಿದ್ಧಪಡಿಸಿ ಇಡಲು ಕೂಡ ಹೇಳಿದರು. ಆಯಿಶ ಬೀವಿಯವರು ◌ؓ ಹೇಳುವುದು ಕಾಣಬಹುದು, ಯಾತ್ರೆಗೆ ಅಗತ್ಯವಾಗಿ ಬೇಕಾಗುವ ಸಾಮಗ್ರಿಗಳನ್ನು ನಾವು ತಯಾರು ಮಾಡಿ ಕೊಟ್ಟೆವು. ಚರ್ಮದ ಪಾತ್ರೆಯಲ್ಲಿ ಅಗತ್ಯವಾದ ಆಹಾರ ವಸ್ತುಗಳನ್ನು ನಾವು ತಯಾರು ಮಾಡಿ ಇಟ್ಟೆವು. ತಂದೆಯವರ ಬಳಿ ಇದ್ದ ಐದು ಸಾವಿರ ದಿರ್’ಹ ಹಣವನ್ನು ಒಂದು ಜೇಬಿನಲ್ಲಿ ಹಾಕಿ ಅದನ್ನು ಮೊದಲೇ ಸೂಚನೆ ಕೊಟ್ಟಿದ್ದ ಸ್ಥಳಕ್ಕೆ ತಲುಪಿಸಲು ಅಬ್ದುಲ್ಲಾಹ್’ರಿಗೆ ಕೊಟ್ಟೆವು.

ಪ್ರವಾದಿಯವರು ﷺ ಅವರ ಮನೆಗೆ ವಾಪಸ್ಸು ಹೋದರು. ಮನೆಯನ್ನು ಸುತ್ತುವರೆದು, ಅವರು ಎದ್ದ ತಕ್ಷಣ ಅವರ ಮೇಲೆ ಆಕ್ರಮಣ ಮಾಡಬೇಕೆಂದು ಈ ಮೊದಲೇ ಯೋಜನೆ ಹಾಕಿರುವುದು ಪ್ರವಾದಿಯವರಿಗೆ ﷺ ಈಗಾಗಲೇ ತಿಳಿದಿದ್ದ ಕಾರಣ, ಪ್ರವಾದಿಯವರ ﷺ ಮಂಚದಲ್ಲಿ ಅಲಿಯವರನ್ನು ◌ؓ ಮಲಗಿಸಿದರು. ಪ್ರವಾದಿಯವರು ﷺ ಮಕ್ಕಾದಿಂದ ಪಲಾಯನ ಮಾಡಿ ಹೋದರೂ, ಅಲಿಯವರು ಸ್ವಲ್ಪ ದಿನ ಮಕ್ಕದಲ್ಲೇ ಇರಬೇಕೆಂದು ಈ ಮೊದಲೇ ನಿರ್ದೇಶಿಸಿದ್ದರು. ಯಾಕೆಂದರೆ ಪ್ರವಾದಿಯವರ ﷺ ಕೈಯಲ್ಲಿ ಕೆಲವರು ಭದ್ರವಾಗಿ ನೋಡಿಕೊಳ್ಳಲು ಕೆಲವೊಂದು ವಸ್ತುಗಳನ್ನು ನೀಡಿದ್ದ ಕಾರಣ, ಅದೆಲ್ಲವನ್ನೂ ಅವರ ಹಕ್ಕುದಾರರಿಗೆ ಹಿಂತಿರುಗಿ ಕೊಟ್ಟು, ನಂತರವೇ ಬಂದರೆ ಸಾಕು ಎಂದು ಹೇಳಿದ್ದರು. ಹಲರ್’ಮೌತ್’ನಿಂದ ತಯಾರಿಸಲಾಗಿದ್ದ ಪ್ರವಾದಿಯವರ ﷺ ಹೊದಿಕೆಯನ್ನು ತೆಗದು, ಪ್ರವಾದಿಯವರ ﷺ ಹಾಸಿಗೆಯಲ್ಲಿ, ಅಲಿಯವರು ◌ؓ ನಿದ್ರಿಸಿದರು. ರಾತ್ರಿ ಪ್ರವಾದಿಯವರ ﷺ ಮನೆಯನ್ನು ಶತ್ರುಗಳು ಸುತ್ತುವರಿದರು. ಇಣುಕಿ ನೋಡಿದಾಗ, ಪ್ರವಾದಿಯವರ ﷺ ಹಾಸಿಗೆಯಲ್ಲಿ ಈಗಾಗಲೇ ಒಬ್ಬರು ಮಲಗಿರುವುದು ಕಂಡಿತು. ಅವರು ಆಗಾಗ ನೋಡುತ್ತಾ ಅವರನ್ನು ಗಮನಿಸುತ್ತಲೇ ಇದ್ದರು. ಪ್ರವಾದಿಯವರು ﷺ ಮಧ್ಯರಾತ್ರಿ ಮೆಲ್ಲನೆ ಬಾಗಿಲು ತೆರೆದು, ಕೈಯಲ್ಲಿ ಒಂದು ಹಿಡಿ ಮರಳು ತೆಗೆದು, ಅದಕ್ಕೆ ಖುರ್’ಆನಿನ ಯಾಸೀನ್ ಅಧ್ಯಾಯದ ಒಂದರಿಂದ ಒಂಬತ್ತರವರೆಗೆ ಇರುವ ಸೂಕ್ತಗಳನ್ನು ಮಂತ್ರಿಸಿ, ಅದನ್ನು ಅವರ ಮೇಲೆ ಎರಚಿದರು. ಮನೆಯನ್ನು ಸುತ್ತುವರೆದಿದ್ದ ಒಬ್ಬೊಬ್ಬರ ತೆಲೆಯ ಮೇಲೆ ಅದು ಬೀಳಲು ಆರಂಭಿಸಿತು, ಅದು ಬಿದ್ದ ಕೂಡಲೇ ಅವರೆಲ್ಲರೂ ಸುಖ ನಿದ್ರೆಗೆ ಜಾರಿದರು. ಆ ಸಮಯದಲ್ಲಿ ಪ್ರವಾದಿಯವರು ﷺ ಮೆಲ್ಲಗೆ ಅಲ್ಲಿಂದ ಹೊರಗೆ ಬಂದು, ನೇರವಾಗಿ ಸಿದ್ದೀಕ್’ರ ◌ؓ ಮನೆ ಕಡೆ ಹೊರಟರು. ಅಗತ್ಯವಿದ್ದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು, ಪ್ರವಾದಿಯವರು ﷺ ಹಾಗೂ ಸಿದ್ದೀಕ್’ರು ◌ؓ ಹಿಂಬಾಗಿಲಿನಿಂದ ಹೊರಟು, ಸೌರ್ ಗುಹೆಯ ಕಡೆಗೆ ಹೋದರು. ಮಕ್ಕಾದಿಂದ ದಕ್ಷಿಣ ದಿಕ್ಕಿಗೆ, ಕಅಬಾದಿಂದ ಸುಮಾರು ಮೂರು ಕಿಲೋಮೀಟರ್ ದೂರವಿರುವ ಪರ್ವತದಲ್ಲಿರುವ ಗುಹೆಯಾಗಿದೆ ಇದು. ಆದರೆ ಮಕ್ಕಾದಿಂದ ಮದೀನಕ್ಕೆ ಹೊರಡುವ ದಾರಿಯಿರುವುದು ಉತ್ತರ ದಿಕ್ಕಿನಲ್ಲಿ ಆಗಿತ್ತು. ಶತ್ರುಗಳ ಹುಡುಕಾಟ ಅಲ್ಲಿ ಅಧಿಕವಾಗಿ ಇರಬಹುದು ಎನ್ನುವ ಕಾರಣಕ್ಕೆ, ಅದರ ನೇರ ವಿರುದ್ಧ ದಿಕ್ಕಿಗೆ ಮೊದಲು ಪ್ರಯಾಣ ಬೆಳೆಸಿದ್ದರು, ಇದು ಖುರೈಷಿಗಳ ತಂತ್ರಕೆ ಹೂಡಿದ ಪ್ರತಿತಂತ್ರವಾಗಿತ್ತು.

ಬೆಳಕು ಹರಿಯುದಕ್ಕೂ ಮುನ್ನವೇ ಪ್ರವಾದಿಯವರು ﷺ ಹಾಗೂ ಸಿದ್ದೀಕ್’ರವರು ನಡೆದು ಮುಂದೆ ಸಾಗಿದರು. ಸಿದ್ದೀಕ್’ರವರು ◌ؓ ಬಹಳಷ್ಟು ಲವಲವಿಕೆಯಿಂದ ಸುತ್ತಮುತ್ತಲು ಗಮನಿಸುತ್ತಾ ನಡೆಯುತ್ತಿದ್ದರು. ಕೆಲವೊಮ್ಮೆ ಪ್ರವಾದಿಯವರ ﷺ ಮುಂಬಾಕ್ಕೆ ಓಡಿ ಹೋಗಿ ಅವರ ಮುಂದಿನಿಂದ ನಡೆದರೆ, ಸ್ವಲ್ಪ ಕಳೆದು ಪ್ರವಾದಿಯವರ ﷺ ಹಿಂದಿನಿಂದ ನಡೆಯುತ್ತಿದ್ದರು. ಸ್ವಲ್ಲ ಕಳೆದು ಅಲ್ಲಿಂದ ಪ್ರವಾದಿಯವರ ﷺ ಎಡ ಭಾಗದಲ್ಲಿ ನಡೆದರೆ, ಇನ್ನೂ ಸ್ವಲ್ಪ ಕಳೆದು ಪ್ರವಾದಿಯವರ ﷺ ಬಳ ಭಾಗದಿಂದ ನಡೆಯುತ್ತಿದ್ದರು. ಇದನ್ನು ಕಂಡು ಪ್ರವಾದಿಯವರು ಸಿದ್ದೀಕ್’ರಲ್ಲಿ ◌ؓ ಯಾಕಾಗಿ ನೀವು ಹೀಗೆ ಸಂಚರಿಸುತ್ತಿದ್ದೀರಿ.? ಎಂದು ಕೇಳಿದಾಗ, ಸಿದ್ದೀಕ್’ರವರು ◌ؓ ದಾರಿಯಲ್ಲಿ ಏನಾದರೂ ಅನಾಹುತ ಇರಬಹುದೋ.? ಎಂದು ಮುಂದೆ ಹೋಗಿ ನೋಡುತ್ತಿದ್ದೆ, ಸ್ವಲ್ಪ ಕಳೆದು ಹಿಂದೆ ಬರುವುದು ಯಾರಾದರೂ ನಮ್ಮನ್ನು ಹಿಂಬಾಲಿಸುತ್ತಿದ್ದಾರ.? ಎಂದು ನೋಡಲು ಆಗಿತ್ತು. ಅಂಗರಕ್ಷಕನಾಗಿ ಕಾವಲು ಕಾಯಲು ಉದ್ದೇಶದಿಂದಾಗಿತ್ತು ಎಡ, ಬಲ ಭಾಗದಲ್ಲಿ ನಿಂತು ನಡೆಯುತ್ತಿದ್ದದ್ದು ಎಂದು ಹೇಳಿದರು.

ಪ್ರವಾದಿಯವರು ﷺ ಮನೆ ಬಿಟ್ಟು ಹೋದ ನಂತರ, ಮನೆ ಸುತ್ತುವರೆದಿದ್ದ ಜನರ ಬಳಿ, ಒಬ್ಬ ವ್ಯಕ್ತಿ ಬಂದು ನೀವು ಯಾರಿಗಾಗಿ ಇಲ್ಲಿ ಕಾಯುತ್ತಿದ್ದೀರ.? ಎಂದು ಕೇಳಿದಾಗ, ಅದು ಮುಹಮ್ಮದ್’ರಿಗೆ ﷺ ಎಂದು ಅವರು ಹೇಳಿದರು. ಅದಕ್ಕೆ ಆ ವ್ಯಕ್ತಿ ಅವರು ಆಗಲೇ, ನಿಮ್ಮೆಲ್ಲರ ತಲೆಗೆ ಮಣ್ಣೆರಚಿ, ಅವರು ಹೋಗಬೇಕಿದ್ದ ಸ್ಥಳಕ್ಕೆ ಹೋಗಿ ಆಯಿತು ಎಂದು ಹೇಳಿದರು. ಅವರೆಲ್ಲರೂ ತಮ್ಮ ತಲೆಯನ್ನು ಒಮ್ಮೆ ಪರೀಕ್ಷಿಸಿದಾಗ, ಎಲ್ಲರ ತಲೆಯಲ್ಲೂ ಮರಳು ಕಣಗಳು ಇದ್ದವು. ಅವರಿಗೆ ಒಮ್ಮೆಲೇ ಆಶ್ಚರ್ಯವಾಯಿತು. ತಕ್ಷಣವೇ ಮನೆಯ ಒಳಗೆ ಇಣುಕಿ ನೋಡಿದಾಗ, ಅಲ್ಲಿ ಒಬ್ಬರು ಹಾಸಿಗೆಯಲ್ಲಿ ಇನ್ನೂ ನಿದ್ರಿಸುತ್ತಲೇ ಇದ್ದರು. ಅದನ್ನು ಕಂಡು ಅವರಿಗೆ ಸಮಾಧಾನ ಆಯಿತು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-141/365

ಬೆಳಕು ಹರಿಯಲು ಇನ್ನೂ ಕೆಲವು ತಾಸುಗಳು ಮಾತ್ರವೇ ಬಾಕಿ, ಅವರೆಲ್ಲರೂ ಬಹಳ ಆವೇಶದಿಂದ ಕಾಯುತ್ತಾ ನಿಂತಿದ್ದರು. ತಮ್ಮ ಜವಾಬ್ದಾರಿ ನಿರ್ವಹಿಸುವ ಸಮಯ ಹತ್ತಿರವಾಯಿತು ಎಂದು ಪ್ರತಿಯೊಬ್ಬರು ಕಾತುರದಿಂದ ಕಾಯುತ್ತಿದ್ದರು. ಅಷ್ಟೊತ್ತಿಗೆ ಒಳಗಿನಿಂದ ತನ್ನ ಮೇಲಿದ್ದ ಹೊದಿಕೆಯನ್ನು ಸರಿಸಿ, ನಿದ್ರಿಸುತ್ತಿದ್ದ ವ್ಯಕ್ತಿ ಎದ್ದು ಹೊರಗೆ ಬಂದರು. ಅವರು ಆ ವ್ಯಕ್ತಿಯನ್ನು ನೋಡಿ ಎಲ್ಲರೂ ದಿಗ್’ಬ್ರಾಂತರಾದರು, ಅವರ ಕಣ್ಣನ್ನು ಅವರಿಗೆಯೇ ನಂಬಲು ಅಸಾಧ್ಯವಾಗಿತ್ತು. ಕಾರಣ ಒಳಗೆ ನಿದ್ರಿಸುತ್ತಿದ್ದದ್ದು ಅಲಿ ◌ؓ ಆಗಿದ್ದರು. ಅಲಿಯವರು ◌ؓ ಅಂಗ ಸ್ನಾನ ಮಾಡಲು ಸಣ್ಣಪಾತ್ರೆಯಲ್ಲಿ ನೀರು ತೆಗೆದುಕೊಂಡು ಹೊರಗೆಬಂದರು. ಮನೆಯನ್ನು ಸುತ್ತುವರೆದಿದ್ದ ಜನರೆಲ್ಲರೂ ಇನ್ನೂ ದಂಗಾಗಿ ನೋಡುತ್ತಿದ್ದರು. ಅಷ್ಟೊತ್ತಿಗೆ ಜೊತೆಯಲ್ಲಿದ್ದ ಕೆಲವರು, ಆಗ ಬಂದಿದ್ದ ಆ ವ್ಯಕ್ತಿ ಹೇಳಿದ ಮಾತು ಸತ್ಯ, ಮುಹಮ್ಮದ್’ರು ﷺ ಇಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಕೊನೆಗೆ ಅವರೇ ಅಲಿಯವರ ◌ؓ ಬಳಿ ಬಂದು, ನೀವೇನಾದರೂ ಮಾಯ ವಿದ್ಯೆ ಕಲಿತಿದ್ದೀರ.? ನಿಮ್ಮ ನಾಯಕ ಈ ಸೋಗು ಹಾಕುವುದನ್ನು ಮಾಡುತ್ತಿರಲಿಲ್ಲ ಅಲ್ವಾ.? ಎಂದು ಕೇಳಿದರು.

ಇಂತಹ ಒಂದು ಮಹತ್ವವಾದ ಜವಾಬ್ದಾರಿಯನ್ನು ನಿರ್ವಹಿಸಿದ್ದಕ್ಕೆ, ನಂತರದ ಕಾಲದಲ್ಲಿ ಅಲಿಯವರು ◌ؓ, ಅದನ್ನು ನೆನೆದು ಖುಷಿಯಿಂದ ಈ ರೀತಿ ಹಾಡುತ್ತಿದ್ದರು.
“ವಖಯ್’ತು ಬಿ ನಫ್’ಸೀ ಖೈರ ಮನ್ ವತ್ವಿಅಸ್ಸರಾ….”
ಪ್ರಾಣ ಒತ್ತೆ ಇಟ್ಟು ಕಾದಿದ್ದೆನು ಅಂದು ನಾನು ಪ್ರವಾದಿಯವರನ್ನು ﷺ
ಈ ಬ್ರಹ್ಮಾಂಡದ ಸರ್ವಶ್ರೇಷ್ಠ ವ್ಯಕ್ತಿಯನ್ನು.
ಕಅಬಾ ಪ್ರದಕ್ಷಿಣೆ ಹಾಕುತ್ತಿದ್ದ ಪರಿಶುದ್ಧವಾದ ವ್ಯಕ್ತಿಯನ್ನು.
ಹಿಜ್’ರಾದಲ್ಲಿ ನಡೆದು ಹೋದ ಸರ್ವೋನ್ನತ ವ್ಯಕ್ತಿಯನ್ನು.
ವಂಚಕರು ಮೋಸದಿಂದ ಅಂದು ಸುತ್ತುವರಿದಿದ್ದರು ಅವರನ್ನು ಕೊಲೆ ಮಾಡಲೆಂದು.
ಆದರೆ ಅವರ ಕುತಂತ್ರವನ್ನು ಸೋಲಿಸಿದನು ಜಗದ ಒಡೆಯನು.
ಗುಹೆಯಲ್ಲಿ ಕಳೆದರು ಕೆಲವು ದಿನ ಅಲ್ಲಾಹನ ಸಂರಕ್ಷಣೆಯಲ್ಲಿ.
ಅವನ ಶ್ರೀರಕ್ಷೆಯಲ್ಲಿದ್ದರೆ ಇನ್ಯಾರ ಭಯವೂ ಇರುವುದಿಲ್ಲ.”

ಖುರೈಷಿಗಳು ಬಿಸಿದ್ದ ಜಾಲದಲ್ಲಿ ಸ್ವತಃ ಅವರೇ ಸಿಲುಕಿಕೊಂಡಿದ್ದರು. ಈ ಘಟನೆಯನ್ನು ಉಲ್ಲೇಖಿಸಿ, ಖುರ್’ಆನಿನ ಅನ್’ಫಾಲ್ ಅಧ್ಯಾಯದ ಮೂವತ್ತನೇ ಸೂಕ್ತವು ಅವತರಿಸಿತು. ಅದರ ಸಾರಾಂಶವು ಈ ರೀತಿಯಾಗಿದೆ, “ನಿಮ್ಮನ್ನು ಬಹಿಷ್ಕಾರ ಮಾಡಲು, ಅಥವಾ ಬಂಧಿಸಲು ಅಥವಾ ಕೊಲೆ ಮಾಡಲು ಬೇಕಾಗಿ, ಸತ್ಯನಿಷೇಧಿಗಳು ಬಹಳಷ್ಟು ಕುತಂತ್ರಗಳನ್ನು ನಡೆಸಿದ್ದರು. ಅವರು ಅವರ ತಮ್ಮ ಕುತಂತ್ರಗಳನ್ನು ಮಾಡುತಿದ್ದ ಸಂದರ್ಭದಲ್ಲಿ ಅಲ್ಲಾಹನು ಅದಕ್ಕೆ ಪ್ರತಿತಂತ್ರ ಮಾಡಿದ್ದನು. ತಂತ್ರಗಳನ್ನು ರೂಪಿಸುವುದರಲ್ಲಿ ಅತ್ಯುತ್ತಮನು ಅಲ್ಲಾಹನು ಮಾತ್ರ”

ದಿಗ್’ಬ್ರಾಂತರಾಗಿದ್ದ ಖುರೈಷಿಗಳು, ಪ್ರವಾದಿಯವರನ್ನು ﷺ ಹಿಡಿಯಲು ಎಷ್ಟೇ ಕೀಳು ಮಟ್ಟಕ್ಕೂ ಹೋಗಲು ತಯಾರಾಗಿದ್ದರು. ಅವರು ಪ್ರವಾದಿಯವರನ್ನು ﷺ ಹುಡುಕುತ್ತಾ ಎಲ್ಲಾ ದಿಕ್ಕಿನಲ್ಲೂ ಹುಡುಕಲು ಆರಂಭಿಸಿದರು.
ಪ್ರವಾದಿಯವರು ﷺ ಹಾಗೂ ಸಿದ್ದೀಕ್’ರು ◌ؓ ಸೌರ್ ಗುಹೆಯ ಬಳಿ ತಲುಪಿದರು. ಅಲ್ಲಿ ಪ್ರವಾದಿಯವರ ﷺ ಬಳಿ, ಸಿದ್ದೀಕ್ ಬಂದು, ನೀವು ಸ್ವಲ್ಪ ಹೊತ್ತು ಹೊರಗೆ ಕಾಯಿರಿ, ನಾನು ಒಳಗೆ ಹೋಗಿ ಏನಾದರೂ ಅಡಚಣೆಗಳು ಇದ್ದರೆ, ಅದನ್ನು ನಿವಾರಣೆ ಮಾಡಿ, ನಿಮ್ಮನ್ನು ಆಮೇಲೆ ಒಳಗೆ ಕರೆಯುತ್ತೇನೆ ಎಂದು ಹೇಳಿ, ಪ್ರವಾದಿಯವರ ﷺ ಉತ್ತರಕ್ಕೂ ಕಾಯದೆ, ಸಿದ್ದೀಕ್’ರು ಒಳಗೆ ಹೋದರು. ಒಳಗೆ ಬಂದ ನಂತರ, ಅವರ ಕಣ್ಣಿಗೆ ಬಿದ್ದ ಎಲ್ಲಾ ಸಣ್ಣ ಸಣ್ಣ ಬಿಲಗಳನ್ನು, ತಾನು ಧರಿಸಿದ್ದ ಬಟ್ಟೆಯನ್ನು ಹರಿದು ಅದರ ಒಳಗೆ ಹಾಕಿ ಅದನ್ನು ಮುಚ್ಚಿ ಹಾಕಿದರು. ಕೊನೆಯಲ್ಲಿ ಬಾಕಿಯಾಗಿದ್ದ ಒಂದು ಸಣ್ಣ ಬಿಲದಲ್ಲಿ ತನ್ನ ಕಾಲನ್ನು ಅಡ್ಡವಾಗಿ ಇಟ್ಟು, ಪ್ರವಾದಿಯವರಿಗೆ ﷺ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಟ್ಟರು. ಪ್ರವಾದಿಯವರನ್ನು ﷺ ಒಳಗೆ ಬಂದು, ಸಿದ್ದೀಕ್’ರ ಮಡಿಯಲ್ಲಿ ತಲೆಯಿಟ್ಟು ವಿಶ್ರಾಂತಿ ಪಡೆಯಲು ಆರಂಭಿಸಿದರು. ಹೀಗೆ ಸಿದ್ದೀಕ್ ಅಥವಾ ಸತ್ಯದ ಮತ್ತೊಂದು ಅರ್ಥವಾದ ಪ್ರವಾದಿಯವರು ﷺ ಹಾಗೂ ಸತ್ಯಕ್ಕೆ ಮತ್ತೊಂದು ಸಾಕ್ಷಿಯಾದ ಸಿದ್ದೀಕ್’ರು ◌ؓ ಸೌರ್ ಗುಹೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು

ಇಬ್’ನು ಅಬೀಶೈಬರಾ ಉಲ್ಲೇಖದ ಪ್ರಕಾರ, ಗುಹೆಯ ಒಳಗೆ ಮೊದಲು ಬಂದಾಗ, ಸಿದ್ದೀಕ್’ರ ಕೈಗೆ ಏನೋ ಒಂದು ವಸ್ತು ತಾಗಿ ರಕ್ತ ಬರಲು ಆರಂಭಿಸಿತು. ಅವರನ್ನು ಲೆಕ್ಕಿಸದೆ ಕೈಯನ್ನು ನೋಡಿ, “ಹಲ್ ಅನ್’ತಿ ಇಲ್ಲಾ ಇಸ್’ಬಉನ್ ದಮೀತಿ…”

ಪ್ರವಾದಿಯವರು ﷺ, ಸಿದ್ದೀಕ್’ರ ಮಡಿಯಲ್ಲಿ ತಲೆಯಿಟ್ಟು ನಿದ್ರಿಸುತ್ತಿರೂದನ್ನು ಕಂಡು ಸಿದ್ದೀಕ್’ರಿಗೂ ಸಂತೋಷವಾಗಿತ್ತು. ಸ್ವಲ್ಪ ಸಮಯದ ನಂತರ ಬಿಲದಲ್ಲಿ ಅಡ್ಡವಾಗಿ ಇಟ್ಟಿದ್ದ ಕಾಲಿನ ಮೇಲೆ ಏನೋ ಒಂದು ಚುಚ್ಚಿದ ಅನುಭವ ಆಯಿತು. ಆದರೂ ಸಿದ್ದೀಕ್’ರು ತನ್ನ ಕಾಲನ್ನು ಅಲ್ಲಿಂದ ತೆಗೆಯಲಿಲ್ಲ. ಕಾರಣ ಯಾವುದಾದರೂ ಜೀವಿ ಆ ಬಿಲದಿಂದ ಹೊರಗೆ ಬಂದು, ಅದು ಪ್ರವಾದಿಯವರಿಗೆ ﷺ ಏನಾದರು ತೊಂದರೆ ಉಂಟುಮಾಡಿದರೆ.? ಅಥವಾ ಕಾಲು ಹಿಂದಕ್ಕೆ ಎಳೆದರೆ, ಪ್ರವಾದಿಯವರ ﷺ ನಿದ್ರೆಗೆ ತೊಂದರೆಯಾಗಬಹು. ಎಂದು ಚಿಂತೆಯಲ್ಲೇ ಮುಳುಗಿದ್ದರು. ಆದರೆ ಸಿದ್ದೀಕ್’ರು ತನ್ನ ಕಾಲಿನ ನೋವನ್ನು ಸಹಿಸಲು ಆಗದೆ, ಅವರ ಕಣ್ಣಿಂದ ನೀರು ಜಾರಿ ಕೆಳಗೆ ಬಿತ್ತು…

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-142/365

ಅಬೂಬಕ್ಕರ್’ರವರ ◌ؓ ಕಣ್ಣಿಂದ ಜಾರಿ ಬಿದ್ದ ಕಣ್ಣೀರು ತಾಗಿ, ಎಚ್ಚರವಾದ ಪ್ರವಾದಿಯವರು ﷺ ಏನಾಯಿತು ಎಂದು ವಿಷಯ ಕೇಳಿದಾಗ, ಹೆಬ್ಬರಿಳಿನಿಂದ ಮುಚ್ಚಿದ ಬಿಲದ ಒಳಗಿಂದ ಯಾವುದೋ ಒಂದು ಜೀವಿ ಕಚ್ಚುತ್ತಿರುವ ವಿಷಯವನ್ನು ತಿಳಿಸಿದರು. ಬಿಲದಿಂದ ಕಾಲು ಸರಿಸಿ ನೋಡಿದಾಗ, ಅದರೊಳಗಿದ್ದದ್ದು ಹಾವಾಗಿತ್ತು. ತನ್ನ ಪ್ರಾಣವನ್ನೂ ಲೆಕ್ಕಿಸದೆ ಕಾವಲು ಕಾಯುತ್ತಿದ್ದ, ಆತ್ಮೀಯ ಗೆಳೆಯನನ್ನು ಪ್ರವಾದಿಯವರು ﷺ ಸಮಾಧಾನ ಪಡಿಸಿ, ಅವರ ಪವಿತ್ರವಾದ ಉಗುಳನ್ನು ಹಾವು ಕಚ್ಚಿದ ಸ್ಥಳಕ್ಕೆ ಹಚ್ಚಿದಾಗ, ಅಬೂಬಕ್ಕರ್’ಗೆ ◌ؓ ನೋವು ಕಡಿಮೆಯಾಗಿ, ಸುಧಾರಿಸಿಕೊಂಡರು. ನಂತರ ಅಬೂಬಕ್ಕರ್ ಸಿದ್ದೀಕ್’ರವರು ◌ؓ ಧರಿಸಿದ್ದ ಬಟ್ಟೆ ಹರಿದಿರುವುದನ್ನು ಕಂಡು, ಏನಾಯಿತು ಎಂದು ಕೇಳಿದಾಗ, ಗುಹೆಯ ಒಳಗಿದ್ದ ಬಿಲಗಳನ್ನು ಮುಚ್ಚಿ ಹಾಕಲು ಬಟ್ಟೆಯನ್ನು ಹರಿಯಬೇಕಾಯಿತು ಎಂದು ಹೇಳಿದರು. ಅದನ್ನು ಕೇಳಿ ಮನ ನೊಂದು, ಪ್ರವಾದಿಯವರು ﷺ ತಮ್ಮ ಎರಡು ಕೈಗಳನ್ನು ಮೇಲಕ್ಕೆ ಎತ್ತಿ, ನೀನು ಸ್ವರ್ಗದಲ್ಲಿ ನನಗೆ ನೀಡುವ ಅದೇ ಪದವಿಯನ್ನು ನನ್ನ ಗೆಳೆಯನಾದ, ಸಿದ್ದೀಕ್’ರಿಗೂ ◌ؓ ನೀಡು, ಎಂದು ಅಲ್ಲಾಹನಲ್ಲಿ ಪ್ರಾರ್ಥನೆ ಮಾಡಿದರು.
ಸಿದ್ದೀಕ್’ರ ಮನೆಯಿಂದ ತಮಗೆ ನೀಡಿದ್ದ ಎಲ್ಲಾ ಜವಾಬ್ದಾರಿಗಳನ್ನು, ಅಬ್ದುಲ್ಲಾಹ್ ಹಾಗೂ ಅಸ್’ಮಾಅ್’ರು ಚಾಚು ತಪ್ಪದೆ ನಿರ್ವಹಿಸಿದ್ದರು. ಅಬ್ದುಲ್ಲಾಹ್ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ಗುಹೆಯ ಬಳಿ ಬಂದು ತಿಳಿಸಿ, ಬೆಳಕು ಹರಿಯುದಕ್ಕೂ ಮುನ್ನವೇ ಪುನಃ ತಿರುಗಿ ಬೆಟ್ಟದಿಂದ ಕೆಳಗೆ ಇಳಿದು ಮಕ್ಕಾ ನಗರಕ್ಕೆ ವಾಪಸು ಹೋಗಿ, ಇನ್ನಷ್ಟು ಹಲವಾರು ಮಾಹಿತಿಗಳನ್ನು ಕಲೆ ಹಾಕುತ್ತಿದ್ದರು. ಆಮಿರ್ ಬಿನ್ ಫುಹೈರ ಮೇಕೆಯನ್ನು ಮೇಯಿಸುತ್ತಾ, ಗುಹೆಯ ಬಳಿ ಬಂದು, ಹಾಲುಕರೆದು ಅದನ್ನು ಕಾಯಿಸಿ, ಅದನ್ನು ಅವರಿಬ್ಬರೂ ಕೊಟ್ಟು ಅವರ ಹಸಿವನ್ನು ನೀಗಿಸುತ್ತಿದ್ದರು.

ಪ್ರವಾದಿಯವರು ﷺ ಹಾಗೂ ಸಿದ್ದೀಕ್’ರು ಪಲಾಯನ ಮಾಡಿದ್ದನ್ನು ತಿಳಿದ ಸಿದ್ದೀಕ್’ರ ◌ؓ ತಂದೆ (ಅಂದು ಅವರು ಇಸ್ಲಾಮ್ ಸ್ವೀಕರಿಸಿರಲಿಲ್ಲ) ಅವರ ಇತರ ಮಕಳಲ್ಲಿ, ಸಿದ್ದೀಕ್ ◌ؓ ಇಲ್ಲಿಂದ ಹೋಗುವಾಗ, ತನ್ನ ಎಲ್ಲಾ ಸಂಪತ್ತನ್ನು ಕೊಂಡು ಹೋಗಿದ್ದಾರ.? ಎಂದು ಕೇಳಿದಾಗ, ಬುದ್ಧಿವಂತಳಾದ ಅಸ್ಮಾ ಇಲ್ಲ ನಮಗೆ ಅಗತ್ಯವಿರುವಷ್ಟು ದುಡ್ಡು ಇಲ್ಲಿ ಇಟ್ಟು ಹೋಗಿದ್ದಾರೆ, ಎಂದು ಹೇಳಿ ಸಿದ್ದೀಕ್’ರು ದುಡ್ಡು ಇಡುತ್ತಿದ್ದ ಬಿಲದ ಒಳಗೆ, ದೃಷ್ಟಿ ಇಲ್ಲದ ತಂದೆಯ ಕೈಯನ್ನು, ಅಲ್ಲಿದ್ದ ಬಟ್ಟೆಯಿಂದ ಕಟ್ಟಿದ್ದ ಕಲ್ಲಿನ ಮೇಲೆ ಆಡಿಸಿ, ಅವರನ್ನು ಸಮಾಧಾನ ಪಡಿಸಿದರು. ವಾಸ್ತವದಲ್ಲಿ ಅಬೂಬಕ್ಕರ್’ರ ◌ؓ ಬಳಿ ಯಾವುದೇ ಸಂಪತ್ತು ಕೂಡ, ಅಲ್ಲಿ ಬಿಟ್ಟು ಹೋಗುವಷ್ಟು ಇರಲಿಲ್ಲ. ಪ್ರವಾದಿಯವರು ﷺ ಹಾಗೂ ಸಿದ್ದೀಕ್’ರಿಗೆ ◌ؓ ಕೊಡಲು ಅಸ್ಮಾಅ್ ಸಂಜೆ ಆಹಾರ ತಯಾರು ಮಾಡಿದ್ದರು. ಆದರೆ ಅದನ್ನು ಕಟ್ಟಿಕೊಡಲು ಏನು ಸಿಗದಿದ್ದಾಗ ಅವರು ತನ್ನ ಬಟ್ಟೆಯ ಮೇಲೆ, ಸೊಂಟಕ್ಕೆ ಕಟ್ಟಿದ್ದ ಶಾಲನ್ನು ತೆಗೆದು, ಅದನ್ನು ಎರಡು ತುಂಡು ಮಾಡಿ ಅದರಿಂದ ಆಹಾರವನ್ನು ಕಟ್ಟಿ, ಬಹಳ ರಹಸ್ಯವಾಗಿ ಗುಹೆಯ ಕಡೆಗೆ ಹೆಜ್ಜೆ ಹಾಕಿದರು. ಹೆಜ್ಜೆ ಗುರುತುಗಳನ್ನು ಯಾರು ಗುರುತು ಹಿಡಿಯಬಾರದು ಎಂಬ ಉದ್ದೇಶದಿಂದ ಆಗಾಗ, ಹಿಂತಿರುಗಿ ತನ್ನ ಹೆಜ್ಜೆ ಗುರುತುಗಳನ್ನು ಅಳಿಸಿ ಹಾಕುತ್ತಿದ್ದರು. ಗುಹೆಯ ಬಳಿ ಆಹಾರದ ಜೊತೆಯಲ್ಲಿ ಬಂದ, ಸಿದ್ದೀಕ್’ರ ◌ؓ ಮಗಳಾದ ಅಸ್ಮಾಮರನ್ನು ಕಂಡು, ಅವರಿಗೆ ಪ್ರವಾದಿಯವರು ﷺ ಆಶೀರ್ವಾದ ನೀಡಿದರು. ಅವರ ಹರಿದು ಹೋಗಿದ್ದ ಸೊಂಟದ ಪಟ್ಟಿಯನ್ನು ಕಂಡು, “ದಾತುನ್ನಿತಖೈರ್” (ಎರಡು ಸೊಂಟದ ಪಟ್ಟಿಯ ಒಡತಿ) ಎಂಬ ಅಮರ ನಾಮವನ್ನು ಕೊಟ್ಟು ಅನುಗ್ರಹಿಸಿದರು.

ಖುರೈಷಿಗಳು ಪ್ರವಾದಿಯವರನ್ನು ﷺ ಹುಡುಕುತ್ತಾ, ನಾಲ್ಕು ದಿಕ್ಕುಗಳಲ್ಲಿಯೂ ಹುಡುಕಲು ಆರಂಭಿಸಿದರು. ಕೊನೆಗೆ ಪ್ರವಾದಿಯವರಿದ್ದ ﷺ ಗುಹೆಯ ಬಳಿಯೂ ಕೂಡ ಬಂದರು. ಗಮನವಿಟ್ಟು ಗುಹೆಯ ಒಳಗೆ ನೋಡಿದರೆ ಒಳಗೆ ಅವಿತಿರುವ ಜನರನ್ನು ಕಾಣಲು ಸಾಧ್ಯವಾಗುಷ್ಟು ದೂರದಲ್ಲಾಗಿತ್ತು ಅವರು ಇದ್ದದ್ದು. ಆದರೆ ಆ ಸಂದರ್ಭದಲ್ಲಿ ಅಲ್ಲಾಹನು ಅವರನ್ನು ಬರೇ ಬಲಹೀನವಾದ ಎರಡು ಕವಚಗಳಿಂದ ಅವರ ಗಮನವನ್ನು ಬೇರೆ ಕಡೆ ತಿರುಗಿಸಿದನು. ಒಂದು, ಗುಹೆಯ ಬಾಗಿಲ ಬಳಿ ಜೇಡರ ಬಲೆಯನ್ನು ನಿರ್ಮಿಸಿದನು, ಇನ್ನೊಂದು ಪಾರಿವಾಳವು ಗೂಡು ಕಟ್ಟಿ, ಅದರಲ್ಲಿ ಮೊಟ್ಟೆ ಇಟ್ಟು ಅಲ್ಲಿ ಜೀವಿಸುತ್ತಿತ್ತು. ಅಷ್ಟೇ ಅಲ್ಲ ಅಲ್ಲೇ ಪಕ್ಕದಲ್ಲಿ ಸಣ್ಣ ಸಸಿಯು ಮೊಳಕೆಯೊಡೆದಿತ್ತು ಎಂಬ ಅಭಿಪ್ರಾಯವೂ ಕೂಡ ಒಂದು ಉಲ್ಲೇಖದಲ್ಲಿ ಇರುವುದು ಕಾಣಬಹುದು. ಖುರೈಷಿಗಳಲ್ಲಿ ಕೆಲವು ಜನರು, ಆ ಗುಹೆಯ ಬಳಿ ಕೇವಲ ನಲ್ವತ್ತು ಮೀಟರ್ ದೂರದಲ್ಲಿ ಬಂದು ತಲುಪಿದಾಗ, ಅಲ್ಲೇ ಎಣೆದಿದ್ದ ಜೇಡರ ಬಲೆ ಹಾಗೂ ಪಾರಿವಾಳದ ಗೂಡುಗಳನ್ನು ನೋಡಿ ಅವರು ಬೆಟ್ಟದಿಂದ ಕೆಳಗೆ ಇಳಿದು, ಕಣಿವೆಯಲ್ಲಿ ನಿಂತಿದ್ದ ತಮ್ಮ ಸಹಚರರಲ್ಲಿ, ಅಲ್ಲಿ ಯಾರು ಇಲ್ಲ, ಇರುವ ಸಾಧ್ಯತೆಯೂ ಕೂಡ ಕಾಣುತ್ತಿಲ್ಲ ಎಂದು ಹೇಳಿದರು.

ಗುಹೆಯ ಬಳಿ ಬಂದು ಖುರೈಷಿಗಳು ನೋಡುತ್ತಿದ್ದ ಸಂದರ್ಭದಲ್ಲಿ, ಪ್ರವಾದಿಯವರು ﷺ ನಮಾಝ್ ಮಾಡುತಿದ್ದರು. ಆದರೆ ಸಿದ್ದೀಕ್’ರಿಗೆ ಅವರು ಗುಹೆಯ ಬಳಿ ಬಂದಿರುವ ದೃಶ್ಯವನ್ನು ಕಂಡು, ತಮ್ಮ ಎದೆ ಬಡಿತ ಅಧಿಕವಾಗಿತ್ತು. ಏನಾಗಬಹುದು ಎಂಬ ಚಿಂತೆಯಿಂದ ಒಳಗೊಳಗೆ ಬಹಳಷ್ಟು ಭಯ ಪಡುತ್ತಿದ್ದರೆ, ಪ್ರವಾದಿಯವರು ﷺ ಮಾತ್ರ ಇನ್ನೂ ಕೂಡ ನಮಾಝ್ ಮಾಡುತ್ತಲೇ ಇದ್ದರು. ಅದರ ನಡುವೆ ಉಮಯ್ಯತ್ ಬಿನ್ ಖಲಫ್ ಗುಹೆಯ ಮೇಲ್ಬಾಗದ ಬಳಿ ಬಂದು, ಗುಹೆಯ ಒಳಗೆ ಸೂಕ್ಷ್ಮವಾಗಿ ಗಮನಿಸಿದರೆ ಒಳಗೆ ಇರುವವರು ಸ್ಪಷ್ಟವಾಗಿ ಕಾಣುವಷ್ಟು ದೂರದಲ್ಲಿ ಬಂದು ನಿಂತರು. ಈ ದೃಶ್ಯವನ್ನು ಕಂಡ ನಂತರವಂತೂ ಸಿದ್ದೀಕ್’ರವರ ಎದೆ ಬಡಿತ ಇನ್ನಷ್ಟು ಅಧಿಕವಾಗಿತ್ತು, ತಮ್ಮ ಕಾಲ ಕೆಳಗಿದ್ದ ಭೂಮಿ ಕುಸಿದ ಅನುಭವವಾಗಿತ್ತು. ಪ್ರವಾದಿಯವರಿಗೆ ﷺ ಏನಾದರೂ ತೊಂದರೆ ಆಗಬಹುದೇ ಎನ್ನುವ ಚಿಂತೆಯಾಗಿತ್ತು ಸಿದ್ದೀಕ್’ರನ್ನು ◌ؓ ಕಾಡುತ್ತಿದ್ದದ್ದು. ಸಿದ್ದೀಕ್’ರ ◌ؓ ಚಿಂತೆಯನ್ನು ಕಂಡು, ಪ್ರವಾದಿಯವರು ﷺ ಸಮಾಧಾನ ಪಡಿಸುತ್ತಾ, ಅಲ್ಲಾಹನ ಸಂರಕ್ಷಣೆಯಲ್ಲಿರುವ ನಮಗೆ ಯಾವ ತೊಂದರೆಯು ಬರಲಾರದು ಎಂದು ಹೇಳಿದಾಗ, ಸಿದ್ದೀಕ್’ರು ◌ؓ ನನಗೆ, ನನ್ನ ಚಿಂತೆಯಿಲ್ಲ, ನಾನು ನಿಮಗೆ ಏನಾದರೂ ತೊಂದರೆ ಆಗಬಹುದೋ ಎಂದು ಭಯಪಡುತ್ತಿದ್ದೆ ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-143/365

ಸಿದ್ದೀಕ್’ರು ◌ؓ ಗಾಬರಿಯಿಂದ ಪ್ರವಾದಿಯವರಲ್ಲಿ ﷺ, ಅವರೇನಾದರೂ ಕೆಳಗೆ ನೋಡಿದರೆ ಖಂಡಿತ ನಾವು ಸಿಕ್ಕಿಬಿಳುತ್ತೇವೆ ಎಂದು ಹೇಳಿದಾಗ, ಪ್ರವಾದಿಯವರು ﷺ ಹೆದರದಿರಿ, ಅಲ್ಲಾಹನು ನಮ್ಮ ಜೊತೆಯಲ್ಲಿ ಇದ್ದಾನೆ. ಎಂದು ಸಿದ್ದೀಕ್’ರನ್ನು ◌ؓ ಸಮಾಧಾನ ಪಡಿಸಿದರು.

ಈ ಸಂಧಿಗ್ದ ಪರಿಸ್ಥಿತಿಯನ್ನು ಉಲ್ಲೇಖಿಸಿ ಪವಿತ್ರ ಖುರ್’ಆನಿನ ತೌಬಾ ಅಧ್ಯಾಯದ ನಲ್ವತ್ತನೆ, ಸೂಕ್ತವೂ ಅವತರಿಸಿತು. ಅದರ ಸಾರಾಂಶವು ಈ ರೀತಿಯಾಗಿದೆ.
“ಸತ್ಯ ನಿಷೇಧಿಗಳು ನಿಮ್ಮನ್ನು ಊರಿಂದ ಹೊರಹಾಕಿದಾಗ, ಗುಹೆಯಯೊಳಗೆ ಕಳೆಯುತ್ತಿದ್ದ ಇಬ್ಬರಲ್ಲಿ, ಒಬ್ಬರಾದ ಪ್ರವಾದಿಯವರಿಗೆ ﷺ ಯಾರೂ ಸಹಾಯ ಮಾಡದಿದ್ದರೂ, ಅಲ್ಲಾಹನು ಅವರಿಗೆ ಸಹಾಯ ಮಾಡಲಿಲ್ಲವೇ.? ಅಲ್ಲಿ ಪ್ರವಾದಿಯವರ ﷺ ಜೊತೆಯಲ್ಲಿ ಅವರ ಸಹಚರ ಅಲ್ಲದೆ ಇನ್ಯಾರು ಇರಲಿಲ್ಲ. ಭಯಪಡುತ್ತಿದ್ದ, ತನ್ನ ಸಹಚರನಲ್ಲಿ ಪ್ರವಾದಿಯವರು ﷺ, ‘ಭಯಪಡಬೇಡಿ ನಮ್ಮ ಜೊತೆಯಲ್ಲಿ ಅಲ್ಲಾಹನಿರುವನು’ ಎಂದು ಹೇಳಿದ್ದರು. ಅಲ್ಲಾಹನು, ಪ್ರವಾದಿಯವರ ﷺ ಮನಸ್ಸಿಗೆ ಸಮಾಧಾನ ನೀಡಿ, ಇನ್ನೊಬ್ಬರಿಗೆ ಕಾಣಲು ಸಾಧ್ಯವಾಗದ ಸೈನ್ಯದ ಮೂಲಕ ಪ್ರವಾದಿಯವರಿಗೆ ﷺ ಶಕ್ತಿ ನೀಡಿದನು. ಸತ್ಯನಿಷೇಧಿಗಳ ವಚನಗಳನ್ನು ಸುಳ್ಳಾಗಿಸಿ, ಅಲ್ಲಾಹನ ವಚನಗಳು ಉನ್ನತಿಗೆ ಏರಿಸಿದನು. ಅಲ್ಲಾಹನು ಮಹಾ ಪ್ರತಾಪಶಾಲಿಯೂ, ತಂತ್ರಜ್ಞಾನಿಯೂ ಆಗಿರುವನು.”

ಉತ್ಬಾ ಗುಹೆಯ ಮೇಲ್ಬಾಗದಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡಿದಾಗ, ಅದು ಇಳಿದು ಬಂದು ಗುಹೆಯಲ್ಲಿ ನಿಂತಿದ್ದವರ ಮುಂದೆ ಬಂದು ಬೀಳುತ್ತಿತ್ತು. ಮಖಾಮ್ ಇಬ್ರಾಹಿಮಿನಲ್ಲಿರುವ, ಪ್ರವಾದಿ ಇಬ್ರಾಹಿಂಮರ (ಅ) ಕಾಲಪಾದಕ್ಕೆ ಹೋಲಿಕೆಯಾಗುವ ಪಾದಸ್ಪರ್ಶವಾಗಿತ್ತು ಪ್ರವಾದಿಯವರದ್ದು ﷺ. ಅದನ್ನು ಹಿಂಬಾಲಿಸುತ್ತಾ ಗುಹೆಯ ಬಳಿ ಬಂದ ಖುರೈಷಿಗಳಿಗೆ, ಮುಂದಿನ ಪಾದಸ್ಪರ್ಶ ಕಾಣದೆ ಕಕ್ಕಾಬಿಕ್ಕಿಯಾಗಿದ್ದರು. ಗುಹೆಯ ಪರಿಸ್ಥಿತಿಯನ್ನು ನೋಡಿ, ಉಮಯ್ಯತ್ ಬಿನ್ ಖಲಫ್ ಈ ಗುಹೆಯಲ್ಲಿ ಇರಲು ಸಾಧ್ಯವಿದೆಯೇ.? ಎಂದು ತನ್ನ ಸಹಚರರಲ್ಲಿ ಕೇಳಿದಾಗ, ಅವರು ಅಲ್ಲಿ ಕಟ್ಟಲಾಗಿದ್ದ ಜೇಡರಬಲೆಯನ್ನು ಕಂಡು, ಮುಹಮ್ಮದ್’ರು ﷺ ಹುಟ್ಟುದಕ್ಕೂ ಮೊದಲೇ ಇರುವ ಕೆಲವು ಜೇಡಗಳು, ಬಲೆ ಕಟ್ಟಿದ ಹಾಗೆ ಕಾಣುತ್ತಿದೆ. ಇನ್ನೇನು ಇಲ್ಲ, ಇಲ್ಲಿ ನೋಡಿ ಯಾವುದೇ ಪ್ರಯೋಜನವಿಲ್ಲ ಎಂದು ಹೇಳುತ್ತಾ, ಅವರು ಅಲ್ಲಿಂದ ಹಿಂತಿರುಗಿ ಹೋದರು. ಇಮಾಮ್ ಅಬೂನು ಐಮಿಯವರು ◌ؓ ಉಲ್ಲೇಖಿಸಿದ ಹದೀಸ್’ನಲ್ಲಿ, ಸಿದ್ದೀಕ್’ರು ಹೇಳಿದ ಮಾತನ್ನು, ಅವರ ಮಗಳಾದ ಅಸ್ಮಾ ಹೇಳುವುದು ಕಾಣಬಹುದು. ಒಬ್ಬರು ಆ ಗುಹೆಯ ನೇರ ಮುಂಬಾಕ್ಕೆ ಬಂದು ನಿಂತಾಗ, ಅಬೂಬಕ್ಕರ್ ◌ؓ ಭಯದಿಂದ ಪ್ರವಾದಿಯರಲ್ಲಿ ﷺ ಅವರು ನಮ್ಮನ್ನು ನೋಡಿಬಿಟ್ಟರು ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ನೀವು ಭಯಪಡಬೇಡಿ, ಮಲಕ್’ಗಳು ತಮ್ಮ ರೆಕ್ಕೆಯಿಂದ ನಮ್ಮನ್ನು ಅಡಗಿಸುತ್ತಾರೆ ಎಂದು ಹೇಳಿದ ಕೂಡಲೇ, ಆ ವ್ಯಕ್ತಿ ಅಲ್ಲೇ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಲು ಕುಳಿತನು. ಅದನ್ನು ಕಂಡು ಪ್ರವಾದಿಯವರು ﷺ ಬಹುಶಃ ಆ ವ್ಯಕ್ತಿ ನಮ್ಮನ್ನು ನೋಡಿರುತಿದ್ದರೆ.? ಈ ರೀತಿ ಮೂತ್ರ ವಿಸರ್ಜನೆ ಮಾಡಲು ಕುಳಿತುಕೊಳ್ಳುತ್ತಿರಲಿಲ್ಲ ಎಂದು ಹೇಳಿದರು.

ಈ ಗುಹೆಯ ಪರಿಸ್ಥಿತಿಯ ಕುರಿತು ಖ್ಯಾತ ಮಹಾ ಕವಿ ‘ಇಮಾಮ್ ಬುಸೂರಿಯವರು ◌ؓ ವಿವರಿಸಿದ್ದು ಈ ರೀತಿಯಾಗಿದೆ’
“ಒಳ್ಳೆತನದ ಪ್ರತಿರೂಪಗಳು ಗುಹೆಯಲ್ಲಿ ಅವಿತಿದ್ದಾಗ
ಕುರುಡರಂತೆ ಅವರ ಮುಂಬಾಗದಲ್ಲಿ ಅತ್ತಿತ್ತ ಚಲಿಸುತ್ತಿದ್ದರು ವೈರಿಗಳು..
ಸಿದ್ದೀಖ್ ಹಾಗೂ ಸಿದ್ದೀಕ್’ರು ಆ ಗುಹೆಯ ಒಳಗಡೆ ಇದ್ದರೂ,
ಅವರು ಹೇಳಿದರಷ್ಟೇ ಅಲ್ಲಿ ಯಾರೂ ಇಲ್ಲವೆಂದು..
ಜನರಿದ್ದರೆ ಹೇಗೆ ಗುಹೆಯ ಮುಂಭಾಗದಲ್ಲಿ ಪಾರಿವಾಳ ಮೊಟ್ಟೆಯಿಟ್ಟು ಗೂಡು ಕಟ್ಟುತ್ತದೆ..
ಅಲ್ಲಾಹನ ಶ್ರೀರಕ್ಷೆ ಇದ್ದರೆ ಇನ್ಯಾಕೆ ಬೇಕು ಕವಚ, ಕೋಟೆಗಳೆಲ್ಲವು.?”

ಸಮುದ್ರ ತೀರದಿಂದ ಕೇವಲ ಏಳ್’ನೂರ ನಲ್ವತ್ತೆಂಟು ಮೀಟರ್ ದೂರದಲ್ಲೇ ಸ್ವಲ್ಪ ಎತ್ತರ ಭಾಗದಲ್ಲಿರುವ ಸೌರ್ ಗುಹೆಯಲ್ಲೇ ಎರಡು ದಿನಗಳ ಕಾಲ ಕಳೆದರು. ಇನ್ನೂ ಇಲ್ಲಿಂದ ಮದೀನಕ್ಕೆ ಹೊರಡಲು ಸಮಯಾಯಿತು ಎಂದು, ಕೆಲವೊಂದು ಸಿದ್ಧತೆಗಳನ್ನು ಮಾಡಲು ಆರಂಭಿಸಿದರು. ಮಕ್ಕಾದಿಂದ ಮದೀನಕ್ಕೆ ತಲುಪಲು, ಇರುವ ಕೆಲವೊಂದು ವಿಭಿನ್ನವಾದ, ನಿಗೂಢವಾದ ದಾರಿ ತಿಳಿದಿರುವ ವ್ಯಕ್ತಿಯ ಅಗತ್ಯವಿತ್ತು. ಹಾಗಾಗಿ ಬನೂದೈಲ್ ಜನಾಂಗದ, ಅಬ್ದುಲ್ಲಾಹಿಬಿನು ಉಖೈತ್’ರನ್ನು ದಾರಿ ತೋರಿಸುವ ಕೆಲಸಕ್ಕೆ ಕರೆದಿದ್ದರು. ಬಹು ದೈವ ವಿಶ್ವಾಸಿಯಾಗಿದ್ದರೂ, ನಂಬಿಕಸ್ಥರೂ, ಪರಿಣಿತ ದಾರಿ ತೋರಿಸುವ ವ್ಯಕ್ತಿಯೂ ಆಗಿದ್ದ ಆಸ್’ಬಿನ್ ವಾಯಿಲ್ ಅಸ್ಸಹ್’ಮಿಯವರೊಂದಿಗೆ ಈ ಮೊದಲೇ ಒಪ್ಪಂದ ಮಾಡಿಕೊಂಡಿದ್ದ ಕಾರಣ ಅವರನ್ನು ಕರೆಸಿಕೊಂಡರು. ಅವರಿಗೆ ಈ ಮೊದಲೇ ಎರಡು ಒಂಟೆಯನ್ನು ಕೂಲಿಯಾಗಿ ಕೊಟ್ಟು, ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಬರಲು ಹೇಳಿದ್ದ ಕಾರಣ ಮೂರನೇ ದಿನ ಅವರು ಆ ಗುಹೆಯ ಮುಂಭಾಗಕ್ಕೆ ಬಂದು ನಿಂತರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-144/365

ಪ್ರವಾದಿಯವರ ﷺ ಯಾತ್ರೆಯ ಬಗ್ಗೆ ಮತ್ತೊಮ್ಮೆ ಆಳವಾಗಿ ಗಮನಿಸೋಣ. ಪ್ರವಾದಿಯವರು ﷺ ಹಾಗೂ ಖದೀಜ ಬೀವಿಯವರು ◌ؓ ತಮ್ಮ ಜೀವನವನ್ನು ಜೊತೆಯಲ್ಲಿ ಕಳೆದಿದ್ದ ಮನೆಯಿಂದ, ಹಿಜ್’ರ ಒಂದನೇ ವರ್ಷ ಸಫರ್ ಇಪ್ಪತ್ತಾರು ಶುಕ್ರವಾರ ರಾತ್ರಿ ಪ್ರವಾದಿಯವರು ﷺ ಯಾತ್ರೆ ಹೊರಟರು. ಕ್ರಿಸ್ತ ಶಕ ಸುಮಾರು ಆರ್ನೂರ ಇಪ್ಪತ್ತೆರಡು ಸೆಪ್ಟೆಂಬರ್ ಎಂಟರಂದು ಹೊರಟಿದ್ದ ಯಾತ್ರೆ, ಸಂಚರಿಸಿ ನೇರವಾಗಿ ತಲುಪಿದ್ದು, ಪ್ರವಾದಿಯವರ ﷺ ದೊಡ್ಡಪ್ಪ ಅಬೂತ್ವಾಲಿಬರ ಮಗಳ ಮನೆಯ ಬಳಿಯಿರುವ, ಹಸ್’ವಿರ ಮಾರುಕಟ್ಟೆಗೆ ಆಗಿತ್ತು. ಇವತ್ತಿನ ಮಸ್ಜಿದುಲ್ ಹರಾಮಿನ ಅಬ್ದುಲ್ ಅಝೀಝ್ ದ್ವಾರದ ಬಳಿಯಿರುವ ಬಾಬುಲ್ ವಿದಾಅ್ ಇರುವ ಸ್ಥಳವಾಗಿತ್ತು ಅದು. ಅಲ್ಲಿಂದ ನೇರವಾಗಿ ಅಬೂಬಕ್ಕರ್’ರವರ ಮನೆಕಡೆ ಹೆಜ್ಜೆ ಹಾಕಿದರು. ನಂತರ ಅವರ ಮನೆ ಇದ್ದ ಸ್ಥಳದಲ್ಲಿ, ಮಸ್ಜಿದುಲ್ ಅಬೂಬಕ್ಕರ್ ◌ؓ ಎಂಬ ಹೆಸರಿನಲ್ಲಿ ಮಸ್ಜಿದ್ ನಿರ್ಮಿಸಲಾಗಿತ್ತು, ಆದರೆ ಈಗ ಅಲ್ಲಿ ‘ಅಬ್’ರಜ್ ಮಕ್ಕ’ ಎಂಬ ಹೆಸರಿನ ಮಕ್ಕಾ ಟವರ್ ನಿರ್ಮಿಸಲಾಗಿದೆ. ಅಲ್ಲಿಂದ ಮದೀನಕ್ಕೆ ಚಲಿಸಬೇಕಿದ್ದ ದಾರಿ ಇದ್ದದ್ದು, ಕುದಾಯ್ ಗುಡ್ಡದ ದಾರಿಯಿಂದ ಉತ್ತರ ದಿಕ್ಕಿನಲ್ಲಿ ಆಗಿತ್ತು, ಆದರೆ ಪ್ರವಾದಿಯವರು ﷺ ಹಾಗೂ ಸಿದ್ದೀಕ್’ರು ನೇರವಾಗಿ ವಿರುದ್ಧ ದಿಕ್ಕಿಗೆ ಅಂದರೆ ದಕ್ಷಿಣ ಭಾಗಕ್ಕೆ ಸಾವಿರದ ಐನೂರ್ ಮೀಟರ್ ನಡೆದು, ಸೌರ್ ಗುಹೆಯಿರುವ ಬೆಟ್ಟದ ಬಳಿ ತಲುಪಿದರು. ನಂತರ ಗುಹೆಯ ಒಳಗೆ ಹೋಗಿ, ಮೂರು ದಿನಗಳ ಕಾಲ ಅಲ್ಲೇ ಉಳಿದುಕೊಂಡರು. ಮೂರು ದಿನದ ನಂತರ ಮೊದಲೇ ನಿಶ್ಚಯಿಸಿದ ಹಾಗೆ, ಇಬ್’ನು ಉರೈಖಿತ್ ವಾಹನಗಳ ಜೊತೆಯಲ್ಲಿ ಆ ಗುಹೆಯ ಬಳಿ ಬಂದು ತಲುಪಿದರು.

ಸಫರ್ ಇಪ್ಪತೊಂಬತ್ತು, ಸೆಪ್ಟೆಂಬರ್ ಹದಿಮೂರು ಆದಿತ್ಯವಾರ ರಾತ್ರಿ, ಸೌರ್ ಗುಹೆಯಿಂದ ಆಮಿರ್ ಬಿನ್ ಫುಹೈರ’ರು ತೋರಿಸುತ್ತಿದ್ದ, ದಾರಿಯ ಸಹಾಯದಿಂದ, ಸಾಮಾನ್ಯವಾಗಿ ಜನರು ಸಂಚರಿಸುತ್ತಿದ್ದ ದಾರಿಯಿಂದ ವಿಭಿನ್ನವಾಗಿ, ಕೆಂಪು ಸಮುದ್ರದ ದಿಕ್ಕಿಗೆ ಯಾತ್ರೆ ಮುಂದುವರಿಸಿದರು. ಹೊರಡುದಕ್ಕೂ ಮುನ್ನ ಪ್ರವಾದಿಯವರು ﷺ ವಿಶೇಷವಾದ ಪ್ರಾರ್ಥನೆಯನ್ನು ಮಾಡಿದ್ದರು, ಅದರ ಸಾರಾಂಶವೂ ಈ ರೀತಿಯಾಗಿದೆ.

“ಶೂನ್ಯತೆಯಿಂದ ನನ್ನನ್ನು ಸೃಷ್ಟಿ ಮಾಡಿದ ಅಲ್ಲಾಹನೇ, ನಿನಗಾಗಿದೆ ಸರ್ವಸ್ತುತಿ. ನನ್ನ ಯಾತ್ರೆಯಲ್ಲಿ ನನಗೆ ಜೊತೆಗಾರನಾಗಿ ನಿಂತು, ನನ್ನ ಸಂಬಂಧಿಕರಿಗೆ ನೀನು ಕಾವಲಾಗಿ ನಿಲ್ಲಬೇಕು. ರಾತ್ರಿ, ಹಗಲಿನಲ್ಲಿ ಉಂಟಾಗುವ, ಈ ಭೌತಿಕ ಲೋಕದ ವಿಪತ್ತುಗಳಿಂದ ನೀನು ನಮ್ಮನ್ನು ಕಾಪಾಡಬೇಕು. ನನ್ನನ್ನು ನೀನು, ನಿನ್ನೊಂದಿಗೆ ವಿನಯತೆಯಿರುವ ಒಬ್ಬ ಸೇವಕನಾಗಿ ಮಾಡಿ, ನೀನು ನೀಡಿದ ಸವಲತ್ತುಗಳಲ್ಲಿ ಅನುಗ್ರಹ ನೀಡಿ ಧನ್ಯಗೊಳಿಸಬೇಕು ಪ್ರಭು. ಸಜ್ಜನರ ಸಾಲಿನಲ್ಲಿ ನನ್ನನ್ನು ಸೇರಿಸಿ, ನಿನ್ನ ಮೇಲಿದ್ದ ಪ್ರೀತಿಯನ್ನು ದುಪ್ಪಟ್ಟುಗೊಳಿಸು ಪ್ರಭು. ನೀನು ನನ್ನ ಹಾಗೂ, ನನ್ನ ಜೊತೆಯಿರುವ ಎಲ್ಲಾ ದುರ್ಬಲರ ರಕ್ಷರನೂ ನೀನೆ ಅಲ್ಲವೇ, ನಿನ್ನ ಕೋಪ ಹಾಗೂ ಶಿಕ್ಷೆ ಬಂದೆಸಗುವವರ ಸಾಲಿನಿಂದ, ನಿನ್ನ ಕರುಣೆಯನ್ನು ಸಾಕ್ಷಿಯಾಗಿಸಿ ನಿನ್ನಿಂದ ರಕ್ಷಣೆಯನ್ನು ವಿನಂತಿಸುತ್ತಿದ್ದೇವೆ ಪ್ರಭು. ನಿನ್ನ ಇಚ್ಛೆಯ ಪ್ರಕಾರವಲ್ಲವೇ ಆಕಾಶಭೂಮಿಗಳ ಸೃಷ್ಟಿಯಾದದ್ದು, ಕತ್ತಲು ಬೆಳಕಾಗಿ ಬದಲಾದದ್ದು, ನೀನೆಯಲ್ಲವೇ ಕಳೆದು ಹೋದವರ, ಇನ್ನು ಬರಲಿರುವವರ ಕಾರ್ಯಗಳನ್ನು ನಿಯಂತ್ರಣ ಮಾಡುತ್ತಿರುವವನು, ಯಾ ಅಲ್ಲಾಹ್ ನೀನೆ ನೀಡಿದ ಆರೋಗ್ಯ, ಅನುಗ್ರಹ ನಷ್ಟ ಹೊಂದದೆ ಇರಲು ನಿನ್ನಲ್ಲಿ ನಾನು ರಕ್ಷಣೆ ಕೇಳುತ್ತಿದ್ದೇನೆ. ವಿಪ್ಪತ್ತುಗಳು ಬಂದೆಸಗದೆ ಇರಲು, ನಿನ್ನ ಕೋಪಕ್ಕೆ ಗುರಿಯಾಗದೆ ಇರಲು, ಎಲ್ಲವೂ ನಿನ್ನ ಅನುಗ್ರಹ ಮಾತ್ರವಾಗಿದೆ ಪ್ರಭು.

ಮಕ್ಕಾದ ವಾಯುವ್ಯ ದಿಕ್ಕಿನಲ್ಲಿರುವ ಬುಶೈಮಾತ್ತ್ ಬೆಟ್ಟ, ವಾಹನದ ಬಲ ಭಾಗದಲ್ಲಿ ಕಾಣುತಿತ್ತು. ‘ವಾದೀ ಇಬ್ರಾಹಿಂ’ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಮಕ್ಕಾದ ಕಣಿವೆ ದಾಟುವವರೆಗೂ, ಇದೆ ರೀತಿಯಾಗಿತ್ತು ಯಾತ್ರೆ ಮುಂದುವರಿಯುತ್ತಿದ್ದದ್ದು. “ವಾದಿ ಉರ್’ನ” ಎಂಬ ಕಣಿವೆಯ ಬಳಿ ತಲುಪಿದಾಗ, ವಾಹನವು ಉತ್ತರ ದಿಕ್ಕಿಗೆ ತಿರುಗಿ, ಚಲಿಸಲು ಆರಂಭಿಸಿತು. ಈಗ ಉತ್ತರ ದಿಕ್ಕಿನಲ್ಲಿ ಉಮ್ಮಲ್ ಹುಶೈಮಿನ ತೋಟವಿತ್ತು. ಇದು ಖುಸಾಅ ಜನಾಂಗದ ಜನರು ಜೀವಿಸುತ್ತಿದ್ದ ಸ್ಥಳವಾಗಿತ್ತು. ಅಲ್ಲಿಂದ ‘ಮರ್ ಅಳ್ಳಹಿರಾನ್’ ತಲುಪುದಕ್ಕೂ ಮುಂಚೆಯೇ ದರ್’ಬಿಲ್ ಹಬ್ಬಿಲ್ ತಲುಪಿದರು. ಹಿಜ್’ರಾದ ಆರನೇ ವರ್ಷ ಈ ಸ್ಥಳದಲ್ಲಾಗಿತ್ತು, ಹುದೈಫಿಯ ಒಪ್ಪಂದ ನಡೆದದ್ದು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಈಗ ಹುಮೈಸಿ ಎಂದು ಅರಿಯಲ್ಪಡುವ ಊರಿನ ಬಳಿಯಿರುವ ಒಂದು ಪ್ರದೇಶವಾಗಿದೆ ಅದು. ಈ ಸ್ಥಳದಲ್ಲಾಗಿತ್ತು ನಂತರದ ದಿನಗಳಲ್ಲಿ ಹರಮಿನ ಗಡಿ ಗುರುತಿಸಲ್ಪಡುವ ಸೂಚನೆಗಳನ್ನು ನಿರ್ಮಿಸಿದ್ದು.

ನಂತರ ಮರ್’ರುಳ್ಳಹಿರಾನಿಂದ ‘ಅಲ್ ಮುರಾರ್’ನ ಕಡೆಗೆ ಮುಕಸ್ಸಿಲ್, ದಫ್ ಎಂಬ ಬೆಟ್ಟಗಳ ನಡುವಿನಿಂದ ಯಾತ್ರೆ ಮುಂದುವರೆಸಿದರು. ಅಲ್ ಮುರಾರ್ ಎಂಬ ಸ್ಥಳವು ನಂತರದ ದಿನಗಳಲ್ಲಿ ಅಲ್ ಫಜ್ಜುಲ್ ಕರೀಮಿ ಎಂಬ ಹೆಸರಿನಲ್ಲಿ ಕರಿಯಲ್ಪಟ್ಟಿತು. ಹುದೈಫಿಯಾದ ಸಮಯದಲ್ಲಿ ಪ್ರವಾದಿಯವರು ﷺ ಸಾವಿರದ ನಾನೂರು ಅನುಯಾಯಿಗಳೊಂದಿಗೆ ಉಂಮ್ರ ಯಾತ್ರೆ ಹೊರಟಿದ್ದು ಇದೇ ದಾರಿಯ ಮೂಲಕವಾಗಿತ್ತು.
ಸೌರ್ ಗುಹೆಯಿಂದ ಹೊರಟ ಮೊದಲನೇ ದಿನದ ಯಾತ್ರೆ ಮುಂದುವರಿಯುತ್ತಲೇ ಇತ್ತು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-145/365

ವಾದಿ ಮುರಾರ್’ನಿಂದ ನೇರವಾಗಿ “ಹರ್’ರತು ಳಜ್’ನಾ” ಅಥವಾ ಳಜ್’ನಾನ್ ಲಾವ ಟ್ರ್ಯಾಕಿನಿಂದ ಯಾತ್ರೆ ಮುಂದುವರಿಸಿದರು. ಇಲ್ಲಿ ಳಜ್’ನಾನ್ ಗುಡ್ಡ ಎಂದೂ ಈ ಪ್ರದೇಶಕ್ಕೆ ಕರೆಯಲಾಗುತ್ತದೆ, ಇಸ್’ರಾಅ್’ನ ದಿನದಂದು ರಾತ್ರಿ ಖುರೈಷಿ ಯಾತ್ರಿಕರ ಗುಂಪೊಂದನ್ನು ಇಲ್ಲಿ ಕಂಡದ್ದಾಗಿ ಖುರೈಷಿಗಳು ವಿವರಣೆ ಕೇಳಿದಾಗ ಪ್ರವಾದಿಯವರು ﷺ ಹೇಳಿದ್ದರು. ಅವತ್ತು ಅಲ್ಲಿದ್ದ ನೀರಿನ ಪಾತ್ರೆಯಿಂದ ಪ್ರವಾದಿಯವರು ﷺ ನೀರು ಕುಡಿದಿದ್ದ ವಿಷಯವನ್ನೂ ಹೇಳಿದ್ದರು. ಕಡಲ ತೀರದಿಂದ ಇನ್ನೂರ ನಲ್ವತ್ತು ಮೀಟರ್ ಎತ್ತರದಲ್ಲಿರುವ ಈ ಸ್ಥಳವು, ಮಕ್ಕಾದಿಂದ ಸುಮಾರು ಐವತ್ತು ಕಿಲೋಮೀಟರ್ ದೂರವಾಗಿದೆ ಇರುವುದು. ಲಾವಟ್ರ್ಯಾಕಿನ ಉದ್ದವೇ ಸುಮಾರು ಹತ್ತು ಮೀಟರ್ ಆಗಿತ್ತು.

ಅಲ್ಲಿಂದ ಅಲ್ ಸಗು ಕಣಿವೆಯ ಮೂಲಕ ಯಾತ್ರೆ ಮುಂದುವರಿಸಿದರು. ಇಲ್ಲಿಂದ ಸ್ವಲ್ಪ ದೂರ, ಪಶ್ಚಿಮ ದಿಕ್ಕಿನಲ್ಲಿ ಒಂದು ಸ್ಥಳವಿದೆ. ಅಲ್ಲಿರುವ ಅಗ್ನಿ ಬೆಟ್ಟದ ಮೇಲೆಯಾಗಿತ್ತು ಹಿಜ್’ರಾ ಆರರಲ್ಲಿ ಖಾಲಿದ್ ಬಿನ್ ವಲೀದ್’ರ ನಾಯಕತ್ವದಲ್ಲಿ ಸರಿ ಸುಮಾರು ಇನ್ನೂರರಷ್ಟು ಬರುವ ಅಶ್ವದಳದಿಂದ, ಪ್ರವಾದಿಯವರು ﷺ ಹಾಗೂ ಅವರ ಅನುಯಾಯಿಗಳನ್ನು ಎದುರಿಸಲು ಬಂದಿದ್ದು. ಪ್ರವಾದಿಯವರು ﷺ ತಮ್ಮ ಸಾವಿರದ ನಾನೂರು ಅನುಯಾಯಿಗಳ ಜೊತೆಯಲ್ಲಿ ಉಮ್ರ ಯಾತ್ರೆಗೆ ಹೊರಟಿದ್ದಾರೆ, ಎಂಬ ಮಾಹಿತಿ ಸಿಕ್ಕಿದಾಗ, ಮಕ್ಕಾದಿಂದ ಇನ್ನೂರರಷ್ಟು ಬರುವ ಅಶ್ವದಳದ ಜೊತೆಯಲ್ಲಿ ಖಾಲಿದ್, ಪ್ರವಾದಿಯವರನ್ನು ﷺ ಎದುರಿಸಲು ಬಂದಿದ್ದರು. ಆ ನಂತರವಾಗಿತ್ತು ಹುದೈಫಿಯಾಕ್ಕೆ ತಲುಪಿದಾಗ ಅವರು ಒಪ್ಪಂದ ಮಾಡಿಕೊಂಡದ್ದು. ಅಲ್ಲಿಂದ ವಾಪಸ್ಸು ಬಂದು ಪುನಃ ಇದೇ ಸ್ಥಳಕ್ಕೆ ತಲುಪಿದಾಗ ಆಗಿತ್ತು, ವಿಜಯದ ವಾರ್ತೆಯನ್ನು ತಿಳಿಸುವ, ಪವಿತ್ರ ಕುರ್’ಆನಿನ ನಲ್ವತ್ತೆಂಟನೆ ಅಧ್ಯಾಯವಾದ ಸುರಾ (ಅಧ್ಯಾಯ) ಫತ್’ಹ್ ಅವತರಿಸಿದ್ದು.

ಬರಾಅ್ ಬಿನ್ ಆಸಿಬ್’ರ ◌ؓ ತಂದೆ, ಅಬೂಬಕ್ಕರ್’ರಲ್ಲಿ ◌ؓ ನೀವು ಸೌರ್ ಗುಹೆಯಿಂದ ಹೊರಟ ನಂತರ ಏನು ಮಾಡಿದಿರಿ ಎಂದು ಕೇಳಿದಾಗ, ಅಬೂಬಕ್ಕರ್ ◌ؓ, ನಾವು ರಾತ್ರಿ ಅಲ್ಲಿಂದ ಹೊರಟು, ಮರು ದಿನ ಮಧ್ಯಾಹ್ನದ ವರೆಗೆ ಚಲಿಸುತ್ತಲೇ ಇದ್ದೆವು. ಬಿಸಿಲಿನ ಬೇಗೆ ತಡೆಯಲು ಆಗದೆ, ನೆರಳನ್ನು ಹುಡುಕುತ್ತಾ ಅಲ್ಲೇ ಇದ್ದ ಬಂಡೆಯ ಬಳಿ ತಲುಪಿದೆವು. ನಾನು ಬಂಡೆಯ ನೆರಳಿನ ಬಳಿ ಹೋಗಿ, ನನ್ನ ಕೈಯಲ್ಲಿದ್ದ ವಸ್ತುವನ್ನು ಅಲ್ಲೇ ಹಾಸಿ, ಪ್ರವಾದಿಯವರಲ್ಲಿ ﷺ ವಿಶ್ರಾಂತಿ ಪಡೆಯಲು ಹೇಳಿ, ನಾನು ಸುತ್ತಮುತ್ತಲು, ನಮ್ಮನ್ನು ಯಾರಾದರೂ ಹಿಂಬಾಲಿಸಿ ಬಂದಿದ್ದಾರ, ಎಂದು ನೋಡುತ್ತಾ ಕಾವಲು ಕಾಯುತ್ತಿದ್ದೆನು. ಅಷ್ಟೊತ್ತಿಗೆ ಒಬ್ಬ ದಾರಿಹೋಕ, ನಾವು ವಿಶ್ರಾಂತಿ ಪಡೆಯುತ್ತಿದ್ದ, ಬಂಡೆಯ ಬಳಿ ಬರುತಿದ್ದನು. ನಾನು ಅವರನ್ನು ನಿಲ್ಲಿಸಿ, ಎಲ್ಲಿಂದ ಬರುತಿದ್ದೀರ.? ಎಂದು ಕೇಳಿದಾಗ ಮಕ್ಕಾದಿಂದ ಎಂದು ಹೇಳಿದನು, ಅವರ ಹೆಸರನ್ನು ಕೇಳಿದಾಗ, ನನಗೆ ಅವರ ಬಗ್ಗೆ ತಿಳಿಯಿತು, ನಾನು ಅವರಲ್ಲಿ, ನಿಮ್ಮ ಮೇಕೆಯ ಕೆಚ್ಚಲಲ್ಲಿ ಹಾಲಿದ್ದರೆ ನಮಗೆ ಸ್ವಲ್ಪ ಕೊಡುತ್ತೀರ ಎಂದು ಕೇಳಿದಾಗ, ಅವರು ಅದಕ್ಕೆ ಸಮ್ಮತಿಸಿ, ಹಾಲು ಕರೆಯಲು ಆರಂಭಿಸಿದರು. ನಾನು ಅವರಲ್ಲಿ ಮೇಕೆಯ ಕೆಚ್ಚಲನ್ನು ಸ್ವಲ್ಪ ಶುಚಿಗೊಳಿಸಿ ಹಾಲು ಕರೆಯಿರಿ ಎಂದು ಹೇಳಿದೆನು. ಹಾಲು ಕರೆದ ನಂತರ, ಅವರಿಂದ ಹಾಲಿನ ಪಾತ್ರೆಯನ್ನು ತೆಗೆದುಕೊಂಡು, ಅದರ ಬಾಯಿಗೆ ಒಂದು ಬಟ್ಟೆಯನ್ನು ಕಟ್ಟಿ, ಹಾಲು ಕುಡಿಯಲು ಹಾಗೂ ಉಳುಅ್ ಮಾಡಲು ಇನ್ನೊಂದು ಪಾತ್ರೆಯ ಜೊತೆಯಲ್ಲಿ ಪ್ರವಾದಿಯವರ ﷺ ಬಳಿ ಬಂದಾಗ, ಅವರು ನಿದ್ರೆ ಮಾಡುತಿದ್ದರು. ಅವರನ್ನು ಎಬ್ಬಿಸಲು ಮನಸ್ಸು ಬರದೆ, ಅವರಿಗೆ ಎಚ್ಚರ ಆಗುವ ವರೆಗೂ ಕಾಯುತ್ತಾ ನಿಂತೆನು. ಅವರು ಎದ್ದ ನಂತರ, ಹಾಲಿಗೆ ಸರಿಯಾದ ಪ್ರಮಾಣದಲ್ಲಿ ನೀರು ಸೇರಿಸಿ ಪ್ರವಾದಿಯವರಿಗೆ ﷺ ಕುಡಿಯಲು ಕೊಟ್ಟೆನು. ನನಗೆ ತೃಪ್ತಿಯಾಗುವ ವರೆಗೂ ಅವರು ಹಾಲು ಕುಡಿಯುತ್ತಲೇ ಇದ್ದರು. ನಂತರ ನನ್ನಲ್ಲಿ ಇನ್ನು ಯಾತ್ರೆ ಮುಂದುವರೆಸೋಣವೇ ಎಂದು ಕೇಳಿದಾಗ, ಸರಿ ಎಂದು ಹೇಳಿ, ಅಲ್ಲಿಂದ ಹೊರಡಲು ಸಿದ್ಧವಾದೆವು ಎಂದು ಹೇಳಿದರು.

ಎರಡನೇ ದಿನದ ಯಾತ್ರೆ ಮುಂದುವರಿದು ಸೆಪ್ಟೆಂಬರ್ ಹದಿಮೂರರಂದು ಇಸ್’ಫಾನ್ ನಗರಕ್ಕೆ ತಲುಪಿತ್ತು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-146/365

ಜನಜಂಗುಳಿ ಇರುವ ಮಾರುಕಟ್ಟೆಯ ದಾರಿಯನ್ನು ತಪ್ಪಿಸಿ, ಬೇರೆ ದಾರಿಯಲ್ಲಿ ಚಲಿಸಲು ಆರಂಭಿಸಿದರು. ಹಾಗಾಗಿ, ಅಸ್’ಫಾನ್ ನಗರವನ್ನು ದಾಟಿ, ಗೌಲ ಕಣಿವೆಯಲ್ಲಿ ಯಾತ್ರೆ ಮುಂದುವರಿಸುತ್ತಾ ಹೋಗುತ್ತಿದ್ದರು. “ಅಮಜಿನ ಪಶ್ಚಿಮ ದಿಕ್ಕಿನ ಮೂಲಕ, ನಖಾರ ಅಗ್ನಿಬೆಟ್ಟದ ದಾರಿಯಲ್ಲಿ ಸಂಚರಿಸುತ್ತಾ, ಉವೈಜ ಕಣಿವೆಯ ಮೂಲಕ “ಜಬಲ್ ಅಲ್ ಅಖಲ್”ಅಥವಾ ಅಲ್ ಅಖಲ್ ಬೆಟ್ಟದ ಬಳಿ ತಲುಪಿದರು.

ನಂತರ ಕಾಲದಲ್ಲಿ, ಪವಿತ್ರ ಖುರ್’ಆನಿನ ನಾಲ್ಕನೇ ಅಧ್ಯಾಯ ಅನ್ನಿಸಾದ ನೂರ ಎರಡನೇ ಸೂಕ್ತ ಅವತರಿಸಿದ್ದು ಈ ಸ್ಥಳದಲ್ಲಾಗಿತ್ತು. ಯುದ್ಧದ ರೀತಿಯಲ್ಲಿರುವ ಗಂಭೀರ ಸಂದರ್ಭದಲ್ಲಿ ನಮಾಝ್ ಮಾಡುವುದರ ಕುರಿತಾಗಿತ್ತು ಆ ಸೂಕ್ತವು ಅವತರಿಸಿದ್ದು. ನಮಾಝ್’ನ್ನು “ಖಸ್’ರಾಗಿ” (ಸಂಕ್ಷಿಪ್ತವಾಗಿ) ಮಾಡುವುದರ ದೂರದ ಬಗ್ಗೆ ಉಲ್ಲೇಖಿಸಿದ್ದಾಗ, ಹದೀಸ್’ನಲ್ಲಿ ತಿಳಿಸಿದ ದೂರ ಮಕ್ಕಾದಿಂದ ಇಸ್’ಫಾನ್’ವರೆಗೆ ಇರುವ ದೂರ ಎಂದಾಗಿತ್ತು. ಪ್ರಸ್ತುತ ಪ್ರದೇಶದ ನಡುವಿನ ದೂರ, ನಲ್ವತೆಂಟು ಮೈಲಿಯಾಗಿದೆ. ಒಂದು ಹಾಶಿಮಿ ಮೈಲಿ ಅಂದರೆ, ಎರಡು ಮುಕ್ಕಾಲು ಕಿಲೋಮೀಟರ್ (2.75 ಕಿಲೋಮೀಟರ್) ಆಗುತ್ತೆ, ಎಂಬ ಅಭಿಪ್ರಾಯ ಪ್ರಕಾರ, ನೂರ ಮೂವತ್ತೆರಡು (132 ಕಿ.ಮೀ) ಕಿಲೋಮೀಟರ್ ಆಗುತ್ತದೆ.

ಅಲ್ಲಿಂದ ಮುಂದುವರಿದು, ಗೌಲ ಕಣಿವೆ ಹಾಗೂ ಗೌಲಾನ್ ಕಣಿವೆ ಸಂದಿಸುವ ಸ್ಥಳಕ್ಕೆ ಬಂದು ತಲುಪಿದರು. ಅಲ್ಲಿಂದ ಉವೈಜ ಕಣಿವೆಗೆ ಯಾತ್ರೆ ಮುಂದುವರಿಸಿದರು. ಆ ಸಂದರ್ಭದಲ್ಲಿ “ಅಖಲ್” ಬೆಟ್ಟವು ಪ್ರವಾದಿಯವರ ﷺ ಎಡ ಭಾಗಕ್ಕೆ ಬರುತಿತ್ತು. ಅಲ್ಲಿಂದ ಮುಂದೆ ಹೊಗಿ, ಜುಂದಾನ್ ಬೆಟ್ಟಕ್ಕೆ ಸಮಾನಂತರವಾಗಿ ಸಂಚರಿಸಿದರು. ನಂತರದ ಕಾಲದಲ್ಲಿ ಮತ್ತೊಮ್ಮೆ ಪ್ರವಾದಿಯವರು ﷺ ಈ ದಾರಿಯಲ್ಲಿ ಸಂಚರಿಸಿ ಬರುತ್ತಿದ್ದಾಗ, ತನ್ನ ಅನುಯಾಯಿಗಳಲ್ಲಿ, ಇದು ಜುಂದಾನ್ ಆಗಿದೆ, ನೀವು ಮುಂದಕ್ಕೆ ಹೋಗಿರಿ, ಮುಫ್’ರಿದ್’ಗಳು ಜಯಶಾಲಿಯಾಗಿದ್ದಾರೆ ಎಂದು ಹೇಳಿದರು. ಅಬೂಹುರೈರ ಹೇಳುವುದು ಕಾಣಬಹುದು, ನಾವು ಪ್ರವಾದಿಯವರಲ್ಲಿ ﷺ ಮುಫ್’ರಿದ್’ಗಳು ಅಂದರೆ ಯಾರೆಂದು.? ಕೇಳಿದಾಗ, ಪ್ರವಾದಿಯವರು ﷺ, ಅಲ್ಲಾಹನನ್ನು ಅಧಿಕವಾಗಿ ಸ್ಮರಿಸುವ ಸ್ತ್ರೀ ಪುರುಷರಾಗಿದ್ದಾರೆ ಮುಫ್’ರಿದ್’ಗಳು ಎಂದು ಹೇಳಿದರು.

ಯಾತ್ರೆ ಅಲ್ಲಿಂದಲೂ ಮುಂದುವರಿದು, ಅಮಜ್ ಗ್ರಾಮಕ್ಕೆ ತಲುಪಿತು. ಅಲ್ಲಿಂದ ಪಶ್ಚಿಮ ದಿಕ್ಕಿನಲ್ಲಿ ಇರುವ, ಬಕ್ಕಾವಿಯ್ಯ ಅಗ್ನಿಬೆಟ್ಟದ ಕಡೆಗೆ ಮುಂದೆ ಸಾಗಿದರು. ಅಲ್ಲೇ ಪಕ್ಕದಲ್ಲಿ ಎರಡು ಮಕ್ಕಳು ಆಟವಾಡುತ್ತಿದ್ದರು, ಅವರನ್ನು ಕಂಡು ಪ್ರವಾದಿಯವರು ﷺ, ಹಾಗೂ ಅವರ ಸಹಚರರು ಆ ಮಕ್ಕಳ ಕಡೆಗೆ ಧಾವಿಸಿ, ಅವರ ತಾಯಿ ಉಮ್ಮು ಮಅಬದ್’ರಲ್ಲಿ ಇಲ್ಲಿ, ಮಾರಾಟಕ್ಕೆ ಇಟ್ಟಿರುವ, ಹಾಲು ಅಥವಾ ಮಾಂಸ ಸಿಗಬಹುದೇ.? ಎಂದು ಕೇಳಿದಾಗ, ಆ ಮನೆಯೊಡತಿ ಇಲ್ಲ ಎಂದು ಹೇಳಿದರು. ಅದನ್ನು ಕೇಳಿ ಪ್ರವಾದಿಯವರಿಗೆ ﷺ ಬೆಸರವಾಗಿತ್ತು. ಅದನ್ನು ಅರ್ಥಮಾಡಿಕೊಂಡ ಉಮ್ಮು ಮಅಬದ್, ಇಲ್ಲಿ ಏನಾದರೂ ಇದ್ದಿದ್ದರೆ ನೀಡಲು ಯಾವುದೇ ಸಮಸ್ಯೆ ಇರಲಿಲ್ಲ, ಇಲ್ಲದ ಕಾರಣವಾಗಿತ್ತು ಇಲ್ಲ ಎಂದು ಹೇಳಿದ್ದು ಎಂದು ಹೇಳಿದರು. ಅಷ್ಟರಲ್ಲಿ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಮೇಕೆ ಪ್ರವಾದಿಯವರ ﷺ ಕಣ್ಣಿಗೆ ಬಿದ್ದಿತು, ಅದು ಯಾರ ಮೇಕೆ ಎಂದು ಉಮ್ಮು ಮಅಬದ್’ರಲ್ಲಿ ಕೇಳಿದಾಗ, ಅದು ನಮ್ಮ ಮೇಕೆಯ ಗುಂಪಿನಲ್ಲಿರುವ ಅತ್ಯಂತ ಬಲಹೀನವಾದ ಮೇಕೆ ಆಗಿದೆ. ನಮ್ಮ ಮನೆಯವರು ಅಬೂ ಮಅಬದ್ ಇತರ ಮೇಕೆಯ ಗುಂಪನ್ನು ಮೇಯಿಸಲು ಕೊಂಡೋಗಿದ್ದಾರೆ ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ, ಅದರ ಹಾಲು ಕರೆಯಬಹುದೇ ಎಂದು ಕೇಳಿದಾಗ, ಮನೆಯೊಡತಿ ಅದು ಹಾಲು ಕರೆಯುವ ಮೇಕೆ ಅಲ್ಲ ಎಂದು ಹೇಳಿದರು. ಆದರೂ ನಾವೊಮ್ಮೆ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದಾಗ, ಅದಕ್ಕೆ ಮನೆಯೊಡತಿ ಗಂಡು ಮೇಕೆ ತುಳಿದಿಲ್ಲ ಎಂದು ಹೇಳಿದರು. ಪರವಾಗಿಲ್ಲ ನಾವೊಮ್ಮೆ ಪ್ರಯತ್ನ ಮಾಡುತ್ತೇವೆ ಎಂದು ಪ್ರವಾದಿಯವರು ﷺ ಹೇಳಿದಾಗ, ಮನೆಯೊಡತಿ ಅದಕ್ಕೆ ಸಮ್ಮತಿ ನೀಡಿದರು. ಪ್ರವಾದಿಯವರು ﷺ ಆ ಬಲಹೀನ ಮೇಕೆಯ ಬಳಿ ಹೋಗಿ, ಅಲ್ಲಾಹನ ಹೆಸರನ್ನು ಉಚ್ಚರಿಸಿ, ಒಮ್ಮೆ ಮೇಕೆಯ ಕೆಚ್ಚಲಲ್ಲಿ ಕೈ ಆಡಿಸಿದರು. ಏನಾಶ್ಚರ್ಯ ಮೇಕೆಯ ಕೆಚ್ಚಲಲ್ಲಿ ಹಾಲು ತುಂಬಿ ಹೋಯಿತು. ಒಂದು ಪಾತ್ರೆಯಲ್ಲಿ ಹಾಲು ಕರೆದು, ಪ್ರವಾದಿಯವರು ﷺಸಮೇತ, ತಮ್ಮ ಸಹಚರರು ಕೂಡ ಹಾಲು ಕುಡಿದು ದಣಿವು ನೀಗಿಸಿಕೊಂಡರು. ನಂತರ ಮತ್ತೊಮ್ಮೆ ಹಾಲು ಕರೆದು ಆ ಪಾತ್ರೆ ತುಂಬಿದಾಗ, ಆ ಮನೆಯೊಡತಿಗೆ ಅದನ್ನು ಕೊಟ್ಟು ಅಲ್ಲಿಂದ ಹೊರಟು ಹೋದರು.

ಉಮ್ಮು ಮಅಬದ್ ಹೇಳಿದ ಮಾತನ್ನು ಅಬೂನುಐಂ’ರು ◌ؓ ಉಲ್ಲೇಖಿಸಿದ್ದು ಕಾಣಬಹುದು. ಅಂದು ಪ್ರವಾದಿಯವರು ﷺ ಹಾಲು ಕರೆದಿದ್ದ ಮೇಕೆ ನಮ್ಮ ಜೊತೆಯಲ್ಲೇ ಇತ್ತು. ಹಿಜ್’ರಾದ ಹದಿನೆಂಟನೇ ವರ್ಷ, ಉಮರ್’ರವರು ◌ؓ ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ, ಬರಗಾಲ ಉಂಟಾಗಿತ್ತು. ಮಳೆ ಬರದೆ ಎಲ್ಲಾ ಕಡೆಗಳಲ್ಲೂ, ಮರಗಿಡಗಳು ಸುಟ್ಟು ಹೋಗಿದ್ದವು. ಆ ಕಾರಣದಿಂದಲೇ ಆ ವರ್ಷವನ್ನು “ಆಮು ರಮಾದಃ” (ಕರಿದ ವರ್ಷ) ಎಂದು ಕರೆಯುತ್ತಿದ್ದರು. ಆ ಸಂದರ್ಭದಲ್ಲಿಯೂ ಕೂಡ ನಮ್ಮ ಈ ಮೇಕೆಯಲ್ಲಿ ಹಾಲು ತುಂಬಿತ್ತು. ಬೆಳಿಗ್ಗೆ ಹಾಗೂ ಸಂಜೆ ಕೂಡ ನಾವು ಹಾಲು ಕರೆಯುತ್ತಿದ್ದೆವು ಎಂದು. ಹಿಷಾಮ್ ಬಿನ್ ಹುಬೈಶ್ ಹೇಳುವುದು ಕಾಣಬಹುದು ನಾನು ಆ ಮೇಕೆಯನ್ನು ಕಂಡಿದ್ದೆನು ಎಂದು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّم

Mahabba Campaign Part-147/365

ಪ್ರವಾದಿಯವರು ﷺ ಅಲ್ಲಿಂದ ಹೊರಟ ತಕ್ಷಣವೇ ಅಬೂಮಅಬದ್ ಕೂಡ ತನ್ನ ಮೇಕೆಗಳ ಜೊತೆಯಲ್ಲಿ ಬಹಳ ದಣಿದು, ವಾಪಸು ಮನೆಗೆ ಬಂದಿದ್ದರು. ಮೇಯಿಸಲು ಕೊಂಡೋಗಿದ್ದ ಮೇಕೆಗಳು ಅಷ್ಟೊಂದು ಆರೋಗ್ಯದಾಯಕವೂ ಆಗಿರಲಿಲ್ಲ, ಯಾವುದೂ ಕೂಡ ಗರ್ಭಿಣಿಯೂ ಆಗಿರಲಿಲ್ಲ. ಮನೆಗೆ ಬಂದ ನಂತರ, ಪಾತ್ರೆಯಲ್ಲಿ ತುಂಬಿದ್ದ ಹಾಲನ್ನು ಕಂಡು ಆಶ್ಚರ್ಯ ಚಕಿತರಾಗಿದ್ದರು. ತನ್ನ ಪತ್ನಿ ಆತ್ವಿಕರಲ್ಲಿ, ಈ ಹಾಲು ಎಲ್ಲಿಂದ ಬಂತು.? ಎಂದು ಕೇಳಿದಾಗ, (ಉಮ್ಮು ಮಅಬದ್’ರ ನಿಜವಾದ ಹೆಸರು ಆತ್ವಿಖ ಬಿಂತ್ ಖಾಲಿದ್ ಎಂದಾಗಿತ್ತು, ಅವರು ಬನೂ ಖುಸಾಅ ಮನೆತನದ ಮಹಿಳೆಯಾಗಿದ್ದರು.) ಅವರಿಗೆ ಹೇಗೆ ಉತ್ತರಿಸಬೇಕೆಂದು ತಿಳಿಯದೆ ತಬ್ಬಿಬ್ಬಾದರು. ಆದರೂ ತನ್ನ ಮಾತನ್ನು ಆರಂಭಿಸಿ, ನಮ್ಮ ಮನೆಯ ಮುಂದಿನ ದಾರಿಯಲ್ಲಿ, ಬಹಳ ವಿಶೇಷವಾದ ವ್ಯಕ್ತಿಯೊಬ್ಬರು ಸಂಚರಿಸಿ ಬರುತ್ತಿದ್ದರು ಎಂದು ಹೇಳಿದಾಗ, ಅಬೂಮಅಬದ್ ಎಲ್ಲವನ್ನೂ ಸಂಪೂರ್ಣವಾಗಿ ವಿವರಿಸಿ ಕೊಡು ಎಂದು ಹೇಳಿದರು. ಉಮ್ಮುಮಅಬದ್ ಮಾತು ಮುಂದುವರಿಸುತ್ತಾ, ಅವರ ಮುಖದಲ್ಲಿ ತೇಜಸ್ಸು ತುಂಬಿ ತುಳುಕುತ್ತಿತ್ತು. ಆ ಮುಖಕ್ಕೆ ಹೋಲಿಕೆಯಾಗುವಂತಹ ಸುಂದರವಾದ ಶರೀರ, ಅಧಿಕವಾದ ದಪ್ಪವೂ ಇರಲಿಲ್ಲ. ಕಣ್ಣುಗಳು ಸುಂದರವಾಗಿ ಕಪ್ಪು ರೇಖೆಗಳನ್ನು ಎಳೆದು ಇಟ್ಟಂತಿತ್ತು. ಅಗಲವಾದ ಕಣ್ ರೆಪ್ಪೆಗಳಾಗಿತ್ತು, ಅವರು ಆಡುವ ಮಾತಿನಲ್ಲಿ ಬಹಳಷ್ಟು ಸ್ಪಷ್ಟತೆ ಇತ್ತು. ಉದ್ದನೆಯ ಕತ್ತು, ಅವರ ಕಣ್ಣಿನ ಹುಬ್ಬುಗಳು ಬಹಳ ಸುಂದರವಾಗಿದ್ದವು, ಅವುಗಳು ಒಟ್ಟಿಗೆ ಸೇರಿದ ರೀತಿಯಲ್ಲಿತ್ತು. ದಪ್ಪನೆಯ ಗಡ್ಡ, ಅವರು ಯೋಚಿಸುತ್ತಿರುವಾಗಲೂ ಏನೋ ಒಂದು ಗಂಭೀರತೆ, ತೇಜಸ್ಸು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅವರು ಮಾತು ಆರಂಭಿಸಿದರೆ ಹೊಳೆಯುವ ಮುತ್ತು ಮಣಿಗಳು ಒಂದೊಂದೇ ಉದುರುವ ಹಾಗಿತ್ತು. ಅಧಿಕ ಎತ್ತರವೂ ಇರದೆ, ಸಣ್ಣವರು ಆಗಿರದೆ, ಒಳ್ಳೆಯ ದೃಡಗಾತ್ರದ ಮೈಕಟ್ಟನ್ನು ಹೊಂದಿದ್ದರು. ಜೊತೆಯಲ್ಲಿದ್ದ ಇಬ್ಬರಿಗಿಂತ ಉತ್ತಮ ಸೌಂದರ್ಯವಿರುವವರು, ಗೌರವಿಸಲ್ಪಡುವವರು ಅವರೇ ಆಗಿದ್ದರು. ಅವರು ಮಾತು ಆರಂಭಿಸಿದರೆ ಜೊತೆಯಲ್ಲಿರುವವರು ಸುಮ್ಮನೆ ನಿಂತು ಕೇಳುತಿದ್ದರು. ಅವರಿಗೆ ಏನಾದರೂ ಆದೇಶ ಕೊಟ್ಟರೆ ತಕ್ಷಣವೇ ಅವರು ಅದನ್ನು ಪಾಲಿಸುತಿದ್ದರು. ವಯಸ್ಸಿನಲ್ಲಿ ಅವರಿಬ್ಬರೂ ಹಿರಿಯರಾಗಿದ್ದರೂ, ಆದೇಶವನ್ನು ಪಾಲಿಸುವುದಕ್ಕೆ ಯುವಕರಂತೆ ಬಹಳ ಉತ್ಸಾಹದಿಂದ ಮುಂಬರುತ್ತಿದ್ದರು. ಒಟ್ಟಾರೆ ಹೇಳುವುದಾದರೆ ಬಹಳ ಆಕರ್ಷಣೀಯ ಮಹಾ ವ್ಯಕ್ತಿತ್ವವಾಗಿತ್ತು ಅವರದ್ದು ಎಂದು ಹೇಳಿ ಮುಗಿಸಿದ್ದೆ ತಡ, ಅಬೂಮಅಬದ್ ಇವರೇ ಅವರು, ಖುರೈಷಿಗಳಲ್ಲಿ ಪ್ರತ್ಯಕ್ಷರಾದ ಮಾಹನ್ ವ್ಯಕ್ತಿ. ನನಗೂ ಆ ಮಹಾನ್ ವ್ಯಕ್ತಿಯನ್ನು ಭೇಟಿಯಾಗಲು ಸಾಧ್ಯವಾಗಿದ್ದರೆ ನಾನು ಕೂಡ ಅವರ ಜೊತೆಯಲ್ಲಿಯೇ ಸಂಚರಿಸುತಿದ್ದೆ ಎಂದು ಹೇಳಿದರು.

ಪ್ರವಾದಿಯವರು ﷺ ಮಕ್ಕಾದಿಂದ ಹೊರಟ ನಂತರ, ಅವರು ಎಲ್ಲಿಗೆ ಹೋಗಿರಬಹುದು ಎಂಬ ಸೂಚನೆಯೂ ಕೂಡ ಸಿಕ್ಕಿರಲಿಲ್ಲ. ಅಸ್’ಮಾಅ್’ರು ◌ؓ ಹೇಳುವುದು ಕಾಣಬಹುದು, ನಮ್ಮ ತಂದೆ ಹಾಗೂ ಪ್ರವಾದಿಯವರು ﷺ ಹೊರಟ ನಂತರ, ಖುರೈಷಿಗಳ ಗಣ್ಯ ವ್ಯಕ್ತಿಗಳು ನಮ್ಮ ಮನೆ ಬಳಿ ಬಂದಿದ್ದರು. ಅವರ ಜೊತೆಯಲ್ಲಿದ್ದ, ಅಬೂಜಹಲ್ ನಿನ್ನ ತಂದೆ ಎಲ್ಲಿ ಎಂದು ಕೇಳಿದಾಗ, ನನಗೆ ಗೊತ್ತಿಲ್ಲ ಎಂದು ಹೇಳಿದನು. ಅದಕ್ಕೆ ದುಷ್ಟನಾದ ಅವನು, ನನ್ನ ಮುಖಕ್ಕೆ ಹೊಡೆದನು. ಏಟು ಬಹಳ ಬಲವಾಗಿ ಬಿದ್ದಿದ್ದರಿಂದ ಕಿವಿಯೋಲೆ ಮುರಿದು ಹೋಗಿತ್ತು. ಸೌರ್ ಗುಹೆಯಿಂದ ಹೊರಟ ನಂತರ ಮೂರು ದಿನಗಳ ಕಾಲ ನಮಗೂ ಕೂಡ ಯಾವುದೇ ಸುಳಿವು ಸಿಕ್ಕಿರಲಿಲ್ಲ, ಹೀಗಿರುವಾಗ ಒಂದು ಅಶರೀರವಾಣಿ ಕೇಳಲು ಸಾಧ್ಯವಾಯಿತು. ಮಕ್ಕಾದ ಎತ್ತದ ಪ್ರದೇಶದಿಂದ ಕೇಳಿ ಬರುತ್ತಿದ್ದ ಧ್ವನಿಯು, ಒಂದು ಜಿನ್ನ್’ನ ಧ್ವನಿಯಾಗಿತ್ತು, ಆ ಧ್ವನಿಯು ಎಲ್ಲಾ ಮನುಷ್ಯರಿಗೂ ಕೇಳುವಂತಿತ್ತು.

“ಜಝಲ್ಲಾಹು ರಬ್ಬುನ್ನಾಸಿ ಖೈರ ಜಝಾಯಿಹಿ
ರಫೀಖೈನಿ ಹಲ್ಲಾ ಖೈಮತ್ತೈ ಉಮ್ಮಿ ಮಅಬದೀ”

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-148/365

ಕವಿತೆಯ ಸಾರಾಂಶವು ಈ ರೀತಿಯಾಗಿದೆ.

“ಉಮ್ಮು ಮಅಬದ್’ರ ಗುಡಿಸಲಿಗೆ ತಲುಪಿದ ಆತ್ಮೀಯ ಮಿತ್ರರಿಬ್ಬರಿಗೂ, ನಿನ್ನ ಅನುಗ್ರಹವನ್ನು ವರ್ಷಿಸು ಅಲ್ಲಾಹನೇ.

ಒಳಿತಿನಿಂದ ಧರ್ಮದ ವಾಹಕರಾಗಿ, ಮುತ್ತು ಮುಹಮ್ಮದ್’ರ ﷺ ಮಿತ್ರರಾರದವರು ಬಹಳಷ್ಟು ಭಾಗ್ಯವನ್ನು ಪಡೆದು ಕೊಂಡರು.

ಅರ್ಥವಿಲ್ಲದ ಕೆಲಸವನ್ನು ಮಾಡುತಿದ್ದ ಕುಸೈ, ನಿನಗೆ ತಿಳಿದಿರಲಿ ನಿನ್ನ ಎಲ್ಲಾ ಚಲವಲನಗಳ ಬಗ್ಗೆ ತಿಳಿದಿರುವ ಅಲ್ಲಾಹನಿಗೆ ಅದು ಇಷ್ಟವಿಲ್ಲ ಎಂದು.

ಕೇಳಿ ನೋಡು ತಂಗಿಯಲ್ಲಿ, ಮೇಕೆಯ ಕಥೆ ಏನೆಂದು.? ಪಾತ್ರದಲ್ಲಿರುವುದು ಏನೆಂದು.? ಬಹುಶಃ ಮೇಕೆ ತಾನೇ ಎಲ್ಲವನ್ನೂ ವಿವರಿಸಿ ಕೊಡಲೂಬಹುದು.

ಕೆಚ್ಚಲಲ್ಲಿ ಹಾಲಿಲ್ಲದ ಮೇಕೆಯನ್ನು ಕೇಳಿದಾಗ, ಬಲಹೀನ ಮೇಕೆಯನ್ನು ನೀಡಿದರು ಅವರು. ಆದರೆ ಪಾತ್ರೆಯ ತುಂಬಾ ಹಾಲು ತುಂಬಿ, ಮನ ಮೆಚ್ಚಿದಂತೆ ಕುಡಿದು ಸಂತಸ ಪಟ್ಟರು ಇವರು.

ಹಿಂತಿರುಗಿ ಹೋಗುವಾಗ ಅವಳಿಗೂ ಕೂಡ ಕೊಟ್ಟರು ಕ್ಷೀರವನ್ನು,
ಪಾತ್ರೆಯಲ್ಲಿ ತುಂಬಿದ್ದ ಹಾಲು ಮಾತ್ರವಲ್ಲದೆ, ಎಂದಿಗೂ ಅಳಿಸಿ ಹೋಗದ ಸಮೃದ್ಧಿಯನ್ನೂ.

ಉಮ್ಮು ಮಅಬದ್’ರ ಗುಡುಸಲಿಂದ ಹೊರಟು ಖುದೈದ್ ಕಣಿವೆಯ ಮೂಲಕ ವಾಹನ ಚಲಿಸಲು ಆರಂಭಿಸಿತು. ಸುಮಾರು ನೂರೈವತ್ತು ಕಿಲೋಮೀಟರ್ ವಿಸ್ತಾರದಲ್ಲಿ ಕೆಂಪು ಸಮುದ್ರದ ವರೆಗೆ ವ್ಯಾಪಿಸಿರುವ ವಿಶಾಲವಾದ ಕಣಿವೆಯಾಗಿದೆ ಖುದೈದ್ ಕಣಿವೆ. ಈ ಕಣಿವೆಯ ಉತ್ತರ ದಿಕ್ಕಿನಲ್ಲಾಗಿದೆ ಅಲ್ ಮುಶಲ್ಲಲ್ ಲಾವಾ ಮಾರ್ಗದ ಗಡಿ ಇರುವುದು.

ಅಬೂಬಕ್ಕರ್’ರವರು ಹೇಳಿದ ಮಾತನ್ನು ಇಮಾಮ್ ಬೈಹಖಿ ◌ؓ ಉಲಿಖಿಸಿದ್ದು ಈ ರೀತಿಯಾಗಿದೆ. ನಾನು ಮತ್ತು ಪ್ರವಾದಿಯವರು ﷺ ಮಕ್ಕಾದಿಂದ ಹೊರಟು, ಒಂದು ಅರಬಿ ಗ್ರಾಮದ ಬಳಿ ತಲುಪಿದೆವು. ಅಲ್ಲೇ ಪಕ್ಕದಲ್ಲಿದ್ದ ಒಂದು ಸಣ್ಣ ಕುಡಿಸಲನ್ನು ಕಂಡು ಆ ಕಡೆ ಧಾವಿಸಿ, ಅಲ್ಲಿ ನೋಡಿದಾಗ ಅಲ್ಲಿ ಒಬ್ಬರು ಮಹಿಳೆ ಮಾತ್ರ ಇದ್ದರು. ಅವರು ನಮ್ಮಲ್ಲಿ ನೀವು ಉಳಿದುಕೊಳ್ಳಲು ಇಚ್ಛಿಸುದಾದರೆ, ಗ್ರಾಮದ ಮುಖ್ಯಸ್ಥರನ್ನು ಭೇಟಿಯಾಗಬೇಕು ಎಂದು ಹೇಳಿದರು. ನಾವು ಏನು ಉತ್ತರಿಸಿದೆ ಸುಮ್ಮನೆ ನಿಂತಿದ್ದೆವು. ಅಷ್ಟೊತ್ತಿಗೆ ಅವಳ ಮಗ ಹಿತ್ತಲ ಕಡೆಯಿಂದ ಮನೆಯ ಒಳಗೆ ಬಂದನು. ಅವಳು ತನ್ನ ಮಗನನ್ನು ಕರೆದು, ಒಂದು ಮೇಕೆ ಹಾಗೂ ಕತ್ತಿಯನ್ನು ಕೊಟ್ಟು, ನಮಗೆ ನೀಡಲು ಹೇಳಿ, ನಮ್ಮಲ್ಲಿ ಆಹಾರ ತಯಾರಿಸಿಕೊಳ್ಳಲು ಹೇಳಿದಳು. ಅವಳ ಮಗ ಬಂದು ಅದೇ ರೀತಿ ಹೇಳಿದಾಗ, ಪ್ರವಾದಿಯವರು ﷺ ಮಗನಲ್ಲಿ ಕತ್ತಿಯನ್ನು ಪಕ್ಕದಲ್ಲಿ ಇಟ್ಟು, ಹಾಲು ಕರೆಯಲು ಪಾತ್ರೆ ತರಲು ಹೇಳಿದರು. ನಂತರ ಪ್ರವಾದಿಯವರು ﷺ ಮೇಕೆಯ ಕೆಚ್ಚಲನ್ನು ಒಮ್ಮೆ ಸವರಿ, ಹಾಲು ಕರೆಯಲು ಆರಂಭಿಸಿದರು. ಪಾತ್ರೆಯಲು ಹಾಲು ತುಂಬಿ ತುಳುಕುತ್ತಿತ್ತು, ಅದನ್ನು ಆ ಮನೆಯ ಒಡತಿಗೆ ಕೊಟ್ಟು ಇನ್ನೊಂದು ಪಾತ್ರೆ ತರಲು ಹೇಳಿ, ಅದರಲ್ಲಿ ಹಾಲು ಕರೆದು ನನಗೆ ಕುಡಿಯಲು ಕೊಟ್ಟರು. ನಂತರ ಇನ್ನೊಂದು ಪಾತ್ರೆಯಲ್ಲಿ ಹಾಲು ಕರೆದು ಪ್ರವಾದಿಯವರು ﷺ ಕುಡಿದರು.

ಪ್ರವಾದಿಯವರು ﷺ ಎರಡು ದಿನಗಳ ಕಾಲ ಅಲ್ಲೇ ವಿಶ್ರಾಂತಿ ಪಡೆದು ಅಲ್ಲಿಂದ ಹೊರಟು ಮುಂದೆ ಸಾಗಿದರು. ಆ ಮಹಿಳೆಯು ಪ್ರವಾದಿಯವರನ್ನು ﷺ ಮುಬಾರಕ್ (ಅನುಗ್ರಹಿತ ವ್ಯಕ್ತಿ) ಕರೆಯುತ್ತಿದ್ದಳು. ದಿನಗಳು ಕಳೆದಂತೆ ಅವಳ ಮೇಕೆಗಳು ಇನ್ನಷ್ಟು ಅಭಿವೃದ್ಧಿಯಾಗ ತೊಡಗಿತು. ಕೆಲವು ದಿನಗಳ ನಂತರ ಆ ಮಹಿಳೆ ಹಾಗೂ ಅವಳ ಮಗ, ತಮ್ಮ ಮೇಕೆಗಳನ್ನು ಮೇಯಿಸುತ್ತಾ ಮದೀನಕ್ಕೆ ತಲುಪಿದರು. ಅಲ್ಲಿ ಕಾಕತಾಳೀಯ ಎಂಬಂತೆ ಅಬೂಬಕ್ಕರ್’ನ್ನು ◌ؓ ಕಾಣಲು ಸಾಧ್ಯವಾಯಿತು. ಮಗನನ್ನು ಕಂಡಾಗ ಸಿದ್ದೀಕ್’ರಿಗೂ ◌ؓ ಅವರ ಪರಿಚಯ ಸಿಕ್ಕಿತು. ಮಗ ತನ್ನ ತಾಯಿಯ ಬಳಿ ಹೋಗಿ, ಇವರು ಆ ಮುಬಾರಕ್ ವ್ಯಕ್ತಿಯ ಜೊತೆಯಲ್ಲಿದವರು ಅಲ್ಲವೇ ಎಂದು ಹೇಳಿದಾಗ, ಆ ಮಹಿಳೆಗೂ ಕೂಡ ಸಿದ್ದೀಕ್’ರ ◌ؓ ಪರಿಚಯ ಸಿಕ್ಕಿತು. ಅವಳು ಸಿದ್ದೀಕ್’ರಲ್ಲಿ ◌ؓ ಅವತ್ತು ನಿಮ್ಮ ಜೊತೆಯಲ್ಲಿ ಬಂದಿದ್ದ ಆ ವ್ಯಕ್ತಿ ಅವರು ಯಾರು ಎಂದು ಕೇಳಿದಾಗ.? ಅಬೂಬಕ್ಕರ್’ರು ನಿಜವಾಗಿಯೂ ನಿಮಗೆ ಅವರು ಯಾರೆಂದು ಗೊತ್ತಿಲ್ಲವೇ.? ಎಂದು ಕೇಳಿದರು. ಅದಕ್ಕೆ ಅವರು ಇಲ್ಲ ಎಂದು ಹೇಳಿದಾಗ, ಸಿದ್ದೀಕ್’ರು ◌ؓ ಅವರೇ ನಮ್ಮ ಪ್ರವಾದಿಯವರು ﷺ ಆಗಿರುತ್ತಾರೆ ಎಂದು ಹೇಳಿದರು. ನಮಗೆ ಅವರನ್ನು ಭೇಟಿಯಾಗಬಹುದೇ ಎಂದು ಅವರು ಕೇಳಿದಾಗ, ಸಿದ್ದೀಕ್’ರು ಅವರನ್ನು ಪ್ರವಾದಿಯವರ ﷺ ಬಳಿ ಕರೆದುಕೊಂಡು ಹೋದರು. ಅವರಿಬ್ಬರು ತಮ್ಮ ಜೊತೆಯಲ್ಲಿದ್ದ, ಸಣ್ಣ ಪುಟ್ಟ ವಸ್ತುಗಳನ್ನು ಪ್ರವಾದಿಯವರಿಗೆ ﷺ ಉಡುಗೊರೆಯಾಗಿ ಕೊಟ್ಟಾಗ, ಪ್ರವಾದಿಯವರು ﷺ ಕೂಡ ಅವರಿಗೆ ವಸ್ತ್ರಗಳು ಹಾಗೂ ಇತರ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು. ಅಬೂಬಕ್ಕರ್ ﷺ ಹೇಳುವುದು ಕಾಣಬಹುದು, ಅವರಿಬ್ಬರು ಇಸ್ಲಾಂ ಸ್ವೀಕರಿಸಿದರು ಎಂಬುದನ್ನು ಬಿಟ್ಟರೆ, ಅವರ ಬಗ್ಗೆ ನಂತರ ಬೇರೆ ಯಾವ ಸುಳಿವು ಕೂಡ ಸಿಕ್ಕಿರಲಿಲ್ಲ.

ಉಮ್ಮು ಮಅಬದ್’ರ ಘಟನೆ ಹಾಗೂ ಈ ಘಟನೆಯು ಮೇಲ್ನೋಟಕ್ಕೆ ಪರಸ್ಪರ ಸಂಬಂಧವಿರುವ ಹಾಗೆ ಕಾಣುವುದರಿಂದ ಈ ಎರಡು ಘಟನೆಯು ಒಂದೇ ಆಗಿದೆ ಎಂದು ಇಮಾಮ್ ಬೈಹಖಿ ◌ؓ ಹಾಗೂ ಇಬ್’ನು ಇಸ್’ಹಾಖ್’ರು ಅಭಿಪ್ರಾಯ ಪಟ್ಟಿರುವುದು ಕಾಣಬಹುದು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-149/365

ಖುರೈಷಿಗಳು ಪ್ರವಾದಿಯವರ ﷺ ಹುಡುಕಾಟವನ್ನು ಇನ್ನಷ್ಟು ಬಿಗಿಗೊಳಿಸಿದರು. ಪ್ರವಾದಿಯವರನ್ನು ﷺ ಹಾಗೂ ಸಿದ್ದೀಕ್’ರನ್ನು ಹಿಡಿದು ಕೊಟ್ಟವರಿಗೆ ಅಥವಾ ಅವರನ್ನು ಕೊಂದವರಿಗೆ ನೂರು ಒಂಟೆಯನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಘೋಷಣೆಯನ್ನು ಮಾಡಿದರು. ಅದರೊಂದಿಗೆ ನಾಲ್ಕು ದಿಕ್ಕುಗಳಿಂದಲೂ ಹುಡುಕಾಟ ಅಧಿಕವಾಯಿತು. ಅದರ ನಡುವೆ, ಒಂದು ಗುಂಪು ಉಮ್ಮು ಮಅಬದ್’ರ ಮನೆಗೂ ಬಂದು ತಲುಪಿದರು. ಅವರು ಉಮ್ಮು ಮಅಬದ್’ರಲ್ಲಿ, ಪ್ರವಾದಿಯವರ ﷺ ವಿಶೇಷತೆಗಳನ್ನು ತಿಳಿಸಿ, ಮುಹಮ್ಮದ್ ﷺ ಎಂಬ ವ್ಯಕ್ತಿ ಈ ದಾರಿಯಲ್ಲಿ ಬಂದಿದ್ದಾರ.? ಎಂದು ಕೇಳಿದಾಗ, ಉಮ್ಮು ಮಅಬದ್ ಅದು ಯಾವುದು ನನಗೆ ಗೊತ್ತಿಲ್ಲ, ಕೆಚ್ಚಲಲ್ಲಿ ಹಾಲಿಲ್ಲದ ಮೇಕೆಯಲ್ಲಿ, ಹಾಲು ಕರೆದ ವ್ಯಕ್ತಿಯೊಬ್ಬರು ಬಂದಿದ್ದರು ಎಂದು ಹೇಳಿದಾಗ. ಅವರೇ ನಾವು ಹುಡುಕುತ್ತಿರುವ ವ್ಯಕ್ತಿ ಎಂದು ಖುರೈಷಿಗಳು ಹೇಳಿದರು.

ಹೀಗಿರುವಾಗ ಖುದೈದ್ ಎಂಬ ಸ್ಥಳದಲ್ಲಿ, ಕಿನಾನ ಜನಾಂಗದ ಬನೂ ಮುದ್’ಲಜ್’ಗಾರನಾದ ಸುರಾಕತ್ ಬಿನ್ ಮಾಲಿಕ್’ರು ಒಂದು ಸಭೆ ನಡೆಸುತ್ತಿದ್ದರು. ಪರಿಣತ ಕುದುರೆ ಸವಾರಿಯೂ, ಮರುಭೂಮಿಯ ದಾರಿಯ ಬಗ್ಗೆ ಒಳ್ಳೆಯ ಜ್ಞಾನವೂ ಇರುವ ವ್ಯಕ್ತಿಯಾಗಿದ್ದ, ಅವರಲ್ಲಿ ಖುರೈಷಿಯೊಬ್ಬನು ಬಂದು, ಈ ದಾರಿಯಲ್ಲಿ ಯಾರಾದರೂ ಹೋಗಿದ್ದಾರ.? ಮೂರು, ನಾಲ್ಕು ಜನ ಒಟ್ಟಿಗೆ ಸಂಚರಿಸಿದ್ದು ನೋಡಿದ್ದೀರಾ.? ಅದು ಮುಹಮ್ಮದ್ ಹಾಗೂ ಅವರ ಸಹಚರರು ಆಗಿದ್ದರು, ಅವರು ಯಾತ್ರೆ ಮಾಡಿದ್ದು ನೋಡಿದ್ದೀರಾ.? ಎಂದು ಕೇಳಿದಾಗ, ಸುರಾಖರಿಗೆ ಅದು ಅವರೇ ಎಂದು ಅರ್ಥವಾಗಿದ್ದರೂ, ಅವರು ಪ್ರಶ್ನೆ ಕೇಳಿದ ವ್ಯಕ್ತಿಯಲ್ಲಿ ಸನ್ನೆಯಲ್ಲಿ ಸುಮ್ಮನಿರಲು ಹೇಳಿ, ಅದು ಅವರಲ್ಲ, ಬೇರೆ ಕೆಲವು ವ್ಯಕ್ತಿಗಳು ಅವರ ಕಳೆದು ಹೋದ ಒಂಟೆಯನ್ನು ಹುಡುಕುತ್ತಾ ಹೋಗುತ್ತಿದ್ದರು ಎಂದು ಹೇಳಿದರು. ಆ ಸಮಯದಲ್ಲಿ ಸುರಾಖರ ಮನಸ್ಸಿನಲ್ಲಿ ಯಾರಿಗೂ ತಿಳಿಯದೆ, ನಾನೇ ಅವರನ್ನು ಹುಡುಕಿ ನೂರು ಒಂಟೆಯನ್ನು ನಾನೇ ಪಡೆಯಬೇಕೆಂಬ ದುರಾಸೆ ಉಂಟಾಗಿತ್ತು.

ಹಾಗಾಗಿ ಯಾರಿಗೂ ತಿಳಿಯದ ಹಾಗೆ ಮೆಲ್ಲನೆ ಕುದುರೆಯನ್ನು ಆ ಕಣಿವೆಯಿಂದ ಹೊರಗೆ ಹೋಗಲು, ಸುರಾಖ ತನ್ನ ಸೇವಕನಿಗೆ ಹೇಳಿದರು. ಸ್ವಲ್ಪ ಸಮಯದ ನಂತರ ಸುರಾಖ ರಹಸ್ಯವಾಗಿ ಸಭೆಯಿಂದ ಹೊರಗೆ ಬಂದು, ನೇರವಾಗಿ ಮನೆಗೆ ಹೋಗಿ, ತನ್ನ ಈಟಿ ಹಾಗೂ ಇತರ ಆಯುಧಗಳನ್ನು ತೆಗೆದು, ಮನೆಯಿಂದ ಹೊರಗೆ ಬಂದು, ಕುದುರೆ ಹತ್ತಿ ಅಲ್ಲಿಂದ ಹೊರಟರು. ಅತೀ ವೇಗವಾಗಿ ಪ್ರವಾದಿಯವರನ್ನು ﷺ ಬೆನ್ನಟ್ಟಿ ಹೋಗಿ, ಅವರ ನೆರಳು ಕಾಣುವಷ್ಟು ದೂರಕ್ಕೆ ತಲುಪಿದರು. ಅಷ್ಟರಲ್ಲೇ ಸುರಾಖ ತನ್ನ ಬತ್ತಳಿಕೆಯಿಂದ ಬಾಣಗಳನ್ನು ತೆಗೆದು ಶಕುನ ಪರೀಕ್ಷಿಸಲು ಆರಂಭಿಸಿದರು.
ಅರಬಿಗಳ ನಡುವೆ ಒಂದು ಸಂಪ್ರದಾಯವಿತ್ತು ಅವರು ತಮ್ಮ ಶಕುನ ಪರೀಕ್ಷೆ ಮಾಡಲೆಂದು ಮೂರು ಬಾಣಗಳಲ್ಲಿ, ಒಂದರಲ್ಲಿ ಬೇಕು ಎಂದು, ಇನ್ನೊಂದರಲ್ಲಿ ಬೇಡ ಎಂದು, ಮೂರನೇ ಬಾಣವನ್ನು ಏನು ಬರೆಯದೆ ಬತ್ತಳಿಕೆಯಲ್ಲಿ ಇಡುತ್ತಿದ್ದರು. ಶಕುನ ಪರೀಕ್ಷೆ ಮಾಡಿದಾಗ ಬೇಕು ಅಂತ ಬಂದರೆ ಶಕುನ ಚೆನ್ನಾಗಿದೆ ಎಂದು ಅರ್ಥ, ಬೇಡ ಎಂಬ ಶಕುನ ಬಂದರೆ ಶಕುನ ಚೆನ್ನಾಗಿಲ್ಲ ಎಂದು ಅರ್ಥ. ಏನು ಬರೆಯದ ಬಾಣ ಸಿಕ್ಕರೆ ಮತ್ತೊಮ್ಮೆ ಶಕುನ ಪರೀಕ್ಷೆ ಮಾಡುತಿದ್ದರು.

ಸುರಾಖ ಪರೀಕ್ಷೆ ಮಾಡಿದಾಗ, ಅವರಿಗೆ ತೊಂದರೆ ನೀಡಬೇಡ ಎಂಬ ಅರ್ಥದಲ್ಲಿ ಬೇಡ ಎಂಬ ಬಾಣ ಸಿಕ್ಕರೂ, ನೂರು ಒಂಟೆಯ ದೂರಾಸೆಯು ಅದನ್ನು ಅವರು ಪರಿಗಣಿಸದೆ ಮುಂದುವರಿಯಲು ಪ್ರೇರೇಪಿಸಿತು. ಹಾಗಾಗಿ ಸುರಾಖ ಹೇಳುವುದು ಕಾಣಬಹುದು, ನಾನು ಶಕುನವನ್ನು ಅವಗಣಿಸಿ ಮುಂದಕ್ಕೆ ಹೋದೆನು, ಪುನಃ ನನಗೆ ಪ್ರವಾದಿಯವರ ﷺ ಹಾಗೂ
ಅಬೂಬಕ್ಕರ್’ರ ◌ؓ ನೆರಳು ಕಾಣಲು ಆರಂಭಿಸಿತು. ತಕ್ಷಣವೇ ನನ್ನ ಕುದುರೆಯ ಕಾಲು ಮಣ್ಣಿನಲ್ಲಿ ಕುಸಿಯಲು ಆರಂಭಿಸಿತು. ನಾನು ಕೆಳಗಿಳಿದು ಕುಸಿದಿದ್ದ ಕಾಲನ್ನು ಮೇಲಕ್ಕೆ ಎತ್ತಿ, ಪುನಃ ಶಕುನವನ್ನು ಅವಗಣಿಸಿ ಅವರನ್ನು ಹಿಂಬಾಲಿಸಿ ಪ್ರವಾದಿಯವರ ﷺ ಕುದುರೆಯ ಬಳಿ ತಲುಪಿದೆನು. ಸಿದ್ದೀಕ್’ರು ◌ؓ ನನ್ನನ್ನು ಗಮನಿಸುತ್ತಲೇ ಇದ್ದರು. ಪ್ರವಾದಿಯವರು ﷺ ಇಂಪಾದ ಧ್ವನಿಯಲ್ಲಿ ಖುರ್’ಆನ್ ಓದುತ್ತಿದ್ದರು. ಅವರ ಖುರ್’ಆನ್ ಪಠಣೆ ನನಗೂ ಕೇಳುವಂತಿತ್ತು, ತಕ್ಷಣವೇ ಮತ್ತೊಮ್ಮೆ ನನ್ನ ಕುದುರೆಯ ಕಾಲು ಅದರ ಮಂಡಿಯ ವರೆಗೆ ಮಣ್ಣಿನ ಒಳಗೆ ಕುಸಿಯಿತು. ನಾನು ಆ ಕೂಡಲೇ ಪ್ರವಾದಿಯವರಲ್ಲಿ ﷺ, ನನ್ನ ಆಯುಧ, ಆಹಾರ ಎಲ್ಲವನ್ನು ನೀವೆ ತೆಗಿಯಿರಿ, ನಾನು ನಿಮಗೆ ಯಾವುದೇ ತೊಂದರೆ ನೀಡುವುದಿಲ್ಲ, ನನ್ನನ್ನು ಒಮ್ಮೆ ರಕ್ಷಿಸಿ ಎಂದು ಕೂಗಿ ಹೇಳಿದಾಗ, ಪ್ರವಾದಿಯವರು ﷺ ಸಿದ್ದೀಕ್’ರಲ್ಲಿ ◌ؓ ಅವರಿಗೆ ಏನು ಬೇಕೆಂದು ಕೇಳಿ ಎಂದು ಹೇಳಿದರು. ನನಗೆ ಸಹಾಯ ಮಾಡಿದಾಗ, ನಾನು ಅವರಲ್ಲಿ ಖುರೈಷಿಗಳು ಉಡುಗೊರೆ ಘೋಷಣೆ ಮಾಡಿರುವ ಬಗ್ಗೆ ಎಲ್ಲವನ್ನು ತಿಳಿಸಿದೆನು. ಅವರು ನನ್ನ ಆಯುಧವಾಗಲಿ, ಆಹಾರವಾಗಲಿ, ತೆಗೆಯಲಿಲ್ಲ, ಬದಲಾಗಿ ನಮ್ಮನ್ನು ಕಂಡ ವಿವರ ಯಾರಿಗೂ ಹೇಳಬೇಡಿ ಎಂದು ಹೇಳಿದರು. ಆ ಕ್ಷಣದಲ್ಲಿ ನನಗೆ ನಾಳೆ ದಿನ, ಈ ಪ್ರವಾದಿಯವರ ﷺ ಧರ್ಮ ಬೆಳೆದು, ವಿಶಾಲವಾದ ಸಾಮ್ರಾಜ್ಯವಾಗಬಹುದು ಎಂದು ನನಗೆ ಅನಿಸಿತು. ಹಾಗಾಗಿ ನಾನು ಅವರಲ್ಲಿ ಒಂದು ಒಪ್ಪಂದವನ್ನು ಮಾಡಲು ಆಗ್ರಹಿಸಿದೆನು. ನಾಳೆ ದಿನ ಇಸ್ಲಾಮ್ ಜಯಶಾಲಿಯಾಗಿ, ಗದ್ದುಗೆಯಲ್ಲಿ ಏರಿದರೆ, ಅಂದು ಅದನ್ನು ಬಳಸುವ ಉದ್ದೇಶದಿಂದಾಗಿತ್ತು. ಪ್ರವಾದಿಯವರು ﷺ ಸಿದ್ದೀಕ್’ರಲ್ಲಿ ಬರೆದು ಕೊಡಲು ಹೇಳಿದಾಗ, ಒಂದು ಎಲುಬಿನ ಮೇಲೆ ಬರೆದುಕೊಟ್ಟರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-150/365

ಸುರಕ್ಷೆಯ ಒಪ್ಪಂದವನ್ನು ಬರೆಸಿಕೊಂಡು, ನಾನು ಅಲ್ಲಿಂದ ಹೊರಟು ಹೋಗುವಾಗ, ಪ್ರವಾದಿಯವರು ﷺ ನನ್ನನ್ನು ಕರೆದು, ಕಿಸ್ರಾ ಚಕ್ರವರ್ತಿಯ ಕೈಯಲ್ಲಿರುವ ಎರಡು ಬಳೆಗಳನ್ನು ನಿಮಗೆ ತೊಡಿಸಿದರೆ ಹೇಗಿರಬಹುದು ಸುರಾಖ.? ಎಂದು ಕೇಳಿದಾಗ, ನಾನು ಆಶ್ಚರ್ಯದಿಂದ ಹುರ್’ಮುಸಿನ ಮಗನಾದ ಕಿಸ್ರ ರಾಜರ.? ಎಂದು ಪುನಃ ಕೇಳಿದೆನು. ಅದಕ್ಕೆ ಹೌದು ಎಂದು ಪ್ರವಾದಿಯವರು ﷺ ಹೇಳಿದಾಗ ಸುರಾಖ ಆಶ್ಚರ್ಯದಿಂದಲೇ, ತನ್ನ ಮನಸ್ಸಿನ ಒಳಗೆ ಇಟ್ಟು, ಅಲ್ಲಿಂದ ಮಕ್ಕಾ ನಗರಕ್ಕೆ ವಾಪಸ್ಸು ಬಂದರು. ಪ್ರವಾದಿಯವರನ್ನು ﷺ ಹುಡುಕಿ ಹೋಗುತ್ತಿದ್ದ ಪ್ರತಿಯೊಬ್ಬರನ್ನೂ, ಸುರಾಖ ದಾರಿ ತಪ್ಪಿಸಿ, ಪ್ರವಾದಿಯವರನ್ನು ﷺ ಭೇಟಿಯಾದ ವಿಷಯವನ್ನು ರಹಸ್ಯವಾಗಿಯೇ ಇಟ್ಟರು. ಬೆಳಿಗ್ಗೆ ಪ್ರವಾದಿಯವರನ್ನು ﷺ ಕೊಲ್ಲಲು ಬಂದಿದ್ದ ಅದೇ ಸುರಾಖ, ಸಂಜೆಯಾದಾಗ ಪ್ರವಾದಿಯವರ ﷺ ಕಾವಲುಗಾರನಾಗಿದ್ದರು.

ಸುರಾಖ ಈಟಿ ಹಿಡಿದು ಪ್ರವಾದಿಯವರ ﷺ ಹತ್ತಿರ ಬರುತ್ತಿದ್ದಾಗ, ಸಿದ್ದೀಕ್’ರು ಏನಾಗಬಹುದೋ ಎಂಬ ಭಯದಿಂದ ಅಳುತ್ತಿದ್ದರು. ಅದಕ್ಕೆ ಪ್ರವಾದಿಯವರು ﷺ ಹೆದರದಿರಿ, ನಮ್ಮ ಜೊತೆಯಲ್ಲಿ ಅಲ್ಲಾಹನು ಇರುವನು ಎಂದು ಸಮಾಧಾನ ಪಡಿಸುತ್ತಿದ್ದರು. ಅದಕ್ಕೆ ಸಿದ್ದೀಕ್’ರು ಬೇಸರದಿಂದಲೇ, ನಾನು ಅಳುತ್ತಿರುವುದು ನನಗೆ ಏನಾದರೂ ತೊಂದರೆ ಆಗಬಹುದು ಎಂಬ ಭಯದಿಂದ ಅಲ್ಲ, ಬಹುಶಃ ನನ್ನನ್ನು ಕೊಂದರೆ, ಇಲ್ಲಿ ಸಿದ್ದೀಕ್ ◌ؓ ಎಂಬ ಒಬ್ಬ ಸಾಮಾನ್ಯ ವ್ಯಕ್ತಿಯ ಸಾವು ಮಾತ್ರವೇ ಆಗುತ್ತದೆ. ಆದರೆ ತಮಗೆ ಸಣ್ಣ ತೊಂದರೆ ಆದರೂ ಉಂಟಾಗುವ ನಷ್ಟ ಸಾಮಾನ್ಯವಾದದ್ದು ಅಲ್ಲವಲ್ಲ ಎಂದು ಹೇಳಿದರು. ಇದೇ ರೀತಿಯಾಗಿತ್ತು, ಸೌರ್ ಗುಹೆಯಲ್ಲಿಯೂ ಕೂಡ ಪ್ರವಾದಿಯವರಲ್ಲಿ ﷺ ಅಬೂಬಕ್ಕರ್ ◌ؓ ಹೇಳಿದ್ದು. ಆದರೆ ಪ್ರವಾದಿಯವರಿಗೆ ﷺ ಒಂದು ಸಣ್ಣ ಅಣುವಿನಷ್ಟು ಕೂಡ ಭಯ ಆಗಿರಲಿಲ್ಲ. ಆ ಸಂದರ್ಭದಲ್ಲಿ ನಾಮಾಝ್’ನಲ್ಲಿ ಅಥವಾ ಖುರ್’ಆನ್ ಪಠನೆಯಲ್ಲಿ ಮೈಮರೆತು ಇರುತ್ತಿದ್ದರು. ನಿಸ್ವಾರ್ಥ ಪ್ರೇಮಿಯ ತ್ಯಾಗ ಹಾಗೂ ಪ್ರವಾದಿಯವರ ﷺ ದೃಢಸಂಕಲ್ಪವು ಜೊತೆ ಸೇರುವ ಅರ್ಥಪೂರ್ಣ ದೃಶ್ಯಗಳಾಗಿತ್ತು ಅದು.

ಹಿಜ್’ರಾದ ದಿನಗಳು ಕಳೆದು, ಇಸ್ಲಾಮಿನಲ್ಲಿ ಉಂಟಾಗುತ್ತಿದ್ದ ಪ್ರತಿಯೊಂದು ಬದಲಾವಣೆಗಳನ್ನು. ಸುರಾಖ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಹೀಗೆ ಹಿಜ್ರಾದ (ಪಲಾಯನ) ಎಂಟನೇ ವರ್ಷದಲ್ಲಿ ಮಕ್ಕಾವಿಜಯ ಉಂಟಾಯಿತು. ಪ್ರವಾದಿಯವರು ﷺ ಹಾಗೂ ಅವರ ಅನುಯಾಯಿಗಳು, ಕಅಬದ ಬಳಿ ತಲುಪಿ, ಪ್ರವಾದಿಯವರು ﷺ ಎಲ್ಲರಿಗೂ ಕ್ಷಮೆ ನೀಡಿದರು. ಆ ಕ್ಷಣದಲ್ಲಿ ಸುರಾಖ ತನಗೆ ಎಂಟು ವರ್ಷಗಳ ಹಿಂದೆ ಬರೆದು ಕೊಟ್ಟಿದ್ದ, ಒಪ್ಪಂದವನ್ನು ಹಿಡಿದು, ಅನುಯಾಯಿಗಳ ನಡುವಿನಲ್ಲಿ ನಿಂತಿರುವ ಪ್ರವಾದಿಯವರ ﷺ ಬಳಿ ಬಂದು, ತನ್ನ ಪರಿಚಯವನ್ನು ತಿಳಿಸಿದಾಗ, ಪ್ರವಾದಿಯವರೂ ﷺ ಕೂಡ ಆತನ ಗುರುತು ಹಿಡಿದರು. ನಂತರ ಸುರಾಖ ಬಹಳ ವಿನಮ್ರವಾಗಿ ಪ್ರವಾದಿಯವರ ﷺ ಮುಂದೆ ನಿಂತು ಇಸ್ಲಾಮ್ ಸ್ವೀಕರಿಸಿದರು.

ಈಗಲೂ ಸುರಾಖರ ಮನಸ್ಸಿನಲ್ಲಿ ಇನ್ನೊಂದು ಆಸೆ ಮನೆ ಮಾಡಿತ್ತು. ಅದೂ ಕೂಡ ಖಂಡಿತ ನೆರವೇಲಿದೆ ಎಂಬ ಭರವಸೆಯನ್ನು ಖಚಿತ ಪಡಿಸಿಕೊಂಡರು ﷺ. ದಿನಗಳು ಉರುಳಿದವು, ಪ್ರವಾದಿಯವರ ﷺ ವಫಾತಿನ (ಮರಣ) ನಂತರವೂ, ಸುರಾಖ ಜಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದರು. ಸಿದ್ದೀಕ್’ರ ◌ؓ ಆಳ್ವಿಕೆ ಕಳೆದು, ಉಮರ್’ರವರ ◌ؓ ಆಳ್ವಿಕೆ ಆರಂಭವಾಯಿತು. ಮುಸ್ಲಿಮರು ಪರ್ಷಿಯಾವನ್ನು ವಶಪಡಿಸಿಕೊಂಡರು, ಸೇನಾಪತಿ ಸಅದ್ ಬಿನ್ ಅಬೀವಖಾಸ್ ಯುದ್ಧದಲ್ಲಿ ಗೆದ್ದ ಸಂಪತ್ತುಗಳ ಜೊತೆಯಲ್ಲಿ ಮದೀನಕ್ಕೆ ಬಂದು ತಲುಪಿದರು. ಖಲೀಫ ಉಮರ್’ರ ◌ؓ ಮುಂದೆ ಎಲ್ಲಾ ಸಂಪತ್ತುಗಳನ್ನೂ ಬಿಡಿಸಿ ಇಡಲಾಯಿತು. ಅದರಲ್ಲಿ ಕಿಸ್ರಾ ರಾಜರ ಬಳೆಗಳು ಕೂಡ ಇದ್ದವು, ಖಲೀಫ ತಕ್ಷಣವೇ ಸುರಾಖರನ್ನು ಕರೆದು, ಆ ರಾಜರ ಬಳೆಗಳನ್ನು ಸುರಾಖರಿಗೆ ಧರಿಸಿದರು. ನಂತರ ಉಮರ್ ◌ؓ ತನ್ನ ಎರಡು ಕೈಗಳನ್ನು ಮೇಲಕ್ಕೆ ಎತ್ತಿ, ಕಿಸ್ರಾ ಚಕ್ರವರ್ತಿಯು ಧರಿಸುತ್ತಿದ್ದ ರಾಜ ಬಳೆಗಳನ್ನು, ಬನೂ ಮುದ್’ಲಜ್ ಜನಾಂಗದ, ಸಾಮಾನ್ಯ ಅರಬಿ ನಿವಾಸಿಯ ಕೈಗಳಿಗೆ ತೊಡಿಸಿದ ಅಲ್ಲಾಹನೇ ನಿನಗಾಗಿದೆ ಸರ್ವಸ್ತುತಿ ಎಂದು ಹೇಳಿದರು.

ಸರಿ ಇನ್ನೂ ಹಿಜ್’ರಾದ ಹಳೆಯ ದಿನಗಳಿಗೆ ವಾಪಸ್ಸು ಹಿಂತಿರುಗಿ ಬರೋಣ, ಪ್ರವಾದಿಯವರು ﷺ ಹಾಗೂ ಸಿದ್ದೀಕ್’ರು ◌ؓ ತಮ್ಮ ಯಾತ್ರೆಯನ್ನು ಮುಂದುವರಿಸಿ, ಖುದೈದ್ ಕಣಿವೆಯಿಂದ, ಅಲ್ ಮುಶಲ್ಲಲ್ ಲಾವಾ ಮಾರ್ಗದ ಬಳಿ ತಲುಪಿದರು. ಯಮನ್ ಹಾಗೂ ಡಮಸ್’ಕಸ್’ನ ನಡುವೆ ಇರುವ ವ್ಯಾಪಾರ ಯಾತ್ರೆಗಳು ಇದೆ ದಾರಿಯಲ್ಲಾಗಿತ್ತು ಹೋಗುತ್ತಿದ್ದದ್ದು. ಇವತ್ತಿಗೂ ಈ ಸ್ಥಳವನ್ನು “ಅಲ್ ಖುದೈದಿಯ್ಯ” ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅಲ್ ಮುಶಲ್ಲಲ್ ಕಣಿವೆಯಿಂದೆ ಸ್ವಲ್ಪ ಮುಂದೆ ಹೋಗಿ, ಅಲ್ಲಿಂದ ಕುಲಯ್ಯ ಕಣಿವೆಗೆ ತಮ್ಮ ಯಾತ್ರೆಯನ್ನು ಮುಂದುವರಿಸಿದರು. ಈ ಸ್ಥಳದಲ್ಲಾಗಿತ್ತು ಸುರಾಖ ಭೇಟಿಯಾದದ್ದು ಎಂಬ ಅಭಿಪ್ರಾಯವೂ ಕೂಡ ಇದೆ. ಸೆಪ್ಟೆಂಬರ್ ಹದಿಮೂರಕ್ಕಾಗಿತ್ತು ಈ ಸ್ಥಳಕ್ಕೆ ತಲುಪಿದ್ದು, ಅದೇರೀತಿ ಇಲ್ಲೇ ಆಗಿತ್ತು, ಸುರಾಖ ಪ್ರವಾದಿಯವರಿಗೆ ﷺ ಮೋಡ ನೆರಳು ನೀಡುತ್ತಾ ಚಲಿಸುತ್ತಿರುವ ದೃಶ್ಯವನ್ನು ಕಾಣಲು ಸಾಧ್ಯವಾದದ್ದು, ಹಾಗೂ ಇದೇ ಸಂದರ್ಭದಲ್ಲಾಗಿತ್ತು ಸುರಾಖರ ಕುದುರೆ, ಮಂಡಿಯವರೆಗೆ ಮಣ್ಣಿನಲ್ಲಿ ಕುಸಿದು ಹೋಗಿ, ಕೊನೆಗೆ ಪ್ರವಾದಿಯವರಲ್ಲಿ ﷺ ಸಹಾಯ ಕೇಳಿದ್ದು ಕೂಡ. ನಂತರ ಅಲ್ಲಿಂದ ಪ್ರವಾದಿಯವರ ﷺ ಯಾತ್ರೆ ಪೂರ್ವ ದಿಕ್ಕಿನಲ್ಲಿ ಚಲಿಸಲು ಆರಂಭಿಸಿತು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Leave a Reply